
ಮಂಗಳೂರು (ಅ.28) : ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಕ್ಯಾ. ಪಿ. ಮಣಿವಣ್ಣನ್ ಅವರು ಕದ್ರಿ ಪಾಕ್೯ ಬಳಿಯಿರುವ ಸಮಾಜ ಕಲ್ಯಾಣ ಇಲಾಖೆಯ ಆಶ್ರಮ ಶಾಲೆಯಲ್ಲಿ ವಿದ್ಯಾರ್ಥಿಗಳ ಜೊತೆಗೆ ಮಲಗಿ ಸರಳತೆ ಮೆರೆದು ಇತರರಿಗೆ ಹೊಸ ಮೇಲ್ಪಂಕ್ತಿ ಹಾಕಿಕೊಟ್ಟಿದ್ದಾರೆ.
ದ.ಕ. ಭೇಟಿಯಲ್ಲಿದ್ದ ಅವರು ಗುರುವಾರ ರಾತ್ರಿ 9.30ಕ್ಕೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು. ಅವರಿಗೆ ಕದ್ರಿಯ ಸರ್ಕ್ಯೂಟ್ ಹೌಸ್ನಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು. ಆದರೆ ಅವರು ಅಲ್ಲಿಗೆ ತೆರಳದೆ ನೇರವಾಗಿ ಗಿರಿಜನ ಸಮಗ್ರ ಅಭಿವೃದ್ಧಿ ಯೋಜನೆ(ಐಟಿಡಿಪಿ) ಇಲಾಖೆಯ ಆಶ್ರಮ ಶಾಲೆಗೆ ತೆರಳಿದ್ದಾರೆ. ಸರ್ಕ್ಯೂಟ್ ಹೌಸ್ ರೂಂನ್ನು ತನ್ನ ಅಧೀನದ ಇಲಾಖೆಯ ಆಶ್ರಮ ಶಾಲೆಯಲ್ಲಿ ರಾತ್ರಿ ಕಳೆದಿದ್ದಾರೆ.
ನೌಕರಿ ತಪ್ಪುವ ಭೀತಿಯಲ್ಲಿ ಅತಿಥಿ ಶಿಕ್ಷಕರು..!
ಪೂರ್ವ ನಿಗದಿತ ಕಾರ್ಯಕ್ರಮ ಪ್ರಕಾರ ಕ್ಯಾ.ಮಣಿವಣ್ಣನ್(P Manivanna IAS) ಅವರು ಮರುದಿನ ಬೆಳಗ್ಗೆ ಬೆಂಗಳೂರಿನಿಂದ ರೈಲಿನಲ್ಲಿ ಬಂದು ನೆಟ್ಟಣ ನಿಲ್ದಾಣದಲ್ಲಿ ಇಳಿದು ಸುಳ್ಯ, ಸುಬ್ರಹ್ಮಣ್ಯ ಬಳಿಯ ಸಮಾಜ ಕಲ್ಯಾಣ ಇಲಾಖೆ ಅಧೀನದ ವಸತಿ ನಿಲಯಗಳಿಗೆ ಭೇಟಿ ನೀಡುವವರಿದ್ದರು. ಆದರೆ ಕೊನೆ ಗಳಿಗೆಯಲ್ಲಿ ಆ ಭೇಟಿ ಮೊಟಕುಗೊಳಿಸಿದ್ದರು. ಆದರೆ ಕ್ಯಾ.ಮಣಿವಣ್ಣನ್ ಅವರು ಸಂಜೆ ವೇಳೆ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು.
ಕಡಲ ನಗರಿಯಲ್ಲಿ ಹೆಚ್ಚಾಯ್ತು ಮರಳಿನ ಸಮಸ್ಯೆ: ಕೃತಕ ಅಭಾವಕ್ಕೆ ಗುತ್ತಿಗೆದಾರರು ಕಂಗಾಲು
ರಾತ್ರಿ ಆಶ್ರಮ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಹಾಸ್ಟೆಲ್ನ ಸವಲತ್ತುಗಳ ಬಗ್ಗೆ ಮುಕ್ತವಾಗಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲಿರುವ ಆಹಾರ, ಆಚಾರ, ವಿಚಾರಗಳ ಬಗ್ಗೆ ಗಮನ ಹರಿಸಿದ್ದಾರೆ. ರಾತ್ರಿ ಮಕ್ಕಳೊಂದಿಗೆ ಬೆರೆತು ಊಟ ಮಾಡಿದ್ದಾರೆ, ರಾತ್ರಿ ಅಲ್ಲಿಯೇ ಮಲಗಿ, ಮರುದಿನ ಬೆಳಗ್ಗೆ ಅಲ್ಲೇ ಉಪಹಾರ ಸ್ವೀಕರಿಸಿದ್ದಾರೆ.
