
ವಿಧಾನಸಭೆ (ಡಿ.21): ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಜಾತಿ ಕಾರಣಕ್ಕೆ ಪ್ರವೇಶ ನಿರ್ಬಂಧದಂತಹ ಘಟನೆಗಳನ್ನು ತಪ್ಪಿಸಲು ಇನ್ನು ಮುಂದೆ ಪ್ರತಿ ದೇವಾಲಯದ ಮುಂದೆಯೂ ಎಲ್ಲಾ ಜಾತಿಯವರಿಗೂ ಮುಕ್ತ ಪ್ರವೇಶವಿದೆ ಎಂಬ ಫಲಕ ಹಾಕಿಸಬೇಕು ಹಾಗೂ ಎಲ್ಲರಿಗೂ ಮುಕ್ತ ಪ್ರವೇಶ ದೊರೆಯುವಂತೆ ಮಾಡಬೇಕು ಎಂದು ಕರ್ನಾಟಕ ವಿಧಾನಮಂಡಲ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಗಡಗಳ ಕಲ್ಯಾಣ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ತಾಲೂಕು ಉಳ್ಳೇರಹಳ್ಳಿ ಪ್ರಕರಣದ ಬಗ್ಗೆ ಸಮರ್ಪಕ ತನಿಖೆ ನಡೆಸದ ಪೊಲೀಸ್ ಅಧಿಕಾರಿಗಳ ವಿರುದ್ಧ ತನಿಖೆ ನಡೆಸುವಂತೆಯೂ ತಿಳಿಸಿದೆ. ಎಂ.ಪಿ. ಕುಮಾರಸ್ವಾಮಿ ಅಧ್ಯಕ್ಷತೆಯ ಈ ಸಮಿತಿಯು ಮಂಗಳವಾರ ತನ್ನ ಆರನೇ ವರದಿ ಮಂಡಿಸಿದ್ದು, ಅದರಲ್ಲಿ ಎಸ್ಸಿಪಿ/ಟಿಎಸ್ಪಿ (ಅನುಸೂಚಿತ ಜಾತಿ ಮತ್ತು ಪಂಗಡಗಳ ಅಭಿವೃದ್ಧಿಗೆ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಯೋಜನೆ) ಅಡಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು, ಬೇಡ ಜಂಗಮ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣಪತ್ರ ಪಡೆಯುತ್ತಿರುವುದು, ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಕರಣಗಳನ್ನು ನಿಯಂತ್ರಿಸಲು ಕೈಗೊಳ್ಳಬೇಕಿರುವ ಕ್ರಮಗಳ ಬಗ್ಗೆ ಹಲವು ಶಿಫಾರಸನ್ನು ಮಾಡಿದೆ.
ಸಚಿವ ನಿರಾಣಿಗೆ ಮಾತಾಡಲು ಅವಕಾಶ ಕೋರಿ ಕಾಂಗ್ರೆಸ್, ಜೆಡಿಎಸ್ ಧರಣಿ!
ದಲಿತರಿಗೆ ಪ್ರತಿ ದೇವಾಲಯಕ್ಕೆ ಪ್ರವೇಶ ಕಲ್ಪಿಸಬೇಕು. ಜತೆಗೆ, ರಾಜ್ಯದಲ್ಲಿ ಪರಿಶಿಷ್ಟರು ಹಾಗೂ ಇತರ ಜನಾಂಗದವರು ಶಾಂತಿ ಸೌಹಾರ್ದತೆಯಿಂದ ಬಾಳುವಂತೆ ಮಾಡಲು ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಮಾಡಿಬೇಕು. ಈ ವೇಳೆ ದಲಿತರ ಮನೆಗೆ ಹೋಗಿ ಅರಿವು ಮೂಡಿಸಬೇಕು. ಜಿಲ್ಲಾಡಳಿತವು ಎಲ್ಲಾ ಹಳ್ಳಿಗಳಲ್ಲೂ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದೆ.
