
ಬೆಂಗಳೂರು, (ಏ.03) ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ, ರಾಜ್ಯಸಭಾ ಸದಸ್ಯ ಎಚ್ಡಿ ದೇವೇಗೌಡ ( HD Devegowda) ಮತ್ತೆ ನೈಸ್ ಸಂಸ್ಥೆಯ ಸಿಡಿದೆದ್ದಿದ್ದು, ಅಕ್ರಮದ ವಿರುದ್ಧ ನನ್ನ ಹೋರಾಟ ಮುಂದುವರೆಯಲಿದೆ ಎಂದಿದ್ದಾರೆ.
ಬೆಂಗಳೂರಿನ ಜೆಡಿಎಸ್ ಕಚೇರಿಯಲ್ಲಿ ಇಂದು(ಭಾನುವಾರ) ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೈಸ್ ಸಂಸ್ಥೆ ಟೋಲ್ ಹಣವನ್ನು ಸರ್ಕಾರದ ಅನುಮತಿ ಇಲ್ಲದೆ ಹೆಚ್ಚಳ ಮಾಡಿದೆ. ನೈಸ್ ಸಂಸ್ಥೆಯು ಸರ್ಕಾರದ ಎಲ್ಲಾ ನಿಯಮಗಳನ್ನೂ ಗಾಳಿಗೆ ತೂರಿದೆ. ಸಿಎಂ ಬೊಮ್ಮಾಯಿಗೆ ಪತ್ರ ಬರೆದಿದ್ದೇನೆ.ನೈಸ್ ಸಂಸ್ಥೆಗೆ ಕೊಮ್ಮನಗಟ್ಟದ ಬಳಿ ನೀಡಿರುವ 41 ಎಕರೆ ಜಾಗದ ಸೇಲ್ ಡೀಡ್ ರದ್ದುಗೊಳಿಸುವಂತೆ ಪತ್ರ ಬರೆದಿದ್ದೇನೆ ಎಂದರು.
ವಿಧಾನ ಪರಿಷತ್ ನಲ್ಲಿ ಈ ವಿಷಯ ಚರ್ಚೆ ಆಯ್ತು. ಆದ್ರೆ ಯಾವುದೇ ಸಚಿವರು ಸರಿಯಾಗಿ ಉತ್ತರ ಕೊಟ್ಟಿಲ್ಲ. ನಾನು ಅನೇಕ ಪತ್ರಗಳನ್ನು ಸಿಎಂ, ಸಿಎಸ್, ಕೈಗಾರಿಕೆ ಇಲಾಖೆ ಕಾರ್ಯದರ್ಶಿಗೂ ಕೂಡ ಪತ್ರ ಬರೆದಿದ್ದೇನೆ. ಆದರೆ ಯಾರಿಂದಲೂ ಉತ್ತರ ಬಂದಿಲ್ಲ ಎಂದ ಅಸಮಾಧಾನ ವ್ಯಕ್ತಪಡಿಸಿದರು.
ಸರ್ಕಾರ ನೈಸ್ ವಿಚಾರವಾಗಿ ಕಮಿಟಿ ಮಾಡಿತ್ತು. ಆದರೆ ಕಮಿಟಿಯನ್ನ ಪದೇ ಪದೇ ಬದಲಾವಣೆ ಮಾಡುತ್ತಾ ಹೋದ್ರು. ಸಚಿವ ಮಾಧುಸ್ವಾಮಿ ಅವರು ಈ ಕಂಪನಿ ವ್ಯವಹಾರಗಳು ಸರಿ ಇಲ್ಲ ಅಂತ ಹೇಳಿದ್ದಾರೆ. ಆಗ ನೈಸ್ ಸಂಸ್ಥೆಗೆ ಕೇವಲ 5 ಲಕ್ಷ ಮಾತ್ರ ಪೆನಾಲ್ಟಿ ಹಾಕಿದ್ರು ಎಂದು ಅಸಮಾಧಾನ ಹೊರಹಾಕಿದರು.
