
ಬೆಂಗಳೂರು, (ನ.07): ಸಿಗಂದೂರು ಗೊಂದಲ ವಿಚಾರ ಕುರಿತಂತೆ ಶಾಸಕ ಹರತಾಳು ಹಾಲಪ್ಪ, ರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು 20 ವಿವಿಧ ಜನಾಂಗಗಳ ಸ್ವಾಮೀಜಿಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.
ದೇವಾಲಯದಲ್ಲಿ ಸದ್ಯ ಎದ್ದಿರುವ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ನಿವಾರಣೆ, ಭಕ್ತರ ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚೆ ನಡೆಸಿದರು.
ಇವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ. ಇಲ್ಲಿ ಭಕ್ತರು ನೀಡುವ ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ತರಬೇಕು ಎಂಬುದು ಭಕ್ತರ ಇಚ್ಛೆಯಾಗಿದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಿಗಂದೂರು ವಿವಾದಕ್ಕೆ ಟ್ವಿಸ್ಟ್, ಜಿಲ್ಲಾಡಳಿತ ನೇತೃತ್ವದಲ್ಲಿ ಸಮಿತಿ
ಈಗ ರಚನೆಯಾಗಿರುವ ಸಮಿತಿಯಲ್ಲಿ ತಮ್ಮ ಮನವಿಯಂತೆ ಈಡಿಗ ಜನಾಂಗಕ್ಕೆ ಸೇರಿದ ಶ್ರೀ ರೇಣುಕಾನಂದ ಸ್ವಾಮೀಜಿಯವರನ್ನು ಸೇರ್ಪಡೆಗೊಳಿಸಲಾಗುವುದು. ಇವರು ಕೊಡುವ ಸಲಹೆ, ಮಾರ್ಗದರ್ಶನವನ್ನು ತೆಗೆದುಕೊಂಡು ಸಮಿತಿ ಕಾರ್ಯ ಕೈಗೊಳ್ಳಲಿದೆ. ಈಗ ರಚನೆಯಾಗಿರುವ ಸಮಿತಿ ಸದ್ಯ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ ಎಂದರು.
ಬಳಿಕ ಸಮಿತಿ ಇರಬೇಕೋ ಅಥವಾ ಅದನ್ನು ಕೈ ಬಿಡಬೇಕೊ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಬಂಜಾರ ಸಮಾಜದ ಸೇವಾಲಾಲ್ ಅರೇಮಲ್ಲಾಪುರದ ಪ್ರಣಯಾನಂದ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮ ಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮಿ, ಹೊಸದುರ್ಗ ಕನಕಗುರು ಪೀಠದ ಈಶ್ವರಾನಂದ ಪುರ ಸ್ವಾಮೀಜಿ, ತಿಗಳರ ಲಕ್ಷ್ಮೀನರಸಿಂಹ ಸ್ವಾಮಿ, ಮಡಿವಾಳರ ಮಾಚಿದೇವ ಶ್ರೀಗಳು, ಗಾಣಿಗರ ಡಾ ಬಸವ ಕುಮಾರ ಸ್ವಾಮೀಜಿ, ಚಿತ್ರದುರ್ಗದ ಮೇದಾರ ಪೀಠದ ಬಸವ ಛಲವಾದಿಸ್ವಾಮಿ, ತೀರ್ಥಹಳ್ಳಿ ಮುಖಂಡರಾದ ಬೇಗುವಳ್ಳಿ ಸತೀಶ್ ಸೇರಿದಂತೆ ಅನೇಕರು ಹಾಜರಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