
ಬೆಂಗಳೂರು (ಡಿ.21): ಬೆಳಗಾವಿ (Belagavi) ವಿಧಾನಮಂಡಲ ಅಧಿವೇಶನ (Session) ಮುಗಿಯುವುದರೊಳಗೆ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ನಿಷೇಧಿಸುವ ತೀರ್ಮಾನವನ್ನು ಸರ್ಕಾರ (Govt) ಪ್ರಕಟಿಸದಿದ್ದರೆ ಕರ್ನಾಟಕ ಬಂದ್ ಕರೆ ನೀಡುವುದಾಗಿ ಕನ್ನಡ ಪರ ಸಂಘಟನೆಗಳು (Kannada Activists) ಎಚ್ಚರಿಕೆ ನೀಡಿವೆ. ಬೆಳಗಾವಿಯಲ್ಲಿ ಕನ್ನಡಿಗರ ವಿರುದ್ಧ ಪುಂಡಾಟ ನಡೆಸಿದ ಎಂಇಎಸ್ (MES) ಮತ್ತು ಕನ್ನಡ ಬಾವುಟ ಸುಟ್ಟ ಶಿವಸೇನೆ ವಿರುದ್ಧ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರದ ಧೋರಣೆ ವಿರೋಧಿಸಿ ಬೆಂಗಳೂರಿನಲ್ಲಿ (Bengaluru) ಕರಾಳ ದಿನ ಆಚರಣೆ ವೇಳೆ ಕನ್ನಡ ಪರ ಸಂಘಟನೆಗಳು ಈ ಎಚ್ಚರಿಕೆ ನೀಡಿವೆ.
ಕನ್ನಡ (Kannada) ಸಂಘಟನೆಗಳಾದ ವಾಟಾಳ್ ಪಕ್ಷ, ಡಾ.ರಾಜ್ಕುಮಾರ್ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇ ಗೌಡ ಬಣ) ಸೇರಿದಂತೆ ಹಲವು ಸಂಘಟನೆಗಳು ಕರಾಳ ದಿನದಲ್ಲಿ ಭಾಗವಹಿಸಿದ್ದವು. ಮೈಸೂರು ಬ್ಯಾಂಕ್ (Mysuru bank) ವೃತ್ತದಲ್ಲಿ ಪ್ರತಿಭಟನಾನಿರತರು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಡಾ.ರಾಜ್ಕುಮಾರ್ (Dr Puneeth Rajkumar) ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದು ಹಾಗೂ ಕನ್ನಡ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು, ಬೆಳಗಾವಿಯಲ್ಲಿ ಎಂಇಎಸ್ (MES) ನಡೆಸಿದ ಪುಂಡಾಟವನ್ನು ಇಡೀ ರಾಜ್ಯವೇ ಖಂಡಿಸುತ್ತಿದೆ. ಸರ್ಕಾರವು ಈ ಅಧಿವೇಶನ ಮುಗಿಯುವುದರೊಳಗೆ ರಾಜ್ಯದಲ್ಲಿ ಎಂಇಎಸ್ ನಿಷೇಧಕ್ಕೆ ನಿರ್ಣಯ ತೆಗೆದುಕೊಳ್ಳಬೇಕು. ಒಂದು ವೇಳೆ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳದಿದ್ದರೆ ರಾಜ್ಯ ಬಂದ್ಗೆ ಕರೆಗೆ ನೀಡುವುದಾಗಿ ಎಚ್ಚರಿಕೆ ನೀಡಿದರು.
ಸರ್ಕಾರ ಕನ್ನಡ ಸಂಘಟನೆಗಳ ಆಗ್ರಹಕ್ಕೆ ಮಣಿಯದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ಬುಧವಾರ ನಗರದಲ್ಲಿ ಸಭೆಯೊಂದನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಸಭೆಯಲ್ಲಿ ಕನ್ನಡ, ದಲಿತ, ಪ್ರಗತಿಪರ, ರೈತ ಸಂಘಟನೆಗಳ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಇಂದು ಸಂಸದರ ಹರಾಜು:
ಉದ್ಧವ್ ಠಾಕ್ರೆ ದೇಶದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುತ್ತಿದ್ದಾರೆ. ಪ್ರಧಾನಿಗಳು (PM) ತಕ್ಷಣ ಅವರ ಸರ್ಕಾರವನ್ನು ವಜಾಗೊಳಿಸಬೇಕು. ಈ ಕುರಿತು ರಾಜ್ಯದ ಸಂಸದರು ಪ್ರಧಾನಿ ಮತ್ತು ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಬೇಕಿತ್ತು. ಆದರೆ, ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಕನ್ನಡ ವಿರೋಧಿಗಳಂತೆ ವರ್ತಿಸುತ್ತಿದ್ದಾರೆ. ಇಂತಹ ಸಂಸದನ್ನು ಮಂಗಳವಾರ ಮೈಸೂರಿನಲ್ಲಿ ಹರಾಜು ಹಾಕುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮಂತ್ರಣವಿಲ್ಲದೇ ಸಿನಿಮಾ ನಟರು ಆಗಮಿಸಬೇಕು:
ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರಾಜ್ಯದಲ್ಲಿ ಎಂಇಎಸ್ (MES) ನಿಷೇಧಕ್ಕೆ ಗಟ್ಟಿನಿರ್ಧಾರ ಮಾಡಬೇಕು. ಒಂದು ವೇಳೆ ನಿಷೇಧಕ್ಕೆ ಮುಂದಾಗದಿದ್ದರೆ ರಾಜ್ಯಾದ್ಯಂತ ಬಂದ್ ನಡೆಸಲಾಗುತ್ತದೆ. ಎಲ್ಲಾ ಸಂಘಟನೆಗಳು ಸಾಮರಸ್ಯದಿಂದ ಒಗ್ಗೂಡಿ ಭಾಗವಹಿಸಬೇಕು. ಇನ್ನು ಸಿನಿಮಾ ನಟ-ನಟಿಯರು ಸೇರಿದಂತೆ ಚಿತ್ರರಂಗದವರಿಗೆ ಯಾವುದೇ ವಿಶೇಷ ಆಮಂತ್ರಣ ನೀಡುವುದಿಲ್ಲ. ಎಲ್ಲರೂ ಖುದ್ದಾಗಿ ಬಂದು ರಾಜ್ಯ ಬಂದ್ಗೆ ಬೆಂಬಲ ಸೂಚಿಸಬೇಕು ಎಂದರು.
ಕಪ್ಪು ಬಟ್ಟೆ ಧರಿಸಿ ಬಂದಿದ್ದ ವಾಟಾಳ್:
ಕರಾಳ ದಿನಾಚರಣೆ ಹಿನ್ನೆಲೆ ಪ್ರತಿಭಟನೆಯಲ್ಲಿ ಕನ್ನಡ ವಾಟಾಳ್ ಪಕ್ಷದ ಸದಸ್ಯರು ಸೇರಿದಂತೆ ವಾಟಾಳ್ ನಾಗರಾಜ್ ಸಂಪೂರ್ಣ ಕಪ್ಪು ಬಟ್ಟೆಧರಿಸಿಕೊಂಡಿದ್ದರು. ಇತ್ತ ಕೆಲ ಸಂಘಟನೆಗಳ ಹೋರಾಟಗಾರರು ಖಡ್ಗ (ತಲ್ವಾರ್) ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಹರಸಾಹಸ ಪಟ್ಟರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