ಈಗ ಮಾಧುಸ್ವಾಮಿ ಅವರನ್ನ ಕಮಿಟಿಯಿಂದ ಕೈ ಬಿಟ್ಟಿದ್ದಾರೆ. ನಾನು ಒಳ್ಳೆ ಉದ್ದೇಶಕ್ಕಾಗಿ ಯೋಜನೆ ತಂದಿದ್ದು, ನಂತರ ಇದರಲ್ಲಿ ಅನೇಕ ನಿಯಮಗಳನ್ನೂ ಬದಲಾವಣೆ ಮಾಡಿದ್ದಾರೆ. ನೈಸ್ ಬಗ್ಗೆ ಸದನ ಸಮಿತಿ ಮಾಡಿ ವರದಿ ನೀಡಿತ್ತು. ರಸ್ತೆ ಮಾಡದೆಯೇ ಟೋಲ್ ಸಂಗ್ರಹ ಮಾಡುತ್ತಿದ್ದಾರೆ ಅಂತ ಸದನ ಸಮಿತಿ ವರದಿ ಕೊಟ್ಟಿತ್ತು. ಜೊತೆಗೆ ಸದನ ಸಮಿತಿಯು ಟೋಲ್ ಸಂಗ್ರಹ ರದ್ದು ಮಾಡುವಂತೆ ವರದಿ ಕೊಟ್ಟಿದ್ರೂ, ಇದರ ವಿರುದ್ಧ 2016 ರಲ್ಲಿ ನೈಸ್ ಸಂಸ್ಥೆ ಅವರು ಹೈಕೋರ್ಟ್ ನಲ್ಲಿ ಸ್ಟೇ ತೆಗೆದುಕೊಂಡಿದ್ದಾರೆ. ಬಳಿಕ 2016 ರಿಂದ 2022 ರವರೆಗೆ ಟೋಲ್ ಸಂಗ್ರಹ ಮಾಡಿದ್ದಾರೆ. ನಿತ್ಯ 2-3 ಕೋಟಿ ಸಂಗ್ರಹ ಆಗುತ್ತಿದೆ.ಯಾರಾದರೂ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರಾ ಎಂದು ಪ್ರಶ್ನಿಸಿದರು.
KIADB ಜಾಗವನ್ನು ಮೆಟ್ರೋಗೆ 14 ಕೋಟಿಗೆ ನೈಸ್ ಸಂಸ್ಥೆ ಮಾರಾಟ ಮಾಡಿದೆ,ಈಗ ಮತ್ತೆ ಮೆಟ್ರೋ ಗೆ ಸುಮಾರು 100 ಕೋಟಿಗೆ ಮಾರಾಟ ಮಾಡಿ ದುಡ್ಡು ಮಾಡಲು ನೈಸ್ ಸಂಸ್ಥೆ ಹೊರಟಿದೆ ಎಂದು ಹೇಳಿದರು.
ತುಂಬಾ ಆಸೆ ಇಟ್ಟು ಈ ಪ್ರಾಜೆಕ್ಟ್ ಮಾಡಿದ್ದೆ, ಆದ್ರೆ ರೈತರಿಗೆ ನೈಸ್ ಸಂಸ್ಥೆ ಸರಿಯಾಗಿ ಪರಿಹಾರವನ್ನೇ ನೀಡಲಿಲ್ಲ, ಇದು ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು ,ಆದ್ರೆ ಈ ಕಂಪನಿ ರೈತರಿಗೆ ಅನ್ಯಾಯ ಮಾಡಿದೆ.ಸರ್ಕಾರಿ ಜಮೀನನ್ನ ಅಡ ಇಟ್ಟು ಸಾಲ ಪಡೆದಿದ್ದಾರೆ.ದೇಶದಲ್ಲಿ ಉತ್ತಮ ರಸ್ತೆ ಮಾಡಲು ಈ ಪ್ರಾಜೆಕ್ಟ್ ಆಗಲೇ ಓಕೆ ಮಾಡಿದೆ.ಆದ್ರೆ ಇವತ್ತು ಎಲ್ಲಾ ಉಲ್ಟಾ ಆಗಿದೆ ,ಮನಸ್ಸಿಗೆ ಬಹಳ ನೋವಾಗುತ್ತೆ ಎಂದು ಬೇಸರ ವ್ಯಕ್ತಪಡಿಸಿದರು,
