ಮುಂಬೈಗೆ ಹೋಗೋರ ಗಮನಕ್ಕೆ ರೈಲು ಸೇವೆಯಲ್ಲಿ 1ತಿಂಗಳು ಅನಿರೀಕ್ಷಿತ ಬದಲಾವಣೆ, ಕೊಂಕಣ-ದಕ್ಷಿಣ ರೈಲ್ವೆ ಜಂಟಿ ಪ್ರಕಟಣೆ

Published : Apr 28, 2026, 09:34 PM IST
Konkan Railway

ಸಾರಾಂಶ

ಮುಂಬೈನ ಸಿಎಸ್‌ಎಂಟಿ ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣಾ ಕಾಮಗಾರಿಯಿಂದಾಗಿ ಮೇ 19ರವರೆಗೆ ರೈಲು ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ. ಮಂಗಳೂರು-ಮುಂಬೈ ಸೂಪರ್‌ಫಾಸ್ಟ್ ಮತ್ತು ತೇಜಸ್ ಎಕ್ಸ್‌ಪ್ರೆಸ್ ಸೇರಿದಂತೆ ಹಲವು ರೈಲುಗಳು ದಾದರ್ ಮತ್ತು ಥಾಣೆಯಲ್ಲಿ ತಮ್ಮ ಪ್ರಯಾಣವನ್ನು ಕೊನೆಗೊಳಿಸಲಿವೆ. ಜೊತೆಗೆ, ಪರಶುರಾಮ್ ಎಕ್ಸ್‌ಪ್ರೆಸ್ ಸೇವೆಯನ್ನೂ ಭಾಗಶಃ ರದ್ದುಪಡಿಸಲಾಗಿದೆ.

ಮುಂಬೈ ರೈಲು ಪ್ರಯಾಣಿಕರಿಗೆ ಮಹತ್ವದ ಮಾಹಿತಿ ಹೊರಬಿದ್ದಿದೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ (CSMT) ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ಸಂಖ್ಯೆ 16 ಮತ್ತು 17ರ ವಿಸ್ತರಣಾ ಕಾಮಗಾರಿಗಳು ಭರದಿಂದ ಸಾಗುತ್ತಿರುವ ಹಿನ್ನೆಲೆ, ಮೇ 19ರವರೆಗೆ ಪ್ರಮುಖ ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆಗಳನ್ನು ವಿಸ್ತರಿಸಲಾಗಿದೆ ಎಂದು ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಇಲಾಖೆ ತನ್ನ ಜಂಟಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಕಾಮಗಾರಿಗಳ ಕಾರಣದಿಂದಾಗಿ ಮುಂಬೈಗೆ ಆಗಮಿಸುವ ಕೆಲವು ಪ್ರಮುಖ ರೈಲುಗಳು ಸಿಎಸ್‌ಎಂಟಿ ತಲುಪುವುದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಬದಲಿಗೆ ದಾದರ್ ಮತ್ತು ಥಾಣೆ ನಿಲ್ದಾಣಗಳಲ್ಲಿಯೇ ತಮ್ಮ ಪ್ರಯಾಣವನ್ನು ಮುಕ್ತಾಯಗೊಳಿಸಲಿವೆ. ಈ ಕ್ರಮವು ಏಪ್ರಿಲ್ 27ರಿಂದ ಮೇ 19ರವರೆಗೆ ಒಟ್ಟು 23 ದಿನಗಳ ಕಾಲ ಜಾರಿಯಲ್ಲಿರಲಿದೆ.

ಪ್ರಮುಖ ರೈಲುಗಳಲ್ಲಿ ಬದಲಾವಣೆ

ಮಂಗಳೂರು ಜಂಕ್ಷನ್–ಮುಂಬೈ ಸಿಎಸ್‌ಎಂಟಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 12134) ಮೇ 19ರವರೆಗೆ ಥಾಣೆ ನಿಲ್ದಾಣದಲ್ಲಿಯೇ ತನ್ನ ಸಂಚಾರವನ್ನು ಮುಕ್ತಾಯಗೊಳಿಸಲಿದೆ. ಇದೇ ರೀತಿ, ಏಪ್ರಿಲ್ 26ರಿಂದ ಮೇ 18ರವರೆಗೆ ಮಂಗಳೂರಿನಿಂದ ಹೊರಡುವ ಈ ರೈಲು ಥಾಣೆಯವರೆಗೆ ಮಾತ್ರ ಸಂಚರಿಸುವುದಾಗಿ ಪ್ರಕಟಿಸಲಾಗಿದೆ.

