
ಶಿವಮೊಗ್ಗ (ಆ.15): ರಾಜ್ಯದಲ್ಲಿ ಸರ್ಕಾರ ನೀಡಿದ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಆಗುವುದಿಲ್ಲ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ ಎಂದು ಶಿವಮೊಗ್ಗದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದರು.
ಇಂದು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಗ್ಯಾರಂಟಿ ಯೋಜನೆಯಲ್ಲಿ ಅನರ್ಹ ಪಲಾನುಭವಿಗಳಿದ್ದರೆ ಅದರ ಪರಿಶೀಲನೆ ನಡೆಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ಶಿವಮೊಗ್ಗದ ಸೋಗನೆಯಲ್ಲಿ 98 ಎಕರೆ ಪ್ರದೇಶದಲ್ಲಿ ಫುಡ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಅಲ್ಲದೇ ಆನವಟ್ಟಿ ಪ್ರದೇಶಗಳಲ್ಲಿ ಕೋಲ್ಡ್ ಸ್ಟೋರೇಜ್ ನಿರ್ಮಾಣ, ಜಲಾಶಯದ ಸಂರಕ್ಷಣೆ ಹಾಗೂ ಭದ್ರತೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಶರಾವತಿ, ಚಕ್ರ, ಸಾವೆಹಕ್ಲು ನದಿ ಸಂತ್ರಸ್ತರಲ್ಲದೆ ಅರಣ್ಯ ಭೂಮಿ ಸಾಗುವಳಿದಾರರಿಗೂ ರಕ್ಷಣೆ ನೀಡಲಾಗುತ್ತದೆ. ಅರಣ್ಯವಾಸಿಗಳಿಗೆ ಹಕ್ಕು ನೀಡುವ ವಿಚಾರದಲ್ಲಿ ಹೈಕೋರ್ಟ್ , ಸುಪ್ರೀಂಕೋರ್ಟ್ ಹಾಗೂ ಕೇಂದ್ರ ಸರ್ಕಾರ ತೀರ್ಮಾನ ಕೈಗೊಳ್ಳಬೇಕಿದೆ ಎಂದರು.
ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಕೇಂದ್ರ ಸರ್ಕಾರ ಕ್ರಮವಹಿಸಲಿ: ಸಚಿವ ದಿನೇಶ್ ಗುಂಡೂರಾವ್ ಒತ್ತಾಯ
ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಿಗೆ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಒಂಬತ್ತು ಕೋಟಿ ಅನುದಾನ ಹೋಗಿದೆ. ಇದೇ ತಿಂಗಳ 19ರಂದು ಕೆ ವಿ ಎಸ್ ಶಾಲೆಗಳ ಅಭಿವೃದ್ಧಿಗಾಗಿ ಫಂಡ್ ರೈಸಿಂಗ್ ಶಿಕ್ಷಣ ಇಲಾಖೆಯಲ್ಲಿ ಆರಂಭಿಸಲಾಗುವುದು. ಮಂಡ್ಯದ ಮಳವಳ್ಳಿ ಸರ್ಕಾರಿ ಶಾಲೆ ಅಭಿವೃದ್ಧಿಗೆ ಆರೂವರೆ ಕೋಟಿ ಹಣವನ್ನು ಹಳೆಯ ವಿದ್ಯಾರ್ಥಿಗಳು ನೀಡಿದ್ದಾರೆ. 10ನೇ ತರಗತಿಯಲ್ಲಿ ಮೂರು ಪೂರಕ ಪರೀಕ್ಷೆಗಳಲ್ಲಿ ಫೇಲಾದ ವಿದ್ಯಾರ್ಥಿಗಳನ್ನು ಪುನಃ ಶಾಲೆಗೆ ಸೇರಿಸಿ ಶಾಲಾ ಸೌಲಭ್ಯ ನೀಡಲಾಗುವುದು. ಕಲ್ಯಾಣ ಕರ್ನಾಟಕದಲ್ಲಿ 1008 ಎಲ್ ಕೆ ಜಿ, ಯು ಕೆ ಜಿ ಶಾಲೆಗಳ ಪ್ರಾರಂಭವನ್ನು ಮಾಡಿದ್ದು 36,000 ಮಕ್ಕಳ ಪ್ರವೇಶ ಆಗಿರುವ ಬಗ್ಗೆ ಮಾಹಿತಿ ನೀಡಿದರು.