ನೈಸ್ ಸಂಸ್ಥೆ ಕಾಂಕ್ರೀಟ್ ರಸ್ತೆ ಮಾಡಿದ್ದೇವೆ ಅಂತಾರೆ ಆದ್ರೆ ಅದು ಕೂಡ ಕಳಪೆ ರಸ್ತೆ ಆಗಿದೆ. ಈ ಬಗ್ಗೆ ಅನೇಕ ಪತ್ರ ಬರೆದಿದ್ದೇನೆ.ಸರ್ಕಾರ ಏನು ಕ್ರಮ ತೆಗೆದುಕೊಂಡಿಲ್ಲ ಹೈಕೋರ್ಟ್ ಗೆ ಸರ್ಕಾರ ಅರ್ಜಿ ಹಾಕಬೇಕಿತ್ತು.ಇಷ್ಟು ಅಕ್ರಮ ಮಾಡಿದ್ದಾರೆ ಅಂತ ಅರ್ಜಿ ಹಾಕಬೇಕಿತ್ತು. ಆದರೆ ಯಾವ ಸರ್ಕಾರವೂ ಈ ಕೆಲಸವನ್ನ ಮಾಡಲಿಲ್ಲ. ಆಗ ಕುಮಾರಸ್ವಾಮಿ ಸಿಎಂ ಆಗಿದ್ದಾಗಲೂ ಕೂಡ ಸುಪ್ರೀಂಕೋರ್ಟ್ Supreme court ಆದೇಶ ಪಾಲನೆ ಮಾಡು ಅಂತ ಹೇಳಿದ್ದೆ. ಸಿದ್ದರಾಮಯ್ಯ, ಯಡಿಯೂರಪ್ಪ, ಅವರಿಗೂ ಪತ್ರ ಬರೆದಿದ್ದೆ ಈಗ ಬೊಮ್ಮಾಯಿ ಅವರ ಸರ್ಕಾರಕ್ಕೆ ಬಹುಮತ ಇದೆ. ಈಗಲಾದ್ರು ಕ್ರಮ ತೆಗೆದುಕೊಳ್ಳಲಿ ಎಂದು ಆಗ್ರಹಿಸಿದರು.
ಭೂಮಿ ಕಳೆದುಕೊಂಡವರು ನನ್ನ ಬಳಿ ಬಂದು ನೋವು ತೋಡಿಕೊಂಡಿದ್ದಾರೆ. ಇದು ಪ್ರಾರಂಭ ಆಗಿದ್ದು, ಮುಂದೆ ಇನ್ನು ಹೋರಾಟ ಇದೆ.ನಾನು ಕಣ್ಣು ಮುಚ್ಚಿಕೊಂಡು ಈ ಪ್ರಾಜೆಕ್ಟ್ ಮಾಡಿಲ್ಲ. ನಿಯಮ ಬದ್ದವಾಗಿ ಮಾಡಿದ್ದೆ. ನನ್ನ ಮೇಲೆ ಎರಡು ಕೋಟಿ ಮಾನನಷ್ಟ ಮೊಕದ್ದಮೆ ಹಾಕಿದ್ದಾರೆ. ಅದಕ್ಕೆ ಕೋರ್ಟ್ ಸ್ಟೇ ಕೊಟ್ಟಿದೆ. ನನ್ನ ಮೇಲೆ ಕೇಸ್ ಇದೆ.ಸರ್ಕಾರ ಈಗಲಾದ್ರು ಕ್ರಮ ತೆಗೆದುಕೊಳ್ಳಲಿ ಎಂದರು.
ಈಗಿನ ಸಿಎಂ ಪಾಪ ತುಂಬಾ ಬ್ಯುಸಿ ಇದ್ದಾರೆ ಅದಕ್ಕೆ ಸಂಬಂಧ ಪಟ್ಟ ಮಂತ್ರಿಗಳಿಗೆ ಕೆಲಸ ಮಾಡಲು ಹೇಳಲಿ ಎಂದು ನೈಸ್ ವಿರುದ್ದ ಕ್ರಮಕ್ಕೆ ಸರ್ಕಾರವನ್ನ ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