ಕಳಸಾ-ಬಂಡೂರಿ ಯೋಜನೆ: ಬಹುವರ್ಷಗಳ ಬೇಡಿಕೆ ಈಡೇರಿದೆ, ಭಾವುಕರಾದ ಬೊಮ್ಮಾಯಿ

By Kannadaprabha NewsFirst Published Dec 30, 2022, 10:45 AM IST
Highlights

ದಶಕಗಳ ಬೇಡಿಕೆ ಈಡೇರಿಕೆ ಸಂತಸ ತಂದಿದೆ,  ಬೆಳಗಾವಿ ಅಧಿವೇಶನ ವೇಳೆಯೇ ಒಪ್ಪಿಗೆ ಸಿಕ್ಕಿದ್ದು ವಿಶೇಷ, ನಾನೂ ಯೋಜನೆಗೆ ಸಾಕಷ್ಟು ಹೋರಾಟ ಮಾಡಿದ್ದೇನೆ: ಸಿಎಂ ಬಸವರಾಜ ಬೊಮ್ಮಾಯಿ  

ವಿಧಾನಸಭೆ(ಡಿ.30):  ಕಳಸಾ- ಬಂಡೂರಿ ನಾಲಾ ತಿರುವು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ. ದಶಕಗಳ ಬೇಡಿಕೆಯಾಗಿರುವ ಈ ಯೋಜನೆಗೆ ಚಾಲನೆ ಸಿಕ್ಕಿರುವುದು ಅತ್ಯಂತ ಸಂತಸದ ಸಂಗತಿಯಾಗಿದೆ. ಶೀಘ್ರದಲ್ಲೇ ಯೋಜನೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗುರುವಾರ ಉಭಯ ಸದನದಲ್ಲಿ ಮಾತನಾಡಿದ ಅವರು, ಈ ಯೋಜನೆಗಾಗಿ ನಾನೂ ಸಾಕಷ್ಟುಹೋರಾಟ ಮಾಡಿದ್ದೇನೆ. ಬೆಳಗಾವಿ ಅಧಿವೇಶನದ ವೇಳೆಯೇ ಕೇಂದ್ರದಿಂದ ಅನುಮೋದನೆ ಸಿಕ್ಕಿರುವುದು ಬಹಳ ಸಂತೋಷವಾಗಿದೆ. ಉತ್ತರ ಕರ್ನಾಟಕದ ಬಹುವರ್ಷಗಳ ಬೇಡಿಕೆ ಬಿಜೆಪಿ ಸರ್ಕಾರ ಈಡೇರಿಸಿದಂತಾಗಿದೆ ಎಂದು ನುಡಿದರು.

