ಪತ್ನಿಗೆ ಜೀವನಾಂಶ ನೀಡೋದು ಪತಿಗೆ ಶಿಕ್ಷೆಯಲ್ಲ: ಹೈಕೋರ್ಟ್‌ ಅಭಿಪ್ರಾಯ

By Kannadaprabha NewsFirst Published Feb 5, 2023, 11:29 AM IST
Highlights

ವಿಚ್ಛೇದನ ಪ್ರಕರಣದಲ್ಲಿ ಪತಿಯು ಪತ್ನಿಗೆ ‘ಜೀವನ ನಿರ್ವಹಣಾ’ ಮೊತ್ತ ನೀಡುವುದು ಪತ್ನಿ ಹಾಗೂ ಮಕ್ಕಳ ಕುರಿತು ತೋರಿದ ಹಿಂದಿನ ನಿರ್ಲಕ್ಷ್ಯಕ್ಕೆ ವಿಧಿಸುವ ಶಿಕ್ಷೆಯಲ್ಲ, ಬದಲಾಗಿ ಪತ್ನಿಯ ಆಹಾರ, ಆಸರೆ ಹಾಗೂ ಅಲೆಮಾರಿಯಾಗುವುದನ್ನು ತಪ್ಪಿಸಲು ನೀಡುವ ತ್ವರಿತ ಪರಿಹಾರವಾಗಿದೆ ಎಂದು ಹೈಕೋರ್ಟ್‌ ಹೇಳಿದೆ. 

ಬೆಂಗಳೂರು (ಫೆ.05): ವಿಚ್ಛೇದನ ಪ್ರಕರಣದಲ್ಲಿ ಪತಿಯು ಪತ್ನಿಗೆ ‘ಜೀವನ ನಿರ್ವಹಣಾ’ ಮೊತ್ತ ನೀಡುವುದು ಪತ್ನಿ ಹಾಗೂ ಮಕ್ಕಳ ಕುರಿತು ತೋರಿದ ಹಿಂದಿನ ನಿರ್ಲಕ್ಷ್ಯಕ್ಕೆ ವಿಧಿಸುವ ಶಿಕ್ಷೆಯಲ್ಲ, ಬದಲಾಗಿ ಪತ್ನಿಯ ಆಹಾರ, ಆಸರೆ ಹಾಗೂ ಅಲೆಮಾರಿಯಾಗುವುದನ್ನು ತಪ್ಪಿಸಲು ನೀಡುವ ತ್ವರಿತ ಪರಿಹಾರವಾಗಿದೆ ಎಂದು ಹೈಕೋರ್ಟ್‌ ಹೇಳಿದೆ. 

ಪತ್ನಿಗೆ ಪ್ರತಿ ತಿಂಗಳು 20 ಸಾವಿರ ಜೀವನ ನಿರ್ವಹಣಾ ವೆಚ್ಚ ನೀಡುವಂತೆ ಕೌಟುಂಬಿಕ ನ್ಯಾಯಾಲಯ ನೀಡಿದ್ದ ಆದೇಶ ರದ್ದು ಕೋರಿ ವ್ಯಕ್ತಿಯೊಬ್ಬರು ಹೈಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾ. ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿ ಈ ಅಭಿಪ್ರಾಯಪಟ್ಟಿದೆ. ಜೀವನ ನಿರ್ವಹಣೆಗೆ ಮೊತ್ತ ನೀಡುವುದು ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಲು ವಿಶೇಷವಾಗಿ ಜಾರಿಗೊಳಿಸಲಾದ ಕಾನೂನು. ಹೀಗಾಗಿ ಕೌಟುಂಬಿಕ ನ್ಯಾಯಾಲಯ ಇಂತಹ ಪ್ರಕರಣದ ವಿಚಾರಣೆ ವೇಳೆ ಮಹಿಳೆ ಕೋರ್ಟ್‌ ಎದುರು ತೋಡಿಕೊಂಡ ತೊಂದರೆಯನ್ನು ಕಡೆಗಣಿಸಬಾರದು ಎಂದು ಹೇಳಿದೆ.

ಒಂದು ಪೋಡಿಗೆ 40 ಸಾವಿರ ಲಂಚ ಕೊಡಬೇಕಿದೆ: ಡಿ.ಕೆ.ಶಿವಕುಮಾರ್‌ ಕಿಡಿ

ಪ್ರಕರಣ ವಿವರ: ಒಂದು ವರ್ಷದ ಮಗುವಿದ್ದ ನಗರದ ನಾಗವಾರಪಾಳ್ಯದ ಕೈಲಾಶ್‌ ಹಾಗೂ ಪತ್ನಿಯ ನಡುವೆ ದಾಂಪತ್ಯದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ಪ್ರತ್ಯೇಕವಾಗಿ ವಾಸವಾಗಿದ್ದರು. ಇದನ್ನು ಪ್ರಶ್ನಿಸಿ ಪತಿ ನ್ಯಾಯಾಲಯದಲ್ಲಿ ವೈವಾಹಿಕ ಹಕ್ಕಿನ ಮರುಸ್ಥಾಪನೆ ಪ್ರಕರಣ ದಾಖಲಿಸಿದ್ದರು. ಇದಕ್ಕೆ ಪ್ರತಿಯಾಗಿ ಪತ್ನಿ ಪತಿ ಹಾಗೂ ಆತನ ಕುಟುಂಬಸ್ಥರ ಮೇಲೆ ವರದಕ್ಷಿಣೆ, ಕಿರುಕುಳ ಸೇರಿ ಇತರೆ ದಾವೆ ದಾಖಲಿಸಿದ್ದರು.

