ರಾಜ್ಯದ 3 ಲಕ್ಷ ಸ್ಲಂ ನಿವಾಸಿಗಳಿಗೆ ಸರ್ಕಾರದಿಂದ ಭರ್ಜರಿ ಗಿಫ್ಟ್‌!

By Kannadaprabha NewsFirst Published Aug 21, 2020, 7:15 AM IST
Highlights

3 ಲಕ್ಷ ಸ್ಲಂ ಕುಟುಂಬಕ್ಕೆ ಹಕ್ಕುಪತ್ರ| ಕೊಳೆಗೇರಿ ಪ್ರದೇಶದವರಿಗೆ ಸರ್ಕಾರದಿಂದ ಹಬ್ಬದ ಉಡುಗೊರೆ| ವಿವಿಧ ನಗರಗಳ 1873 ಕೊಳಚೆ ಪ್ರದೇಶಗಳ 6745 ಎಕರೆ ಹಂಚಿಕೆ| ಸಚಿವ ಸಂಪುಟ ನಿರ್ಧಾರ| 3.13 ಲಕ್ಷ ಕೊಳಗೇರಿ ಕುಟುಂಬಗಳ 16 ಲಕ್ಷ ಜನರಿಗೆ ಐತಿಹಾಸಿಕ ಯೋಜನೆಯ ಪ್ರಯೋಜನ

ಬೆಂಗಳೂರು(ಆ.21):  ರಾಜ್ಯದ ವಿವಿಧ ನಗರಗಳ ಕೊಳೆಗೇರಿ ಪ್ರದೇಶದಲ್ಲಿ ವಾಸಿಸುತ್ತಿರುವ ಸುಮಾರು 3.13 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮಹತ್ವದ ತೀರ್ಮಾನ ತೆಗೆದುಕೊಳ್ಳುವ ಮೂಲಕ ಬಡವರ ದಶಕಗಳ ಕನಸನ್ನು ರಾಜ್ಯ ಸರ್ಕಾರ ನನಸು ಮಾಡಿದೆ.

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಹಕ್ಕು ಪತ್ರ ನೀಡಿಕೆ ಸಂಬಂಧ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕಾಗಿ ಕಳೆದ ಆರು ತಿಂಗಳಿಂದ ವಿವಿಧ ಇಲಾಖೆಗಳೊಂದಿಗೆ ಸಮನ್ವಯತೆ ಸಾಧಿಸಿ ಶ್ರಮಿಸಿದ್ದ ವಸತಿ ಸಚಿವ ವಿ.ಸೋಮಣ್ಣ ಅವರು ಸಭೆಯಲ್ಲಿ ಸುದೀರ್ಘವಾಗಿ ಪ್ರಸ್ತಾವನೆ ಮಂಡಿಸಿ ಅನುಮೋದನೆ ಪಡೆದುಕೊಂಡರು.

ಕೊರೋನಾ ಹಾಟ್‌ಸ್ಪಾಟ್‌ನಲ್ಲಿ ಈಗ 2 ಕೇಸ್: 4T ಫಾರ್ಮುಲಾದಿಂದ ಸಮರ ಗೆದ್ದ ಧಾರಾವಿ!

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ರಾಜ್ಯದ ವಿವಿಧ ಪಟ್ಟಣ ಪಂಚಾಯತಿ, ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯ ಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಮಾಲಿಕತ್ವದಲ್ಲಿರುವ ಸುಮಾರು 6745 ಎಕರೆ ಜಮೀನಿನಲ್ಲಿರುವ 1873 ಕೊಳಚೆ ಪ್ರದೇಶಗಳ ಸುಮಾರು 3.13 ಲಕ್ಷ ಕುಟುಂಬಗಳಿಗೆ ಹಕ್ಕು ಪತ್ರ ನೀಡಲಾಗುವುದು.

