ಕಲ್ಯಾಣ ಕರ್ನಾಟಕದ ಹಸಿರುಗೆ ರಾಜ್ಯ ಸರ್ಕಾರದಿಂದಲೇ ಕೊಡಲಿ ಏಟು!

Published : Jul 02, 2023, 04:43 AM IST
 ಕಲ್ಯಾಣ ಕರ್ನಾಟಕದ ಹಸಿರುಗೆ ರಾಜ್ಯ ಸರ್ಕಾರದಿಂದಲೇ ಕೊಡಲಿ ಏಟು!

ಸಾರಾಂಶ

 ಬೇವು, ಹೊಂಗೆ, ಕರಿಜಾಲಿ ಸೇರಿ 10 ಮರಗಳನ್ನು ವೃಕ್ಷ ಸಂರಕ್ಷಣಾ ಕಾಯ್ದೆಯಿಂದ ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ವ್ಯಾಪ್ತಿ ಕಲ್ಯಾಣ ಕರ್ನಾಟಕದಲ್ಲಿ ಈ ಮರಗಳ ಅಸ್ತಿತ್ವಕ್ಕೆ ಗಂಡಾಂತರ ತಂದೊಡ್ಡಿದೆ!

ಶೇಷಮೂರ್ತಿ ಅವಧಾನಿ

 ಕಲಬುರಗಿ (ಜು.2): ಬೇವು, ಹೊಂಗೆ, ಕರಿಜಾಲಿ ಸೇರಿ 10 ಮರಗಳನ್ನು ವೃಕ್ಷ ಸಂರಕ್ಷಣಾ ಕಾಯ್ದೆಯಿಂದ ಹೊರಗಿಟ್ಟಿರುವ ರಾಜ್ಯ ಸರ್ಕಾರದ ಕ್ರಮ ಕಲಬುರಗಿ, ಬೀದರ್‌, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರ ವ್ಯಾಪ್ತಿ ಕಲ್ಯಾಣ ಕರ್ನಾಟಕದಲ್ಲಿ ಈ ಮರಗಳ ಅಸ್ತಿತ್ವಕ್ಕೆ ಗಂಡಾಂತರ ತಂದೊಡ್ಡಿದೆ! ಮೊದಲೇ ಈ ಜಿಲ್ಲೆಗಳಲ್ಲಿ ಹಸಿರಿಗೆ ಬರಗಾಲ, ಇದೀಗ ಬೇವು, ಕರಿಜಾಲಿ, ಹೊಂಗೆ ಮರಗಳ ಬುಡಕ್ಕೆ ಕೊಡಲಿ ಏಟು ಹಾಕಿದೆ. ಸರ್ಕಾರದ ಸುತ್ತೋಲೆ ಕಲ್ಯಾಣ ನಾಡಿನ ಅಳಿದುಳಿದ ಹಸಿರಿಗೂ ಮರಣ ಶಾಸನ ಬರೆಯುತ್ತಿದೆ. ಟಿಂಬರ್‌ ಮಾಫಿಯಾ ಮರಗಳ ಹನನಕ್ಕೆ ಮುಂದಾಗಿದೆ. ಸಾರ್ವಜನಿಕರೂ ಹೊಲಗಳಲ್ಲಿರುವ ಕರಿಜಾಲಿ, ಬೇವು, ಹೊಂಗೆ ಮರಗಳನ್ನು ತುಂಡರಿಸುತ್ತಿ​ದ್ದಾರೆ.