ನಂತರ ಪತಿ ಈ ಮೊದಲು ಹೂಡಿದ್ದ ಪ್ರಕರಣ ಹಿಂಪಡೆದು ವಿವಾಹ ರದ್ದುಗೊಳಿಸುವಂತೆ ಪ್ರಕರಣ ಹೂಡುತ್ತಾರೆ. ಇದಾದ ಬಳಿಕ 2019ರ ಡಿ. 12ರಂದು ಮಹಿಳೆ ತನಗೆ ಹಾಗೂ ಮಗುವಿನ ಜೀವನ ನಿರ್ವಹಣೆಗೆ ಪ್ರತಿ ತಿಂಗಳು .20 ಸಾವಿರ ನೀಡುವಂತೆ ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಪ್ರತಿ ತಿಂಗಳು .20 ಸಾವಿರ ಜೀವನ ನಿರ್ವಹಣೆ ನೀಡುವಂತೆ ಆದೇಶಿಸಿತ್ತು. ಆದರೆ, ಇದನ್ನ ಪ್ರಶ್ನಿಸಿ ಕೈಲಾಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಕೋರ್ಟ್‌ ಬೇಸರ: ಕಿರುಕುಳ, ವರದಕ್ಷಿಣೆಗಾಗಿ ತೊಂದರೆ ನೀಡಿದ ಕಾರಣಕ್ಕೆ ಪತ್ನಿ ಪ್ರತ್ಯೇಕವಾಗಿ ನೆಲೆಸಿದ್ದು, ಪತಿಯ ವ್ಯವಹಾರಕ್ಕೆ ತನ್ನ ತಂದೆಯಿಂದ ಕೊಡಿಸಿದ ಹಣದ ಬಗ್ಗೆ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ. ಅಲ್ಲದೆ ಅರ್ಜಿದಾರ ಮಗುವಿನ ಜನನದ ಬಗ್ಗೆಯೂ ಪ್ರಶ್ನಿಸಿ ಡಿಎನ್‌ಎ ಪರೀಕ್ಷೆಗೆ ಮಾಡಿದ್ದ ಮನವಿ ತಿರಸ್ಕರಿಸಲ್ಪಟ್ಟಿದೆ. ಆದರೆ, ಕೆಳಹಂತದ ನ್ಯಾಯಾಲಯ ಮಹಿಳೆ ಮೌಖಿಕವಾಗಿ ತೋಡಿಕೊಂಡ ಸಮಸ್ಯೆಗಳ ಕುರಿತು ಹೆಚ್ಚಿನ ವಿಚಾರಣೆ ಆಗದೆ ಕಡೆಗಣಿಸಲ್ಪಟ್ಟಿದೆ ಎಂದು ಹೈಕೋರ್ಟ್‌ ಬೇಸರಿಸಿದೆ.

ಅದಾನಿ ಪ್ರಕರಣದಲ್ಲಿ ಕೇಂದ್ರದ ಪಾತ್ರ ತನಿಖೆಯಾಗಲಿ: ಪ್ರಿಯಾಂಕ್‌ ಖರ್ಗೆ

ಪ್ರಕರಣದಲ್ಲಿ ಅರ್ಜಿದಾರ ಪರಿಹಾರ ನೀಡುವಷ್ಟು ಆದಾಯ ನನಗಿಲ್ಲ. ವೃದ್ಧ ತಂದೆತಾಯಿಗಳು ಹಾಸಿಗೆ ಹಿಡಿದಿದ್ದಾರೆ ಎಂದೆಲ್ಲ ಕಾರಣ ನೀಡಿದ್ದಾರೆ. ಅಲ್ಲದೆ, ಪತ್ನಿಗೆ ಉತ್ತಮ ನೌಕರಿ ಇದೆ. ಮಗುವಿಗಾಗಿ ನಾನು ಹಣ ಕೊಡಲು ಸಿದ್ಧ ಆದರೆ, ಪತ್ನಿಗೆ ನೀಡುವುದಿಲ್ಲ ಎಂದೂ ಹೇಳಿದ್ದರು. ಜತೆಗೆ, ಕೌಟುಂಬಿಕ ನ್ಯಾಯಾಲಯ ಸೂಚಿಸಿದ ಮೊತ್ತವನ್ನೂ ಈವರೆಗೆ ನೀಡಿಲ್ಲ. ಹೀಗಾಗಿ ಅರ್ಜಿದಾರರ ಮನವಿ ನ್ಯಾಯಾಲಯಕ್ಕೆ ಮನವರಿಕೆಯಾಗಿಲ್ಲ, ಜತೆಗೆ ಹಿಂದಿನ ತೀರ್ಪಿನ ವಿಚಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಕಂಡುಬರುತ್ತಿಲ್ಲ ಎಂದು ಮೇಲ್ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ. ಜತೆಗೆ ಮಹಿಳೆ ಜೀವನ ನಿರ್ವಹಣೆಗೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಹಾಕಿದ ದಿನದಿಂದ ಇಲ್ಲಿವರೆಗೆ ಪ್ರತಿ ತಿಂಗಳ . 10ಸಾವಿರದಂತೆ ಬಾಕಿ ಮೊತ್ತವನ್ನು ಎಂಟು ವಾರದಲ್ಲಿ ನೀಡುವಂತೆ ಸೂಚಿಸಿದೆ.

click me!