ಸೀಡಿ ವಿಚಾರ : ಮತ್ತೆ ಪ್ರಸ್ತಾಪಿಸಿದ ಎಚ್ ಡಿ ಕುಮಾರಸ್ವಾಮಿ

By Kannadaprabha NewsFirst Published Mar 10, 2021, 9:46 AM IST
Highlights

ಸಿ.ಡಿ. ಪ್ರಕರಣದಂತಹ ವಿಷಯವನ್ನು ಮುಂದಿಟ್ಟುಕೊಂಡು ನಮ್ಮ ಕುಟುಂಬ ರಾಜಕೀಯ ದುರ್ಬಳಕೆ ಮಾಡಿಕೊಳ್ಳಲು ಅಥವಾ ಇನ್ನೊಬ್ಬರ ತೇಜೋವಧೆ ಮಾಡಲು ಕೈ ಹಾಕಿಲ್ಲ ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅಸಮಾಧಾನ ಹೊರಹಾಕಿದ್ದಾರೆ.  

ಬೆಂಗಳೂರು (ಮಾ.10):  ನಮ್ಮ ತಂದೆಯವರು ರಾಜಕಾರಣಕ್ಕೆ ಬಂದಾಗಿನಿಂದಲೂ ಸಿ.ಡಿ. ಪ್ರಕರಣಗಳಂಥವನ್ನು ರಾಜಕಾರಣಕ್ಕೆ ಬಳಸಿಕೊಂಡಿಲ್ಲ. ಇಂತಹದ್ದೆಲ್ಲಾ ನೋಡಲಿಕ್ಕೆ ನನ್ನ ಸರ್ಕಾರ ಬೀಳಿಸಬೇಕಿತ್ತಾ. ಅವರು ಇಲ್ಲೆ ಇದ್ದು ಸರ್ಕಾರ ಬೀಳಿಸಬಹುದಿತ್ತು. ನಾನೇನು ಅವರನ್ನು ಹೈಜಾಕ್‌ ಮಾಡಲು ಹೋಗುತ್ತಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಾಧ್ಯಮಗಳ ಮುಂದೆ ಸಿ.ಡಿ. ಇವೆ ಎಂದು ಹೇಳಿಕೆ ನೀಡುವವರನ್ನು ರಾಜ್ಯ ಸರ್ಕಾರ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿ ಬಂಧಿಸಬೇಕಲ್ಲವೇ? ಸಿ.ಡಿ. ಪ್ರಕರಣದಂತಹ ವಿಷಯವನ್ನು ಮುಂದಿಟ್ಟುಕೊಂಡು ನಮ್ಮ ಕುಟುಂಬ ರಾಜಕೀಯ ದುರ್ಬಳಕೆ ಮಾಡಿಕೊಳ್ಳಲು ಅಥವಾ ಇನ್ನೊಬ್ಬರ ತೇಜೋವಧೆ ಮಾಡಲು ಕೈ ಹಾಕಿಲ್ಲ. ನಮ್ಮ ತಂದೆಯವರ ಕಾಲದಿಂದಲೂ ಇಂತಹ ಕೆಲಸ ಮಾಡಿಲ್ಲ. ನಾಲ್ಕು ಗೋಡೆ ಮಧ್ಯೆ ನಡೆದಿರುವುದನ್ನು ದಾಖಲಿಸಿ ಸಾರ್ವಜನಿಕವಾಗಿ ಬಹಿರಂಗಪಡಿಸುವುದು ಕಾನೂನುಬಾಹಿರವಲ್ಲವೇ? ಆ ಸಿ.ಡಿ. ಅಸಲಿಯೋ, ನಕಲಿಯೋ? ಆದರೆ, ತೇಜೋವಧೆಯಂತೂ ಆಗಿದೆಯಲ್ಲವೇ? ಕಾನೂನು ರಚನೆಯಿಂದ ರಕ್ಷಣೆ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.

