ಮೀಸಲಾತಿ ಘೋಷಣೆ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ, ಗೊಂದಲ ಪರಿಹರಿಸಿ ಪ್ರತಿಕ್ರಿಯೆ ಎಂದ ಸ್ವಾಮೀಜಿ!

By Suvarna NewsFirst Published Dec 29, 2022, 7:49 PM IST
Highlights

ಪಂಚಮಸಾಲಿ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ಸರ್ಕಾರ ಮೀಸಲಾತಿ ಘೋಷಿಸಿದೆ. 3ಬಿಯಿಂದ 2ಎ ಅಡಿಯಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ನೀಡಲು ಹೋರಾಟ ಮಾಡಿದ ಪಂಚಮಸಾಲಿ ಸಮುದಾಯದ ಸ್ವಾಮೀಜಿ ಜಯಮೃತ್ಯುಂಜಯ ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 
 

ಬೆಳಗಾವಿ(ಡಿ.29):  ಕರ್ನಾಟಕದ ಮೀಸಲಾತಿ ಹೋರಾಟಕ್ಕೆ ತಾರ್ಕಿಕ ಅಂತ್ಯ ನೀಡಲು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಪಂಚಮಸಾಲಿ, ಒಕ್ಕಲಿಗ ಹಾಗೂ ಲಿಂಗಾಯಿತ ಸಮುದಾಯಕ್ಕೆ ಸರ್ಕಾರ ಮೀಸಲಾತಿ ಘೋಷಿಸಿದೆ. ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ ಜಯಮೃತ್ಯುಂಜಯ ಸ್ವಾಮೀಜಿ, ಸರ್ಕಾರದ ಘೋಷಣೆ ಕುರಿತು ಏಷ್ಯಾನೆಟ್ ಸುವರ್ಣನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮದಲ್ಲಿ ಬಂದ ವರದಿಗಳನ್ನು ನೋಡಿದ್ದೇನೆ. ಆದರೆ ಸಚಿವ ಸಂಪುಟ ಸಭೆಯ ನಿರ್ಣಯಗಳ ಕುರಿತು ಅಧಿಕೃತ ಮಾಹಿತಿ ಸಿಕ್ಕಿಲ್ಲ. ಸಚಿವ ಬಸನಗೌಡ ಪಾಟೀಲ್ ಯತ್ನಾಳ್, ಈರಣ್ಣ ಕಡಾಡಿ ಜೊತೆ ಚರ್ಚಿಸಿ ಪ್ರತಿಕ್ರಿಯೆ ನೀಡುತ್ತೇನೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

2ಎ ಮೀಸಲಾತಿ ಬೇಕು ಅನ್ನೋದು ನಮ್ಮ ಹೋರಾಟವಾಗಿದೆ. ಸರ್ಕಾರ ಕೂಡ ಮೀಸಲಾತಿ ನೀಡುವ ಕುರಿತು ಭರವಸೆ ನೀಡಿತ್ತು. ಆದರೆ ಇದೀಗ 2ಎ ಮೀಸಲಾತಿ ಬದಲು ಇತರ ವರ್ಗದ ಅಡಿಯಲ್ಲಿ ಮೀಸಲಾತಿ ನೀಡಲಾಗಿದೆ ಅನ್ನೋ ಮಾಹಿತಿ ಮಾಧ್ಯಮಗಳಿಂದ ಪಡೆದಿದ್ದೇನೆ. ಕೊನೆಗೆ ಪ್ರತ್ಯೇಕ ಮೀಸಲಾತಿ ನೀಡುತ್ತಾರೆ ಅನ್ನೋ ವಿಶ್ವಾಸವಿತ್ತು. ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಣಯಗಳ ಸಂಪೂರ್ಣ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡುತ್ತೇನೆ ಎಂದು ಸ್ವಾಮೀಜಿ ಹೇಳಿದ್ದಾರೆ. 

ಪಂಚಮಸಾಲಿ ಸಮುದಾಯಕ್ಕೆ ಗುಡ್‌ನ್ಯೂಸ್, ಮೀಸಲಾತಿ ನೀಡಲು ಸರ್ಕಾರ ಒಪ್ಪಿಗೆ!

