
ಬೆಂಗಳೂರು (ಜೂ.12): ‘ನಮ್ಮ ಶೆಡ್ನಲ್ಲಿ ನಡೆದಿರುವ ರೇಣುಕಾಸ್ವಾಮಿ ಕೊಲೆಗೂ ನನಗೂ ಯಾವುದೇ ಸಂಬಂಧವಿಲ್ಲ. ನಾನು ಶೆಡ್ ಅನ್ನು ಬಾಡಿಗೆಗೆ ಕೊಟ್ಟಿದ್ದೇನೆ’ ಎಂದು ಬೆಂಗಳೂರಿನ ರಾಜರಾಜೇಶ್ವರಿ ನಗರದ ಪಟ್ಟಣಗೆರೆ ಗ್ರಾಮದ ಶೆಡ್ ಮಾಲೀಕ ಪಟ್ಟಣಗೆರೆ ಜಯಣ್ಣ ಸ್ಪಷ್ಟಪಡಿಸಿದ್ದಾರೆ. ನಟ ದರ್ಶನ್ ಆರೋಪಿ ಆಗಿರುವ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಮಂಗಳವಾರ ಮಾತನಾಡಿದ ಅವರು, ‘ಯಾರೇ ಆಗಲಿ ಕೊಲೆ ಮಾಡುವ ಮಟ್ಟಿಗೆ ಹೋಗಬಾರದು’ ಎಂದರು.
‘ನಮ್ಮ ಜಾಗದಲ್ಲಿ ಈ ರೀತಿಯ ಘಟನೆ ನಡೆದಿರುವುದು ಮನಸ್ಸಿಗೆ ನೋವಾಗಿದೆ. ಆ ಶೆಡ್ ಜಾಗವನ್ನು ಕಿಶೋರ್ ಎಂಬುವರಿಗೆ ಬಾಡಿಗೆ ಕೊಟ್ಟಿದ್ದೇನೆ. ಸಾಲ ಕಟ್ಟದ ವಾಹನಗಳನ್ನು ಜಪ್ತಿ ಮಾಡಿ ಆ ಶೆಡ್ನಲ್ಲಿ ನಿಲ್ಲಿಸಲಾಗುತ್ತದೆ. ಬಾಡಿಗೆ ನೀಡಿದ ಬಳಿಕ ನಾನು ಆ ಜಾಗಕ್ಕೆ ಹೋಗಿಲ್ಲ. ನನಗೂ ಈ ಕೊಲೆಗೆ ಸಂಬಂಧವಿಲ್ಲ’ ಎಂದರು.
‘ಯಾರಿಗಾದರೂ ಮನಸ್ಸಿಗೆ ನೋವು ಮಾಡಿದರೆ ತಕ್ಷಣವೇ ಅದಕ್ಕೆ ಕೊಲೆ ಪರಿಹಾರವಲ್ಲ. ಕಾನೂನು ಪ್ರಕಾರ ತಪ್ಪಿತಸ್ಥರ ಮೇಲೆ ಕ್ರಮ ಜರಗಿಸುವ ಅವಕಾಶವಿದೆ. ಒಬ್ಬ ವ್ಯಕ್ತಿಯ ಜೀವ ತೆಗೆಯುವುದು ತಪ್ಪು. ನಟ ದರ್ಶನ್ ಸಾಮಾನ್ಯ ವ್ಯಕ್ತಿಯಲ್ಲ. ಸಮಾಜದಲ್ಲಿ ಅವರಿಗೆ ಗೌರವಯುತ ಸ್ಥಾನಮಾನವಿದೆ. ತಪ್ಪು ಮಾಡಿದ್ದರೆ ಕ್ರಮ ಜರುಗಿಸಲಿ’ ಎಂದು ತಿಳಿಸಿದರು.
ಹಿಂಸಿಸಿ.. ಕೊಂದು, ಮೋರಿಗೆ ಎಸೆದ್ರು; ಕೊಲೆ ಕೇಸ್ನಲ್ಲಿ ದರ್ಶನ್ ಪೊಲೀಸರ ಎದುರು ಹೇಳಿದ್ದೇನು?
‘ದರ್ಶನ್ ಜತೆ ನನ್ನ ಸೋದರಿ ಪುತ್ರ ವಿನಯ್ಗೆ ಸ್ನೇಹವಿತ್ತು. ಈ ಕೊಲೆ ಪ್ರಕರಣದಲ್ಲಿ ಆತನ ಹೆಸರು ಕೇಳಿ ಬಂದಿದೆ. ಆದರೆ ನಮ್ಮ ಕುಟುಂಬ ಮತ್ತು ಸೋದರಿ ಕುಟುಂಬ ಪ್ರತ್ಯೇಕವಾಗಿ ವಾಸವಾಗಿದ್ದೇವೆ. ಹಾಗಾಗಿ ನನಗೆ ವಿನಯ್ನ ಚಟುವಟಿಕೆಗಳ ಬಗ್ಗೆ ಮಾಹಿತಿ ಇಲ್ಲ’ ಎಂದು ಜಯಣ್ಣ ಸ್ಪಷ್ಟಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