BJP Politics: ಬೆಳಗಾವಿ ರಹಸ್ಯ ಸಭೆಗೆ ಜಾರಕಿಹೊಳಿ ಬ್ರದರ್ಸ್‌ ಅಸಮಾಧಾನ

By Kannadaprabha NewsFirst Published Jan 25, 2022, 9:03 AM IST
Highlights

ಉದ್ದೇಶಪೂರ್ವಕವಾಗಿ ಯಾರನ್ನೋ ಹೊರಗಿಟ್ಟು ಸಭೆ ನಡೆಸುವ ಅಗತ್ಯ ಇರಲಿಲ್ಲ ಎಂದು ಜಾರಕಿಹೊಳಿ ಸಹೋದರರು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಸೋಮವಾರ ಪ್ರತಿಕ್ರಿಯಿಸಿರುವ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಮತ್ತು ರಮೇಶ್‌ ಜಾರಕಿಹೊಳಿ, ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

ಬೆಳಗಾವಿ/ಬೆಂಗಳೂರು (ಜ.25): ಉದ್ದೇಶಪೂರ್ವಕವಾಗಿ ಯಾರನ್ನೋ ಹೊರಗಿಟ್ಟು ಸಭೆ ನಡೆಸುವ ಅಗತ್ಯ ಇರಲಿಲ್ಲ ಎಂದು ಜಾರಕಿಹೊಳಿ ಸಹೋದರರು (Jarkiholi Brothers) ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿಯಲ್ಲಿ ಸಚಿವ ಉಮೇಶ್‌ ಕತ್ತಿ (Umesh Katti) ಅವರ ನಿವಾಸದಲ್ಲಿ ನಡೆದ ಆಡಳಿತಾರೂಢ ಬಿಜೆಪಿ ಮುಖಂಡರ ಸಭೆಯಿಂದ ತಮ್ಮನ್ನು ಹೊರಗಿಟ್ಟಿರುವ ಬಗ್ಗೆ ಸೋಮವಾರ ಪ್ರತಿಕ್ರಿಯಿಸಿರುವ ಶಾಸಕರಾದ ಬಾಲಚಂದ್ರ ಜಾರಕಿಹೊಳಿ (Balachandra Jarkiholi) ಮತ್ತು ರಮೇಶ್‌ ಜಾರಕಿಹೊಳಿ (Ramesh Jarkiholi), ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆದ ಸಭೆ ಬಿಜೆಪಿಯ ಅಧಿಕೃತ ಸಭೆಯಲ್ಲ. ಈ ಸಭೆಗೆ ಹೆಚ್ಚಿನ ಮಹತ್ವ ನೀಡುವುದು ಬೇಡ ಎಂದು ಬಾಲಚಂದ್ರ ಜಾರಕಿಹೊಳಿ ಸಾಮಾಜಿಕ ಜಾಲತಾಣದ ಮೂಲಕ ಹೇಳಿದ್ದಾರೆ. ಯಾರನ್ನು ಹೊರಗಿಟ್ಟು ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಉದ್ದೇಶಪೂರ್ವಕವಾಗಿ ಯಾರನ್ನೂ ಹೊರಗಿಟ್ಟು ಸಭೆಯನ್ನು ನಡೆಸುವ ಅವಶ್ಯಕತೆ ಇರಲಿಲ್ಲ. ಜಿಲ್ಲೆಯಲ್ಲಿ ಯಾರು ಎಷ್ಟುಪಕ್ಷಕ್ಕಾಗಿ ದುಡಿಯುತ್ತಿದ್ದಾರೆ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ದಿನಕ್ಕೊಬ್ಬರಂತೆ ಸಭೆ ನಡೆಸುತ್ತ ಹೋದರೆ ಅದಕ್ಕೆಲ್ಲ ಉತ್ತರಿಸುವ ಗೋಜಿಗೆ ಹೋಗಲ್ಲ. 

Cabinet Reshuffle: ಸಭೆಗೆ ನಾವು ಯಾರನ್ನೂ ಆಹ್ವಾನಿಸಿಲ್ಲ, ಸಂಚಲನಕ್ಕೆ ಉತ್ತರ ಕೊಟ್ಟ ಕತ್ತಿ

2008ರಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಪಕ್ಷದ ಬಲವರ್ಧನೆಗೆ ಕೆಲಸ ಮಾಡುತ್ತೇವೆ. ಈಗ ನಡೆದಿರುವ ವಿದ್ಯಮಾನಗಳನ್ನ ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ನಾನು ಅಂಥ ಸಭೆಗೆ ಹೋಗುವುದಿಲ್ಲ. ಪ್ರೀತಿ ಇರುವ ಸಭೆಗೆ ಹೋಗುತ್ತೇನೆ. ಅಲ್ಲಿ ಏನು ನಡೆದಿದೆ ಎಂಬುದು ಸರಿಯಾಗಿ ಗೊತ್ತಿಲ್ಲದೆ ಮಾತನಾಡುವುದು ಸರಿಯಲ್ಲ. ಪಕ್ಷದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.

