ಮಾನ ಮರ್ಯಾದೆ ಇದ್ರೆ 40% ಕಮಿಶನ್‌ ತನಿಖೆ ಮಾಡಿ: ಸಲೀಂ

By Kannadaprabha NewsFirst Published Aug 28, 2022, 10:42 AM IST
Highlights

 ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷೆ ಕೆಂಪಣ್ಣ ಅವರು ಪ್ರಧಾನಮಂತ್ರಿಗಳಿಗೆ ಸರ್ಕಾರದ 40 ಪರ್ಸೆಂಟ್‌ ಭ್ರಷ್ಟಾಚಾರದ ಬಗ್ಗೆ ದೂರು ಕೊಟ್ಟು ವರ್ಷ ಕಳೆಯುತ್ತಿದೆ.

ಬೆಂಗಳೂರು (ಆ.28): ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷೆ ಕೆಂಪಣ್ಣ ಅವರು ಪ್ರಧಾನಮಂತ್ರಿಗಳಿಗೆ ಸರ್ಕಾರದ 40 ಪರ್ಸೆಂಟ್‌ ಭ್ರಷ್ಟಾಚಾರದ ಬಗ್ಗೆ ದೂರು ಕೊಟ್ಟು ವರ್ಷ ಕಳೆಯುತ್ತಿದೆ. ಆದರೂ, ಪ್ರಧಾನಿಯಾಗಲಿ, ರಾಜ್ಯ ಸರ್ಕಾರವಾಗಲಿ ಚಕಾರ ಎತ್ತಿಲ್ಲ. ಈ ಸರ್ಕಾರಕ್ಕೆ ನಾಚಿಕೆ, ಮಾನ, ಮರ್ಯಾದೆ ಇದ್ದರೆ ಕೂಡಲೇ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಲಿ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌ ಒತ್ತಾಯಿಸಿದ್ದಾರೆ. ಬಿಜೆಪಿ ಸರ್ಕಾರ ಬಂದಾಗಿನಿಂದ ಜನ ಅನಾಥರಾಗಿದ್ದಾರೆ. ಭ್ರಷ್ಟಾಚಾರ ತಾಂಡವವಾಡುತ್ತಿದೆ. ಗುತ್ತಿಗೆದಾರರ ಸಂಘದ ಪತ್ರಕ್ಕೆ ಪ್ರಧಾನಿಗಳಿಂದ ಯಾವುದೇ ಕ್ರಮವಾಗಿಲ್ಲ. ಇದೀಗ ಶಿಕ್ಷಣ ಸಂಸ್ಥೆಗಳ ಸಂಘವು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದೆ. ಶಿಕ್ಷಣ ಇಲಾಖೆಯಲ್ಲಿ ಶಾಲೆಗಳಿಗೆ ಅನುಮತಿ ನೀಡಲು ಶೇ.40 ಕಮಿಷನ್‌ ಪಡೆಯುತ್ತಿದ್ದಾರೆ ಎಂದು ಪತ್ರದಲ್ಲಿ ದೂರಿದ್ದಾರೆ. ನಾ ಖಾವೂಂಗಾ, ನಾ ಖಾನೇಂದೂಂಗ ಎನ್ನುವ ಪ್ರಧಾನಿಗಾಗಲಿ, ರಾಜ್ಯ ಸರ್ಕಾರಕ್ಕಾಗಲಿ ಮಾನ, ಮರ್ಯಾದೆ ಇದ್ದರೆ ಕೂಡಲೇ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಇನ್ನು ಬಿಜೆಪಿ ಕಾರ್ಯಕರ್ತ ಸಂತೋಷ್‌ ಪಾಟೀಲ್ ನೇರವಾಗಿ ಮಾಜಿ ಸಚಿವ ಈಶ್ವರಪ್ಪ ಅವರ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದರು.

ಹೀಗಿದ್ದರೂ ಸಚಿವರ ಮೇಲೆ ಯಾವುದೇ ಕ್ರಮ ಕೈಗೊಳ್ಳದೆ ಬಿ ರಿಪೋರ್ಚ್‌ ಸಲ್ಲಿಸಿದ್ದಾರೆ. ಎಲ್ಲವನ್ನೂ ಜನರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ನಾವು ಜನತಾ ನ್ಯಾಯಾಲಯದ ಮುಂದೆ ಹೋಗುತ್ತೇವೆ. ಜನರೇ ಸೂಕ್ತ ತೀರ್ಪು ನೀಡುತ್ತಾರೆ ಎಂದು ಹೇಳಿದರು.

ಭ್ರಷ್ಟೋತ್ಸವ ಅಥವಾ ಕ್ಷಮೆ ಉತ್ಸವ ಮಾಡಲಿ: ಇಷ್ಟುಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿರುವ ಸರ್ಕಾರ ಜನೋತ್ಸವ ಆಚರಣೆಗೆ ಮುಂದಾಗಿದೆ. ಅವರು ಭ್ರಷ್ಟೋತ್ಸವ, ಕ್ಷಮೆ ಉತ್ಸವ ಆಚರಿಸಬೇಕು. ಕಳೆದ ಮೂರು ವರ್ಷಗಳಲ್ಲಿ ಅವರು ಮಾಡಿರುವ ತಪ್ಪಿಗೆ ಜನರ ಬಳಿ ಕ್ಷಮೆ ಕೋರಬೇಕು.

