
ಕಲಬುರಗಿ: ರಥದ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ತನ್ನ ಎರಡು ಕಾಲು ಕಳೆದುಕೊಂಡ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದ ಶ್ರೀ ಶರಣಬಸವೇಶ್ವರರ ಜಾತ್ರಾ ಮಹೋತ್ಸವ ನಿನ್ನೆ ನಡೆದಿದೆ.
ರಥೋತ್ಸವದ ವೇಳೆ ಮಹಿಳೆಯೊಬ್ಬರು ಚಲಿಸುವ ರಥದ ಮುಂದೆ ನಮಸ್ಕರಿಸಲು ಹೋಗಿ ತಮ್ಮೆರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಚಲಿಸುವ ರಥಕ್ಕೆ ನಮಸ್ಕರಿಸಲು ಹೋದಾಗ ನೂಕುನುಗಲ್ಲಿನಲ್ಲಿ ಮಹಿಳೆ ರಥದ ಅಡಿಗೆ ಬಿದ್ದಿದ್ದು, ಅವರ ಎರಡೂ ಕಾಲುಗಳ ಮೇಲೆ ರಥದ ಚಕ್ರ ಹೋದ ಪರಿಣಾಮ ಕಾಲುಗಳು ನಜ್ಜುಗುಜ್ಜಾಗಿದೆ. ಹೀಗೆ ಕಾಲು ಕಳೆದುಕೊಂಡ ಮಹಿಳೆಯನ್ನು ನಾಗಮ್ಮ ಯಲಗೋಡ ಎಂದು ಗುರುತಿಸಲಾಗಿದೆ. ಅವರನ್ನು ಕೂಡಲೇ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರಿಯಕರನ ಬಿಡುಗಡೆಗಾಗಿ ಮೊಬೈಲ್ ಟವರ್ ಏರಿದ ಗೆಳತಿ: ಗಂಟೆಗಳ ಹೈಡ್ರಾಮಾಗೆ ಪೊಲೀಸರು ಸುಸ್ತು..!
ಡಾ.ಶರಣಬಸಪ್ಪಾ ಅಪ್ಪಾ ಇಲ್ಲದ ಮೊದಲ ಜಾತ್ರಾ ಮಹೋತ್ಸವ
ಮತ್ತೊಂದೆಡೆ ಮಹಾದಾಸೋಹಿ ಕಲಬುರಗಿಯ ಶ್ರೀ ಶರಣಬಾವೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆದಿದೆ.. ನಿನ್ಮೆ ಸಂಜೆ ನಡೆದ ಶರಣಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನ ಭಾಗವಹಿಸಿ ಸಂಪ್ರದಾಯದಂತೆ ರಥಕ್ಕೆ ಉತ್ತತ್ತಿ ನಾರು ಅರ್ಪಿಸಿ ಭಕ್ತಿ ಪರವಶರಾದರು. ಶರಣಬಸವೇಶ್ವರ ಸಂಸ್ಥಾನದ 8 ನೇ ಪೀಠಾಧಿಪತಿ ಶ್ರೀ ಶರಣಬಸಪ್ಪಾ ಅಪ್ಪಾ ಅವರು ಇತ್ತಿಚಿಗೆ ಲಿಂಗೈಕ್ಯರಾಗಿದ್ದು, ಕಳೆದ 50 ವರ್ಷಗಳಲ್ಲಿಯೇ ಡಾ.ಶರಣಬಸಪ್ಪಾ ಅಪ್ಪಾ ಇಲ್ಲದ ಮೊದಲ ಜಾತ್ರಾ ಮಹೋತ್ಸವ ಇದಾಗಿತ್ತು.
ಅವರ ಪುತ್ರ ನೂತನ ಪೀಠಾಧೀಪತಿ 11 ವರ್ಷದ ಚಿರಂಜಿವಿ ದೊಡ್ಡಪ್ಪ ಅಪ್ಪ ಅವರು ಸಂಪ್ರದಾಯದಂತೆ ಶಂಕನಾದ ಮೊಳಗಿಸಿ, ಮಠದ ಕಾಮಧೇನು ಎನ್ನಿಸಿಕೊಳ್ಳುವ ಪರ್ಸ ಬಟ್ಟಲು ಪ್ರದರ್ಶಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು. ಸಂಜೆ 6-15 ನಿಮಿಷಕ್ಕೆ ಲಕ್ಷಾಂತರ ಭಕ್ತ ಸಮೂಹದ ನಡುವೆ, ಭಕ್ತರ ಮುಗಿಲು ಮುಟ್ಟಿದ ಜಯಘೋಷಗಳ ಮಧ್ಯೆ ಶರಣಬಸವೇಶ್ವರರ ರಥೋತ್ಸವ ನಡೆಯಿತು. ಕರ್ನಾಟಕದ ಮೂಲೆ ಮೂಲೆಗಳಿಂದ ಮಾತ್ರವಲ್ಲದೇ ಮಹಾರಾಷ್ಟ್ರ, ತೆಲಂಗಾಣ ಸೇರಿದಂತೆ ದೇಶದ ವಿವಿಧೆಡೆಗಳಿಂದ ಲಕ್ಷಾಂತರ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