
ಬೆಂಗಳೂರು(ಏ.19) ಭಾರಿ ಸಂಚಲನ ಮೂಡಿಸಿರುವ 545 ಪಿಎಸ್ಐಗಳ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವುದನ್ನು ಸರಣಿ ವರದಿಗಳ ಮೂಲಕ ಬಯಲಿಗೆ ಎಳೆದಿದ್ದೇ ‘ಕನ್ನಡಪ್ರಭ’. ಮೂರು ತಿಂಗಳುಗಳಿಂದ 25 ಸರಣಿ ವರದಿಗಳ ಮೂಲಕ, ಇಡೀ ಹಗರಣದ ಹೂರಣವನ್ನು ಬಿಚ್ಚಿಟ್ಟ‘ಕನ್ನಡಪ್ರಭ’ದ ಕಾರ್ಯಕ್ಕೆ ವ್ಯಾಪಕ ಶ್ಲಾಘನೆಗಳು ವ್ಯಕ್ತವಾಗುತ್ತಿವೆ.
545 ಪಿಎಸ್ಐ (ಸಿವಿಲ್) ನೇಮಕಾತಿಗಾಗಿ 2021ರ ಅಕ್ಟೋಬರ್ 3ರಂದು ಲಿಖಿತ ಪರೀಕ್ಷೆ ನಡೆಸಲಾಗಿತ್ತು. ರಾಜ್ಯದ 92 ಕೇಂದ್ರಗಳಲ್ಲಿ ನಡೆದ ಈ ಪರೀಕ್ಷೆಯಲ್ಲಿ 54,104 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಜ.19ರಂದು ರಾತ್ರಿ 9ರ ಸುಮಾರಿಗೆ ಆನ್ಲೈನ್ನಲ್ಲಿ ನೇಮಕಾತಿ ಆಯ್ಕೆ ಪಟ್ಟಿಪ್ರಕಟಗೊಂಡ ನಂತರ ಉತ್ತರ ಪತ್ರಿಕೆಗಳ ತಿದ್ದುವಿಕೆ, ಬ್ಲೂಟೂತ್ ಉಪಕರಣಗಳ ಬಳಕೆ ಹಾಗೂ ಲಕ್ಷಾಂತರ ರುಪಾಯಿಗಳ ಹಣದ ಅವ್ಯವಹಾರದ ವಾಸನೆ ಬಡಿಯುತ್ತಿತ್ತು. ಯಾದಗಿರಿ ವ್ಯಕ್ತಿಯೊಬ್ಬ ಸೂತ್ರಧಾರಿ ಎಂಬ ಆರೋಪ ಕುರಿತ ಸುಳಿವಿನ ಆಧಾರದ ಮೇಲೆ ಮಾಹಿತಿ ಸಂಗ್ರಹಿಸಿದ ‘ಕನ್ನಡಪ್ರಭ’ ಸರಣಿ ವರದಿಗಳನ್ನು ಆರಂಭಿಸಿತ್ತು.
ಸಿಸಿಟಿವಿ ಮಾಹಿತಿ ಕೊಡದೇ ಶಾಲಾ ಮೇಲ್ವಿಚಾರಕರು ಎಸ್ಕೇಪ್!
30 ಲಕ್ಷ ರುಪಾಯಿಗಳ ಅಡ್ವಾನ್ಸ್ ಹಾಗೂ ಆಯ್ಕೆಯಾದ ನಂತರ ಉಳಿದ 30-35 ಲಕ್ಷ ನೀಡುವ ಬಗ್ಗೆ, ಅಲ್ಲಿಯವರೆಗೆ ಮಧ್ಯವರ್ತಿಗಳಿಗೆ ‘ಅಡವಿಟ್ಟ’ ತಮ್ಮ ದಾಖಲಾತಿಗಳನ್ನು ವಾಪಸ್ ಪಡೆಯುವುದು ಸೇರಿದಂತೆ, ಹೆಸರೇ ಬರೆಯಲಿಕ್ಕಾಗದ ಕೆಲವರು ರಾರಯಂಕ್ ಗಿಟ್ಟಿಸಿರುವುದರ ಬಗ್ಗೆ ವರದಿಗಳು ಗಮನ ಸೆಳೆದಿದ್ದವು.
