ವೈದ್ಯಕೀಯ ಕಾರಣದಿಂದ ದಿಲ್ಲಿ ಭೇಟಿ ರದ್ದು ಮಾಡಿದ ಎಚ್‌ಡಿಡಿ

By Kannadaprabha NewsFirst Published Jan 24, 2021, 8:14 AM IST
Highlights

ವೈದ್ಯಕೀಯ ಕಾರಣದಿಂದ ತಾವು  ದಿಲ್ಲಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲವೆಂದು ಹಿರಿಯರಾದ ಎಚ್ ಡಿ ದೇವೇಗೌಡ ಪತ್ರದ ಮೂಲಕ ತಿಳಿಸಿದ್ದಾರೆ. ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಕಿಸಾನ್‌ ಸಂಸದ್‌ ಸಭೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. 

 ಬೆಂಗಳೂರು (ಜ.24):  ದೆಹಲಿಯಲ್ಲಿ ನಡೆಯುತ್ತಿರುವ ಎರಡು ದಿನಗಳ ಕಿಸಾನ್‌ ಸಂಸದ್‌ ಸಭೆಯಲ್ಲಿ ವೈದ್ಯಕೀಯ ಕಾರಣಗಳಿಂದಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ದೈಹಿಕವಾಗಿ ಹಾಜರಾಗದಿದ್ದರೂ ನಾನು ರೈತರ ಪರವಾಗಿದ್ದೇನೆ ಎಂದು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಪತ್ರದ ಮೂಲಕ ತಿಳಿಸಿದ್ದಾರೆ. ‘ಸಭೆಗೆ ನನ್ನನ್ನು ಆಹ್ವಾನಿಸಿದ್ದಕ್ಕಾಗಿ ಧನ್ಯವಾದಗಳು. ರೈತರ ಮತ್ತು ಸ್ನೇಹಿತರ ಕೂಟದಲ್ಲಿ ಭಾಗವಹಿಸಬೇಕು ಎಂಬುದು ನನ್ನ ಬಯಕೆಯಾಗಿತ್ತು.

ದುರಾದೃಷ್ಟವಶಾತ್‌ ವೈದ್ಯಕೀಯ ಕಾರಣದಿಂದ ಸಭೆಗೆ ಬರಲು ಸಾಧ್ಯವಾಗಿಲ್ಲ. ನಾನು ಬಡ ರೈತನ ಮಗನಾಗಿ ಜನಿಸಿದ್ದು, ನನ್ನ ರಾಜಕೀಯ ಜೀವನದಲ್ಲಿ ಕೃಷಿ ಸಮುದಾಯಗಳನ್ನು ಎಂದಿಗೂ ನಿರಾಸೆಗೊಳಿಸಿಲ್ಲ. ಕೇಂದ್ರದ ಮೂರು ಕೃಷಿ ಮಸೂದೆಗಳಿಗೆ ನನ್ನ ಆಕ್ಷೇಪಣೆಗಳನ್ನು ಪುನರುಚ್ಚರಿಸಲು ಈ ಅವಕಾಶವನ್ನು ಪಡೆದುಕೊಳ್ಳುತ್ತೇನೆ. ಸರಿಯಾದ ಸಮಾಲೋಚನೆ ಮಾಡದೆ ಇವನ್ನು ಕಾನೂನುಗಳಾಗಿ ಅಂಗೀಕರಿಸಲಾಗಿದೆ’ ಎಂದು ತಿಳಿಸಿದ್ದಾರೆ.

ತಳಮಟ್ಟದಿಂದ ಪಕ್ಷ ಸಂಘಟನೆಗೆ ಜೆಡಿಎಸ್ ಒತ್ತು, ಇಲ್ಲಿದೆ ದಳಪತಿಗಳ ಪಕ್ಕಾ ಪ್ಲಾನ್..! ..

ಕೇಂದ್ರ ಸರ್ಕಾರದ ಮೂರು ಸುಗ್ರೀವಾಜ್ಞೆಗಳ ಬಗ್ಗೆ ಹಲವು ರಾಜ್ಯಗಳ ರೈತರು ತಮ್ಮ ಕೋಪ, ಆತಂಕವನ್ನು ವ್ಯಕ್ತಪಡಿಸಲು ಬೀದಿಗಿಳಿದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಪ್ರಗತಿಪರ ಸುಧಾರಣೆಗಳಾಗಿ ಈ ಸುಗ್ರೀವಾಜ್ಞೆಗಳನ್ನು ಮಂಡಿಸಲಾಯಿತು. ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಇಂತಹ ಪ್ರಮುಖ ಸುಧಾರಣೆಗಳನ್ನು ತರಲು ಸುಗ್ರೀವಾಜ್ಞೆಗಳನ್ನು ಹೊರಡಿಸುವುದು ತಪ್ಪು ಸಂದೇಶವನ್ನು ರವಾನಿಸಿದೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಿದ್ದಾರೆ.

ಕೃಷಿ ಸಮುದಾಯದಲ್ಲಿ ಸಹಜವಾಗಿ ಅನುಮಾನಗಳು ಹುಟ್ಟಿಕೊಂಡಿವೆ. ದೇಶದ ಯಾವುದೋ ಮೂಲೆಯಲ್ಲಿ ಆತ್ಮಹತ್ಯೆ ನಡೆದಾಗ ರೈತನ ಜೀವನದ ಅನಿಶ್ಚಿತತೆಯು ಯಾವಾಗಲೂ ಎದ್ದು ಕಾಣುತ್ತದೆ. ಆದರೆ, ಅದನ್ನು ಶೀಘ್ರದಲ್ಲಿಯೇ ಮರೆತುಬಿಡಲಾಗುತ್ತದೆ. ಕೃಷಿ ಸಮುದಾಯಕ್ಕೆ ಶಾಶ್ವತ ಆಯೋಗದ ಅಗತ್ಯ ಇದೆ. ಅದು ಅವರ ಆಸಕ್ತಿಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡುತ್ತದೆ ಮತ್ತು ಮಧ್ಯಸ್ಥಿಕೆ ವಹಿಸುತ್ತದೆ. ರಸಗೊಬ್ಬರಗಳು, ಬೀಜಗಳು ಅಥವಾ ಮಾರುಕಟ್ಟೆಗಳಿಗೆ ಸಂಬಂಧಿಸಿದ ವಿವಾದಗಳನ್ನು ಮತ್ತು ಎಂಎಸ್‌ಪಿಯನ್ನು ನೋಡುವ ವಿಶೇಷ ನ್ಯಾಯಮಂಡಳಿಗಳ ಕಲ್ಪನೆಯು ಸಾಂಸ್ಥಿಕ ಕಲ್ಪನೆಯಾಗಿರಬಹುದು ಎಂದಿದ್ದಾರೆ.

click me!