ಹಿಂದೆ ತಮ್ಮ 1988ರಲ್ಲೇ ಯೋಜನೆಗಾಗಿ ತಮ್ಮ ತಂದೆ ಪ್ರಯತ್ನಿಸಿದ್ದರು. ಡ್ಯಾಂ ಕಟ್ಟಿಆ ಮೂಲಕ ನೀರು ಪಡೆಯಲು ಯೋಜನೆ ರೂಪಿಸಲಾಗಿತ್ತು. ಆದರೆ ಬಳಿಕ ಇದಕ್ಕೆ ಗೋವಾದವರು ಅಡ್ಡಿಯಾಗಿದ್ದರು. ಇದು ಅಂತರಾಜ್ಯ ಜಲವಿವಾದವಾಗಿತ್ತು. ಇದಕ್ಕಾಗಿ 2010ರಲ್ಲಿ ನ್ಯಾಯಾಧಿಕರಣ ರಚನೆಯಾಗಿತ್ತು. 2018ರಲ್ಲಿ ನ್ಯಾಯಾಧಿಕರಣ ತೀರ್ಪು ನೀಡಿತ್ತು. ಕೇಂದ್ರ ಸರ್ಕಾರ ಗೆಜೆಟ್‌ ನೋಟಿಫಿಕೇಶನನ್ನು ಮಾಡಿತ್ತು. ಕುಡಿಯುವ ನೀರಿಗಾಗಿ ಕಳಸಾ- ಹಳತಾರಾ ನಾಲೆಗೆ 1.72 ಟಿಎಂಸಿ ಅಡಿ ನೀರು ಹಂಚಿಕೆಯಾಗಿದ್ದರೆ, ಬಂಡೂರಿ ನಾಲೆಗೆ 2.18 ಟಿಎಂಸಿ ಅಡಿ ನೀರು ಹಂಚಿಕೆಯಾಗಿತ್ತು. ಇದಕ್ಕೆ ಪರಿಷ್ಕೃತ ಡಿಪಿಆರ್‌ ಸಿದ್ಧಪಡಿಸಿ ಸಲ್ಲಿಸಲಾಗಿತ್ತು. ಅದಕ್ಕೀಗ ಕೇಂದ್ರ ಸರ್ಕಾರ ಅಸ್ತು ಎಂದಿದೆ. ಹೈಡ್ರಾಲಜಿ (ಜಲವಿಜ್ಞಾನ) ಹಾಗೂ ಅಂತಾರ್ರಾಜ್ಯ ವಿಷಯಕ್ಕೆ ಈಗಿನ ಡಿಪಿಆರ್‌ ಸರಿಯಾಗಿದೆ ಎಂದು ಕೇಂದ್ರ ತನ್ನ ಆದೇಶದಲ್ಲಿ ತಿಳಿಸಿದೆ ಎಂದು ವಿವರಿಸಿದರು.

ಕಳಸಾ ಬಂಡೂರಿ ಯೋಜನೆಗೆ ಕೇಂದ್ರ ಗ್ರೀನ್‌ ಸಿಗ್ನಲ್‌: ಹಂಡೆ ಹಾಲು ಕುಡಿದಷ್ಟೇ ಸಂತಸವೆಂದ ಸಚಿವ ಕಾರಜೋಳ

ಶೀಘ್ರದಲ್ಲೇ ಚಾಲನೆ:

ಇದೀಗ ಯೋಜನೆಗೆ ಹಸಿರು ನಿಶಾನೆ ಸಿಕ್ಕಿದೆ. ಇದಕ್ಕೆ ಶೀಘ್ರದಲ್ಲೇ ಟೆಂಡರ್‌ ಪ್ರಕ್ರಿಯೆ ಮುಗಿಸಿ ಯೋಜನೆಗೆ ಚಾಲನೆ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದ ಅವರು, ಯೋಜನೆಗಾಗಿ ನಾನು ಬಹಳಷ್ಟುಹೋರಾಟ ನಡೆಸಿದ್ದೇನೆ. ಇದೀಗ ನಾನೇ ಮುಖ್ಯಮಂತ್ರಿಯಾಗಿ ಯೋಜನೆ ಘೋಷಣೆ ಮಾಡುತ್ತಿರುವುದು ಖುಷಿ ತಂದಿರುವ ವಿಷಯ. ಇದಕ್ಕಾಗಿ ಸಾಕಷ್ಟುಜನ ಹೋರಾಟ ಮಾಡಿದ್ದಾರೆ ಎಂದರು. ತಾವು ಹಿಂದೆ ನಡೆಸಿದ ಹೋರಾಟವನ್ನು ನೆನಪಿಸಿಕೊಂಡು ಒಂದು ಕ್ಷಣ ಭಾವುಕವಾದರು.

ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಜಲ ಸಚಿವ ಗಜೇಂದ್ರಸಿಂಗ್‌ ಶೇಖಾವತ್‌, ಪ್ರಹ್ಲಾದ ಜೋಶಿ, ಇದಕ್ಕಾಗಿ ಶ್ರಮಿಸಿದ ರಾಜ್ಯ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರಿಗೆ ಹೃತ್ಪೂರ್ವಕ ಅಭಿನಂದನೆ ತಿಳಿಸುತ್ತೇನೆ ಎಂದು ನುಡಿದರು.

