Heavy Rain: ಧಾರವಾಡ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆ: ಒಂದು ಬಲಿ

By Govindaraj SFirst Published Sep 3, 2022, 4:00 AM IST
Highlights

ಧಾರವಾಡ ಮತ್ತು ಗದಗ ಜಿಲ್ಲೆಗಳ ಹಲವೆಡೆ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳದಲ್ಲಿ ವ್ಯಕ್ತಿಯೋರ್ವ ಕೊಚ್ಚಿ ಹೋಗಿದ್ದರೆ, ಇನ್ನೋರ್ವನನ್ನು ರಕ್ಷಿಸಲಾಗಿದೆ. 

ಹುಬ್ಬಳ್ಳಿ/ಬೆಂಗಳೂರು (ಸೆ.03): ಧಾರವಾಡ ಮತ್ತು ಗದಗ ಜಿಲ್ಲೆಗಳ ಹಲವೆಡೆ ಗುರುವಾರ ರಾತ್ರಿ ಭಾರೀ ಮಳೆ ಸುರಿದಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರವಾಡ ಜಿಲ್ಲೆಯ ಬೆಣ್ಣಿಹಳ್ಳದಲ್ಲಿ ವ್ಯಕ್ತಿಯೋರ್ವ ಕೊಚ್ಚಿ ಹೋಗಿದ್ದರೆ, ಇನ್ನೋರ್ವನನ್ನು ರಕ್ಷಿಸಲಾಗಿದೆ. ಗದಗ ಜಿಲ್ಲೆ ಶಿರಹಟ್ಟಿತಾಲೂಕಿನಲ್ಲಿ ಐತಿಹಾಸಿಕ ಕಪ್ಪತಗುಡ್ಡದಲ್ಲಿ ಭೂಕುಸಿತವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ಬೆಳಗಾವಿ ಹಾಗೂ ಧಾರವಾಡ ಜಿಲ್ಲೆಯಲ್ಲಿ ಸುರಿದ ಮಳೆಯಿಂದ ಬೆಣ್ಣಿಹಳ್ಳ ಮೈದುಂಬಿ ಹರಿಯುತ್ತಿದ್ದು ನವಲಗುಂದ ತಾಲೂಕಿನ ತಡಹಾಳ ಗ್ರಾಮದಲ್ಲಿ ಬೆಣ್ಣಿಹಳ್ಳ ಬೈಕ್‌ ಮೂಲಕ ಯುವಕರಿಬ್ಬರು ದಾಟುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಸದಾನಂದ ಶಿವಪ್ಪ ಪೂಜಾರ (ಮಾದರ) (32) ಎಂಬಾತ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. 

ಇನ್ನೊಬ್ಬನನ್ನು ಸ್ಥಳೀಯರು ಹಗ್ಗದಿಂದ ಹಿಡಿದು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಗದಗ ನಗ​ರದ ದೋಬಿ ಹಳ್ಳದಲ್ಲಿ ಸಿಲುಕಿದ್ದ ಬೈಕ್‌ನ್ನು ಸ್ಥಳೀ​ಯರು ಜೆಸಿಬಿ ಯಂತ್ರದ ಸಹಾ​ಯ​ದಿಂದ ಮೇಲೆ​ತ್ತಿರುವ ಘಟನೆ ನಡೆದಿದೆ. ಗುರುವಾರ ತಡರಾತ್ರಿ ಗದಗ ಜಿಲ್ಲೆಯ ಶಿರಹಟ್ಟಿಹಾಗೂ ಲಕ್ಷ್ಮೇಶ್ವರ ತಾಲೂಕು ಹಾಗೂ ಡಂಬಳ ಹೋಬಳಿಯಲ್ಲಿ ಭಾರಿ ಮಳೆ ಸುರಿದಿದ್ದು ಕಪ್ಪತಗುಡ್ಡದಲ್ಲಿ ಭೂಕುಸಿತವಾಗಿದ್ದು ಆತಂಕಕ್ಕೆ ಕಾರಣವಾಗಿದೆ. ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನಲ್ಲಿ ಗುರುವಾರ ರಾತ್ರಿ ಸುರಿದ ಮಳೆಗೆ 13 ಮನೆಗಳು ಕುಸಿದು ಬಿದ್ದಿದ್ದು, 15 ಹೆಕ್ಟೇರ್‌ಗೂ ಹೆಚ್ಚು ಮೆಕ್ಕೆಜೋಳ ಬೆಳೆ ನಾಶವಾಗಿದೆ. ಇನ್ನುಳಿದಂತೆ ಕೊಡಗು ಜಿಲ್ಲೆಯಲ್ಲೂ ಉತ್ತಮ ಮಳೆ ಸುರಿದಿದೆ.

ಬೆಂಗಳೂರು ರಾಜಕಾಲುವೆ ನಿರ್ಮಾಣಕ್ಕೆ 1500 ಕೋಟಿ ಬಿಡುಗಡೆ: ಸಿಎಂ ಬೊಮ್ಮಾಯಿ

ಕಿತ್ತು ಹೋದ ರಸ್ತೆ: ಚವತ್ತಿ ಬಳಿ ಯಲ್ಲಾಪುರ-ಶಿರಸಿ ರಾಜ್ಯ ಹೆದ್ದಾರಿಯೇ ಬಿರುಕು ಬಿಟ್ಟಿದ್ದು, ಲಾರಿ, ಬಸ್‌ನಂತಹ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡಿದೆ. ಚವತ್ತಿ ಬಳಿ ರಸ್ತೆ ಪಕ್ಕದ ಗದ್ದೆ, ತೋಟಗಳಿಗೆ ನುಗ್ಗಿದ ನೀರು, ರಭಸದಿಂದ ರಸ್ತೆಯತ್ತ ನುಗ್ಗಿದ್ದು, ಬಿರುಕು ಮೂಡಿ ರಸ್ತೆ ಕಿತ್ತು ಹೋಗಿದೆ.