ಮುನಿರತ್ನ ರಾಜೀನಾಮೆಗೆ ಆಗ್ರಹ: ಸಚಿವ ಮುನಿರತ್ನ ಅವರ ವಿರುದ್ಧ ಆರೋಪದ ಬಗ್ಗೆ ಮಾತನಾಡಿದ ಅವರು, ‘ಮುನಿರತ್ನ ಅವರಿಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ತನಿಖೆ ಎದುರಿಸಲಿ. ನಿಮಗೆ ಅವರ ಮೇಲೆ ನಂಬಿಕೆ ಇದ್ದರೆ ತನಿಖೆ ಮಾಡಿಸಿ, ಅವರು ನಿರ್ದೋಷಿಯಾಗಿ ಬಂದ ಮೇಲೆ ಮತ್ತೆ ಅಧಿಕಾರ ನೀಡಿ’ ಎಂದು ಮುಖ್ಯಮಂತ್ರಿಗಳನ್ನು ಆಗ್ರಹಿಸಿದರು.

ಶೇ.40 ಕಮಿಷನ್‌ ಸಮಗ್ರ ತನಿಖೆಗೆ ಬಿಎಸ್ಪಿ ಒತ್ತಾಯ: ರಾಜ್ಯದಲ್ಲಿ ಈಗಲೂ ಎಗ್ಗಿಲ್ಲದೇ ಶೇ.40 ಕಮಿಷನ್‌ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದ ರಾಜ್ಯಾಧ್ಯಕ್ಷ ಕೆಂಪಣ್ಣ ಅವರು ಹೇಳುತ್ತಿರುವುದು ನೋಡಿದರೇ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಬಿಎಸ್ಪಿ ಪಕ್ಷ ಆರೋಪಿಸಿದೆ.

40ರಷ್ಟು ಕಮಿಷನ್‌ ಆರೋಪ ನ್ಯಾಯಾಂಗ ತನಿಖೆಯಾಗಲಿ: ಡಿಕೆಶಿ

ಶಿವಸೇನೆ, ಆಮ್‌ ಆದ್ಮಿ, ಕಾಂಗ್ರೆಸ್‌, ಆರ್‌ಜೆಡಿ ಸೇರಿದಂತೆ ವಿವಿಧ ವಿರೋಧ ಪಕ್ಷಗಳ ನಾಯಕರ ಮೇಲೆ ಐಟಿ, ಇಡಿ, ಸಿಬಿಐ ದಾಳಿ ನಡೆಸುತ್ತಿರುವ ಮೋದಿ ಸರ್ಕಾರ, ತಮ್ಮದೇ ಬಿಜೆಪಿ ಸರ್ಕಾರದ ಮೇಲೆ ಎಷ್ಟೆಲ್ಲ ಆರೋಪಗಳಿದ್ದರೂ ಈವರೆಗ ಯಾವುದೇ ಕ್ರಮ ಕೈಗೊಳ್ಳದಿರುವುದು ಸಲ್ಲ. ರಾಜ್ಯದ ಆಡಳಿದಲ್ಲಿ ಅತಿಯಾದ ಭ್ರಷ್ಟಾಚಾರದಲ್ಲಿ ತೊಡಗಿರುವ ಓರ್ವ ಸಚಿವರ ವಿರುದ್ಧ ಶೀಘ್ರದಲ್ಲೇ ಕ್ರಿಮಿನಲ್‌ ಮೊಕದ್ದಮೆ ಹೂಡಲಿದೆ. ಈ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿ ಅವರಿಗೆ ಈ ಹಿಂದೆ ಪತ್ರ ಬರೆಯಲಾಗಿತ್ತು. ಆದರೆ, ಈ ವರೆಗೆ ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ಸಂಗತಿ. ತಕ್ಷಣ ಬಿಜೆಪಿ ಭ್ರಷ್ಟಸಚಿವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಎಂದು ಆಗ್ರಹಿಸಿದ್ದಾರೆ.

ಮೈತ್ರಿ ಸರ್ಕಾರದಲ್ಲಿ ಕಮಿಷನ್‌ ನನ್ನ ಗಮನಕ್ಕೆ ಬಂದಿಲ್ಲ: ಪರಮೇಶ್ವರ್

ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಸಿ.ಕಾಂಬಳೆ, ಜಿಲ್ಲಾ ಸಂಯೋಜಕ ಗುರುಶಾಂತಪ್ಪ ಮದಿನಕರ, ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಸನಕ್ಯಾನವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ ಮಾದರ, ಜಿಲ್ಲಾ ಬಿವಿಎಫ್‌ನ ಯಲ್ಲಪ್ಪ ಸಿಂಧೆ, ತಾಲೂಕು ಉಪಾಧ್ಯಕ್ಷ ಅಬ್ದುಲ್‌ ರಜಾಕ್‌ ಸಣ್ಣಕ್ಕಿ, ತಾಲೂಕು ಪ್ರಧಾನ ಕಾರ್ಯದರ್ಶಿ ಪರಶುರಾಮ ಸಾನಕ್ಯಾನವರ, ಯಾಕೂಬ್‌ ಮೀರಾಜಮಾದಾರ, ಮದಾರೆಪ್ಪ ಸಾನಕ್ಯಾನವರ, ಸಾಗರ ಯಾದವಾಡ, ಬಸವರಾಜ ಸಾನಿಕೇನವರ, ಗಿರೀಶ ತಳವಾರ, ನಾಗೇಶ ಚಂದಾವರಿ ಜಂಟಿಯಾಗಿ ಪ್ರಕಟಣೆ ಮೂಲಕ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

click me!