
ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ಆನ್ಲೈನ್ ಗೇಮ್ ಒಂದರ ಅತಿಯಾದ ವ್ಯಸನವು ಮೂರು ಅಪ್ರಾಪ್ತ ಸಹೋದರಿಯರ ಜೀವವನ್ನು ಕಸಿದುಕೊಂಡಿದೆ. ಬುಧವಾರ ಬೆಳಗಿನ ಜಾವ ಬೆಳಕಿಗೆ ಬಂದ ಈ ವರದಿ ದೇಶದಾದ್ಯಂತ ತೀವ್ರ ಚರ್ಚೆಗೆ ಕಾರಣವಾಗಿದೆ. ಫೆಬ್ರವರಿ 4, 2026ರ ನಸುಕಿನ ಸುಮಾರು 2.15ರ ಸುಮಾರಿಗೆ, ಭಾರತ್ ಸಿಟಿ ಸೊಸೈಟಿಯಲ್ಲಿರುವ ವಸತಿ ಸಮುಚ್ಚಯದ ಒಂಬತ್ತನೇ ಮಹಡಿಯ ಅಪಾರ್ಟ್ಮೆಂಟ್ನಿಂದ ಮೂವರು ಸಹೋದರಿಯರು ಹಾರಿ ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು ವಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂದು ಗುರುತಿಸಲಾಗಿದೆ. ಈ ಮೂವರು ಸಹೋದರಿಯರು ಆನ್ಲೈನ್ ‘ಕೊರಿಯನ್’ ಟಾಸ್ಕ್ ಆಧಾರಿತ ಆಟಕ್ಕೆ ತೀವ್ರವಾಗಿ ವ್ಯಸನಿಯಾಗಿದ್ದರು ಎಂದು ತಿಳಿದುಬಂದಿದ್ದು, ಇದೇ ಅವರ ಸಾವಿನ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಘಟನೆ ನಡೆದ ಸ್ಥಳದಿಂದ ಸುಮಾರು 8 ಪುಟಗಳ ಕೈಬರಹದ ಟಿಪ್ಪಣಿ ಹಾಗೂ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಸಹೋದರಿಯರು ತಮ್ಮ ತಂದೆಗೆ “ಕ್ಷಮಿಸಿ ಅಪ್ಪಾ” ಎಂದು ಬರೆದು ಪೊಷಕರಲ್ಲಿ ಕ್ಷಮೆಯಾಚಿಸಿದ್ದಾರೆ. "ಈ ಡೈರಿಯಲ್ಲಿ ಬರೆದಿರುವುದನ್ನೆಲ್ಲ ನೀವು ಓದಿ, ಇದು ನಮ್ಮ ನಿಜವಾದ ಜೀವನ ಕಥೆ” ಎಂದು ಸಹೋದರಿಯರು ಮನವಿ ಮಾಡಿಕೊಂಡಿದ್ದಾರೆ. ಟಿಪ್ಪಣಿಯ ಕೊನೆಯಲ್ಲಿ ಅಳುವ ಎಮೋಜಿಯನ್ನೂ ಕೂಡ ಬಿಡಿಸಲಾಗಿದೆ. ಈ ಡೈರಿಯಲ್ಲಿ ಅವರ ದಿನನಿತ್ಯದ ಜೀವನ, ಮೊಬೈಲ್ ಹಾಗೂ ಗೇಮಿಂಗ್ ಚಟುವಟಿಕೆಗಳು, ಮಾನಸಿಕ ಒತ್ತಡ ಮತ್ತು ಒಂಟಿತನದ ಭಾವನೆಗಳ ಬಗ್ಗೆ ಉಲ್ಲೇಖಗಳಿವೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಅವರ ಮಲಗುವ ಕೋಣೆಯ ಗೋಡೆಯ ಮೇಲೆ “ನಾನು ತುಂಬಾ ಒಂಟಿಯಾಗಿದ್ದೇನೆ” ಎಂಬ ಸಂದೇಶವೂ ಬರೆಯಲ್ಪಟ್ಟಿರುವುದು ಪತ್ತೆಯಾಗಿದೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಸಹೋದರಿಯರು ಕೋವಿಡ್-19 ಸಾಂಕ್ರಾಮಿಕ ಅವಧಿಯಲ್ಲಿ ಈ ಟಾಸ್ಕ್ ಆಧಾರಿತ ಕೊರಿಯನ್ ಅಪ್ಲಿಕೇಶನ್ ಆಟವನ್ನು ಆಡಲು ಆರಂಭಿಸಿದ್ದರು. ಕ್ರಮೇಣ ಅವರು ಅದರ ಗೀಳಿಗೆ ಒಳಗಾಗಿ, ಶಾಲೆಗೆ ಹೋಗುವುದನ್ನು ಕಡಿಮೆ ಮಾಡುತ್ತಾ, ಎರಡು ವರ್ಷಗಳ ಹಿಂದೆ ಸಂಪೂರ್ಣವಾಗಿ ಶಾಲೆಗೆ ಹೋಗುವುದನ್ನೇ ನಿಲ್ಲಿಸಿದ್ದರು ಎನ್ನಲಾಗಿದೆ. ಅವರು ತಮ್ಮ ಹೆಸರುಗಳನ್ನು ಕೂಡ ಕೊರಿಯನ್ ಹೆಸರುಗಳನ್ನಾಗಿ ಬದಲಾಯಿಸಿಕೊಂಡಿದ್ದರಂತೆ. ಆಟದ ಅತಿಯಾದ ವ್ಯಸನದ ಕುರಿತು ಪೋಷಕರು ಹಲವು ಬಾರಿ ಮಕ್ಕಳನ್ನು ಗದರಿಸಿದ್ದರು. ಇತ್ತೀಚೆಗೆ ಮೊಬೈಲ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಹಿನ್ನೆಲೆಯಲ್ಲಿ ಮನೆಯೊಳಗೆ ವಿವಾದ ಉಂಟಾಗಿತ್ತು. ಇದೇ ನಿರ್ಬಂಧವು ಮಕ್ಕಳ ಮೇಲೆ ತೀವ್ರ ಮಾನಸಿಕ ಪರಿಣಾಮ ಬೀರಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಬುಧವಾರ ಬೆಳಗಿನ ಜಾವ, ಸಹೋದರಿಯರು ತಮ್ಮ ಕೋಣೆಯನ್ನು ಒಳಗಿನಿಂದ ಲಾಕ್ ಮಾಡಿಕೊಂಡು, ಮನೆಯ ದೇವರ ಕೋಣೆಯ ಬಾಲ್ಕನಿಗೆ ತೆರಳಿ, ಒಬ್ಬೊಬ್ಬರಾಗಿ ಕೆಳಗೆ ಹಾರಿದ್ದಾರೆ ಎನ್ನಲಾಗಿದೆ. ಅವರ ಕಿರುಚಾಟ ಹಾಗೂ ನೆಲಕ್ಕೆ ಬಿದ್ದ ಶಬ್ದ ಕೇಳಿ ಪೋಷಕರು, ನೆರೆಹೊರೆಯವರು ಮತ್ತು ಭದ್ರತಾ ಸಿಬ್ಬಂದಿ ಆತಂಕಗೊಂಡಿದ್ದಾರೆ. ಪೋಷಕರು ಬಾಲ್ಕನಿಯ ಬಾಗಿಲು ಒಡೆದು ಒಳಗೆ ಪ್ರವೇಶಿಸುವಷ್ಟರಲ್ಲಿ ಎಲ್ಲವೂ ಮುಗಿದಿತ್ತು. ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರು ಸಹೋದರಿಯರೂ ಸ್ಥಳದಲ್ಲೇ ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. “ನಾವು ಸ್ಥಳಕ್ಕೆ ತಲುಪಿದಾಗ ಚೇತನ್ ಕುಮಾರ್ ಅವರ ಮೂವರು ಹೆಣ್ಣುಮಕ್ಕಳು ಕಟ್ಟಡದಿಂದ ಹಾರಿ ಸಾವನ್ನಪ್ಪಿರುವುದು ದೃಢವಾಯಿತು” ಎಂದು ಸಹಾಯಕ ಪೊಲೀಸ್ ಆಯುಕ್ತ ಅತುಲ್ ಕುಮಾರ್ ಸಿಂಗ್ ತಿಳಿಸಿದ್ದಾರೆ.
ಪೊಲೀಸರು ಮೃತ ಸಹೋದರಿಯರ ಮೊಬೈಲ್ ಫೋನ್ಗಳನ್ನು ವಶಪಡಿಸಿಕೊಂಡಿದ್ದು, ಅವುಗಳ ವಿಧಿವಿಜ್ಞಾನ (ಫೊರೆನ್ಸಿಕ್) ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ನಿರ್ದಿಷ್ಟ ಆಟದ ಹೆಸರನ್ನು ಪೊಲೀಸರು ಇನ್ನೂ ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೆ ಸಹೋದರಿಯರು ಕೊರಿಯನ್ ಸಂಸ್ಕೃತಿ ಮತ್ತು ಆನ್ಲೈನ್ ಗೇಮಿಂಗ್ ಜಗತ್ತಿನಲ್ಲಿ ತೀವ್ರವಾಗಿ ಮುಳುಗಿದ್ದದ್ದು ಅವರು ಸಾವಿಗೂ ಮುನ್ನ ಬರೆದಿಟ್ಟ ಲೆಟರ್ ನಿಂದ ಸ್ಪಷ್ಟವಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ನಿಮಿಷ್ ಪಟೇಲ್ ಹೇಳಿದ್ದಾರೆ.
ಮೃತ ಸಹೋದರಿಯರ ತಂದೆ ಚೇತನ್ ಕುಮಾರ್ ಕಣ್ಣೀರಿನಿಂದ ಮಾತನಾಡುತ್ತಾ, “ಕೊರಿಯಾ ನಮ್ಮ ಜೀವನ, ಅದೇ ನಮ್ಮ ದೊಡ್ಡ ಪ್ರೀತಿ ಎಂದು ಮಕ್ಕಳು ಹೇಳುತ್ತಿದ್ದರು. ನಾವು ಏನೇ ಹೇಳಿದರೂ ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ ಎಂದು ಹಠ ಹಿಡಿದಿದ್ದರು. ಯಾವ ಪೋಷಕರಿಗೂ ಇಂತಹ ದುರಂತ ಸಂಭವಿಸಬಾರದು” ಎಂದು ಆಕ್ರಂದನ ವ್ಯಕ್ತಪಡಿಸಿದ್ದಾರೆ.
ಈ ಘಟನೆ ಆನ್ಲೈನ್ ಆಟಗಳು ಮತ್ತು ಡಿಜಿಟಲ್ ವ್ಯಸನವು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಬೀರುವ ಗಂಭೀರ ಪರಿಣಾಮಗಳ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಪೋಷಕರು, ಶಾಲೆಗಳು ಮತ್ತು ಸಮಾಜ ಒಟ್ಟಾಗಿ ಮಕ್ಕಳ ಮೇಲೆ ಗಮನಹರಿಸಬೇಕಾದ ಅಗತ್ಯವಿದೆ ಎಂಬ ಸಂದೇಶವನ್ನು ಈ ದುರಂತ ಸಾರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