ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ತಾತ್ಕಾಲಿಕ ಪರಿಹಾರ ಘೋಷಿಸಿರುವುದು ಅವಮಾನಕರ: ಅಶೋಕ್ ಕಿಡಿ

Published : Dec 06, 2023, 06:40 AM IST
ಬರ ನಿರ್ವಹಣೆಯಲ್ಲಿ ಸರ್ಕಾರ ವಿಫಲ, ತಾತ್ಕಾಲಿಕ ಪರಿಹಾರ ಘೋಷಿಸಿರುವುದು ಅವಮಾನಕರ: ಅಶೋಕ್ ಕಿಡಿ

ಸಾರಾಂಶ

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಫೂರ್ಣ ವಿಫಲವಾಗಿದೆ. ಅಧಿವೇಶನ ನಡೆಯುತ್ತಿದೆ ವಿಪಕ್ಷದವರು ಕೇಳುತ್ತಾರೆ ಎನ್ನುವ ಕಾರಣಕ್ಕೆ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ತಾತ್ಕಾಲಿಕವಾಗಿ ತಲಾ 2000 ರು. ಪರಿಹಾರ ಘೋಷಿಸಿದ್ದೀರಿ. ಅದೂ ಕೂಡ ಇನ್ನೂ ಫಲಾನುಭವಿಗೆ ತಲುಪಿಲ್ಲ: ಪ್ರತಿಪಕ್ಷ ನಾಯಕ ಆರ್‌.ಅಶೋಕ್   

ವಿಧಾನಸಭೆ(ಡಿ.06):  ‘ಹಿಂದಿನ ಬಿಜೆಪಿ ಸರ್ಕಾರದಲ್ಲಿ ಕೇಂದ್ರ ಸರ್ಕಾರದ ಬರ ಪರಿಹಾರಕ್ಕೆ ಕಾಯದೆ ಸಮೀಕ್ಷೆ ನಡೆಸಿದ ಒಂದೆರಡು ತಿಂಗಳಲ್ಲೇ ರೈತರಿಗೆ ಎನ್‌ಡಿಆರ್‌ಎಫ್‌ ನಿಯಮದ ದರಕ್ಕಿಂತ ದುಪ್ಪಟ್ಟು ಬೆಳೆ ಪರಿಹಾರವನ್ನು ರೈತರಿಗೆ ನೀಡಿದ್ದೆವು. ನಿಮಗೇನು ಸಮಸ್ಯೆ, ತೋರಿಕೆಗಷ್ಟೆ ರೈತರಿಗೆ ತಲಾ 2000 ರು. ತಾತ್ಕಾಲಿಕ ಬೆಳೆ ನಷ್ಟ ಪರಿಹಾರ ಘೋಷಿಸಿರುವುದು ಅವಮಾನಕರ. ಸರ್ಕಾರ ಕೂಡಲೇ ರೈತರ ಬೆಳೆ ನಷ್ಟಕ್ಕೆ ಕೂಡಲೇ ಮೂರು ಪಟ್ಟು ಪರಿಹಾರ ಘೋಷಿಸಬೇಕು...’

ಇದು, ನೂತನ ಪ್ರತಿಪಕ್ಷ ನಾಯಕ ಆರ್‌.ಅಶೋಕ್ ಮಂಗಳವಾರ ಬರ ನಿರ್ವಹಣೆಯಲ್ಲಿ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಡುತ್ತಾ ರಾಜ್ಯ ಸರ್ಕಾರವನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಂಡ ಪರಿ. ಬರ ನಿರ್ವಹಣೆ ಕುರಿತು ತಾವು ಮಂಡಿಸಿದ್ದ ಮೊದಲ ನಿಲುವಳಿ ಸೂಚನೆ ಮೇಲಿನ ಚರ್ಚೆಯ ವೇಳೆಯೇ ತಮ್ಮ ರಾಜ್ಯಪ್ರವಾಸದ ವೇಳೆ ಕಂಡುಬಂದ ರೈತರ ಸಂಕಷ್ಟ, ವಿದ್ಯುತ್‌ ಸಮಸ್ಯೆ, ಕುಡಿಯುವ ನೀರು, ಮೇವಿನ ಸಮಸ್ಯೆ ಮತ್ತಿತರ ವಿಚಾರಗಳನ್ನು ಸುಧೀರ್ಘವಾಗಿ ಮಂಡಿಸುತ್ತಾ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಮಾಡಿದರು.