ಹೌದು ಇದು ಸುತ್ತೋ​ಲೆ​ಯಿಂದ ಆಗಿ​ರುವ ಸಮಸ್ಯೆ. ಅರಣ್ಯ ಇಲಾಖೆ ಅಧೀನ ಕಾರ್ಯದರ್ಶಿ 2022ರ ನ. 17ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಬೇವು, ಕರಿಜಾಲಿ, ಮಹಾಗನಿ, ಹೊಂಗೆ, ಬಳ್ಳಾರಿ ಜಾಲಿ, ಅಗರ್‌ವುಡ್‌, ಬಾರೆ, ಶಿವನಿ, ಜೌಗ್‌ ಬಿದಿರು, ಮೆದರಿ ಬಿದಿರು ಸೇರಿ 10 ಮರಗಳನ್ನು ಪಟ್ಟಿಮಾಡಿ ಅವುಗಳನ್ನು ವೃಕ್ಷ ಸಂರಕ್ಷಣಾ ಕಾಯ್ದೆಯಿಂದಲೇ ಹೊರಗಿಡಲಾಗಿದೆ. ವೃಕ್ಷ ಸಂರಕ್ಷಣಾ ಕಾಯ್ದೆಯ 8ನೇ ಕಲಂ ಈ 10 ಮರಗಳ ವಿಚಾರದಲ್ಲಿ ಅನ್ವಯವಾಗೋದಿಲ್ಲವೆಂದು ಹೇಳಲಾಗಿದೆ.

ಅರಣ್ಯ ಜಾಗ ಕಬಳಿಸಿದರೆ ಹುಷಾರ್‌: ಖಂಡ್ರೆ ಎಚ್ಚರಿಕೆ

ಬೇವು, ಕರಿಜಾಲಿ, ಹೊಂಗೆಯಿಂದಲೇ ಹಸಿರು

ಕಲ್ಯಾಣ ಕರ್ನಾಟಕದಲ್ಲಿ ಅಲ್ಲಿ ಇಲ್ಲಿ ಹಸಿರು ಕಾಣಲು ಇಲ್ಲಿರುವ ಬೇವು, ಹೊಂಗೆ ಹಾಗೂ ಕರಿಜಾಲಿ ಮರಗಳೇ ಕಾರಣ. ಮೊದಲೆಲ್ಲಾ ಈ ಮರಗಳನ್ನು ಕಡಿಯಬೇಕಾದರೆ ಅರಣ್ಯ ಇಲಾಖೆ ಅನುಮತಿ ಪಡೆಯೋದು ಕಡ್ಡಾಯವಾಗಿತ್ತು. ಆದರೀಗ ಸುತ್ತೋಲೆಯಿಂದ ಈ ಮರಗಳಿಗೆ ರಕ್ಷಣೆ ಇಲ್ಲದಂತಾಗಿದೆ. ವ್ಯಾಪಕವಾಗಿ ಬೆಳೆದ ಟಿಂಬರ್‌ ಮಾಫಿಯಾಗೆ ಅರಣ್ಯ ಇಲಾಖೆ ಸುತ್ತೋಲೆ ಅನುಕೂಲ ಮಾಡಿಕೊಟ್ಟಿದೆ. ರೈತರ ಜಮೀನು, ರಸ್ತೆ ಬದಿಗಳಲ್ಲಿನ ಮರ ಕಟಾವು ಮಾಡಿದರೆ ಪರವಾನಗಿ ಪಡೆಯಬೇಕಾಗಿಲ್ಲ ಎಂದು ರೈತರಿಗೆ ಅನುಕೂಲ ಮಾಡಿಕೊಡುವುದು ಕಾಯ್ದೆ ಹಿಂದಿನ ಉದ್ದೇಶವಿದ್ದರೂ ಇಲ್ಲಿ ಹೆಚ್ಚಿನ ಲಾಭ ಟಿಂಬರ್‌ ಮಾಫಿಯಾದವರಿಗಾಗುತ್ತಿದೆ.

