ಎಸ್‌ಐ ಪರೀಕ್ಷೆ ಅಕ್ರಮ ಸಂಚುಕೋರನೇ ಕೆಇಎ ಅಕ್ರಮಕ್ಕೂ ಕಿಂಗ್‌ಪಿನ್‌!

By Kannadaprabha NewsFirst Published Oct 30, 2023, 4:38 AM IST
Highlights

ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆ(ಎಫ್‌ಡಿಎ)ಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಪರೀಕ್ಷೆಯಲ್ಲಿ ಬೆಳಕಿಗೆ ಬಂದ ಬ್ಲೂಟೂತ್‌ ಅಕ್ರಮದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲನೇ ಆರೋಪಿ ನಂ.1.

ಕಲಬುರಗಿ/ಯಾದಗಿರಿ (ಅ.30) :  ನಿಗಮ-ಮಂಡಳಿಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆ(ಎಫ್‌ಡಿಎ)ಗಳ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ ಪರೀಕ್ಷೆಯಲ್ಲಿ ಬೆಳಕಿಗೆ ಬಂದ ಬ್ಲೂಟೂತ್‌ ಅಕ್ರಮದಲ್ಲಿ ಪಿಎಸ್‌ಐ ನೇಮಕಾತಿ ಪರೀಕ್ಷಾ ಅಕ್ರಮದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲನೇ ಆರೋಪಿ ನಂ.1.

ಕಲಬುರಗಿಯ ಮೂರು ಮತ್ತು ಯಾದಗಿರಿಯ ಐದು ಸೇರಿ ಒಟ್ಟು ಎಂಟು ಪರೀಕ್ಷಾ ಕೇಂದ್ರಗಳಲ್ಲಿ ಶನಿವಾರ ನಡೆದ ಕನ್ನಡ ಪರೀಕ್ಷೆಯಲ್ಲಿ ಅಕ್ರಮ ಬೆಳಕಿಗೆ ಬಂದಿದ್ದು, ಈ ಸಂಬಂಧ ಒಟ್ಟು 18 ಮಂದಿಯನ್ನು ಬಂಧಿಸಲಾಗಿತ್ತು. ಆರ್‌.ಡಿ.ಪಾಟೀಲ್‌ನ ತವರೂರು ಕಲಬುರಗಿಯ ಅಫಜಲ್ಪುರದ ಪರೀಕ್ಷಾ ಕೇಂದ್ರದಲ್ಲೂ ಅಕ್ರಮ ನಡೆದಿದ್ದು, ಈ ಕೇಂದ್ರದಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿ ಎಂಟು ಮಂದಿ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಇದರಲ್ಲಿ ಆರ್‌.ಡಿ.ಪಾಟೀಲನನ್ನು ಎ-1 ಆರೋಪಿ ಎಂದು ಪರಿಗಣಿಸಲಾಗಿದೆ. ಆರ್‌.ಡಿ.ಪಾಟೀಲ ಮತ್ತು ಆತನ ಕಡೆಯವರೇ ಬ್ಲೂಟೂತ್‌ ಡಿವೈಸ್‌ ಹಾಗೂ ಸರಿ ಉತ್ತರ ಪೂರೈಕೆ ಮಾಡಿದ್ದಾರೆಂದು ಬಂಧಿತರು ನೀಡಿದ ಹೇಳಿಕೆ ಆಧರಿಸಿ ಎ-1 ಆರೋಪಿ ಎಂದು ಪರಿಗಣಿಸಲಾಗಿದೆ ಎಂದು ಕಲಬುರಗಿ ಎಸ್ಪಿ ಅಡ್ಡೂರು ಶ್ರೀನಿವಾಸುಲು ಹೇಳಿದ್ದಾರೆ.

ರಾಜ್ಯಾದ್ಯಂತ ಭಾರೀ ಸದ್ದು ಮಾಡಿದ್ದ 2021ರಲ್ಲಿ ನಡೆದಿದ್ದ ಪಿಎಸ್‌ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲೂ ಬ್ಲೂಟೂತ್‌ ಬಳಸಲಾಗಿತ್ತು. ಈ ಅಕ್ರಮ ಬಯಲಾಗುತ್ತಿದ್ದಂತೆ ಆರ್‌.ಡಿ.ಪಾಟೀಲ ಸೇರಿ ರಾಜ್ಯಾದ್ಯಂತ 107 ಮಂದಿಯನ್ನು ಬಂಧಿಸಲಾಗಿತ್ತು. ಸದ್ಯ ಪ್ರಕರಣದಲ್ಲಿ ಜಾಮೀನು ಮೇಲೆ ಬಿಡುಗಡೆಯಾಗಿರುವ ಆರ್‌.ಡಿ.ಪಾಟೀಲ ಹೆಸರು ಮತ್ತೊಂದು ಪರೀಕ್ಷಾ ಅಕ್ರಮದಲ್ಲೂ ಕೇಳಿಬಂದಿರುವುದು ಪೊಲೀಸರ ಪಾಲಿಗೆ ತಲೆನೋವಿಗೆ ಕಾರಣವಾಗಿದೆ.