ಸಿದ್ದು ಸರ್ಕಾರದಿಂದ 6 ತಿಂಗಳಲ್ಲಿ 60 ತಪ್ಪು: ಆರ್‌.ಅಶೋಕ್‌ ವಾಗ್ದಾಳಿ

ರಾಜ್ಯದಲ್ಲಿ ತಲೆದೋರಿರುವ ಭೀಕರ ಬರ ಪರಿಸ್ಥಿತಿಯನ್ನು ನಿರ್ವಹಿಸುವಲ್ಲಿ ಸರ್ಕಾರ ಸಂಫೂರ್ಣ ವಿಫಲವಾಗಿದೆ. ಅಧಿವೇಶನ ನಡೆಯುತ್ತಿದೆ ವಿಪಕ್ಷದವರು ಕೇಳುತ್ತಾರೆ ಎನ್ನುವ ಕಾರಣಕ್ಕೆ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ತಾತ್ಕಾಲಿಕವಾಗಿ ತಲಾ 2000 ರು. ಪರಿಹಾರ ಘೋಷಿಸಿದ್ದೀರಿ. ಅದೂ ಕೂಡ ಇನ್ನೂ ಫಲಾನುಭವಿಗೆ ತಲುಪಿಲ್ಲ. ಬರ ನಿರ್ವಹಣೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹಣವಿದೆ. ಆದರೆ, ಸರ್ಕಾರ ಅದನ್ನು ಸಮರ್ಪಕವಾಗಿ ಖರ್ಚು ಮಾಡಲು ಆದೇಶ ನೀಡಿಲ್ಲ. ಅಧಿಕಾರಿಗಳಿಗೂ ಖರ್ಚು ಮಾಡುವ ಮನಸ್ಸಿಲ್ಲ. ಮುಖ್ಯಮಂತ್ರಿಗಳು ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಬರ ನಿರ್ವಹಣೆಗೆ 700 ಕೋಟಿಗೂ ಹೆಚ್ಚು ಹಣವಿದೆ ಅನ್ನುತ್ತಾರೆ. ಜಿಲ್ಲಾಧಿಕಾರಿಗಳು ಪ್ರತಿ ತಾಲ್ಲೂಕಿಗೆ ಕೇವಲ 25 ಲಕ್ಷ ರು. ಕುಡಿಯುವ ನೀರಿಗೆ ನೀಡಿದ್ದಾರೆ. ಈ ಹಣದಲ್ಲಿ ಯಾವ ರೀತಿ ಬರ ನಿರ್ವಹಣೆ ಮಾಡಲು ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.

ಎರಡು ಬಾರಿ ಬಜೆಟ್‌ ಮಂಡಿಸಿದ ಬಸವರಾಜ ಬೊಮ್ಮಾಯಿ ಅವರ ನೇತೃತ್ವದ ನಮ್ಮ ಬಿಜೆಪಿ ಸರ್ಕಾರದಲ್ಲಿ ನಾನೇ ಕಂದಾಯ ಸಚಿವನಾಗಿದ್ದೆ ಎನ್‌ಡಿಆರ್‌ಎಫ್‌ ನಿಯಮ ಪ್ರಕಾರ ಪ್ರತಿ ಹೆಕ್ಟೇರ್‌ ಖುಷ್ಕಿ ಭೂಮಿ ಬೆಳೆ ನಷ್ಟಕ್ಕೆ 6800 ರು. ಇದ್ದರೂ ನಾವು 13 ಸಾವಿರ ರು. ನೀಡಿದ್ದೆವು. ಪ್ರತಿ ಹೆಕ್ಟೇರ್‌ ನೀರಾವರಿ ಜಮೀನಿಗೆ ನಿಯಮ ಪ್ರಕಾರ 13 ಸಾವಿರ ರು. ಕೊಡಬೇಕಿತ್ತು. ಆದರೆ, 26 ಸಾವಿರ ರು. ನೀಡಿದ್ದೇವೆ. ನಮ್ಮ ಸರ್ಕಾರದಲ್ಲಿ ಎನ್‌ಡಿಆರ್‌ಎಫ್‌ ನಿಯಮದ ದರಕ್ಕಿಂತ ದುಪ್ಪಟ್ಟು ಕೊಟ್ಟಿರುವಾಗ 14 ಬಾರಿ ಬಜೆಟ್‌ ಮಂಡಿಸಿರುವ ಹಾಗೂ 2ನೇ ಬಾರಿಗೆ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯನವರ ಸರ್ಕಾರದಲ್ಲಿ ಮೂರು ಪಟ್ಟು ಪರಿಹಾರ ಕೋಡಬೇಕಿತ್ತು. ಆಗ ಜನ ಇದು ನಮ್ಮ ಸಿದ್ದರಾಮಯ್ಯನವರ ಸರ್ಕಾರ ಎಂದು ಖುಷಿ ಪಡುತ್ತಿದ್ದರು ಎಂದರು.

