
ಬೆಂಗಳೂರು(ಮೇ.15): ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿ ರಾಜ್ಯದ ಎಂಟಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಂಗಳವಾರವೂ ಭಾರೀ ಗಾಳಿ ಸಹಿತ ಮುಂಗಾರು ಪೂರ್ವ ಮಳೆ ಸುರಿದಿದ್ದು, ಸಿಡಿಲಿಗೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಧಾರವಾಡ, ಉತ್ತರ ಕನ್ನಡ, ಉಡುಪಿ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ಚಿಕ್ಕಮಗಳೂರು, ರಾಮನಗರ, ಬೆಳಗಾವಿ ಮತ್ತಿತರ ಜಿಲ್ಲೆಗಳಲ್ಲಿ ಕೆಲಕಾಲ ಉತ್ತಮ ಮಳೆ ಸುರಿದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ, ಕಾರವಾರ, ಕುಮಟಾ, ಗೋಕರ್ಣ, ಅಂಕೋಲಾ ಹಾಗೂ ಉಡುಪಿ ಜಿಲ್ಲೆಯ ಕೆಲವೆಡೆ ಉತ್ತಮ ಮಳೆಯಾಗಿದೆ. ಉಡುಪಿಯ ಕುಂದಾಪುರ ತಾಲೂಕಿನ ಸಿದ್ದಾಪುರದಲ್ಲಿ ಸಿಡಿಲು ಬಡಿದು ಸುರೇಶ ಶೆಟ್ಟಿ (38) ಎಂಬವರು ಮೃತಪಟ್ಟಿದ್ದಾರೆ.
ಇನ್ನು ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದಿದ್ದು, ಶೃಂಗೇರಿ ತಾಲೂಕಿನಲ್ಲಿ ಅಬ್ಬರದ ಮಳೆ ಸುರಿದಿದೆ. ಭಾರೀ ಗಾಳಿ ಮಳೆಗೆ ಹಲವೆಡೆ ಮರಗಳು ಉರುಳಿ ಬಿದ್ದು, ಆಸ್ತಿಪಾಸ್ತಿ ಹಾನಿಯಾಗಿದೆ. ಕಳೆದ ನಾಲೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನಲ್ಲಿ ತಂಪು ಉಂಟಾಗಿದ್ದು, ಬಿಸಿಲಲ್ಲಿ ಒಣಗುತ್ತಿದ್ದ ಅಡಕೆ, ಕಾಫಿ ತೋಟಗಳಿಗೆ ಜೀವಕಳೆ ಬಂದಿದೆ.
ನಿರಂತರ ಮಳೆಗೆ ಗುಂಡಿ ಬಿದ್ದ ಬೆಂಗಳೂರಿನ ರಸ್ತೆಗಳು: ವಾಹನ ಸವಾರರ ಪರದಾಟ
ಮುತ್ಯಾಲಮ್ಮ ಜಾತ್ರಾ ಸಂಭ್ರಮಕ್ಕೆ ಅಡ್ಡಿ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಜೆ ವೇಳೆ ಸುರಿದ ಮಳೆಯಿಂದಾಗಿ ನಗರದೇವತೆ ಮುತ್ಯಾಲಮ್ಮ ಜಾತ್ರಾ ಸಂಭ್ರಮಕ್ಕೆಕೆಲಕಾಲ ಅಡ್ಡಿಯಾಯಿತು. ಜಾತ್ರಾ ಮೆರವಣಿಗೆ ಸಮಾಪ್ತಿಯಾದ ಕೆಲ ಕ್ಷಣಗಳಲ್ಲೇ ಸುರಿದ ಮಳೆಯಿಂದ ಭಕ್ತಾದಿಗಳು ದೇವಾಲಯ ಪ್ರಾಂಗಣದಲ್ಲೇ ಆಶ್ರಯ ಪಡೆಯಬೇಕಾಯಿತು.
ನಾಲ್ಕು ತಿಂಗಳ ಬಳಿಕ ಕೆಆರ್ಎಸ್ಗೆ 800 ಕ್ಯುಸೆಕ್ ಒಳಹರಿವು
ಮಂಡ್ಯ: ಕೊಡಗಲ್ಲಿ ಸುರಿದ ಮಳೆ ಕಾರಣ ಕೆಆರ್ಎಸ್ ಅಣೆಕಟ್ಟೆಗೆ 802 ಕ್ಯುಸೆಕ್ ನೀರು ಬಂದಿದೆ. ಜ.14ರ ಬಳಿಕ ಒಳ ಹರಿವು ಇದೇ ಮೊದಲು. ಕೆಆರ್ಎಸ್ ಗರಿಷ್ಠ ಮಟ್ಟ 124 ಅಡಿ ಇದ್ದು, ಪ್ರಸ್ತುತ 79.65 ಅಡಿ ದಾಖಲಾಗಿದೆ. 541 ಕ್ಯುಸೆಕ್ ನೀರನ್ನು ಅಣೆಕಟ್ಟೆಯಿಂದ ಹೊರಬಿಡಲಾಗುತ್ತಿದೆ. ಅಣೆಕಟ್ಟೆಯಲ್ಲಿ 10.633 ಟಿಎಂಸಿ ನೀರು ಸಂಗ್ರಹವಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