ಕ್ಯಾಬಿನೆಟ್ ನಿರ್ಧಾರದ ಸಂಪೂರ್ಣ ಮಾಹಿತಿ ಪಡೆದು ಸಮುದಾಯಕ್ಕೆ ವಿವರಿಸುತ್ತೇನೆ. ಹೀಗಾಗಿ ಈಗಲೇ ಯಾವುದೇ ವಿಜಯೋತ್ಸವ ಆಚರಿಸುುವುದು ಉಚಿತ ನಿರ್ಧಾರವಲ್ಲ ಎಂದು ಜಯಮೃತ್ಯಂಜಯ ಸ್ವಾಮೀಜಿ ಮನವಿ ಮಾಡಿದ್ದಾರೆ. ಸದ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತ ಅಥವಾ ವಿರೋಧಿಸುವ ಕೆಲಸ ಮಾಡಬೇಡಿ. ಸಚಿವ ಸಂಪುಟದ ನಿರ್ಧಾರದ ಸಂಪೂರ್ಣ ಮಾಹಿತಿ ಬಂದ ಬಳಿಕವಷ್ಟೇ ಮಾತನಾಡಲು ಸಾಧ್ಯ ಎಂದು ಸ್ವಾಮೀಜಿ ಹೇಳಿದ್ದಾರೆ.

ಸಚಿವರು ಹಾಗೂ ತಜ್ಞರಿಂದ ಮಾಹಿತಿ ಪಡೆದ ಬಳಿಕ ಬೆಳಗಾವಿಯ ಗಾಂಧಿಭವನದಲ್ಲಿ ಸುದ್ದಿಗೋಷ್ಠಿ ನಡೆಸುವುದಾಗಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. 

ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು 6 ಗಂಟೆ ಸುಮಾರಿಗೆ ಸಚಿವ ಸಂಪುಟ ಸಭೆ ನಡೆಸಲಾಗಿದೆ. ಈ ವೇಳೆ ಕಳೆದ ವಾರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ ಅವರು ಸರ್ಕಾರಕ್ಕೆ ಸಲ್ಲಿಸಿರುವ ಮಧ್ಯಂತರ ವರದಿ ಆಧರಿಸಿ ಭಾರಿ ಚರ್ಚೆ ನಡೆಸಲಾಗಿದೆ. ತಜ್ಞರಿಂದ ಅಭಿಪ್ರಾಯ ಪಡೆದು ಅಂತಿಮ ನಿರ್ಧಾರ ಪ್ರಕಟಿಸಲಾಗಿದೆ. ಪಂಚಮಸಾಲಿ ಸಮುದಾಯವು 2ಎ ಮೀಸಲಾತಿಗೆ ಆಗ್ರಹಿಸಿ ನೀಡಿದ್ದ ಗಡುವು ಡಿ.29 ಅಂತಿಮವಾಗಿತ್ತು. ಹೀಗಾಗಿ ಸರ್ಕಾರಕ್ಕೆ ಇಂದು ನಿರ್ಧಾರ ಪ್ರಕಟಿಸುವ ಅನಿವಾರ್ಯವಾಗಿತ್ತು.

 

SC ST Reservation: ಎಸ್ಸಿ, ಎಸ್ಟಿ ಮೀಸಲು ಏರಿಕೆ ಮಸೂದೆ ಮಂಡನೆ

ಪಂಚಮಸಾಲಿ ಹೋರಾಟಕ್ಕೆ ಹಿಂದುಳಿದ ವರ್ಗಗಳಿಂದ ವಿರೋಧ
ಸಾಮಾಜಿಕವಾಗಿ, ಆರ್ಥಿಕವಾಗಿ ಪ್ರಭಲವಾಗಿ ಮುಂದುವರೆದಿರುವ ಸಮುದಾಯಗಳನ್ನು ಹಿಂದುಳಿದ ಜಾತಿಗಳ ಪ್ರವರ್ಗ 2ಎ ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಬಾರದೆಂದು ಒತ್ತಾಯಿಸಿ ಈಗಾಗಲೇ ಪ್ರತಿಭಟನೆಗಳು ನಡೆದಿದೆ. ಹಿಂದುಳಿದ ಪ್ರವರ್ಗ 2ಎ ರಲ್ಲಿ ಈಗಾಗಲೇ 102 ಕಾಯಕ ಜಾತಿಗಳಿದ್ದು,(ಒಟ್ಟು 366 ಜಾತಿಗಳು ಮತ್ತು ಉಪಜಾತಿಗಳು) ಮೀಸಲಾತಿ ಪ್ರಮಾಣವು ಶೇ.15 ರಷ್ಟುಮೀಸಲಾತಿಯನ್ನು ಉದ್ಯೋಗ ಮತ್ತು ಶಿಕ್ಷಣಕ್ಕೆ ಮೀಸಲಿರಿಸಲಾಗಿದೆ. ಈ ಮೀಸಲಾತಿಯು ಜನಸಂಖ್ಯೆಗೆ ಅನುಗುಣವಾಗಿ ನಿಗದಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತವ್ಯಕ್ತವಾಗಿದೆ.

click me!