ಮೇವು ಎಲ್ಲೂ ಇಲ್ಲ:

ಇನ್ನುಸರ್ಕಾರ ಎಂಟು ಹತ್ತು ವಾರಕ್ಕೆ ಆಗುವಷ್ಟು ಮೇವು ರಾಜ್ಯದಲ್ಲಿದೆ ಎಂದು ಹೇಳಿದೆ. ನಾನು ಪ್ರವಾಸ ನಡೆಸಿದ ವೇಳೆ ಯಾವ ಜಿಲ್ಲೆಯಲ್ಲೂ ಮೇವು ಲಭ್ಯವಿಲ್ಲ. ಜಿಲ್ಲಾಧಿಕಾರಿಗಳು ಮೇವು ಖರೀದಿಗೆ ಸರ್ಕಾರ ಆದೇಶವನ್ನೇ ಮಾಡಿಲ್ಲ ಎಂದು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ತೀವ್ರ ಮೇವಿನ ಕೊರತೆ ಉಂಟಾಗಲಿದೆ. ಕೂಡಲೇ ಮೇವು ಖರೀದಗೆ ಕ್ರಮ ವಹಿಸಬೇಕು. ಇದುವರೆಗೆ ಒಂದೇ ಒಂದು ಗೋಶಾಲೆ ಆರಂಭಿಸಿಲ್ಲ. ನಮ್ಮ ಸರ್ಕಾರದಲ್ಲಿ ಜಿಲ್ಲೆಗೊಂದು ಘೋಶಾಲೆ ಮಾಡಿದ್ದೆವು. ಅದನ್ನೂ ಕಾಂಗ್ರೆಸ್‌ ಸರ್ಕಾರ ಮುಚ್ಚಿದೆ. ಕೂಡಲೇ ಗೋಶಾಲೆ ಆರಂಭಿಸಿ ರೈತರ ಜಾನುವಾರುಗಳಿಗೆ ಮೇವು ಒದಗಿಸುವ ಕೆಲಸ ಮಾಡಬೇಕು. ಬರದಿಂದ ದೇವರ ಬಸವಗಳಿಗೂ ಮೇವಿಲ್ಲದಾಗಿದೆ. ಅವುಗಳ ರಕ್ಷಣೆಗೂ ಸರ್ಕಾರ ಕ್ರಮ ವಹಿಸಬೇಕು ಎಂದು ಅಶೋಕ್‌ ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನೀವು ಏನ್ ಹೇಳ್ತೀರಾ? ಆರ್‌. ಅಶೋಕ್‌ ಅಡ್ಜಸ್ಟ್ಮೆಂಟ್ ರಾಜಕಾರಣಿನಾ ?

ಉಸ್ತುವಾರಿ ಸಚಿವರು ಸಿಎಂ ಮಾತೇ ಕೇಳ್ತಿಲ್ಲ

ಎಲ್ಲಾ ಜಿಲ್ಲಾ ಉಸ್ತುವಾರಿ ಸಚಿವರು ತಿಂಗಳಿಗೊಮ್ಮೆ ತಮ್ಮ ಜಿಲ್ಲೆಗಳಲ್ಲಿ ಜನತಾದರ್ಶನ ಮಾಡಬೇಕು ಜನರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸುವ ಕೆಲಸ ಮಾಡಬೇಕೆಂದು ಮುಖ್ಯಮಂತ್ರಿಗಳು ನೀಡಿರುವ ಆದೇಶವನ್ನು ಯಾವ ಸಚಿವರೂ ಪಾಲಿಸುತ್ತಿಲ್ಲ. ಹೀಗಿರುವಾಗ ಬರ ನಿರ್ವಹಣೆ ಹೇಗಾಗುತ್ತದೆ ಎಂದು ಇದೇ ವೇಳೆ ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಅವರು ಜನತಾದರ್ಶನಕ್ಕೆ ಆದೇಶ ಮಾಡಿದ ಮೊದಲ ತಿಂಗಳು ಎಲ್ಲಾ ಉಸ್ತುವಾರಿ ಸಚಿವರೂ ತಮ್ಮ ಜಿಲ್ಲೆಗಳಲ್ಲಿ ಜನತಾದರ್ಶನ ಮಾಡಿದ್ದಾರೆ. ಆ ನಂತರ ಎರಡನೇ ತಿಂಗಳಲ್ಲಿ ಕೇವಲ ಶೇ.13ರಷ್ಟು, ಮೂರನೇ ತಿಂಗಳಲ್ಲಿ ಶೇ.14ರಷ್ಟು ಜನ ಮಾತ್ರ ಜನತಾದರ್ಶನ ಮಾಡಿದ್ದಾರೆ. ಮುಖ್ಯಮಂತ್ರಿಗಳ ಆದೇಶವನ್ನು ಮಂತ್ರಿಗಳು ಪಾಲನೆ ಮಾಡುವುದಿಲ್ಲ ಎಂದರೆ ಈ ಸರ್ಕಾರ ಹೇಗೆ ನಡೆಯುತ್ತಿರಬಹುದು ಎಂದು ಛೇಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇನ್ಮುಂದೆ ನೂರು ಗ್ಯಾರಂಟಿ ಘೋಷಣೆ ಮಾಡಿದರೂ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಛಲವಾದಿ ನಾರಾಯಣಸ್ವಾಮಿ
Breaking ಮಂಡ್ಯ ಬಸ್ ಅಪಘಾತದಲ್ಲಿ 23 ಪ್ರಯಾಣಿಕರಿಗೆ ಗಾಯ, ಇಬ್ಬರು ಗಂಭೀರ