ಆರ್‌.ಡಿ.ಪಾಟೀಲ್‌ಗಾಗಿ ಶೋಧ: ಕೆಇಎ ಪರೀಕ್ಷೆ ಅಕ್ರಮ ಬೆಳಕಿಗೆ ಬರುತ್ತಿದ್ದಂತೆ ಆರ್‌.ಡಿ.ಪಾಟೀಲ ನಾಪತ್ತೆಯಾಗಿದ್ದು, ಶನಿವಾರ ರಾತ್ರಿಯಿಂದಲೇ ಈತನ ಪತ್ತೆಗೆ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮಹಾರಾಷ್ಟ್ರ ಅಥವಾ ಉತ್ತರಪ್ರದೇಶದಲ್ಲಿ ಈತ ತಲೆಮರೆಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ಈತನ ಪತ್ತೆಗೆ ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ.

ಯಾದಗಿರಿಯಲ್ಲಿ ಬಂಧಿತ ಆರೋಪಿಗಳ‍ೆಲ್ಲ ಕಲಬುರಗಿ ಜಿಲ್ಲೆಯ ಅಫಜಲ್ಪುರ ಹಾಗೂ ವಿಜಯಪುರ ಜಿಲ್ಲೆಯವರು. ಬಂಧಿತರಿಂದ 8 ಮೊಬೈಲ್‌, 4 ಬ್ಲೂಟೂತ್‌ ಡಿವೈಸ್‌ಗಳು, 2 ವಾಕಿಟಾಕಿ ಹಾಗೂ ನಕಲು ಮಾಡಲು ಅನುಕೂಲವಾಗಲೆಂದೇ ವಿಶೇಷವಾಗಿ ಹೊಲಿಸಲಾಗಿದ್ದ ಅಂಗಿ, ಬನಿಯನ್‌ ಹಾಗೂ ಒಳ ಉಡುಪುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ.

ಬಂಧಿತರಲ್ಲಿ 9 ಜನ ನ್ಯಾಯಾಂಗ ವಶಕ್ಕೆ

ಕೆಇಎ ಪರೀಕ್ಷಾ ಅಕ್ರಮದಲ್ಲಿ ಬಂಧಿತ 18 ಮಂದಿ ಪೈಕಿ, ಯಾದಗಿರಿಯಲ್ಲಿ ಬಂಧನಕ್ಕೊಳಗಾಗಿದ್ದ ಒಂಬತ್ತು ಮಂದಿಯನ್ನು ಭಾನುವಾರ ಸಂಜೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

ಯಾದಗಿರಿ: ಬ್ಲೂಟೂತ್ ಬಳಸಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯುತ್ತಿದ್ದ ಆರೋಪಿ ಅರೆಸ್ಟ್

ಕಾರ್‌ನಲ್ಲಿ ಕುಳಿತು ತಮ್ಮನಿಗೆ ಉತ್ತರ ಹೇಳುತ್ತಿದ್ದಾಕೆ ಸೆರೆ!

ಕಲಬುರಗಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಪರೀಕ್ಷೆ ವೇಳೆ ಪರೀಕ್ಷೆ ಬರೆಯುತ್ತಿದ್ದ ತಮ್ಮನಿಗೆ ಅಕ್ರಮವಾಗಿ ಬ್ಲೂಟೂತ್ ಮೂಲಕ ಉತ್ತರ ಹೇಳಿಕೊಡುತ್ತಿದ್ದ ಅಕ್ಕನನ್ನು ಪೊಲೀಸರು ಬಂಧಿಸಿದ್ದಾರೆ. ಕಲಬುರಗಿ ಪರೀಕ್ಷಾ ಕೇಂದ್ರದ ಹೊರಗೆ ಕಾರ್‌ನಲ್ಲಿ ಕುಳಿತು ಶೈಲಶ್ರೀ ತಳವಾರ ಎಂಬಾಕೆ ಪರೀಕ್ಷೆ ಬರೆಯುತ್ತಿದ್ದ ಲಕ್ಷ್ಮೀಕಾಂತನಿಗೆ ಫೋನ್‌ನಲ್ಲಿ ಸರಿಯುತ್ತರ ಹೇಳುತ್ತಿದ್ದಳು.

click me!