3368 ಆ್ಯಂಬುಲೆನ್ಸ್‌ಗೆ ಜಿಪಿಎಸ್‌: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

By Govindaraj SFirst Published Dec 3, 2022, 2:20 AM IST
Highlights

ರಾಜ್ಯದಲ್ಲಿ ಒಟ್ಟು 3,368 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾಗಿದೆ. ಉಳಿದ ಆ್ಯಂಬುಲೆನ್ಸ್‌ಗಳಿಗೂ ಜಿಪಿಎಸ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಶುಕ್ರವಾರ ಸರ್ಕಾರ ಮಾಹಿತಿ ನೀಡಿದೆ.

ಬೆಂಗಳೂರು (ಡಿ.03): ರಾಜ್ಯದಲ್ಲಿ ಒಟ್ಟು 3,368 ಆ್ಯಂಬುಲೆನ್ಸ್‌ಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಲಾಗಿದೆ. ಉಳಿದ ಆ್ಯಂಬುಲೆನ್ಸ್‌ಗಳಿಗೂ ಜಿಪಿಎಸ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೈಕೋರ್ಟ್‌ಗೆ ಶುಕ್ರವಾರ ಸರ್ಕಾರ ಮಾಹಿತಿ ನೀಡಿದೆ. ಭಾರತ್‌ ಪುನರುತ್ಥಾನ ಟ್ರಸ್ಟ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ, ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಆಂಬ್ಯುಲೆನ್ಸ್‌ಗಳು ತಡೆ ರಹಿತವಾಗಿ ಸಂಚರಿಸಲು ರಾಜ್ಯದಲ್ಲಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಅಂಬ್ಯುಲೆನ್ಸ್‌ಗಳಿಗೆ ಜಿಪಿಎಸ್‌ ವ್ಯವಸ್ಥೆ ಅಳವಡಿಸಬೇಕು ಎಂದು ನಿರ್ದೇಶಿಸಿ ನ.8ರಂದು ಹೈಕೋರ್ಟ್‌ ಹೊರಡಿಸಿದ ಆದೇಶದ ಅನುಪಾಲನಾ ವರದಿಯನ್ನು ಸರ್ಕಾರಿ ವಕೀಲೆ ಪ್ರತಿಮಾ ಹೊನ್ನಾಪುರ ನ್ಯಾಯಪೀಠಕ್ಕೆ ಸಲ್ಲಿಸಿದರು.

ಬಿಗ್ ತ್ರಿ ಇಂಪ್ಯಾಕ್ಟ್: ಸಂತ್ರಸ್ಥರಿಗೆ ಮನೆ ಹಸ್ತಾಂತರಿಸಿದ ಜಿಲ್ಲಾಡಳಿತ

ರಾಜ್ಯದಲ್ಲಿ ಖಾಸಗಿ ಹಾಗೂ ಸರ್ಕಾರಕ್ಕೆ ಸೇರಿದ 12,107 ಆ್ಯಂಬುಲೆನ್ಸ್‌ಗಳಿವೆ. ಅವುಗಳ ಪೈಕಿ 3,368ಗಳಿಗೆ ಮಾತ್ರ ಜಿಪಿಎಸ್‌ ಅಳವಡಿಸಿರುವುದು ತಪಾಸಣೆಯಿಂದ ಕಂಡುಬದಿದೆ. ಉಳಿದ ಆ್ಯಂಬುಲೆನ್ಸ್‌ಗಳಿಗೂ ಜಿಪಿಎಸ್‌ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು. ಆಂಬ್ಯುಲೆನ್ಸ್‌ಗಳು ತಡೆ ರಹಿತವಾಗಿ ಸಂಚಾರಕ್ಕೆ ಅನುವು ಮಾಡಿಕೊಡಲು ವಿಶೇಷ ಸಹಾಯವಾಣಿ ಸಂಖ್ಯೆ ಪ್ರಕಟಿಸಲಾಗಿದೆ. 

ಆ್ಯಂಬುಲೆನ್ಸ್‌ಗಳು ಸಂಚರಿಸುವ ಮಾರ್ಗದ ಕುರಿತು ಮುಂಚಿತವಾಗಿಯೇ ಸಂಚಾರ ದಟ್ಟಣೆ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡುವಂತೆ ಅವುಗಳ ಚಾಲಕರಿಗೆ ಸೂಚಿಸಲಾಗಿದೆ ಎಂದು ಸರ್ಕಾರಿ ವಕೀಲರು ತಿಳಿಸಿದರು. ಅಲ್ಲದೆ, ಸಂಯೋಜಿತ ಆ್ಯಂಬುಲೆನ್ಸ್‌ ಸೇವೆ ಒದಗಿಸಲು ಈ ಹಿಂದೆ ಕರೆದಿದ್ದ ಟೆಂಡರ್‌ಗೆ ಯಾವುದೇ ಬಿಡ್‌ ಸ್ವೀಕರಿಸದ ಕಾರಣ ಮುಂದಿನ 15 ದಿನಗಳಲ್ಲಿ ಹೊಸದಾಗಿ ಟೆಂಡರ್‌ ಅಧಿಸೂಚನೆಯನ್ನು ಪ್ರಕಟಿಸಲು ಸರ್ಕಾರ ಸೂಚಿಸಿದೆ ಎಂದು ಮಾಹಿತಿ ನೀಡಿದರು.

2030ಕ್ಕೆ ರಾಜ್ಯದಲ್ಲಿ ಎಚ್‌ಐವಿ ಶೂನ್ಯಕ್ಕೆ ಇಳಿಸಲು ಪಣ: ಸಚಿವ ಸುಧಾಕರ್‌

ಅದನ್ನು ಪರಿಗಣಿಸಿದ ನ್ಯಾಯಪೀಠ, 15 ದಿನ ಅವಧಿಗೆ ಕಾಯದೆ ಟೆಂಡರ್‌ಗೆ ಅನುಮೋದನೆ ನೀಡಬೇಕು. ಸಹಾಯವಾಣಿ ಸಂಖ್ಯೆಯನ್ನು ರಾಜ್ಯದ ಎಲ್ಲಾ ಆಸ್ಪತ್ರೆಗಳಿಗೆ ಕೊಡಬೇಕು. ಆ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆ್ಯಂಬುಲೆನ್ಸ್‌ ಚಾಲಕರ ದತ್ತಾಂಶ ಪಡೆದುಕೊಂಡು ಪೊಲೀಸರಿಗೆ ಮಾಹಿತಿ ನೀಡಬೇಕು. ಇದರಿಂದ ಆ್ಯಂಬುಲೆನ್ಸ್‌ ಸಂಚರಿಸುವ ಮಾರ್ಗದಲ್ಲಿ ಸಂಚಾರ ದಟ್ಟಣೆ ನಿವಾರಿಸಲು ಪೊಲೀಸರಿಗೆ ಸಹಾಯವಾಗುತ್ತದೆ. ಹುಸಿ ಕರೆಗಳನ್ನು ಪರಿಶೀಲಿಸಲೂ ಸಹಾಯವಾಗುತ್ತದೆ ಎಂದು ಸೂಚಿಸಿ ವಿಚಾರಣೆಯನ್ನು ಜ.11ಕ್ಕೆ ಮುಂದೂಡಿದೆ.

click me!