ದತ್ತಪೀಠ ಪರಿಸರದಲ್ಲಿ ಭಾರೀ ಬೆಂಕಿ; ಕುರುಚಲು , ಹಲ್ಲುಗಾವಲು ಸುಟ್ಟು ಕರಕಲು!

By Ravi JanekalFirst Published Mar 25, 2024, 8:54 PM IST
Highlights

ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದ ಪರಿಸರದಲ್ಲಿ ಇಂದು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಾರು ಎಕರೆ ಕುರುಚಲು ಹಾಗೂ ಹುಲ್ಲುಗಾವಲು ಸುಟ್ಟು ಕರಕಲಾಗಿದೆ. ಉರುಸ್ ಆಚರಣೆಗೆಂದು ಹೊರ ಜಿಲ್ಲೆಗಳಿಂದ ಬಂದವರಿಂದ ಕೃತ್ಯ ನಡೆದಿರುವ ಬಗ್ಗೆ ಅನುಮಾನವಿದೆ.

ವರದಿ : ಆಲ್ದೂರು ಕಿರಣ್ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
 
ಚಿಕ್ಕಮಗಳೂರು (ಮಾ.25): ಚಿಕ್ಕಮಗಳೂರು ಜಿಲ್ಲೆಯ ದತ್ತಪೀಠದ ಪರಿಸರದಲ್ಲಿ ಇಂದು ಭಾರೀ ಪ್ರಮಾಣದ ಬೆಂಕಿ ಕಾಣಿಸಿಕೊಂಡಿದ್ದು, ಸಾವಿರಾರು ಎಕರೆ ಕುರುಚಲು ಹಾಗೂ ಹುಲ್ಲುಗಾವಲು ಸುಟ್ಟು ಕರಕಲಾಗಿದೆ. ಉರುಸ್ ಆಚರಣೆಗೆಂದು ಹೊರ ಜಿಲ್ಲೆಗಳಿಂದ ಬಂದವರು ಪೀಠದ ಆಸು ಪಾಸಿನ ಗುಡ್ಡದ ತಪ್ಪಲಲ್ಲಿ ಟೆಂಟ್ ಹಾಕಿಕೊಂಡು ಅಡುಗೆ ಮಾಡುತ್ತಿದ್ದು ಇದರಿಂದಲೇ ಗುಡ್ಡಕ್ಕೆ ಬೆಂಕಿ ತಗುಲಿದೆ ಎಂದು ಆರೋಪಿಸಲಾಗಿದೆ.

ಬೆಂಕಿ ನಿಯಂತ್ರಿಸುವ ಕಾರ್ಯ : 

ಉರುಸ್‌ಗೆ ಬರುವವರಿಗಾಗಿ ಅಡುಗೆ ಮಾಡಿಕೊಳ್ಳಲೆಂದೇ ಜಿಲ್ಲಾಡಳಿತ ಪ್ರತ್ಯೇಕ ಶಾಮಿಯಾನ ಹಾಗೂ ಟೆಂಟ್ ವ್ಯವಸ್ಥೆ ಮಾಡಿದ್ದರೂ ಸಹ ಅದನ್ನು ಬಳಸಿಕೊಳ್ಳದೆ ಪೀಠದ ಸುತ್ತಲಿನ ಪ್ರದೇಶದಲ್ಲಿ ಅಲ್ಲಲ್ಲಿ ಟೆಂಟ್ ನಿರ್ಮಿಸಿ ಅಡುಗೆ ತಯಾರಿಸಲಾಗುತ್ತಿದೆ. ಈಗಾಗಲೇ ಬಿರು ಬಿಸಿಲಿನಿಂದ ಇಡೀ ಗಿರಿ ಪ್ರದೇಶ ಒಣಗಿ ನಿಂತಿದ್ದು, ಸಣ್ಣ ಕಿಡಿ ತಾಕಿದರೂ ಇಡೀ ಪರಿಸರಕ್ಕೆ ಬೆಂಕಿ ವ್ಯಾಪಿಸುತ್ತದೆ. ಹೀಗಿರುವಾಗ ಇಂದು ಬೆಂಕಿ ಕಾಣಿಸಿಕೊಂಡಿರುವುದಕ್ಕೂ ಇದೇ ಕಾರಣ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.

 

ಚಿತ್ರದುರ್ಗ: ಬಯಲುಸೀಮೆಯ ಊಟಿ ಜೋಗಿಮಟ್ಟಿಗೀಗ ಕಾಡ್ಗಿಚ್ಚಿನ ಆತಂಕ!

