
ಬೆಂಗಳೂರು (ಮೇ.27): ಗುಜರಾತಿನ ಗೌರವಾನ್ವಿತ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್ ರವರು ಆರ್ಟ್ ಆಫ್ ಲಿವಿಂಗ್ ನ ಅಂತಾರಾಷ್ಟ್ರೀಯ ಕೇಂದ್ರಕ್ಕೆ ಭೇಟಿ ನೀಡಿ, ಆಧ್ಯಾತ್ಮಿಕ ಗುರುಗಳು ಮತ್ತು ಜಾಗತಿಕ ಮಾನವತಾವಾದಿಗಳಾದ ಶ್ರೀ ರವಿಶಂಕರ್ ಗುರೂಜಿಯನ್ನು ಭೇಟಿಯಾದರು. ಸನ್ಮಾನ್ಯ ರಾಜ್ಯಪಾಲರು ನೈಸರ್ಗಿಕ ಕೃಷಿಯ ಕ್ಷೇತ್ರದಲ್ಲಿ ಮಾಡುತ್ತಿರುವ ಕೆಲಸವನ್ನು ಗುರುದೇವರು ಮೆಚ್ಚಿದರು. ಆರ್ಟ್ ಆಫ್ ಲಿವಿಂಗ್ ನ ಕೇಂದ್ರದಲ್ಲಿ ನಡೆದ ಸತ್ಸಂಗದಲ್ಲಿ ಮಾತನಾಡುತ್ತಾ ಗುರುದೇವರು, "ನೈಸರ್ಗಿಕ ಕೃಷಿಯಿಂದ ಭೂಮಿಯು ಫಲವತ್ತಾಗಿರುತ್ತದೆ, ದೇಹವು ಆರೋಗ್ಯದಿಂದಿರುತ್ತದೆ ಮತ್ತು ಸಮಾಜವು ರೋಗಮುಕ್ತವಾಗುತ್ತದೆ" ಎಂದರು.
ಈ ಸಂದರ್ಭದಲ್ಲಿ ಮಾತನಾಡುತ್ತಾ ಸನ್ಮಾನ್ಯ ರಾಜ್ಯಪಾಲರು, "ನಾನು ಕುರುಕ್ಷೇತ್ರದಿಂದ ಹೊರಟು ಇಲ್ಲಿಗೆ ಬಂದಾಗ, ಅಲ್ಲಿನ ಉಷ್ಣಾಂಶ 45 ಡಿಗ್ರಿ ಇತ್ತು. ಇಲ್ಲಿ ಉಷ್ಣಾಂಶ 26 ಡಿಗ್ರಿ ಎಂದು ತಿಳಿಯಿತು. ಗುರುದೇವರು ಆಶ್ರಮದ ಸುತ್ತಲೂ ಬೆಳೆಸಿರುವ ಮರಗಳಿಂದಾಗಿ ಇಲ್ಲಿ ಇಷ್ಟು ತಂಪಾಗಿದೆ. ಈ ಆಶ್ರಮಕ್ಕೆ ಬಂದು ನನಗೆ ಬಹಳ ಹರುಷವಾಗಿದೆ. ಸೃಷ್ಟಿಕರ್ತ ಈ ಸೃಷ್ಟಿಯನ್ನು ಎಷ್ಟು ಶುದ್ಧವಾಗಿಟ್ಟುಕೊಳ್ಳಲು ಬಯಸಿದನೋ, ಈ ಆಶ್ರಮದಲ್ಲಿ ಅಷ್ಟು ಶುಚಿತ್ವ ಇದೆ. ಇಂತಹ ವಾತಾವರಣದಲ್ಲಿ ಸಮಯ ಕಳೆಯಲು ನನಗೆ ಬಹಳ ಹರುಷವಾಯಿತು" ಎಂದರು.
ತಮ್ಮ ಮಾತನ್ನು ಮುಂದುವರಿಸುತ್ತಾ ರಾಜ್ಯಪಾಲರು "ಇಂದಿನ ವಿಜ್ಞಾನಿಗಳು ಜಾಗತಿಕ ತಾಪಮಾನ ಬದಲಾವಣೆಯ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಆದರೆ ಗುರುದೇವರು ಇದರ ಬಗ್ಗೆ ಮುಂದಾಲೋಚನೆಯನ್ನು ಹೊಂದಿ, ಈ ಸವಾಲನ್ನು ಎದುರಿಸಲು ಎಲ್ಲರನ್ನೂ ಸಿದ್ಧಗೊಳಿಸಿ, ಈ ಸವಾಲನ್ನು ಬಹಳ ಹಿಂದಿನಿಂದಲೂ ಎದುರಿಸುವ ಕೆಲಸವನ್ನು ಮಾಡಿದ್ದಾರೆ. ನದಿಗಳ ಪುನಶ್ಚೇತನ, ಕಾಡಿನ ಮರು ನಿರ್ಮಾಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಂಡರು" ಎಂದರು.
ಅಶೋಕ ವಾಟಿಕಾ ಸ್ಥಳದಲ್ಲಿರುವ ಸೀತಾಮಾತೆಯ ದೇಗುಲಕ್ಕೆ ಕುಂಭಾಭಿಷೇಕ ನೆರವೇರಿಸಿದ ಶ್ರೀ ರವಿಶಂಕರ ಗುರೂಜಿ!
ರಾಸಾಯನಿಕ ಕೃಷಿಯಿಂದ ಸಾರ್ವಜನಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಣಗಳ ಬಗ್ಗೆ ವಿವರಿಸಿ, ರಾಸಾಯನಿಕ ಕೃಷಿಯು ಹಿಂಸೆಯನ್ನು ಅವಲಂಬಿಸಿದ್ದರೆ, ನೈಸರ್ಗಿಕ ಕೃಷಿಯು ಅಹಿಂಸೆಯ ಮೇಲೆ ಅವಲಂಬಿಸಿದೆ ಎಂದರು. ಭಾರತದಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು 22 ಲಕ್ಷ ರೈತರಿಗೆ ನೈಸರ್ಗಿಕ ಕೃಷಿಯಲ್ಲಿ ತರಬೇತಿಯನ್ನು ನೀಡಿದೆ. ಪೂಜ್ಯ ಗುರುದೇವರನ್ನು ಮೊದಲ ಬಾರಿ ಗುಜರಾತಿನ ಆನಂದ್ ಜಿಲ್ಲೆಯಲ್ಲಿ ಭೇಟಿಮಾಡಿದ್ದು, ನಂತರ ತಾವು ಪ್ರಯಾಣ ಮಾಡುತ್ತಿದ್ದ ಸ್ಥಳಗಳಲ್ಲಿ, ಗುರುದೇವರ ಭಕ್ತರು ಇತರರಿಗೆ ಸಂತೋಷವನ್ನು ಹಂಚುತ್ತಿರುವುದನ್ನು ಕಂಡಿರುವುದಾಗಿ ರಾಜ್ಯಪಾಲರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