Karnataka Rain; ರಾಜ್ಯದಲ್ಲಿ ಇನ್ನೂ 5 ದಿನ ಮುಂದುವರೆಯಲಿದೆ ಮಳೆ!

By Gowthami KFirst Published Jul 31, 2022, 2:44 PM IST
Highlights

ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ ಮುಂದುವರಿದಿದ್ದು, ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗ್ಗೆ ಬೆಂಗಳೂರು, ಮಂಗಳೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಶಿವಮೊಗ್ಗ ಜಿಲ್ಲೆ ಸೇರಿ ಹಲವೆಡೆ ವಿಪರೀತ ಮಳೆಯಾಗಿದ್ದು,  ಇನ್ನು 5 ದಿನ ಮಳೆ ಮುದುವರೆಯಲಿದೆ.

ವರದಿ: ನಂದೀಶ್ ಮಲ್ಲೇನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್  

ಬೆಂಗಳೂರು (ಜುಲೈ31): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ರಾತ್ರಿ  ಸುರಿದ ಭಾರೀ ಮಳೆಯಿಂದಾಗಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಇನ್ನೊಂದು ಕಡೆ ಹೊಸ ಮನೆಯ ಗೃಹ ಪ್ರವೇಶದ ಸಂಭ್ರಮದಲ್ಲಿದ್ದ ಮನೆ ಮಾಲೀಕರಿಗೆ ಮಳೆರಾಯ ಶಾಕ್ ನೀಡಿದ್ದ.  ಯಲಚೇನಹಳ್ಳಿ ವಾರ್ಡ್, ಕನಕ ನಗರ ಏರಿಯಾದಲ್ಲಿ ಬಾಬಾಜಾನ್ ಎಂಬುವರ ಹೊಸ ಮನೆ ಗೃಹ ಪ್ರವೇಶ ಇತ್ತು.ನಿನ್ನೆ ರಾತ್ರಿ 9:30 ಕ್ಕೆ ಸುರಿದ ಭಾರೀ ‌ಮಳೆ ಗೃಹ ಪ್ರವೇಶ ಸಂಭ್ರಮವನ್ನ ಕಿತ್ತುಕೊಂಡಿದೆ. ಮನೆ ಮುಂದೆ ಹಾಕಲಾಗಿದ್ದ ಶಾಮಿಯಾನ ಹಾಗೂ ಅಡುಗೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ ಅಂತ ಮನೆ ಮಾಲೀಕ ಬಾಬಾಜಾನ್ ಅಳಲು ವ್ಯಕ್ತಪಡಿಸಿದ್ರು. ಇನ್ನೂ ಕನಕನಗರ ಬಡಾವಣೆಯಲ್ಲಿ ಸುಮಾರು 100 ಕ್ಕೂ ಹೆಚ್ಚು ‌ಮನೆಗಳಿಗೆ ನೀರು ‌ನುಗ್ಗಿ, ಮನೆಯಲ್ಲಿದ್ದ ವಸ್ತುಗಳು ಹಾಗೂ ಆಹಾರ ಸಾಮಾಗ್ರಿಗಳು ನೀರಿನಲ್ಲಿ ಹಾಳಾಗಿದೆ.4 ರಿಂದ 5 ಅಡಿಗಳಷ್ಟು ನೀರು ಬಂದಿದ್ದು, ಪಕ್ಕದ ರಾಜಕಾಲುವೆ ನೀರು ರಸ್ತೆ ಮೇಲೆ ಹರಿದ ಪರಿಣಾಮ ಮನೆಗಳಿಗೆ ನೀರು ನುಗ್ಗಿದೆ ಅಂತ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ರು.ಪ್ರತಿಸಾರಿ ಮಳೆ ಬಂದಾಗಲೂ ಇದೇ ಪರಿಸ್ಥಿತಿ ನಿರ್ಮಾಣ ಆಗುತ್ತೆ.ಆದ್ರೆ ಇದನ್ನ ಸರಿಪಡಿಸುವ ಕೆಲಸ ಮಾತ್ರ‌ ಮಾಡಿಲ್ಲ ಎಂದು ಜನ ಪ್ರತಿನಿಧಿಗಳ ವಿರುದ್ಧ ಕನಕನಗರ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ರು.

ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆ ಈ ಏರಿಯಾಗಳಲ್ಲಿ ಅತಿ ಹೆಚ್ಚು  ದಾಖಲಾಗಿದೆ

ಸಿಂಗಸಂದ್ರ 40.5 mm
ಗೊಟ್ಟಿಗೆರೆ 43.00 mm
ಅಂಜನಾಪುರ 32.5 mm
ಹೆಮ್ಮಿಗಪುರ 18.5 mm
ಬೇಗೂರು 44 mm
ವಿದ್ಯಾಪೀಠ 31 mm
ಸಾರಕ್ಕಿ 38 mm 
ಬಿಳೆಕಳ್ಳಿ 40 mm
ಅರಕೆರೆ 40 mm
ದೊರೆಸಾನಿ ಪಾಳ್ಯ 50 mm

ಸಾಧಾರಣ ಮಳೆ ಎಲ್ಲೆಲ್ಲಿ?
ಚಾಮರಾಜಪೇಟೆ, ವಿದ್ಯಾಪೀಠ, ಮಲ್ಲೇಶ್ವರಂ, ಯಶವಂತಪುರ, ಯಲಹಂಕ, ನಾಗರಬಾವಿ, ಕೆಆರ್ ಪುರಂ, ಜ್ಞಾನಭಾರತಿ, ವರ್ತೂರು, ಬೆಳ್ಳಂದೂರು, ವಿದ್ಯಾರಣ್ಯಪುರ, ನಾಗಪುರ, ಹಂಪಿನಗರ, ಆರ್ ಆರ್ ನಗರ, ಕೊನೇನ ಅಗ್ರಹಾರ ಕಡಿಮೆಯಾಗಿರುವ ದಾಖಲಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಐದು ದಿನ ಮಳೆ
ಸಿಲಿಕಾನ್ ಸಿಟಿಯಲ್ಲಿ ‌ನಿನ್ನೆಯಿಂದ ಶುರುವಾದ ಮಳೆ ಇನ್ನೂ ಐದು ದಿನಗಳ ಮಳೆಯಾಗಲಿದೆ ಅಂತ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ರೆ ಬೆಂಗಳೂರಿಗೆ ಹವಾಮಾನ ಇಲಾಖೆ ಯಾವುದೇ ಅಲರ್ಟ್ ಘೋಷಣೆ ಮಾಡಿಲ್ಲ.

ಮಂಗಳೂರಲ್ಲಿ ಮತ್ತೆ ಕೃತಕ ‘ಜಲಪ್ರಳಯ’: ನರಕಯಾತನೆ ಪಟ್ಟ ಜನತೆ

ಧಾರಾಕಾರ ಮಳೆಗೆ ರಾಜ್ಯದ 5 ಜಿಲ್ಲೆಗಳು ತತ್ತರ
ರಾಜ್ಯದಲ್ಲಿ ಮತ್ತೆ ಮಳೆ ಆರ್ಭಟ ಮುಂದುವರಿದಿದ್ದು, ಶುಕ್ರವಾರ ತಡರಾತ್ರಿ ಮತ್ತು ಶನಿವಾರ ಬೆಳಗ್ಗೆ ಮಂಗಳೂರು, ಯಾದಗಿರಿ, ಕಲಬುರಗಿ, ವಿಜಯಪುರ ಮತ್ತು ಶಿವಮೊಗ್ಗ ಸೇರಿ ಹಲವೆಡೆ ಧಾರಾಕಾರ ಮಳೆ ಸುರಿದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆಗೆ ಶನಿವಾರ ಮಂಗಳೂರು ಮಹಾನಗರದಲ್ಲಿ ಅಕ್ಷರಶಃ ಜಲಪ್ರಳಯ ಉಂಟಾಗಿತ್ತು. ನೂರಾರು ಮನೆಗಳು, ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿ ಅಪಾರ ಹಾನಿ ಉಂಟಾಯಿತು. ತಿಂಗಳ ಹಿಂದಷ್ಟೇ ಮಹಾಮಳೆಯಿಂದ ನಗರವಾಸಿಗಳು ಅನುಭವಿಸಿದ ನರಕಯಾತನೆ ಮರುಕಳಿಸಿದ್ದು, ಪ್ರವಾಹ ತಡೆಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಅನಿವಾರ್ಯತೆ ತಲೆದೋರಿದೆ.