ಬೆಂಕಿಯಿಂದಾಗಿ ಇಡೀ ಗುಡ್ಡವೇ ಕಪ್ಪಾಗಿದ್ದು, ಸ್ಥಳದಲ್ಲಿ ಅಡುಗೆಗೆಂದು ನಿರ್ಮಿಸಿದ್ದ ಟೆಂಟ್ ಸಂಪೂರ್ಣ ಸುಟ್ಟು ಒಲೆಯ ಮೇಲಿನ ಪಾತ್ರೆ ಮತ್ತು ಅವಶೇಷಗಳು ಮಾತ್ರ ಕಾಣುತ್ತಿದೆ. ಬೆಂಕಿ ಕಾಣಿಸಿಕೊಂಡು ಗಾಳಿಯ ಜೊತೆಯಲ್ಲೇ ವೇಗವಾಗಿ ಗುಡ್ಡವನ್ನು ಆವರಿಸಿಕೊಳ್ಳುವಾಗ ಅಲ್ಲಿದ್ದ ಕೆಲವರು ಜೀವಭಯದಿಂದ ಓಡಿದ್ದಾರೆ. ಟೆಂಟ್ನಲ್ಲಿದ್ದ ಬಟ್ಟೆ, ಬರೆ ಇನ್ನಿತರೆ ವಸ್ತುಗಳನ್ನು ರಕ್ಷಿಸಿಕೊಳ್ಳಲು ಹರಸಾಹಸ ಪಟ್ಟಿದ್ದಾರೆ. ಅದೃಷ್ಟವಶಾತ್ ಸಾವು, ನೋವು ಸಂಭವಿಸಿಲ್ಲ. ವಿಚಾರ ತಿಳಿದು ಪೊಲೀಸರು ಸ್ಥಳಕ್ಕಾಗಮಿಸಿದ್ದಾರೆ. ಅಲ್ಲದೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ವ್ಯಾಪಿಸುವುದನ್ನು ನಿಯಂತ್ರಿಸುವ ಕಾರ್ಯ ಕೈಗೊಂಡಿದೆ.

ಎಲ್ಲೆಂದರಲ್ಲಿ ಟೆಂಟ್ ಸಂಘಟನೆ ಆಕ್ಷೇಪ : 

ಬೆಂಕಿ ಇನ್ನಷ್ಟು ವ್ಯಾಪಿಸಿದಲ್ಲಿ ಪರಿಸರ ಸೂಕ್ಷ್ಮವಾದ, ಅಮೂಲ್ಯ ಶೋಲಾ ಕಾಡುಗಳು ಆಹುತಿಯಾಗುವ ಸಾಧ್ಯತೆ ಇದೆ. ಈ ಬಾರಿ ಮಳೆ ಕೊರತೆಯಿಂದಾಗಿ ಗಿರಿ ಭಾಗದಲ್ಲಿ ನೀರಿನ ಒರತೆ ಕಾಣದಾಗಿದ್ದು, ಇಡೀ ಪ್ರದೇಶ ಒಣಗಿ ನಿಂತಿರುವುದರಿಂದ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆಯು ಗಿರಿ ಪ್ರದೇಶದಲ್ಲಿ ಎಲ್ಲೆಂದರಲ್ಲಿ ಅಡುಗೆ ತಯಾರಿಸುವುದು, ಇತರೆ ಉದ್ದೇಶಕ್ಕೆ ಬೆಂಕಿ ಹಾಕುವುದಕ್ಕೆ ಕಡಿವಾಣ ಹಾಕಬೇಕಿದೆ. ಬಜರಂಗದಳದ ದಕ್ಷಿಣ ಪ್ರಾಂತ ಸಂಚಾಲಕ ರಘು ಸಕಲೇಶಪುರ ಅವರು ಸಹ ದತ್ತಪೀಠಕ್ಕೆ ಭೇಟಿ ನೀಡಿದ್ದು, ಪೀಠದ ಆವರಣದಲ್ಲಿ ಉರುಸ್‌ಗೆ ಬಂದವರಿಗೆ ಎಲ್ಲೆಂದರಲ್ಲಿ ಟೆಂಟ್ ನಿರ್ಮಿಸಿ ಅಡುಗೆ ಮಾಡಲು ಅವಕಾಶ ನೀಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಡ್ಗಿಚ್ಚು ತಡೆಗೆ ನಾಗರಹೊಳೆ ಅಭಯಾರಣ್ಯದಲ್ಲಿ 2000ಕಿಮೀ ಫೈರ್‌ಲೈನ್! ಏನಿದು ಅಗ್ನಿರೇಖೆ?

ಜಿಲ್ಲಾಡಳಿತ ಉರುಸ್ ಹಿನ್ನೆಲೆಯಲ್ಲಿ ಎಲ್ಲಾ ಅನುಕೂಲವನ್ನು ಮಾಡಿಕೊಟ್ಟಿದ್ದರೂ ಬೇಕಾಬಿಟ್ಟಿಯಾಗಿ, ಅಕ್ರಮವಾಗಿ ಟೆಂಟ್ಗಳನ್ನು ನಿರ್ಮಿಸಿಕೊಂಡಿರುವುದು ಸರಿಯಲ್ಲ. ಜಿಲ್ಲಾಡಳಿತ ಕೂಡಲೇ ಎಚ್ಚೆತ್ತುಕೊಂಡು ಇದಕ್ಕೆ ಕಡಿವಾಣ ಹಾಕಬೇಕು. ಅಲ್ಲದೆ ಗಿರಿ ಪ್ರದೇಶಕ್ಕೆ ಬೆಂಕಿ ವ್ಯಾಪಿಸಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

click me!