ಕಳಸಾ ಬಂಡೂರಿ ನಾಲಾ ಯೋಜನೆಗೆ ಕೇಂದ್ರ ಅಸ್ತು: ಹೋರಾಟ ಹಾದಿ ಮೆಲುಕು ಹಾಕಿದ ಗಣ್ಯರು

ಕಾಂಗ್ರೆಸ್‌ ಬಗ್ಗೆ ಕಿಡಿ:

ಯೋಜನೆಯ ಮೂಲಸ್ವರೂಪದಲ್ಲಿ ಬದಲಾಣೆಯಾಗಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಟ್ರಿಬ್ಯುನಲ್‌ ಆದೇಶದಲ್ಲಿ 3.90 ಟಿಎಂಸಿ ಅಡಿ ನೀರು ಮಾತ್ರ ನಮಗೆ ಹಂಚಿಕೆಯಾಗಿದೆ. ಕಾಂಗ್ರೆಸ್‌ನವರು ನಾವು ನಿರ್ಮಿಸಿದ ಕಾಲುವೆಗೆ ತಡೆಗೋಡೆ ನಿರ್ಮಿಸಿದರಲ್ಲ. ಅದಕ್ಕೆ ನಮಗೆ ಹಂಚಿಕೆ ಕಡಿಮೆಯಾಗಿರುವುದು ಎಂದು ಟೀಕಿಸಿದರು. ಇವರ ಮಾಡಿರುವ ಕಾರುಬಾರು ಬರೀ ಪತ್ರಿಕೆಗಳಲ್ಲಿ ಮಾತ್ರ. ಕನಿಷ್ಠ ಪಕ್ಷ ಸಿಗುವ ನೀರನ್ನು ಉಪಯೋಗ ಮಾಡಿಕೊಳ್ಳುವುದಕ್ಕೆ ಎಲ್ಲ ಪ್ರಯತ್ನ ಮಾಡುತ್ತಿದ್ದೇವೆ. ಹೀಗಾಗಿ ಮೂಲಸ್ವರೂಪದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ನಾವು ಪಂಪ್‌ ಮೂಲಕ ನೀರನ್ನು ಲಿಫ್‌್ಟಮಾಡಲು ಯೋಜನೆ ರೂಪಿಸಿದ್ದೇವೆ ಎಂದರು.

ಎಲ್ಲ ಮಹದಾಯಿ ರೈತರ ಮೇಲಿನ ಕೇಸು ವಾಪಸ್‌: ಸಿಎಂ ಘೋಷಣೆ

ಬೆಳಗಾವಿ: ಕಳಸಾ- ಬಂಡೂರಿಗಾಗಿ ಹೋರಾಟ ನಡೆಸಿದ ರೈತರು, ಜನಸಾಮಾನ್ಯರ ಮೇಲೆ ಈಗಲೂ ಕೆಲವೊಂದಿಷ್ಟುಕೇಸ್‌ಗಳಿವೆ. ಅವುಗಳನ್ನೆಲ್ಲ ವಾಪಸ್‌ ಪಡೆಯುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.
ಸದನ ಮುಗಿದ ಮೇಲೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಈ ಹೋರಾಟಕ್ಕೆ ಸಂಬಂಧಪಟ್ಟಂತೆ ಕೆಲ ಕೇಸ್‌ಗಳನ್ನು ಹಿಂಪಡೆದಿದ್ದೇವೆ. ಇನ್ನು ಬಾಕಿಯಿರುವ ಕೇಸ್‌ಗಳನ್ನು ಹಿಂದಕ್ಕೆ ಪಡೆಯಲಾಗುವುದು’ ಎಂದರು.

click me!