ಕೋಲಾರ ಜಿಲ್ಲೆ ಮಾಲೂರು ತಾಲೂಕು ಉಳ್ಳೇರಹಳ್ಳಿ ಗ್ರಾಮದಲ್ಲಿ ನಡೆದ ದಲಿತ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಸಮಿತಿ ಈ ಶಿಫಾರಸು ಮಾಡಿದೆ. ಉಳ್ಳೇರಹಳ್ಳಿಯಲ್ಲಿ ಪರಿಶಿಷ್ಟ ವರ್ಗಕ್ಕೆ ಸೇರಿ 15 ವರ್ಷದ ಯುವಕ ಚೇತನ್, ದೇವರನ್ನು ಹೊರುವ ಗುಜ್ಜಕೋಲು ಮುಟ್ಟಿದ್ದ ಎಂಬ ಕಾರಣಕ್ಕೆ ಪಂಚಾಯಿತಿ ನಡೆಸಿ 60 ಸಾವಿರ ರು. ದಂಡವನ್ನು ಗ್ರಾಮಸ್ಥರು ವಿಧಿಸಿದ್ದು, ದಂಡ ಕಟ್ಟದಿದ್ದರೆ ಗ್ರಾಮ ಬಿಡಬೇಕು ಎಂದು ಸಾಮಾಜಿಕ ಬಹಿಷ್ಕಾರ ಹಾಕಿದ್ದರು.
ಇನ್ನು ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಕೆ ಮಾಡುವವರ ಮೇಲೆ ಕ್ರಮ ಕೈಗೊಳ್ಳಬೇಕು. ಈವರೆಗೆ ಇಂತಹ 1,122 ಪ್ರಕರಣ ದಾಖಲಾಗಿದ್ದು, ಯಾರಿಗೂ ಗಂಭೀರ ಶಿಕ್ಷೆಯಾಗಿಲ್ಲ ಎಂದು ತಿಳಿಸಿದೆ. ಹೀಗಾಗಿ ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಬೇಡ ಜಂಗಮ ಸಮುದಾಯದ ಹೆಸರಿನಲ್ಲಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿವುದನ್ನು ತಪ್ಪಿಸಲು ಗ್ರಾಮ ಲೆಕ್ಕಿಗರು ಅಥವಾ ರಾಜಸ್ವ ನಿರೀಕ್ಷಕರ ವರದಿ ಆಧಾರದ ಮೇಲೆ ತಹಸೀಲ್ದಾರರು ಜಾತಿ ಪ್ರಮಾಣಪತ್ರ ನೀಡುವಂತೆ ಮಾಡಬೇಕು.
ಮಂಡ್ಯ ಪ್ರವೇಶಿಸಿದ ಜೆಡಿಎಸ್ ಪಂಚರತ್ನ ಯಾತ್ರೆ: ಕಾಪ್ಟರ್ನಿಂದ ಹೂಮಳೆ
ಪರಿಶಿಷ್ಟ ಜಾತಿ ವಿಭಾಗದಲ್ಲಿ ನಮೂದು ಮಾಡಿರುವ 101 ಜಾತಿ ಹಾಗೂ ಪರಿಶಿಷ್ಟ ಪಂಗಡದಲ್ಲಿ ನಮೂದಿಸಿರುವ ನಿರ್ದಿಷ್ಟಜಾತಿಗಳನ್ನು ಹೊರತುಪಡಿಸಿ ಬೇರೆ ಜಾತಿಯವರಿಗೆ ಪರಿಶಿಷ್ಟ ವರ್ಗದ ಜಾತಿ ಪ್ರಮಾಣಪತ್ರ ನೀಡಬಾರದು. ಅರ್ಜಿದಾರರ ನೈಜತೆ ಪರಿಶೀಲಿಸದೆ ಸುಳ್ಳು ಜಾತಿ ಪ್ರಮಾಣಪತ್ರ ನೀಡಲು ಶಿಫಾರಸು ಮಾಡುವ ಅಧಿಕಾರಿ, ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