ರಾಜ್ಯದಲ್ಲಿ ಇಂದಿನಿಂದ ತಗ್ಗಲಿದೆ ಮಳೆ ಅಬ್ಬರ: ಹವಾಮಾನ ಇಲಾಖೆ

By Kannadaprabha NewsFirst Published Aug 10, 2022, 5:00 AM IST
Highlights

ರಾಜ್ಯದಲ್ಲಿ ಇಂದಿನಿಂದ ಮಳೆ ಹಬ್ಬರ ತಗ್ಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದಿನ ಭಾನುವಾರದವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇಲ್ಲ ಎಂದು ತಿಳಿಸಿದೆ

ಬೆಂಗಳೂರು (ಆ.10) ಕಳೆದ ಹಲವು ವಾರಗಳಿಂದ ರಾಜ್ಯದಲ್ಲಿ ಅಬ್ಬರಿಸುತ್ತಿರುವ ವರುಣ ಕೊಂಚ ವಿರಾಮ ಪಡೆಯುವ ಆಶಾಭಾವನೆ ಉಂಟಾಗಿದೆ. ‘ರಾಜ್ಯದಲ್ಲಿ ಬುಧವಾರದ ಬಳಿಕ ಮಳೆ ಕ್ಷೀಣಿಸಲಿದ್ದು, ಮುಂದಿನ ಭಾನುವಾರದವರೆಗೆ ಅತಿ ಭಾರಿ ಮಳೆಯ ಸಾಧ್ಯತೆಗಳಿಲ್ಲ’ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬುಧವಾರ ಬೆಳಗ್ಗೆ 8.30ರ ತನಕ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗೆ ಅತಿ ಭಾರಿ ಮಳೆಯ ‘ಆರೆಂಜ್‌ ಅಲರ್ಚ್‌’ (11.56 ಸೆಂ.ಮೀ ನಿಂದ 20.44 ಸೆಂ. ಮೀ) ನೀಡಲಾಗಿದೆ. ಇದೇ ಅವಧಿಯಲ್ಲಿ ಹಾಸನ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಧಾರವಾಡ, ಬೆಳಗಾವಿ, ಬೀದರ್‌ ಮತ್ತು ಕಲಬುರಗಿ ಜಿಲ್ಲೆಗೆ ಭಾರಿ ಮಳೆಯ ‘ಯೆಲ್ಲೋ ಅಲರ್ಚ್‌’ (6.45 ಸೆಂ.ಮೀ ನಿಂದ 11.55 ಸೆಂ.ಮೀ) ಪ್ರಕಟಿಸಲಾಗಿದೆ. ಬುಧವಾರ ಬೆಳಗ್ಗೆಯಿಂದ ಭಾನುವಾರ ಬೆಳಗ್ಗೆವರೆಗೆ ರಾಜ್ಯದ ಯಾವುದೇ ಜಿಲ್ಲೆಗೆ ಅತ್ಯಂತ ಭಾರಿ ಮಳೆ ಅಥವಾ ಅತಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿಲ್ಲ.

ಮಳೆ ಇಳಿಕೆ, ನೆರೆ ಏರಿಕೆ! ಇದು ಮಹಾರಾಷ್ಟ್ರ ಎಫೆಕ್ಟ್

ರಾಜ್ಯದ 3 ಊರಲ್ಲಿ 19 ಸೆಂ.ಮೀ. ಮಳೆ:

ಮಂಗಳವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ಒಳನಾಡಿನಲ್ಲಿ ಮುಂಗಾರು ಚುರುಕಾಗಿತ್ತು. ಉಡುಪಿಯ ಕೊಲ್ಲೂರು, ಉತ್ತರ ಕನ್ನಡದ ಕಾಸಲ್‌ ರಾಕ್‌, ಚಿಕ್ಕಮಗಳೂರಿನ ಕೊಟ್ಟಿಗೆಹಾರದಲ್ಲಿ ತಲಾ 19 ಸೆಂ.ಮೀ., ಶಿವಮೊಗ್ಗದ ಹುಂಚದಕಟ್ಟೆ13, ಚಿಕ್ಕಮಗಳೂರಿನ ಕಳಸ 12, ಶಿವಮೊಗ್ಗದ ಲಿಂಗನಮಕ್ಕಿ 11, ಉತ್ತರ ಕನ್ನಡದ ಗೇರುಸೊಪ್ಪ ಹಾಗೂ ಕೊಡಗಿನ ಪೊನ್ನಂಪೇಟೆಯಲ್ಲಿ ತಲಾ 10 ಸೆಂ.ಮೀ ಮಳೆಯಾಗಿದೆ. ಬುಧವಾರ ಬೆಳಗ್ಗೆ 8.30 ರಿಂದ ಗುರುವಾರ ಬೆಳಗ್ಗೆ 8.30ರ ವರೆಗೆ ಬೆಳಗಾವಿ, ಧಾರವಾಡ, ಹಾವೇರಿ, ಉತ್ತರ ಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ಇರಲಿದೆ.

ಮಳೆಗಾಲದ ತುರ್ತುಪರಿಸ್ಥಿತಿ ಸಮರ್ಪಕವಾಗಿ ನಿಭಾಯಿಸಿ: ಕೊಪ್ಪಳ ಜಿಲ್ಲಾಧಿಕಾರಿ ಸೂಚನೆ

 

 

 

ಗುರುವಾರದಿಂದ ಶುಕ್ರವಾರ ಬೆಳಗ್ಗೆ 8.30ರವರೆಗೆ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ನೀಡಲಾಗಿದೆ. ಶುಕ್ರವಾರದಿಂದ ಶನಿವಾರ ಬೆಳಗ್ಗೆಯವರೆಗೆ ಕರಾವಳಿ ಜಿಲ್ಲೆಗಳು ಮತ್ತು ಮಲೆನಾಡಿನ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗೆ ‘ಯೆಲ್ಲೋ ಅಲರ್ಚ್‌’ ನೀಡಲಾಗಿದೆ. ಶನಿವಾರದಿಂದ ಭಾನುವಾರದವರೆಗೆ ರಾಜ್ಯದಲ್ಲಿ ಹಗುರ ಅಥವಾ ತುಂತುರು ಮಳೆ ಮಾತ್ರ ಆಗಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.

click me!