ಟಿಂಬರ್‌ ಮಾಫಿಯಾಕ್ಕೆ ಹೆಚ್ಚು ಅನುಕೂಲ

ಇದನ್ನೇ ವರವಾಗಿಸಿಕೊಂಡ ಮರಗಳ್ಳರು, ಟಿಂಬರ್‌ ಮಾಫಿಯಾದವರು ಕಳೆದೊಂದು ವರ್ಷದಿಂದ ವ್ಯಾಪಕವಾಗಿ ಬೆಳೆದು ನಿಂತಿದ್ದಾರೆ. ರೈತರಿಗೆ ವರವಾಗಲಿ ಎಂದು ಇಲಾಖೆ ಮಾಡಿದ ಕಾಯ್ದೆಯೇ ಇಂದು ಟಿಂಬರ್‌ ಮಾಫಿಯಾದವರಿಗೆ ವರದಾನವಾಗಿರೋದು ವಿಪರ್ಯಾಸ. ಮೊದಲು ಈ ಮರಗಳನ್ನು ಕಡೆಯಲು ಪರವಾನಿಗೆ ಪಡೆಯಬೇಕಿತ್ತು. ಈಗ ಅದರ ಗೊಡವೆಯೇ ಇಲ್ಲದಂತಾಗಿರೋದರಿಂದ ಮರಗಳನ್ನು ಕತ್ತರಿಸಲು ಸುಲಭವಾದಂತಾಗಿದೆ. ಮರಗಳನ್ನು ಕಟಾವು ಮಾಡಿದರೆ ಅಂತವರ ಮೇಲೆ 1963ರ ಅರಣ್ಯ ಕಾಯ್ದೆ 33(5)ರ ಪ್ರಕಾರ 1 ಸಾವಿರ ದಂಡ ಹಾಗೂ ಗರಿಷ್ಠ 3 ತಿಂಗಳ ಜೈಲು ಶಿಕ್ಷೆಗೆ ಗುರಿಪಡಿಸಬಹುದಾಗಿದೆ. ಆದರೆ ವೃಕ್ಷ ರಕ್ಷಣೆ ಕಾಯ್ದೆಯೇ ಅನ್ವಯ ಆಗೋದಿಲ್ಲವೆಂಬ ಸರ್ಕಾರದ 2022ರ ನ. 17ರ ಸುತ್ತೋಲೆಯಿಂದಾಗಿ ಕರಿಜಾಲಿ, ಬೇವು, ಹೊಂಗಂಯಂತಹ ನಮ್ಮ ಭಾಗದಲ್ಲಿ ಹೆಚ್ಚಾಗಿರುವ ಮರಗಳು ಧರೆಗುರುಳುತ್ತಿದ್ದರೂ ಕೇಳೋರಿಲ್ಲದಂತಾಗಿದೆ.

ಬೀದರ್: ಕಲುಷಿತ ನೀರಿಗೆ ಜನ ಅಸ್ವಸ್ತ: ಕರ​ಕ್ಯಾಳ ಗ್ರಾಮ​ಕ್ಕೆ ಸಚಿವ ಖಂಡ್ರೆ ಭೇಟಿ

ಈಶ್ವರ ಖಂಡ್ರೆ ಗಮನ ಹರಿಸುವರೆ?

ಕಲಬುರಗಿ ಸೇರಿ ಕಲ್ಯಾಣದ ಜಿಲ್ಲೆಗಳಲ್ಲಿ ಅರಣ್ಯ ಭೂಮಿ ತುಂಬಾ ಕಡಿಮೆ. ಸಮೀಕ್ಷೆಯಂತೆ ಶೇ. 4.5 ರಷ್ಟುಮಾತ್ರ ಇರೋದು. ಇದೀ​ಗ ಬೇವು, ಕರಿಜಾಲಿ, ಹೊಂಗೆ ಮರ​ಗ​ಳು ವೇಗದಲ್ಲಿ ಹನನವಾಗು​ತ್ತಿ​ವೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಕಲ್ಯಾಣ ನಾಡಿನವರೇ ಆಗಿರೋದರಿಂದ ಮಾರಕವಾಗಿರುವ ಸುತ್ತೋಲೆ ವಾಪಸ್‌ ಪಡೆಯುವರೆ? ಕಾದು ನೋಡಬೇಕಷ್ಟೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ, ಡಿಸಿಎಂ ನಡುವೆ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ: ಸಂಸದ ಜಗದೀಶ್ ಶೆಟ್ಟರ್
ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಮತ್ತು ಬೆಳಗಾವಿ ವಿಭಜನೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಹತ್ವದ ಮಾಹಿತಿ