‘ಅಕ್ರಮ ತನಿಖೆಯಾಗೋದು ಅಷ್ಟುಸುಲಭವಲ್ಲ, ಮೇಲಿರೋರೆಲ್ಲಾ ನಮ್ಮವರು’ ಎಂಬ ಸುದ್ದಿ ಸಾಕಷ್ಟುಅನುಮಾನ ಮೂಡಿಸಿತ್ತು. ನೊಂದ ಅಭ್ಯರ್ಥಿಗಳು ನ್ಯಾಯಾಂಗದ ಮೊರೆ ಹೋಗಬಹುದು ಎಂಬ ಆತಂಕದಲ್ಲಿ, ತರಾತುರಿಯಲ್ಲಿ ಆದೇಶ ಪ್ರತಿಗಳ ನೀಡುವ ಇಲಾಖೆ ದೂರಾಲೋಚನೆಯ ಬಗ್ಗೆ ವರದಿಯ ಬೆನ್ನಲ್ಲೇ, ಆಡಳಿತಾತ್ಮಕ ಕಾರಣಗಳನ್ನು ನೀಡಿ ಸರ್ಕಾರ ಆದೇಶ ಹೊರಡಿಸುವಿಕೆ ಸ್ಥಗಿತಗೊಳಿಸಿತ್ತು.
PSI Recruitment Scam: ದಿವ್ಯಾ ಹಾಗರಗಿ ಪತಿ ಅರೆಸ್ಟ್: ತನಿಖೆ ಇನ್ನಷ್ಟು ಚುರುಕು
ಸಚಿವರಿಂದಲೇ ಸರ್ಕಾರಕ್ಕೆ ಪತ್ರ:
ಸರ್ಕಾರಕ್ಕೆ ಕೆಟ್ಟಹೆಸರು ಬರುವುದು ಬೇಡ, ಉನ್ನತ ಮಟ್ಟದ ತನಿಖೆಯಾಗಲಿ ಎಂದು ಸಚಿವ ಪ್ರಭು ಚವ್ಹಾಣ್ ಸಿಎಂಗೆ ಬರೆದ ಪತ್ರ ಸರ್ಕಾರದ ಮಜುಗರಕ್ಕೆ ಕಾರಣವಾಗಿತ್ತು. ಆದರೂ ಅಕ್ರಮ ಆಗಿಯೇ ಇಲ್ಲ ಸಮರ್ಥನೆಗಿಳಿದಿದ್ದ ಸರ್ಕಾರದ ವಿರುದ್ಧ ಅಭ್ಯರ್ಥಿಗಳು ಕಾನೂನು ಸಮರದ ಚಿಂತನೆ ನಡೆಸಿದ್ದರು. ಈ ಕುರಿತು ನೊಂದ ಅಭ್ಯರ್ಥಿಗಳ ಆಕ್ರೋಶದ ಅಸಹಾಯಕತೆಯ ವರದಿಗಳು ಪ್ರತಿಧ್ವನಿಸಿದ್ದವು.
ಅಧಿವೇಶನದಲ್ಲೂ ‘ಕನ್ನಡಪ್ರಭ’ ಪ್ರತಿಧ್ವನಿ:
ಇತ್ತೀಚಿನ ಅಧಿವೇಶನದಲ್ಲಿ ಪರಿಷತ್ ಪ್ರತಿಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಹಿರಿಯ ಸದಸ್ಯರಾದ ಅರವಿಂದ ಅರಳಿ, ಯು.ಬಿ.ವೆಂಕಟೇಶ್, ಎಸ್.ರವಿ, ಮರಿತಿಬ್ಬೇಗೌಡ ಈ ಎಲ್ಲ ವರದಿಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾಗ, ‘ಅಕ್ರಮ ಆಗಿಯೇ ಇಲ್ಲ, ಪತ್ರಿಕಾ ವರದಿಯೇ ತಪ್ಪು’ ಎಂದು ಗೃಹ ಸಚಿವರು ಸಮಜಾಯಿಷಿ ನೀಡುವ ಪ್ರಯತ್ನಕ್ಕಿಳಿದಿದ್ದರು.
ಅಕ್ರಮ ಆರೋಪಗಳ ತನಿಖೆಗೆ ಮಾಜಿ ಸಚಿವ, ಹಾಲಿ ಶಾಸಕ ರಾಜೂಗೌಡ ಆಗ್ರಹಿಸಿದ್ದರೆ, ಮಾಜಿ ಸಚಿವ ಪ್ರಿಯಾಂಕ ಖರ್ಗೆ, ದಾಖಲೆಗಳು ಹಾಗೂ ‘ಕನ್ನಡಪ್ರಭ’ ವರದಿಗಳ ಸಮೇತ ವಿಶೇಷ ಪತ್ರಿಕಾಗೋಷ್ಠಿಯನ್ನೇ ನಡೆಸಿ, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು.
‘ಇಲ್ಲವೇ ಇಲ್ಲ..’ ಎನ್ನುತ್ತಲೇ ಸರ್ಕಾರ ಕೊನೆಗೆ ಸಿಐಡಿ ತನಿಖೆಗೆ ವಹಿಸಿದ್ದು, ಎಂಟು ಜನರ ಬಂಧನವಾಗಿರುವುದು ಈಗಿನ ಬೆಳವಣಿಗೆ. ಇದು ಕನ್ನಡಪ್ರಭ ವರದಿಗೆ ಸಿಕ್ಕ ಪ್ರತಿಫಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