ಹೆದ್ದಾರಿ ಮೇಲೆಯೇ ಪ್ರವಾಹ: ನಗರದ ಪಡೀಲ್‌, ಪಂಪ್‌ವೆಲ್‌, ಕೊಟ್ಟಾರ ಚೌಕಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಮೇಲೆ 2-3 ಅಡಿ ಎತ್ತರಕ್ಕೆ ಪ್ರವಾಹ ನೀರು ಹರಿಯುತ್ತಿತ್ತು. ಬೆಳಗ್ಗೆ ಕೆಲಸಕ್ಕೆ ಹೋಗುವರು ತೀವ್ರ ಸಂಕಷ್ಟಅನುಭವಿಸಿದರು.

ಸಾಮಾನ್ಯವಾಗಿ ಪ್ರವಾಹ ಬಾರದ ಪಿವಿಎಸ್‌, ಬಂಟ್ಸ್‌ ಹಾಸ್ಟೆಲ್‌, ಕಂಕನಾಡಿ ಪ್ರದೇಶಗಳಲ್ಲಿ ನೆಲಮಾಳಿಗೆಯ ಅಂಗಡಿ, ಹೊಟೇಲ್‌ಗಳು ನೀರಿನಿಂದ ಸಂಪೂರ್ಣ ಮುಳುಗಿದ್ದವು. ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವೂ ಜಲಾವೃತವಾಗಿತ್ತು.

ಬೆಂಗಳೂರಿನಲ್ಲಿ ಮಳೆ, ಮನೆಯೊಳಗೆ ನೀರು, 5 ತಿಂಗಳ ಕಂದಮ್ಮ ಜೊತೆ ರಾತ್ರಿ ಕಳೆದ ತಾಯಿ

ಶಾಲೆಗಳಿಗೆ ರಜೆ: ಭಾರಿ ಮಳೆಯ ಕಾರಣ ಮಂಗಳೂರು ಉಪವಿಭಾಗದ ಬಂಟ್ವಾಳ, ಮಂಗಳೂರು, ಮೂಲ್ಕಿ, ಮೂಡುಬಿದಿರೆ, ಉಳ್ಳಾಲ ಮತ್ತು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ, ಪುತ್ತೂರು ತಾಲೂಕಿನಲ್ಲಿ ಶಾಲೆಗಳಿಗೆ ಶನಿವಾರ ರಜೆ ನೀಡಲಾಗಿತ್ತು.

ಶಿವಮೊಗ್ಗ ನಗರದಲ್ಲೂ ಧಾರಾಕಾರ ಮಳೆಗೆ ಅಣ್ಣಾನಗರ, ತಗ್ಗು ಪ್ರದೇಶದ ಹಲವು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿತ್ತು. ಪಾಲಿಕೆ ಅಧಿಕಾರಿಗಳ ಸುಳಿವೇ ಇಲ್ಲ ಎಂದು ನಿವಾಸಿಗಳು ದೂರಿದರು.

ಕಲಬುರಗಿ ನಗರ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಶನಿವಾರ ಮಧ್ಯಾಹ್ನದಿಂದ ಧಾರಾಕಾರ ಮಳೆ ಸುರಿದಿದೆ. ನಗರದಲ್ಲಿನ ಚರಂಡಿಗಳಲ್ಲಿ ನೀರು ಸರಾಗವಾಗಿ ಹರಿದು ಹೋಗದೆ, ರಸ್ತೆ ಮೇಲೆಯೇ ಹರಿಯುತ್ತಿತ್ತು. ಅನೇಕ ಮನೆಗಳಿಗೂ ನೀರು ನುಗ್ಗಿತ್ತು. ಯಾದಗಿರಿಯಲ್ಲಿ 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಸಮೀಪದ ಹೆಡಗಿಮದ್ರಾ-ಯಾದಗಿರಿಗೆ ತೆರಳುವ ಸೇತುವೆ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಠಾಣಾಗುಂದಿ ಸಮೀಪ ರಸ್ತೆ ಬಂದ್‌ ಆಗಿದೆ.

ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ ಸುರಿದ ಭಾರಿ ರಭಸದ ಮಳೆಗೆ ಡೋಣಿ ನ​ದಿ ಉಕ್ಕಿ ಹರಿಯುತ್ತಿದ್ದು, ವಿಜಯಪುರ ರಸ್ತೆಯ ಕೆಳಮಟ್ಟದ ಸೇತುವೆ ಹಾಗೂ ಹಡಗಿನಾಳ ಮಾರ್ಗದ ಕೆಳಮಟ್ಟದ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ.

click me!