ಇನ್ನೊಂದೆಡೆ, ಮಡಗಾಂವ್–ಮುಂಬೈ ತೇಜಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22120) ಏಪ್ರಿಲ್ 26ರಿಂದ ಮೇ 17ರವರೆಗೆ ಮುಂಬೈ ಸಿಎಸ್‌ಎಂಟಿ ತಲುಪದೇ ದಾದರ್ ನಿಲ್ದಾಣದಲ್ಲಿಯೇ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ. ಈ ಬದಲಾವಣೆಗಳು ದಕ್ಷಿಣ ಭಾರತ ಮತ್ತು ಕೊಂಕಣ ಭಾಗದಿಂದ ಬರುವ ಪ್ರಯಾಣಿಕರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಈ ಕುರಿತು ಕೊಂಕಣ ರೈಲ್ವೆ ಮತ್ತು ದಕ್ಷಿಣ ರೈಲ್ವೆ ಹೊರಡಿಸಿರುವ ಪ್ರಕಟಣೆಗಳಲ್ಲಿ, ಪ್ಲಾಟ್‌ಫಾರ್ಮ್ ವಿಸ್ತರಣಾ ಕಾಮಗಾರಿಗಳನ್ನು ವೇಗವಾಗಿ ಪೂರ್ಣಗೊಳಿಸಲು ಈ ಕ್ರಮ ಅಗತ್ಯವಾಗಿದೆ ಎಂದು ತಿಳಿಸಲಾಗಿದೆ. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುನಿಲ್ ಬಿ. ನಾರ್ಕರ್ ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಪರಶುರಾಮ್ ಎಕ್ಸ್‌ಪ್ರೆಸ್‌ ಭಾಗಶಃ ರದ್ದು

ಇದಲ್ಲದೆ, ಮಂಗಳೂರು ಸೆಂಟ್ರಲ್–ಕನ್ಯಾಕುಮಾರಿ ಪರಶುರಾಮ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16649/16650) ಸೇವೆಯಲ್ಲಿಯೂ ತಾತ್ಕಾಲಿಕ ಬದಲಾವಣೆಗಳನ್ನು ಮಾಡಲಾಗಿದೆ. ಏಪ್ರಿಲ್ 29 ಮತ್ತು 30ರಂದು ಸಂಚರಿಸುವ ಈ ರೈಲು ನಾಗರಕೋಯಿಲ್ ಜಂಕ್ಷನ್ ಮತ್ತು ಕನ್ಯಾಕುಮಾರಿ ನಡುವಿನ ಭಾಗದಲ್ಲಿ ಭಾಗಶಃ ರದ್ದುಗೊಂಡಿರುತ್ತದೆ.

ತಿರುವನಂತಪುರಂ ವಿಭಾಗದ ನಾಗರಕೋಯಿಲ್ ಜಂಕ್ಷನ್ ಯಾರ್ಡ್‌ನಲ್ಲಿ ಸೇತುವೆ ಸಂಖ್ಯೆ 8ರ ಆರ್‌ಸಿಸಿ ಬಾಕ್ಸ್ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಪರಿಣಾಮವಾಗಿ, ರೈಲು ಸಂಖ್ಯೆ 16650 ಕನ್ಯಾಕುಮಾರಿ–ಮಂಗಳೂರು ಸೆಂಟ್ರಲ್ ಪರಶುರಾಮ್ ಎಕ್ಸ್‌ಪ್ರೆಸ್ ಏಪ್ರಿಲ್ 30ರಂದು ನಾಗರಕೋಯಿಲ್ ಜಂಕ್ಷನ್‌ನಿಂದ ಬೆಳಿಗ್ಗೆ 4.10ಕ್ಕೆ ಪ್ರಯಾಣ ಆರಂಭಿಸಲಿದೆ.

ಒಟ್ಟಿನಲ್ಲಿ, ಮುಂಬೈ ಸಿಎಸ್‌ಎಂಟಿ ನಿಲ್ದಾಣದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಹಿನ್ನೆಲೆ ಈ ತಾತ್ಕಾಲಿಕ ಬದಲಾವಣೆಗಳನ್ನು ಜಾರಿಗೆ ತರಲಾಗಿದ್ದು, ಪ್ರಯಾಣಿಕರು ತಮ್ಮ ಪ್ರಯಾಣದ ವೇಳಾಪಟ್ಟಿಯನ್ನು ಮುಂಚಿತವಾಗಿ ಪರಿಶೀಲಿಸಿ ಯೋಜನೆ ರೂಪಿಸಿಕೊಳ್ಳುವುದು ಸೂಕ್ತವಾಗಿದೆ. ಈ ಕಾಮಗಾರಿಗಳು ಪೂರ್ಣಗೊಂಡ ನಂತರ ರೈಲು ಸಂಚಾರ ಇನ್ನಷ್ಟು ಸುಗಮವಾಗುವ ನಿರೀಕ್ಷೆಯಿದೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪರಿಶಿಷ್ಟ ಜಾತಿ ಒಳಮೀಸಲಾತಿ ಜಾರಿಗೊಳಿಸಿ ಅಧಿಕೃತ ಆದೇಶ ಹೊರಡಿಸಿದ ರಾಜ್ಯ ಸರ್ಕಾರ; SC-C ಕೆಟಗರಿಯಲ್ಲಿದೆ ಟ್ವಿಸ್ಟ್!
ಬೆಂಗಳೂರಲ್ಲಿ ಉಮರ್ ಖಾಲಿದ್ ಕುರಿತ ಪುಸ್ತಕ ವಿಮರ್ಶೆ ವಿವಾದ, ಬಿಜೆಪಿ ಪ್ರತಿಭಟನೆ, ಬಿಗಿ ಭದ್ರತೆಯಲ್ಲಿ ಕಾರ್ಯಕ್ರಮ