ಉತ್ತರ ಭಾರತ ಮಹಿಳೆಯ ಧಿಮಾಕಿನ ಮಾತು; 'ಮೊದಲು ಕರ್ನಾಟಕ ಬಿಟ್ಟು ತೊಲಗಿ' ಎಂದ ಕನ್ನಡಿಗರು!

By Kannadaprabha NewsFirst Published Sep 23, 2024, 6:42 AM IST
Highlights

ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮೂಲಕ ಅಲ್ಪಬುದ್ಧಿ ಮತ್ತು ದುರಹಂಕಾರ ಪ್ರದರ್ಶಿಸಿದ ಉತ್ತರ ಭಾರತ ಮೂಲದ ಸುಗಂಧಾ ಶರ್ಮಾ ಎಂಬಾಕೆಗೆ ಕನ್ನಡಿಗರು ಚಳಿ ಬಿಡಿಸಿದ್ದಾರೆ.

ಬೆಂಗಳೂರು (ಸೆ.23): ಉತ್ತರ ಭಾರತೀಯರು ಬೆಂಗಳೂರು ತೊರೆದರೆ ಬೆಂಗಳೂರು ಖಾಲಿಯಾಗುತ್ತದೆ ಎಂದು ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್‌ ಮೂಲಕ ಅಲ್ಪಬುದ್ಧಿ ಮತ್ತು ದುರಹಂಕಾರ ಪ್ರದರ್ಶಿಸಿದ ಉತ್ತರ ಭಾರತ ಮೂಲದ ಸುಗಂಧಾ ಶರ್ಮಾ ಎಂಬಾಕೆಗೆ ಕನ್ನಡಿಗರು ಚಳಿ ಬಿಡಿಸಿದ್ದಾರೆ.
ಎರಡು ದಿನಗಳ ಹಿಂದೆ ಹಿಂದಿಯಲ್ಲಿ ಆಕೆ ಪೋಸ್ಟ್ ಮಾಡಿದ ರೀಲ್ಸ್ ವೈರಲ್ ಆಗಿದೆ. ರೀಲ್ಸ್‌ ನೋಡಿದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ಸೆಲೆಬ್ರಿಟಿಗಳು ಸೇರಿದಂತೆ ಕನ್ನಡಿಗರು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಆಕೆ, ನಾನು ಯಾರನ್ನೂ ನೋಯಿಸಲು ಅಥವಾ ಸಮಾಜವನ್ನು ವಿಭಜಿಸಲು ಆ ರೀತಿಯ ವಿಡಿಯೋ ಮಾಡಿಲ್ಲ. ನಾನು ಬೆಂಗಳೂರನ್ನು ಪ್ರೀತಿಸುತ್ತೇನೆ. ಟ್ರಾವೆಲ್ಲರ್ ಆಗಿರುವ ಕಾರಣ ಕನ್ನಡ ಭಾಷೆ ಕೂಡ ಕಲಿಯುತ್ತೇನೆ ಎಂದು ಸ್ಪಷ್ಟನೆ ನೀಡಿ ಮತ್ತೊಂದು ರೀಲ್ಸ್ ಮಾಡಿದ್ದಾರೆ.

