
ಬೆಂಗಳೂರು (ಸೆ.19): ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಬಿ.ಎಸ್. ಯಡಿಯೂರಪ್ಪ ಅವರು ಸೇರಿಕೊಂಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೋಟಿಫಿಕೇಷನ್ ಮಾಡಿದ್ದ 1 ಎಕರೆ 11 ಗುಂಟೆ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಡಿನೋಟಿಫಿಕೇಷನ್ ಮಾಡಿಕೊಳ್ಳುವ ಮೂಲಕ ದೊಡ್ಡ ಹಗರಣ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಡತಗಳನ್ನು ತೋರಿಸುವ ಮೂಲಕ ಬಹಿರಂಗ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಜಂಟಿಯಾಗಿ ಸುದ್ದಿಗೋಷ್ಠಿ ಮಾಡಿದ ಅವರು, ಬಿಜೆಪಿ ಅವರು ನಮ್ಮ ಮೇಲೆ ಸುಳ್ಳನ್ನ ಸತ್ಯ ಮಾಡಲು ಹೊರಟಿದ್ದಾರೆ. ಇವರೆಲ್ಲಾ ಲೂಡ ಅನೇಕ ಪ್ರಕರಣಗಳಲ್ಲಿ ಮಾಡಬಾರದ್ದನ್ನ ಮಾಡಿದ್ದಾರೆ. ಲೋಕಾಯುಕ್ತ ಪ್ರಾಥಮಿಕ ತನಿಖೆ ಮಾಡಿ ಪ್ರಾಸಿಕ್ಯೂಷನ್ ಗೆ ಕೇಳಿದರೆ ಕೊಡುವುದಿಲ್ಲ. ಪ್ರತ್ಯಕ್ಷವಾಗಿಯೇ ರಾಜ್ಯಪಾಲರು ಬಿಜೆಪಿ ಬೆನ್ನಿಗೆ ನಿಂತಿದ್ದಾರೆ. ಇವರು ಮಾಡಬಾರದ್ದನ್ನೆಲ್ಲಾ ಮಾಡಿದ್ದಾರೆ. ಬೆಂಗಳೂರಿನ ಗಂಗನೇಹಳ್ಳಿ 1 ಎಕರೆ 11 ಗುಂಟೆ ಜಾಗವನ್ನ ಬಿಡಿಎ ನೋಟಿಫಿಕೇಷನ್ ಮಾಡಿತ್ತು. ವಾರಸುದಾರರಿಗೆ ಸಂಬಂಧ ಇಲ್ಲದೇ ಇರುವ ರಾಜಶೇಖರಯ್ಯ ಅನ್ನೋರು ಡಿನೋಟಿಫಿಕೇಷನ್ ಮಾಡಿ ಅಂತ ಅರ್ಜಿ ಕೊಡ್ತಾರೆ. ಸ್ವಾಧೀನ ಆದ ಬಳಿಕ 30 ವರ್ಷಗಳ ನಂತರ ಡೀನೋಟಿಫಿಕೇಶನ್ ಗೆ ಅರ್ಜಿ ಹಾಕ್ತಾರೆ. ಈ ರಾಜಶೇಖರಯ್ಯ ಅವರು ಯಾರು ಅಂತಾನೇ ಗೊತ್ತಿಲ್ಲ. ಅರ್ಜಿ ಹಾಕಿದ ಕೂಡಲೇ ಕುಮಾರಸ್ವಾಮಿ ಅಧಿಕಾರಿಗಳಿಗೆ ಡಿನೋಟೀಫಿಕೇಷನ್ ಪ್ರಕ್ರಿಯೆ ಮಾಡುವತೆ ಸೂಚನೆ ಕೊಡುತ್ತಾರೆ ಎಂದು ಆರೋಪಿಸಿದರು.
ಎಲ್ಲರ ಮೇಲೂ ಆರೋಪ ಮಾಡೊದೇ ಬಿಜೆಪಿ ಕೆಲಸ: ಡಿಸಿಎಂ ಡಿ.ಕೆ.ಶಿವಕುಮಾರ್
ಬಿಡಿಎ ನೋಟಿಫಿಕೇಷನ್ ಆದ ಜಾಗ ಕುಮಾರಸ್ವಾಮಿ ಅತ್ತೆ ಹೆಸರಿಗೆ ಜಿಪಿಎ ಆದಾಕ್ಷಣ ಅವರು ಅಧಿಕಾರದಿಂದ ಕೆಳಗಿಳಿಯುತ್ತಾರೆ. ಬಳಿಕ ಕುಮಾರಸ್ವಾಮಿ ಅಧಿಕಾರದಿಂದ ಕೆಳಗೆ ಇಳಿತಾರೆ. ನಂತರ ಸಿಎಂ ಆದ ಯಡಿಯೂರಪ್ಪ ಕೂಡ ಈ ಫೈಲ್ಗೆ ಚಾಲನೆ ಕೊಡುತ್ತಾರೆ. ಆದರೆ, ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಜ್ಯೋತಿ ರಾಮಲಿಂಗಂ ಅವರು ಇದನ್ನ ಡಿನೋಟಿಫಿಕೇಶನ್ ಮಾಡಲು ಬರುವುದಿಲ್ಲ ಎಂದು ವರದಿ ಕೊಡುತ್ತಾರೆ. ಆದರೆ ಸಿಎಂ ಆಗಿದ್ದ ಯಡಿಯೂರಪ್ಪ ಡಿನೋಟಿಫಿಕೇಶನ್ ಮಾಡಲು ಆದೇಶ ಮಾಡ್ತಾರೆ. ಇದಕ್ಕಾಗಿ 05/10/2010 ರಂದು ಒಂದು ಸಾಲಿನ ಆದೇಶ ಹೊರಡಿಸುತ್ತಾರೆ. ಇದಾದ ಬಳಿಕ ಕುಮಾರಸ್ವಾಮಿ ಅವರ ಬಾಮೈದುನನ ಹೆಸರಿಗೆ ಕ್ರಯ ಆಗತ್ತದೆ ಎಂದು ಮಾಹಿತಿ ನೀಡಿದರು.
ಬೆಂಗಳೂರಿನ ನಗರ ಪ್ರದೇಶದಲ್ಲಿ ಇಷ್ಟು ಬೆಲೆಬಾಳುವ ಜಮೀನಿನನ್ನ ಬರೆಸಿಕೊಂಡಿದ್ದಾರೆ. ಇವರು ಸತ್ತವರ ಹೆಸರಲ್ಲಿ ಮುಡಾ ಹೇಗೆ ಡಿನೋಟಿಫಿಕೇಶನ್ ಮಾಡಿತು ಅಂತ ಪ್ರಶ್ನೆ ಮಾಡುತ್ತಾರೆ. ಈ ಪ್ರಕರಣದಲ್ಲಿ ಏನು ಮಾಡಿದ್ದೀರಿ ಕುಮಾರಸ್ವಾಮಿ ಅವರೇ? ಇದರ ಫಲಾನುಭವಿಗಳು ನೀವೆ ಅಲ್ಲವೇ? ಯಡಿಯೂರಪ್ಪ ವಿರುದ್ಧ ಲೋಕಾಯುಕ್ತ ಎಫ್ಐಆರ್ ದಾಖಲಿಸತ್ತದೆ. ಇದನ್ನ ಪ್ರಶ್ನೆ ಮಾಡಿ ಯಡಿಯೂರಪ್ಪ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಕೋರ್ಟ್ ಯಡಿಯೂರಪ್ಪ ಅವರಿಗೆ ದಂಡ ಕೂಡ ವಿಧಿಸಿದೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