ಬಳಿಕ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯಾಲಯದ ಕಲಾಪದಲ್ಲಿ ಪಾಲ್ಗೊಂಡಿದ್ದಾರೆ. ನಂತರ ದ.ಕ. ಮತ್ತು ಉಡುಪಿ ಜಿಲ್ಲೆಗಳ ವಸತಿ ಶಾಲೆಗಳ (ಕ್ರೈಸ್) ಕಾಲೇಜುಗಳ ಪ್ರಾಂಶುಪಾಲರ ಸಭೆ ನಡೆಸಿದರು. ಹಿಂದುಳಿದ ವರ್ಗಗಳ ಹಾಸ್ಟೆಲ್ನಲ್ಲಿ ಈ ಬಾರಿ ಹೆಚ್ಚುವರಿ ಫಲಿತಾಂಶ ದಾಖಲಿಸಲು ಶ್ರಮಿಸುವಂತೆ ಅಧಿಕಾರಿ, ಸಿಬ್ಬಂದಿಗೆ ಸೂಚಿಸಿದ್ದಾರೆ.
ಸರಳ ವ್ಯಕ್ತಿತ್ವದ ಐಎಎಸ್ ಅಧಿಕಾರಿ ಎಂದೇ ಜನಮನ್ನಣೆ ಪಡೆದುಕೊಂಡ ಕ್ಯಾ.ಮಣಿವಣ್ಣನ್ ಅವರು, ಕೊರೋನಾ ಸಂದರ್ಭ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಆ ವೇಳೆ ಕಾರ್ಮಿಕರ ಹಿತಗಳ ಕುರಿತು ಕಠಿಣ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇವರನ್ನು ಅಂದಿನ ಸರ್ಕಾರ ತರಾತುರಿಯಲ್ಲಿ ವರ್ಗಾವಣೆ ಕೂಡ ಮಾಡಿತ್ತು. ಈ ವೇಳೆ ಕಾರ್ಮಿಕರು ‘ಬ್ರಿಂಗ್ ಬ್ಯಾಕ್ ಕ್ಯಾಪ್ಟನ್’ ಎಂಬ ಅಭಿಯಾನವನ್ನೇ ಕೈಗೊಂಡಿದ್ದರು.
ಆಶ್ರಮ ಮಕ್ಕಳಿಗೆ ಗೂಟದ ಕಾರಲ್ಲಿ ಸಂಚಾರ ಭಾಗ್ಯ!
ಕದ್ರಿ ಪಾರ್ಕ್ ಬಳಿಯ ಆಶ್ರಮ ಶಾಲೆಯ ಮಕ್ಕಳಿಗೆ ಶುಕ್ರವಾರ ಅನಿರೀಕ್ಷಿತವಾಗಿ ಗೂಟದ ಕಾರಿನಲ್ಲಿ ಸಂಚರಿಸುವ ಭಾಗ್ಯ ಲಭಿಸಿತ್ತು.
ಆಶ್ರಮ ಶಾಲೆಯಲ್ಲಿ ರಾತ್ರಿ ವಾಸ್ತವ್ಯ ಮಾಡಿದ್ದ ಕ್ಯಾ.ಮಣಿವಣ್ಣನ್ ಅವರು ವಿದ್ಯಾರ್ಥಿಗಳಿಗೆ ತನ್ನಂತೆ ಐಎಎಸ್ ಅಧಿಕಾರಿ ಆಗುವ ಕನಸು ಕಾಣಬೇಕು ಎಂದು ಭರವಸೆಯ ಮಾತನ್ನಾಡಿದ್ದರು. ಇದನ್ನು ಆಲಿಸಿದ ಆಶ್ರಯಮದ ವಿದ್ಯಾರ್ಥಿಗಳಿಗೆ ಗೂಟದ ಕಾರನ್ನು ನೋಡಬೇಕು, ಅದರಲ್ಲಿ ಸಂಚರಿಸಬೇಕು ಎನ್ನುವ ಆಸೆ ಉಂಟಾಗಿತ್ತು. ಈ ವಿಚಾರವನ್ನು ವಿದ್ಯಾರ್ಥಿಗಳು ಕ್ಯಾ. ಮಣಿವಣ್ಣನ್ ಬಳಿ ತೋಡಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಸಭೆಗೆ ಹೊರಡುವ ಮುನ್ನ ಆಶ್ರಮದ ಎಲ್ಲ ವಿದ್ಯಾರ್ಥಿಗಳನ್ನು ತಮ್ಮದೇ ಗೂಟದ ಕಾರಿನಲ್ಲಿ ಕದ್ರಿ ಪಾರ್ಕ್ಗೆ ಒಂದು ಸುತ್ತು ಹಾಕಿಸಿದರಲ್ಲದೆ, ಉನ್ನತ ವ್ಯಾಸಂಗದ ಕನಸು ನನಸಾಗಲಿ ಎಂದು ಹಾರೈಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