ಬಸ್ಸುಗಳಲ್ಲಿ ಸುರಕ್ಷತೆಗೆ ಸರ್ಕಾರ ತಾಕೀತು - ಕರ್ನೂಲ್‌ ಬಸ್‌ ಬೆಂಕಿ ದುರಂತ ಎಫೆಕ್ಟ್‌

Kannadaprabha News   | Kannada Prabha
Published : Oct 27, 2025, 05:26 AM IST
Ramalinga Reddy

ಸಾರಾಂಶ

ಕರ್ನೂಲ್ ಬಸ್‌ ಅಗ್ನಿ ಅವಘಡ ಹಿನ್ನೆಲೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಬಸ್ಸುಗಳ ಸುರಕ್ಷತಾ ವ್ಯವಸ್ಥೆ ಆಡಿಟ್‌ ತಪಾಸಣೆ ನಡೆಸುವಂತೆ ಹಾಗೂ ನ್ಯೂನತೆ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ  ಕ್ರಮ ಕೈಗೊಳ್ಳುವಂತೆ   ಸಚಿವ ರಾಮಲಿಂಗಾರೆಡ್ಡಿ ಅವರು ಸೂಚಿಸಿದ್ದಾರೆ.

ಬೆಂಗಳೂರು : ಕರ್ನೂಲ್ ಬಸ್‌ ಅಗ್ನಿ ಅವಘಡ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಬಸ್ಸುಗಳಲ್ಲಿರುವ ಸುರಕ್ಷತಾ ವ್ಯವಸ್ಥೆ ಆಡಿಟ್‌ ತಪಾಸಣೆ ನಡೆಸುವಂತೆ ಹಾಗೂ ನ್ಯೂನತೆ ಇದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸೂಚಿಸಿದ್ದಾರೆ.

ಈ ಸಂಬಂಧ ಪರಿಶೀಲನೆಗೆ ತಂಡಗಳನ್ನು ರಚಿಸಿ ಸೂಕ್ತ ಕ್ರಮ ಕೈಗೊಳ್ಳಲು ಸಾರಿಗೆ ಇಲಾಖೆಯ ರಸ್ತೆ ಸಾರಿಗೆ ಮತ್ತು ಸುರಕ್ಷತೆ ಆಯುಕ್ತರು ಹಾಗೂ ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ವಾಯವ್ಯ ರಸ್ತೆ ಸಾರಿಗೆ ಮತ್ತು ಕಲ್ಯಾಣ ಕರ್ನಾಟಕ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಈ ನಿರ್ದೇಶನ ನೀಡಿದ್ದಾರೆ.

ಪರವಾನಗಿ ರದ್ದತಿಗೆ ಸೂಚನೆ:

ಪ್ರಯಾಣಿಕರ ಸುರಕ್ಷತೆ ನಮ್ಮ ಪ್ರಥಮ ಆದ್ಯತೆ. ಖಾಸಗಿ ಬಸ್ಸುಗಳಲ್ಲಿ ಯಾವುದೇ ವಾಣಿಜ್ಯ ಸರಕು ಸಾಗಿಸುವ ಸಂದರ್ಭದಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಥವಾ ಇತರೆ ಸ್ಫೋಟಕ ವಸ್ತುಗಳನ್ನು ಸಾಗಿಸದಂತೆ ನಿಗಾವಹಿಸಬೇಕು. ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿ ಒಡೆಯಲು ಸುತ್ತಿಗೆ ಇರಿಸುವುದು ಕಡ್ಡಾಯ ಮಾಡಬೇಕು. ಲಗೇಜ್ ಸಾಗಣೆ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ‌ ಪರಿಶೀಲನೆ ನಡೆಸಬೇಕು. ಜತೆಗೆ ಅನಧಿಕೃತವಾಗಿ ವಾಹನಗಳ ಮಾರ್ಪಾಡು ಕಂಡು‌ ಬಂದರೆ ಕೂಡಲೇ ಪರವಾನಗಿ ರದ್ದುಗೊಳಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಈ ಹಿಂದೆ ಸಾರಿಗೆ ಸಚಿವನಾಗಿದ್ದ ವೇಳೆ ಹಾವೇರಿ ಬಳಿ ಜಬ್ಬಾರ್ ಟ್ರಾವೆಲ್ಸ್‌ನ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲ ಪ್ರಯಾಣಿಕರು‌ ಪ್ರಾಣ ಕಳೆದುಕೊಂಡಿದ್ದರು. ಆಗ ರಾಜ್ಯದ ಎಲ್ಲಾ ಸುಮಾರು 50 ಸಾವಿರ ವಾಹನಗಳಲ್ಲಿ (ಸಾರಿಗೆ ಸಂಸ್ಥೆಗಳ ಬಸ್ಸುಗಳು, ಕಾಂಟ್ರಾಕ್ಟ್ ಕ್ಯಾರೇಜ್ ಬಸ್ಸು, ಖಾಸಗಿ ಟೂರಿಸ್ಟ್ ಬಸ್‌, ಟೆಂಪೋ ಟ್ರಾವೆಲರ್ಸ್‌‌, ಶಾಲಾ ವಾಹನ) ತುರ್ತು ನಿರ್ಗಮನ ದ್ವಾರಗಳನ್ನು ಕಡ್ಡಾಯವಾಗಿ ಅಳವಡಿಸುವಂತೆ ಹಾಗೂ ಸಮರ್ಪಕವಾಗಿ ದ್ವಾರ ಕೆಲಸ ಮಾಡುತ್ತಿದೆಯೇ ಎಂದು ಪರಿಶೀಲಿಸಲು ಒಂದು ಅಭಿಯಾನ ಕೈಗೆತ್ತಿಕೊಳ್ಳಲಾಗಿತ್ತು. ಆಗ ಹಲವು ಬಸ್ಸುಗಳಲ್ಲಿನ ಲೋಪದೋಷಗಳು ಗಮನಕ್ಕೆ‌‌ ಬಂದು ತುರ್ತು ನಿರ್ಗಮನ ದ್ವಾರಗಳ ಅಳವಡಿಕೆ‌ ಕಡ್ಡಾಯ ಮಾಡಿದ್ದೆವು ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಸುರಕ್ಷತೆಗೆ ಸಂಬಂಧಿಸಿ ನ್ಯೂನತೆ ಕಂಡುಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಬೇಕು. ಪ್ರಾಣ ಹಾನಿಯಾದರೆ ಯಾವುದೇ ರೀತಿಯಲ್ಲೂ ನಷ್ಟ ಭರಿಸಲು ಸಾಧ್ಯವಿಲ್ಲ. ಆದ್ದರಿಂದ ಈ‌ ಕೂಡಲೇ ಕ್ರಮ ವಹಿಸುವಂತೆ ಸಚಿವ ರಾಮಲಿಂಗಾರೆಡ್ಡಿ ಸೂಚಿಸಿದ್ದಾರೆ.

ಸಚಿವ ರೆಡ್ಡಿ ಸೂಚನೆಗಳು

- ಬಸ್ಸುಗಳಲ್ಲಿ ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ಅಥವಾ ಸ್ಫೋಟಕ ವಸ್ತು ಸಾಗಿಸದಂತೆ ನಿಗಾ

- ಎಲ್ಲಾ ಎಸಿ ಬಸ್‌ಗಳಲ್ಲಿ ತುರ್ತು ಸಂದರ್ಭದಲ್ಲಿ ಕಿಟಕಿ ಒಡೆಯಲು ಸುತ್ತಿಗೆ ಇರಿಸುವುದು ಕಡ್ಡಾಯ

- ಲಗೇಜ್ ಸಾಗಣೆ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಿಕೊಂಡು ಸಾಗಲು ಅವಕಾಶ ನೀಡಬಾರದು

- ಅನಧಿಕೃತವಾಗಿ ವಾಹನ ಮಾರ್ಪಾಡು ಕಂಡು‌ಬಂದರೆ ಕೂಡಲೇ ಪರವಾನಗಿ ರದ್ದು ಮಾಡಬೇಕು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಬ್‌ನಲ್ಲಿ ಶಾರುಖ್ ಪುತ್ರನ ದುರ್ವರ್ತನೆ ಕೇಸ್: ಆರ್ಯನ್ ಖಾನ್ ಸೇರಿ ಮೂವರ ವಿರುದ್ಧ ಹಿಂದೂ ಮುಖಂಡನಿಂದ ದೂರು
Namma Metro Update: ಕೆಂಗೇರಿ ಮೆಟ್ರೋ ದುರಂತ; ಮೃತರ ಗುರುತು ಪತ್ತೆ, ಸಂಚಾರ ಸಹಜ ಸ್ಥಿತಿಗೆ!