ರೀಲ್ಸ್‌ನಲ್ಲೇನಿದೆ: ‘ಬೆಂಗಳೂರಿನ ಸ್ಥಳೀಯರಾಗಿರುವ ಅನೇಕರು ಉತ್ತರ ಭಾರತೀಯರನ್ನು ಉದ್ದೇಶಿಸಿ, ನೀವು ಹೊರಟು ಹೋಗಿ ಎನ್ನುತ್ತಿದ್ದಾರೆ. ನಿಜವಾಗಿಯು ನಾವೆಲ್ಲರೂ ಬೆಂಗಳೂರು ತೊರೆದರೆ ನಿಮ್ಮ ನಗರ ಖಾಲಿಯಾಗುತ್ತದೆ. ನಿಮ್ಮ ಪಿ.ಜಿ.ಗಳು ಖಾಲಿ ಆಗುತ್ತವೆ. ನಿಮಗೆ ಹಣ ಸಂಪಾದನೆಯಾಗುವುದಿಲ್ಲ. ಕೋರಮಂಗಲದ ಎಲ್ಲ ಕ್ಲಬ್‌ಗಳು ಖಾಲಿಯಾಗುತ್ತವೆ. ಪಂಜಾಬಿ ಸಂಗೀತಕ್ಕೆ ಕುಣಿಯುವ ಚೆಂದದ ಹುಡುಗಿಯರು ಕಾಣಿಸುವುದಿಲ್ಲ. ಯೋಚಿಸಿ ಮಾತನಾಡಿ. ಉತ್ತರ ಭಾರತೀಯರು ತೊರೆಯಬೇಕು ಎನ್ನುವ ನಿಮ್ಮ ಆಸೆ ನಿಜವಾದರೆ ಬೆಂಗಳೂರಿನ ಕಳೆಯೇ ಹೋಗಿಬಿಡುತ್ತದೆ’ ಎಂದು ಸುಗಂಧಾ ಶರ್ಮಾ ರೀಲ್ಸ್‌ನಲ್ಲಿ ಹೇಳಿದ್ದರು. ಕೆಲವೇ ಗಂಟೆಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಸುಗಂಧಾ ವಿರುದ್ಧ ಸೆಲೆಬ್ರಿಟಿಗಳು ಸೇರಿದಂತೆ ಅನೇಕರು ಕಿಡಿ ಕಾರಿದ್ದಾರೆ. ಭಾಷೆ ನೆಪದಲ್ಲಿ ಜನರ ನಡುವೆ ಕಂದಕ ಸೃಷ್ಟಿಸಲು ಯತ್ನಿಸುತ್ತಿರುವ ಈಕೆಯ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೂ ಟ್ಯಾಗ್ ಮಾಡಿದ್ದಾರೆ.

Latest Videos

 

ಕೆಲಸಕ್ಕಾಗಿ ಬಂದು ನಮ್ಮಿಂದಲೇ ಬೆಂಗಳೂರು ಉದ್ಧಾರ ಎನ್ನುವ ಹಿಂದಿ, ಕೇರಳಿಗರಿಗೆ ನಟ ಬೆಳವಾಡಿ ಕೌಂಟರ್!

ವಿಡಿಯೋಗೆ ಕಮೆಂಟ್ ಮಾಡಿರುವ ನಟಿ ಚೈತ್ರಾ ಆಚಾರ್, ‘ನೀವು ಬೆಂಗಳೂರು ಬಿಡಬೇಕೆಂದಿದ್ದರೆ ಬಿಟ್ಟು ಹೋಗಿ. ಬೆಂಗಳೂರು ಹೇಗೆ ಖಾಲಿಯಾಗುತ್ತದೆ ಎಂದು ನೋಡಿಯೇ ಬಿಡೋಣ. ಪಬ್‌ಗಳಲ್ಲಿ ಡ್ಯಾನ್ಸರ್‌ಗಳಿಲ್ಲದೆ ಖಾಲಿಯಾಗಿಯೇ ಇರಲು ನಾವು ಬಯಸುತ್ತೇವೆ. ಬೇರೆಯವರ ಚಿಂತೆ ಬಿಟ್ಟು ತಾವು ಹೊರಟು ಹೋಗಿ’ ಎಂದಿದ್ದಾರೆ.
ಅನುಪಮಾ ಗೌಡ, ‘ನಿಮ್ಮಿಂದ ಬೆಂಗಳೂರು ಅಲ್ಲ. ಬೆಂಗಳೂರು ಬೇಕಾಗಿರುವುದು ನಿಮಗೆ. ನಿಮ್ಮ ಜೀವನಕ್ಕಾಗಿ ಇಲ್ಲಿಗೆ ಬರುತ್ತೀರಿ. ನಿಮ್ಮಂತಹವರು ಬೆಂಗಳೂರು ಬಿಟ್ಟು ಹೋದರೆ ಏನೂ ಆಗುವುದಿಲ್ಲ’ ಎಂದಿದ್ದಾರೆ.

