
ಬೆಂಗಳೂರು (ಜೂ.25) ಬೆಂಗಳೂರಿನಲ್ಲಿ ಕಚೇರಿ, ಕೆಲಸ, ಶಾಲಾ ಕಾಲೇಜು ಸೇರಿದಂತೆ ಯಾವುದೇ ಪ್ರಯಾಣ ತೀವ್ರ ತಲೆನೋವು ತಂದಿಡುತ್ತದೆ. ಟ್ರಾಫಿಕ್ ಜಾಮ್, ಸಂಚಾರ ದಟ್ಟಣೆಗಳಿಂದ ಪ್ರಯಾಣದಲ್ಲೇ ಅರ್ಧ ಜೀವನ ಹೋಗಿಬಿಡುತ್ತದೆ. ಆದರೆ ಮೆಟ್ರೋ ಸೇವೆ ಆರಂಭದ ಬಳಿಕ ಬೆಂಗಳೂರಿಗರ ಪ್ರಯಾಣದ ತಲೆನೋವು ಅರ್ಧದಷ್ಟು ಕಡಿಮೆಯಾಗಿದೆ. ಇದೀಗ ಬೆಂಗಳೂರಿಗರಿಗೆ ಪಿಂಕ್ ಲೈನ್ ಮೆಟ್ರೋ ಸೇವೆ ಆರಂಭಗೊಳ್ಳುತ್ತಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ಮಾರ್ಗದ ಪಿಂಕ್ ಲೈನ್ ಕಾಮಗಾರಿ ಪೂರ್ಣಗೊಂಡಿದೆ. ಟೆಸ್ಟಿಂಗ್ ರೈಲುಗಳು ಈಗಾಗಲೇ ಓಡಾಟ ಶುರು ಮಾಡಿದೆ. ಹೀಗಾಗಿ ಆಗಸ್ಟ್ ತಿಂಗಳಿನಿಂದ ಪಿಂಕ್ ಲೈನ್ ಮೆಟ್ರೋ ರೈಲು ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ.
ಆಗಸ್ಟ್ ತಿಂಗಳಲ್ಲಿ ಮೆಟ್ರೋ ಸಂಚಾರ ಆರಂಭಿಸಿಲು ಅಧಿಕಾರಿಗಳು ಭರದ ಸಿದ್ದತೆ ನಡೆಸಿದ್ದಾರೆ. ಮರಳಿನ ಚೀಲಗಳನ್ನಿಟ್ಟು ಗುಲಾಬಿ ರೈಲುಗಳ ಪರೀಕ್ಷೆ ನಡೆಯುತ್ತಿದೆ. ಕಾಳೇನ ಅಗ್ರಹಾರದಿಂದ ತಾವರೆಕೆರೆ ವರೆಗೆ ಕಾಮಗಾರಿ ಮುಕ್ತಾಯಗೊಂಡಿದೆ. ಇದೀಗ ಮೆಟ್ರೋ ಅಧಿಕಾರಿಗಳಿಂದ ಪರೀಕ್ಷಾರ್ಥ ರೈಲು ಓಡಾಟ ಆರಂಭಿಸಲಾಗಿದೆ. 7.5 ಕಿ.ಮೀ ಉದ್ದದ ಮೆಟ್ರೋ ಮಾರ್ಗ ಈ ಭಾಗದ ಜನರ ಓಡಾಟಕ್ಕೆ ಅನುಕೂಲ ಮಾಡಲಿದೆ.
ಮೆಟ್ರೋ ಮಾರ್ಗದಲ್ಲಿ ನಾಲ್ಕು ಪಿಂಕ್ ರೈಲುಗಳು ಪರೀಕ್ಷೆ ಆರಂಭಗೊಂಡಿದೆ. ಆರ್ ಡಿಎಸ್ ಒ ಟೆಸ್ಟಿಂಗ್ ಮುಗಿದಿದ್ದು, ಟ್ರಯಲ್ ಸರ್ಟಿಫಿಕೇಟ್ BMRCL ಅಧಿಕಾರಿಗಳು ಕಾಯುತ್ತಿದ್ದಾರೆ. ಬಳಿಕ ಈ ಪ್ರಮಾಣಪತ್ರವನ್ನು ರೈಲ್ವೇ ಮಂಡಳಿಗೆ ರವಾನೆ ಮಾಡಲಾಗುತ್ತದೆ. ರೈಲ್ವೇ ಮಂಡಳಿ ಅನುಮೋದನೆ ನೀಡಿದ ಬೆನ್ನಲ್ಲೇ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಲಿದೆ. ಸದ್ಯ ಮಟ್ಟಿಗೆ ಆಗಸ್ಟ್ ತಿಂಗಳಿನಿಂದ ಪಿಂಕ್ ಲೈನ್ ಮೆಟ್ರೋ ಸಂಚಾರ ಆರಂಭಗೊಳ್ಳುವುದು ಬಹುತೇಕ ಖಚಿತಗೊಂಡಿದೆ.
ಹೊಸದಾಗಿ ಅಧಿಕಾರ ವಹಿಸಿಕೊಂಡ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ , BMRCL ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದರು. ಮೆಟ್ರೋ ಕಾಮಗಾರಿಗಳಿಗೆ ವೇಗ ತರುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಸಾರ್ವಜನಿಕರಿಗೆ ಟ್ರಾಫಿಕ್ ಕಿರಿಕಿರಿ ತಪ್ಪಿಸುವಂತೆ ಸೂಚಿಸಿದ್ದರು.
ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಮೆಟ್ರೋ 3ಎ ಹಂತದ ಕಾಮಗಾರಿಗೆ ಒಪ್ಪಿಗೆ ಸೂಚಿಸಿದೆ. ಇದೀಗ ಕೇಂದ್ರದ ಅನುಮತಿಗಾಗಿ ರಾಜ್ಯ ಸರ್ಕಾರ ಕಾಯುತ್ತಿದೆ. ಬೆಂಗಳೂರಿನಲ್ಲಿ ಮೆಟ್ರೋ ಸಂಪರ್ಕ ಮತ್ತಷ್ಟು ವಿಸ್ತರಿಸಲು ಹಾಗೂ ಸಂಪೂರ್ಣ ಬೆಂಗಳೂರು ಸಂಪರ್ಕಿಸಲು ಪ್ರಯತ್ನಗಳು ನಡೆಯುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