ಹಲವಾರು ವರ್ಷಗಳಿಂದ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ ಈ ಕುಟುಂಬಗಳು ಸರ್ಕಾರ ಸೇರಿದಂತೆ ಖಾಸಗಿ ಮಾಲಿಕತ್ವದ ಜಾಗದಲ್ಲಿ ಮನೆ ಕಟ್ಟಿಕೊಂಡು ಸದಾ ಕಾಲ ತೆರವಿನ ಆತಂಕದಲ್ಲಿ ಜೀವನ ನಡೆಸುತ್ತಿದ್ದರು. ರಾಜ್ಯ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ. ಈ ಹಕ್ಕು ಪತ್ರ ನೀಡಿಕೆಯಿಂದ ಸುಮಾರು 16 ಲಕ್ಷ ಜನರಿಗೆ ಪ್ರಯೋಜನವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ದೆಹಲಿಯಲ್ಲಿ ಭಾರೀ ಮಳೆ, ಕ್ಯಾಮೆರಾದಲ್ಲಿ ಸೆರೆಯಾಯ್ತು ಶಾಕಿಂಗ್ ದೃಶ್ಯ!

ಕನಸು ನನಸು- ಸೋಮಣ್ಣ ಹರ್ಷ:

ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಸತಿ ಸಚಿವ ವಿ.ಸೋಮಣ್ಣ, ನಾನು ಕಳೆದ ವರ್ಷ ಆಗಸ್ಟ್‌ 20ರಂದು ಸಚಿವನಾಗಿ ಅಧಿಕಾರ ಸ್ವೀಕರಿಸಿದ್ದೆ. ಸರಿಯಾಗಿ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲೇ ಸಮಾಜದ ಅತ್ಯಂತ ಕೆಳ ಮತ್ತು ದುರ್ಬಲ ವರ್ಗದ ಬಹುದಿನದ ಕನಸನ್ನು ಈಡೇರಿಸುವ ಐತಿಹಾಸಿಕ ತೀರ್ಮಾನವನ್ನು ಕೈಗೊಂಡಿರುವುದು ಸಂತಸ ಉಂಟು ಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲೇ ಸುಮಾರು 683 ಎಕರೆ ಸರ್ಕಾರಿ ಜಾಗದಲ್ಲಿ 239 ಕೊಳಚೆ ಪ್ರದೇಶಗಳಿದ್ದು, ಸುಮಾರು 50,000 ಕುಟುಂಬಗಳು ವಾಸಿಸುತ್ತಿವೆ. ಕೊಳಗೇರಿ ನಿವಾಸಿಗಳು ತಮ್ಮ ವಾಸಸ್ಥಳದ ಹಕ್ಕಿನಿಂದ ಹಲವಾರು ವರ್ಷಗಳಿಂದ ವಂಚಿತರಾಗಿದ್ದರು. ಹೀಗಾಗಿ ಅವರನ್ನು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಸದೃಢರನ್ನಾಗಿಸಿ, ಸಮಾಜದ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ವಸತಿ, ನಗರಾಭಿವೃದ್ಧಿ, ಪೌರಾಡಳಿತ ಹಾಗೂ ಕಂದಾಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳೊಂದಿಗೆ ನಿರಂತರ ಸಭೆ ನಡೆಸಿ ಈ ಪ್ರಸ್ತಾವನೆಗೆ ತಾರ್ಕಿಕ ಅಂತ್ಯ ನೀಡಿರುವುದಕ್ಕೆ ತಮಗೆ ವೈಯುಕ್ತಿಕವಾಗಿ ಸಂತೋಷವಿದೆ ಎಂದು ಹೇಳಿದರು.

ಧಾರಾವಿಗೆ ವಿಶ್ವಸಂಸ್ಥೆ ಮೆಚ್ಚುಗೆ: ಕೊರೋನಾ ನಿಯಂತ್ರಿಸಲು ಯಶಸ್ವಿಯಾದ ಏಷ್ಯಾದ ಅತಿದೊಡ್ಡ ಸ್ಲಂ!

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಆಶಯವಾದ ‘ಸರ್ವರಿಗೂ ಸೂರು’ ಎಂಬ ಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಸಮಾಜದ ದುರ್ಬಲ ವರ್ಗದ ಜನರು ವಾಸಿಸುವ ಕೊಳಚೆ ಪ್ರದೇಶದ ನಿವಾಸಿಗಳ ಬಹುದಿನದ ಕನಸನ್ನು ಈಡೇರಿಸುವ ಐತಿಹಾಸಿಕ ನಿರ್ಣಯವನ್ನು ಕೈಗೊಂಡಿದ್ದಕ್ಕಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಸೇರಿದಂತೆ ಸಂಪುಟ ಸಹೋದ್ಯೋಗಿಗಳಿಗೆ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಚಿವರು ಕೃತಜ್ಞತೆ ಸಲ್ಲಿಸಿದರು.

click me!