ರೈತರ ಆಕ್ರೋಶಕ್ಕೆ ಮಣಿದ ಸರ್ಕಾರ; 7 ತಾಸು ತ್ರೀಫೇಸ್‌ ವಿದ್ಯುತ್‌ ನೀಡಲು ಸರ್ಕಾರ ಸೂಚನೆ

By Kannadaprabha NewsFirst Published Oct 30, 2023, 4:48 AM IST
Highlights

ರಾಜ್ಯದಲ್ಲಿ ವಿದ್ಯುತ್‌ ಉತ್ಪಾದನೆ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಎಸ್ಕಾಂಗಳು ತ್ರೀಫೇಸ್‌ ವಿದ್ಯುತ್‌ ಪೂರೈಕೆ ಕಡಿತಗೊಳಿಸಿದ್ದವು. ನಂತರ ಸಭೆ ನಡೆಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮೊದಲಿನ 7 ತಾಸು ಬದಲು 5 ತಾಸು ನಿರಂತರ ತ್ರೀಫೇಸ್‌ ವಿದ್ಯುತ್‌ ಪೂರೈಸಲು ಹೇಳಿದ್ದರು. ಅದೂ ಸರಿಯಾಗಿ ಜಾರಿಗೆ ಬಾರದೆ, ರೈತರು ಪ್ರತಿಭಟನೆ ನಡೆಸಿದ್ದರು.

ಕೊಪ್ಪಳ (ಅ.30) :  ರೈತರ ಪಂಪ್‌ಸೆಟ್‌ಗಳಿಗೆ ಕೇವಲ ಐದು ಗಂಟೆ ವಿದ್ಯುತ್ ಪೂರೈಕೆ ಮಾಡುವ ಮೂಲಕ ರಾಜ್ಯದ ರೈತರ ಆಕ್ರೋಶಕ್ಕೆ ತುತ್ತಾಗಿದ್ದ ರಾಜ್ಯ ಸರ್ಕಾರ, ಈಗ ಮತ್ತೆ ಹಿಂದಿನಂತೆ 7 ಗಂಟೆ ವಿದ್ಯುತ್ ನೀಡಲು ಮುಂದಾಗಿದೆ. ಆದರೆ, ಆಯಾ ವಿಭಾಗಗಳಲ್ಲಿ ಲೋಡ್ ಆಧರಿಸಿ ಕ್ರಮ ವಹಿಸಲು ಸೂಚಿಸಲಾಗಿದೆ.

ರಾಜ್ಯಾದ್ಯಂತ ಎರಡು ಗಂಟೆ ವಿದ್ಯುತ್ ಕಡಿತ ಮಾಡುವ ಆದೇಶವನ್ನು ಮೌಖಿಕವಾಗಿ ಹಿಂದೆ ಪಡೆದಿರುವ ರಾಜ್ಯ ಸರ್ಕಾರ, ಎಸ್ಕಾಂಗಳಿಗೆ ಸ್ಥಳೀಯ ಹೊಂದಾಣಿಕೆಯ ಆಧಾರದಲ್ಲಿ ಏಳು ಗಂಟೆ ವಿದ್ಯುತ್ ಪೂರೈಕೆಯನ್ನು ಪ್ರಾರಂಭಿಸಬೇಕು ಮತ್ತು ಲೋಡ್ ಸಹ ನಿಯಂತ್ರಣದಲ್ಲಿಟ್ಟುಕೊಳ್ಳಬೇಕು ಎಂದು ಸೂಚಿಸಿದೆ. ಜೆಸ್ಕಾಂ, ಹೆಸ್ಕಾಂ, ಬೆಸ್ಕಾಂ ಸೇರಿದಂತೆ ರಾಜ್ಯಾದ್ಯಂತ ಎಸ್ಕಾಂಗಳಲ್ಲಿ ಸ್ಟೇಷನ್ ಆಧಾರದಲ್ಲಿ ವಿದ್ಯುತ್ ಪೂರೈಕೆಯನ್ನು ಏಳು ಗಂಟೆಗೆ ಹೆಚ್ಚಳ ಮಾಡುವಂತೆ ಸೂಚಿಸಲಾಗಿದೆ.

 

ವಿದ್ಯುತ್ ಸಮಸ್ಯೆಯಿಂದ ರೈತರ ಯಮಯಾತನೆ: ಸಂಸದ ಸಂಗಣ್ಣ ಕರಡಿ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೊಪ್ಪಳದ ಜೆಸ್ಕಾಂ ಇಇ ಪಣಿರಾಜೇಶ, ಮೊದಲು ಕೊಪ್ಪಳ ತಾಲೂಕಿನಾದ್ಯಂತ ಅ.30ರಿಂದ 7 ಗಂಟೆ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ. ಬಳಿಕ, ಹಂತಹಂತವಾಗಿ ಇದನ್ನು ಜಿಲ್ಲೆಯ ಇತರ ಪ್ರದೇಶಗಳಿಗೆ ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.

click me!