ಗಾಯಕ ಚಂದನ್ ಶೆಟ್ಟಿ, ‘ಇದೊಂದು ಪ್ರಚಾರದ ಗೀಳು. ಬಹುಸಂಸ್ಕೃತಿಯ ನಗರವಾಗಿರುವ ಬೆಂಗಳೂರಿನಲ್ಲಿ ಸಾಮರಸ್ಯ ಕಾಪಾಡಲು ಒತ್ತು ನೀಡಬೇಕು’ ಎಂದಿದ್ದಾರೆ.
ದುರಂಹಕಾರದ ಪರಮಾವಧಿ: ವೈರಲ್ ವಿಡಿಯೋ ಬಗ್ಗೆ ಕಿಡಿ ಕಾರಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ನಾರಾಯಣಗೌಡ, ತಾವು ಕೂಡಲೇ ಬೆಂಗಳೂರಿಂದ ತೊಲಗಿದರೆ ಕನ್ನಡಿಗರು ಚೆನ್ನಾಗಿರುತ್ತಾರೆ ಮತ್ತು ಬೆಂಗಳೂರು ಚೆನ್ನಾಗಿರುತ್ತದೆ. ಹೊಟ್ಟೆಪಾಡಿಗೆ, ಬದುಕು ಕಟ್ಟಿಕೊಳ್ಳಲು ನೂರಾರು ಕಿ.ಮೀ. ದೂರದಿಂದ ಬಂದಿರುವವರು ನೀವು. ನಮ್ಮಿಂದಲೇ ಬೆಂಗಳೂರು ಬೆಳೆದಿದೆ ಎಂದಿರುವುದು ದುರಹಂಕಾರದ ಪರಮಾವಧಿ. ನೀವು ಬಂದು ಬೆಂಗಳೂರು ಉದ್ಧಾರಾ ಮಾಡುವಂತಿದ್ದರೆ ನಿಮ್ಮ ರಾಜ್ಯವನ್ನೇಕೆ ಬಿಟ್ಟು ಬಂದಿದ್ದೀರಾ? ನಿಮ್ಮ ರಾಜ್ಯವನ್ನೇ ಉದ್ಧಾರ ಮಾಡಬಹುದಿತ್ತಲ್ಲಾ? ಬಿಹಾರ, ರಾಜಸ್ಥಾನ, ಗುಜರಾತ್‌ ಸೇರಿದಂತೆ ದೇಶದೆಲ್ಲೆಡೆಯಿಂದ ಬಂದಿರುವವರು ಇಲ್ಲಿ ಉದ್ಧಾರ ಆಗಿದ್ದಾರೆ. ನಿಮ್ಮಿಂದ ಬೆಂಗಳೂರಿಗೆ ನಷ್ಟವಾಗಿದೆಯೇ ಹೊರತು ಲಾಭವಾಗಿಲ್ಲ ಎಂದಿದ್ದಾರೆ.

ಕನ್ನಡ ಭಾಷೆ ಬಗ್ಗೆ ಗುರುಪ್ರಸಾದ್ ಹೇಳಿದ್ದೇನು; ಅಪಭ್ರಂಶವಿಲ್ಲದೇ ಮಾತನಾಡುವ ಬಗ್ಗೆ ಏನಂದ್ರು?

ಕರ್ನಾಟಕ ಸಮೃದ್ಧ ನಾಡು. ಕರ್ನಾಟಕ, ಬೆಂಗಳೂರಿನ ಇತಿಹಾಸ ನಿಮಗೆ ತಿಳಿದಿಲ್ಲ. ವಿಜಯನಗರ ಕಾಲದಲ್ಲಿ ಬೀದಿಯಲ್ಲಿ ಚಿನ್ನ, ಮುತ್ತು, ರತ್ನಗಳನ್ನು ಸೇರಿನಲ್ಲಿ ಅಳೆದಿರುವ ಶ್ರೀಮಂತ ಇತಿಹಾಸ ಕರ್ನಾಟಕಕ್ಕೆ, ಕನ್ನಡಿಗರಿಗೆ ಇದೆ ಎಂದು ನಾರಾಯಣಗೌಡ ಹೇಳಿದ್ದಾರೆ.

click me!