ಮತ್ತೆ ಕುಸಿದ ಸೂರಿಮನೆ ರಸ್ತೆ: ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ತುಡಗುಣಿ-ಸೂರಿಮನೆ ಸಂಪರ್ಕ ರಸ್ತೆ ಮತ್ತೆ ಕುಸಿತಕ್ಕೊಳಗಾಗಿದೆ. ಸೂರಿಮನೆ ಊರಿಗೆ ಸಂಪರ್ಕ ಕಡಿತಗೊಂಡಿದೆ. ಗ್ರಾಪಂ ಅಧ್ಯಕ್ಷೆ ರೂಪಾ ಪೂಜಾರಿ, ಜಿಪಂ ಸ.ಕಾ.ನಿ ಅಭಿಯಂತರ ಅಶೋಕ ಬಂಟ, ಗ್ರಾಪಂ ಮಾಜಿ ಸದಸ್ಯ ರಾಮಚಂದ್ರ ಭಟ್ಟಸೂರಿಮನೆ, ಗ್ರಾಪಂ ಸದಸ್ಯರಾದ ಖೈತಾನ್‌ ಡಿಸೋಜ, ಅಶೋಕ ಪೂಜಾರಿ, ಕುಪ್ಪಯ್ಯ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

3ನೇ ಬಾರಿ ಕುಸಿದ ಸೇತುವೆ: ಕಳೆದ ಮಳೆಗಾಲದಲ್ಲಿ ಸೂರಿಮನೆ ರಸ್ತೆ ಕುಸಿದಿತ್ತು. ಇಲ್ಲಿ ತಾತ್ಕಾಲಿಕ ದುರಸ್ತಿ ಕ್ರಮ ಕೈಗೊಳ್ಳಲಾಗಿತ್ತು. ನಂತರ ಈ ಬಾರಿ ಜೋರಾದ ಮಳೆಯ ಪರಿಣಾಮ ಮತ್ತೆ ಕುಸಿತ ಉಂಟಾಗಿತ್ತು. ಇದೀಗ ಮೂರನೇ ಬಾರಿ ಸೇತುವೆ ಕುಸಿದಿದೆ. ಉಮ್ಮಚಗಿ ಗ್ರಾಪಂ ವ್ಯಾಪ್ತಿಯ ಹಾಸ್ಪುರ ಬಳಿ ಗಣಪತಿ ಹಾಸ್ಪುರ ಎಂಬ ರೈತರ ಗದ್ದೆ ಏರಿ ಒಡೆದು, ಹಳ್ಳದ ನೀರು ನುಗ್ಗಿ ನಾಟಿ ಮಾಡಿದ ಭತ್ತದ ಗದ್ದೆಗೆ ಹಾನಿ ಉಂಟುಮಾಡಿದೆ. ಗದ್ದೆಯ ತುಂಬೆಲ್ಲ ಕಲ್ಲು, ಮಣ್ಣಿನ ರಾಶಿ ಬಂದು ಬಿದ್ದಿದೆ.

ಮಳೆ ಬರುವ ಟೈಮ್‌ನಲ್ಲಿ ಅಂಡರ್​ಪಾಸ್​ನಲ್ಲಿ ವಾಹನ ನಿಲ್ಲಿಸಿದರೆ ದಂಡ: ರವಿಕಾಂತೇಗೌಡ

ಅತಿವೃಷ್ಟಿಹಾನಿ, ರೈತರು ದೃತಿಗೆಡದಿರಿ: ರಾಜ್ಯಾದ್ಯಂತ ಸುರಿದ ಮಳೆ ರೈತರ ಪಾಲಿಗೆ ಶಾಪವಾಗಿದೆ. ಸಮೃದ್ಧ ಬೆಳೆಯ ಕನಸು ಕಾಣುವ ರೈತನ ಬದುಕು ಅಲೋಲ ಕಲ್ಲೋಲ ಮಾಡಿದೆ.ರೈತರು ದೃತಿಗೆಡಬಾರದು, ಸರ್ಕಾರ ಅವರ ನೆರವಿಗೆ ಬರುತ್ತದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು. ತಾಲೂಕಿನ ಕೋಡ ಗ್ರಾಮದಲ್ಲಿ ಸುರಿದ ಮಳೆಯ ಪರಿಣಾಮ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಪ್ರಕೃತಿ ವಿಕೋಪಗಳಿಂದ ರೈತರು ಸಂಕಷ್ಟಕ್ಕೆ ಸಿಲುಕಿದಾಗ ಅವರ ನೆರವಿಗೆ ನಮ್ಮ ಸರ್ಕಾರ ಧಾವಿಸುತ್ತಿದೆ. ರೈತರಲ್ಲ ಅತ್ಮಸ್ಥರ್ಯ ತುಂಬಿ ಕೃಷಿಯಿಂದ ರೈತರನ್ನು ವಿಮುಖವಾಗದಂತೆ ನೋಡಿಕೋಳ್ಳುವುದು ನಮ್ಮ ಸರ್ಕಾರದ ಕರ್ತವ್ಯವಾಗಿದೆ ಎಂದರು. ತಾಪಂ ಇಒ ಲಕ್ಷ್ಮೇಕಾಂತ ಬೂಮ್ಮಣ್ಣನವರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ ಎಂ.ವಿ, ಗ್ರಾಮದ ಮುಖಂಡರು ಹಾಜರಿದ್ದರು.

click me!