ಸಿಡಿ 'ಷಡ್ಯಂತ್ರ': ಎಚ್ಚರಿಕೆಯಿಂದ ಇದ್ದಿದ್ರೆ ಬಲಿಪಶು ಆಗ್ತಿರ್ಲಿಲ್ಲ ಎಂದ ಎಚ್‌ಡಿಕೆ! ..

ಆರು ಸಚಿವರು ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದು, ಅವರಿಗೆ ಇಂತಹ ಯೋಚನೆಗಳನ್ನು ಯಾರು ಕೊಟ್ಟರೋ? ಜನರು ಇವರ ಬಗ್ಗೆ ಏನಂದುಕೊಳ್ಳಬೇಕೋ? ತಮ್ಮ ವಿರುದ್ಧ ಮಾನಹಾನಿಯಂತಹ ಸುದ್ದಿಗಳನ್ನು ಬಿತ್ತರಿಸಬಾರದು ಎಂದು ನ್ಯಾಯಾಲಯದ ಮೊರೆ ಹೊಗಿರುವವರು ಮೇಧಾವಿಗಳು ಎಂದು ಲೇವಡಿ ಮಾಡಿದ ಅವರು, ಇಂತಹ ವಿಚಾರಗಳನ್ನು ಬಳಸಿಕೊಂಡು ನನ್ನನ್ನು ಸಹ ತೇಜೋವಧೆ ಮಾಡಲು ಪ್ರಯತ್ನ ಮಾಡುತ್ತಿರುವುದು ಗೊತ್ತಿದೆ. ಸದನದಲ್ಲಿಯೇ ಒಪ್ಪಿಕೊಂಡಿದ್ದೇನೆ. ತಪ್ಪು ಮಾಡುವುದು ಸಹಜ. ಆದರೆ, ಮನುಷ್ಯನಾದವನು ತಿದ್ದಿಕೊಳ್ಳಬೇಕು. ಇಂತಹ ಪ್ರಕರಣಗಳನ್ನು ಕೀಳುಮಟ್ಟದ ರಾಜಕಾರಣಕ್ಕೆ ಬಳಸಿಕೊಳ್ಳಬಾರದು. ಹೀಗಾಗಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಪರ ಹೇಳಿಕೆ ನೀಡಿದ್ದೆ. ಮಾಧ್ಯಮದಲ್ಲಿ ಆ ಹೆಣ್ಣು ಮಗಳನ್ನು ಸಂತ್ರಸ್ತೆ ಎಂದು ಬಿಂಬಿಸಲಾಗುತ್ತಿದೆ. ಆಕೆ ಈವರೆಗೆ ಹೊರಗೆ ಬಂದಿಲ್ಲ. ಆಕೆಯ ತಂದೆ-ತಾಯಿಗಳನ್ನು ಸಂತ್ರಸ್ತರು ಎನ್ನಬೇಕೋ ಅಥವಾ ನಕಲಿ ಸಿ.ಡಿ ಆಗಿದ್ದಲ್ಲಿ ರಮೇಶ್‌ ಜಾರಕಿಹೊಳಿ ಅವರನ್ನು ಸಂತ್ರಸ್ತರು ಎನ್ನಬೇಕೋ ಎಂದು ಪ್ರಶ್ನಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, 2+3+4 ಫಾರ್ಮುಲಾ ಬಗ್ಗೆ ನನಗೇನು ಗೊತ್ತಿಲ್ಲ. ನ್ಯಾಯಾಲಯಕ್ಕೆ ಹೋಗಿ ನಿರ್ಬಂಧ ತಂದವರಿಗೆ ಗೊತ್ತಿರಬಹುದು. ಆಗ ಅವರ ಬುದ್ಧಿ ಅವರ ಕೈಯಲ್ಲಿ ಇದ್ದಿದ್ದರೆ ಈಗ ನ್ಯಾಯಾಲಯಕ್ಕೆ ಹೋಗಿ ನಿರ್ಬಂಧ ತರುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ವ್ಯಂಗ್ಯವಾಗಿ ಹೇಳಿದರು.

click me!