ಕೆಲವು ಸಚಿವರು ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅರ್ಹತೆ ಇರುವವರಿಗೆ ಗ್ಯಾರಂಟಿ ಯೋಜನೆಗಳು ಸಿಗಬೇಕು ಎಂಬುವುದು ಅಭಿಪ್ರಾಯ ಅಷ್ಟೇ. ಯಾವುದೇ ರೀತಿಯಲ್ಲೂ ಪರಿಷ್ಕರಣೆ ಆಗುವುದಿಲ್ಲ. ಕಾಂಗ್ರೆಸ್ ಹೈಕಮಾಂಡ್ ವರಿಷ್ಠರು ರಾಜ್ಯಕ್ಕೆ ಬಂದಾಗ ಕಾಂಗ್ರೆಸ್ ಒಗ್ಗಟ್ಟನ್ನು ಮುಂದುವರಿಸಲು ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರದ ಬಳಿ ಅಭಿವೃದ್ಧಿಗೆ ಹಣವಿಲ್ಲ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ. ಮಾಧ್ಯಮದವರಿಗೆ ನನ್ನ ಚಾಲೆಂಜ್ ಇದೆ. ಹಣ ಇಲ್ಲದಿದ್ದರೆ 12,000 ಶಿಕ್ಷಕರ ನೇಮಕಾತಿ ನಡೆಸಲು ಸಾಧ್ಯವಿದೆಯೇ ? ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಸುಭದ್ರವಾಗಿದೆ. ಐದು ವರ್ಷ ಅಧಿಕಾರ ಪೂರೈಸಲಿದೆ ಎಂದು ಭರವಸೆ ನೀಡಿದರು.
ರಾಜ್ಯಕ್ಕೆ ಪ್ರತ್ಯೇಕ ಶಿಕ್ಷಣ ನೀತಿ ತರಲು ಸಮಿತಿ ರಚನೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮುಡಾ ವಿಚಾರವಾಗಿ ಪಾದಯಾತ್ರೆ ಕೈಗೊಂಡಿರುವ ಬಿಜೆಪಿ ಜೆಡಿಎಸ್ ಮೈತ್ರಿ ನಾಯಕರು ಒಂದಲ್ಲ ಒಂದು ಕೇಸು ಹಾಕಿಸಿಕೊಂಡವರೆ ಇದ್ದಾರೆ. ಬಿಜೆಪಿ ಅವಧಿಯಲ್ಲಿ ಅರ್ಜೆಂಟ್ ಅರ್ಜೆಂಟ್ ಟೆಂಡರ್ ಕೊಡೋದು 40 ಪರ್ಸೆಂಟ್ ತಿನ್ನೋದು ಮಾಡುತ್ತಿದ್ದು ಅವರ ಬಾಕಿಯನ್ನು ನಾನು ತೀರಿಸುತಿದ್ದೇನೆ. ವಿಐಎಸ್ಎಲ್ ಪುನಾರಾರಂಭಕ್ಕೆ ಯಾಕೆ ಅನುಮತಿ ಕೊಟ್ಟಿಲ್ಲ. ಸಂಸದರು ಹೋಗಿ ಒಂದು ದಿನ ಕೂಡ ಈ ಬಗ್ಗೆ ಮಾತನಾಡಲಿಲ್ಲ ಯಾಕೆ? ಚೋಟ ಹೇರ್ ಕಟ್ ಬೇಕಂತೆ ಚೋಟಾ ಸಿಗ್ನೇಚರ್ ಬೇಡ ಅಂತಾ? ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್ ಲ್ಯಾಂಡಿಗೆ ಬೃಹತ್ ಕೈಗಾರಿಕಾ ಸಚಿವರಿಗೆ ಮನವಿ ಕೊಡ್ತಾರೆ. ಅದು ಅವರಿಗೆ ಬರುತ್ತಾ? ಯಾರಿಗೆ ಮನವಿ ಕೊಡಬೇಕು ಎಂಬುದು ಗೊತ್ತಿಲ್ಲದ ಪೆದ್ದ ಎಂದು ಸಂಸದ ಬಿವೈ ರಾಘವೇಂದ್ರ ವಿರುದ್ಧ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