ಕತ್ತಿ ಮನೆಯಲ್ಲಿ ಸಭೆ: ಸಚಿವ ಉಮೇಶ ಕತ್ತಿ ಅವರ ಬೆಳಗಾವಿ ನಿವಾಸದಲ್ಲಿ ಶನಿವಾರದಂದು ಜಾರಕಿಹೊಳಿ ಸಹೋದರರು ಮತ್ತವರ ಆಪ್ತರನ್ನು ಹೊರತುಪಡಿಸಿ ಜಿಲ್ಲೆಯ ಸಂಸದರು, ಶಾಸಕರು ಸಭೆ ನಡೆಸಿದ್ದು ತೀವ್ರ ಸಂಚಲನ ಮೂಡಿಸಿದೆ. ಮುಂಬರಲಿರುವ ಸಂಪುಟ ಸಭೆ ವಿಸ್ತರಣೆ, ನಿಗಮ-ಮಂಡಳಿ ರಚನೆ ಬಗ್ಗೆ ನಿರಂತರ 3 ಗಂಟೆಗಳ ಕಾಲ ಚರ್ಚೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ಶಾಸಕರಾದ ಪಿ.ರಾಜೀವ್‌, ಮಹಾಂತೇಶ ದೊಡ್ಡಗೌಡರ, ಮಹಾದೇವಪ್ಪ ಯಾದವಾಡ, ಅಭಯ ಪಾಟೀಲ, ಅನಿಲ ಬೆನಕೆ, ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾತೇಂಶ ಕವಟಗಿಮಟ ಸಭೆಯಲ್ಲಿ ಪಾಲ್ಗೊಂಡಿದ್ದರು. 

ಬೆಳಗಾವಿ ಸಂಸದೆ ಮಂಗಲ ಅಂಗಡಿ ಅವರಿಗೆ ಆಹ್ವಾನ ನೀಡಿದ್ದರೂ ಬಂದಿರಲಿಲ್ಲ ಎನ್ನಲಾಗಿದೆ. ಕುಡಚಿ ಶಾಸಕ ಪಿ.ರಾಜೀವ್‌ಗೆ ಸಚಿವ, ಚ.ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರಿಗೆ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನ ಕೊಡಿಸುವ ಕುರಿತೂ ಚರ್ಚೆ ನಡೆದಿದೆ. ಅಲ್ಲದೆ ಬೆಳಗಾವಿ ಮೇಯರ್‌-ಉಪಮೇಯರ್‌ ಆಯ್ಕೆಯನ್ನು ಶಾಸಕ ಅಭಯ ಪಾಟೀಲ ಅವರ ಹೆಗಲಿಗೆ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಜೊತೆಗೆ ಇತ್ತೀಚೆಗಷ್ಟೇ ವಿಧಾನ ಪರಿಷತ್‌ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಲಖನ್‌ ಜಾರಕಿಹೊಳಿ ಗೆಲವು ಸಾಧಿಸಿರುವುದು ಮತ್ತು ಬಿಜೆಪಿ ಹೀನಾಯ ಸೋಲನುಭವಿಸಿರುವ ವಿಚಾರ ಕೂಡ ಪ್ರಸ್ತಾಪವಾಗಿದೆ. ಈ ಹಿನ್ನೆಲೆಯಲ್ಲಿ ಪಕ್ಷ ವ್ಯಕ್ತಿಗತವಾಗಿ ಹೋಗದೆ ಪಕ್ಷಕ್ಕೆ ಸೀಮಿತವಾಗಲಿ. ಇಲ್ಲವಾದಲ್ಲಿ ಪಕ್ಷಕ್ಕೆ ಧಕ್ಕೆಯಾಗಲಿದೆ ಎಂದು ಸಭೆಯಲ್ಲಿದ್ದ ಹಲವು ನಾಯಕರು ಸಲಹೆ ನೀಡಿದ್ದಾರೆ ಎನ್ನಲಾಗಿದೆ.

BJP Politics: ಕತ್ತಿ ಮನೆಯಲ್ಲಿ ಜಾರಕಿಹೊಳಿ ಬ್ರದರ್ಸ್‌ ಹೊರಗಿಟ್ಟು ಸಭೆ..!

ವಿಶ್ವಾಸ ಗಳಿಸಲು ಸಾಹುಕಾರ ಯತ್ನ: ಹೌದು..ಮೊನ್ನೇ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ರಮೇಶ್ ಜಾರಕಿಹೊಳಿ ಅವರು ತಮ್ಮ ಸಹೋದರ ಲಖನ್ ಜಾರಕಿಹೊಳಿ ಅವರನ್ನ ಕಣಕ್ಕಿಳಿಸುವ ಮೂಲಕ ಪರೋಕ್ಷವಾಗಿ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಅವರ ಸೋಲಿಗೆ ಕಾರಣರಾಗಿದ್ದಾರೆ. ಇದು ರಾಜ್ಯ ಬಿಜೆಪಿಯಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ರಮೇಶ್ ಜಾರಕಿಹೊಳಿ ಅವರ ವಿರುದ್ಧ ಶಿಸ್ತುಕ್ರಮಕ್ಕೆ ಕೆಲ ಶಾಸಕರು ಆಗ್ರಹಿಸಿದ್ದರು. ಇದರಿಂದ ರಮೇಶ್ ಜಾರಕಿಹೊಳಿ ಅವರು ಆರ್‌ಎಸ್‌ಎಸ್‌ ನಾಯಕರ ಮೂಲಕ ಅದನ್ನ ಶಮನ ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೇ ಸಚಿವ ಸ್ಥಾನಕ್ಕೂ ಲಾಬಿ ನಡೆಸಿದ್ದಾರೆ ಎನ್ನಲಾಗಿದೆ.

click me!