ಮುಸ್ಲಿಂ ಹುಡುಗ-ಹಿಂದು ಯುವತಿ ಪ್ರೇಮ ಪ್ರಕರಣ : ಹೈ ಕೋರ್ಟ್ ಮಹತ್ವದ ಆದೇಶ

By Kannadaprabha NewsFirst Published Dec 2, 2020, 8:55 AM IST
Highlights

ಹಿಂದು ಯುವತಿ ಮುಸ್ಲಿಂ ಯುವಕನ ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ಮಹತ್ವದ ತೀರ್ಪೊಂದನ್ನು ನೀಡಿದೆ. 

ಬೆಂಗಳೂರು (ಡಿ.02):  ‘ವಯಸ್ಕರು ತಾವು ಬಯಸುವರನ್ನು ಮದುವೆಯಾಗುವುದು ಮೂಲಭೂತ ಹಕ್ಕು ಆಗಿದ್ದು, ಜಾತಿ ಹಾಗೂ ಧರ್ಮದ ಹೊರತಾಗಿ ಇಬ್ಬರ ನಡುವಿನ ವೈಯಕ್ತಿಕ ಸಂಬಂಧದ ಸ್ವಾತಂತ್ರ್ಯವನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ’ ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ನಡುವಿನ ಪ್ರೇಮ ಪ್ರಕರಣದಲ್ಲಿ ನ್ಯಾಯಮೂರ್ತಿ ಎಸ್‌. ಸುಜಾತಾ ಹಾಗೂ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದಮ್‌ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ತಾನು ಪ್ರೀತಿಸುತ್ತಿರುವ ರಮ್ಯಾಳನ್ನು ಅಕ್ರಮ ಬಂಧನದಲ್ಲಿರಿಸಿದ್ದು, ಆಕೆಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಸಬೇಕು ಎಂದು ಕೋರಿ ವಾಜಿದ್‌ ಖಾನ್‌ ಎಂಬ ಯುವಕ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು.

ಈ ರಾಶಿಯವರಿಗೆ ಎರಡನೇ ಸಂಬಂಧದ ಸೆಳೆತ ಹೆಚ್ಚು! ...

ಚಂದ್ರಾ ಲೇಔಟ್‌ ಪೊಲೀಸರು ರಮ್ಯಾಳನ್ನು ಕೋರ್ಟ್‌ ಮುಂದೆ ಹಾಜರುಪಡಿಸಿದರು. ‘ವಾಜಿದ್‌ ನನ್ನ ಸಹೋದ್ಯೋಗಿ. ಆತನನ್ನು ನಾನು ಪ್ರೀತಿಸುತ್ತಿದ್ದು, ವಿವಾಹವಾಗಲು ನಿರ್ಧರಿಸಿದ್ದೇನೆ. ಆದರೆ, ಆತ ಅನ್ಯ ಧರ್ಮಕ್ಕೆ ಸೇರಿದವನೆಂಬ ಕಾರಣದಿಂದ ಮದುವೆಗೆ ನನ್ನ ಪೋಷಕರು ಒಪ್ಪುತ್ತಿಲ್ಲ’ ಎಂದು ರಮ್ಯಾ ನ್ಯಾಯಪೀಠಕ್ಕೆ ವಿವರಿಸಿದ್ದಳು.

ಅದನ್ನು ಪರಿಗಣಿಸಿದ ಹೈಕೋರ್ಟ್‌, ‘ವಯಸ್ಕರು ತಾವು ಇಷ್ಟಪಟ್ಟವರನ್ನು ಮದುವೆಯಾಗಲು ಆಯ್ಕೆ ಮಾಡಿಕೊಳ್ಳುವುದು ಮೂಲಭೂತ ಹಕ್ಕು ಆಗಿದೆ. ಜಾತಿ ಮತ್ತು ಧರ್ಮದ ಹೊರತಾಗಿ ಇಬ್ಬರ ನಡುವಿನ ವೈಯಕ್ತಿಕ ಸಂಬಂಧ ಸ್ವಾತಂತ್ರ್ಯವನ್ನು ಯಾರೂ ಅತಿಕ್ರಮಿಸಲು ಸಾಧ್ಯವಿಲ್ಲ. ರಮ್ಯಾ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿದ್ದು, ತನ್ನ ಜೀವನದ ಬಗ್ಗೆ ನಿರ್ಣಯ ಕೈಗೊಳ್ಳಲು ಸಾಮರ್ಥ್ಯ ಹೊಂದಿದ್ದಾಳೆ’ ಎಂದು ಅಭಿಪ್ರಾಯಪಟ್ಟು ಅರ್ಜಿ ಇತ್ಯರ್ಥಪಡಿಸಿತು.

click me!