
ಬೆಂಗಳೂರು (ಆ.01) ಧರ್ಮಸ್ಥಳ ಬುರುಡೆ ಪ್ರಕರಣ ಸಂಬಂಧ ಹಲವು ಸುಳ್ಳು ಸುದ್ದಿಗಳು ಸೋಶಿಯಲ್ ಮೀಡಿಯಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಹರಡಲಾಗುತ್ತಿದೆ ಅನ್ನೋ ಗಂಭೀರ ಆರೋಪಗಳು ಕೇಳಿಬರುತ್ತಿದೆ. ಇದರ ಬೆನ್ನಲ್ಲೇ ಗೃಹ ಸಚಿವ ಜಿ.ಪರಮೇಶ್ವರ್ ನೇತೃತ್ವದಲ್ಲಿ ಮಹತ್ವದ ಸಭ ನಡೆಸಿ ಹಲವು ನಿರ್ಣಯ ಕೈಗೊಳ್ಳಲಾಗಿದೆ. ಪೊಲೀಸ್ ಮಹಾನಿರ್ದೇಶಕ, ಡಿಜಿಪಿ, ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಲವು ಹಿರಿಯ ಪೊಲೀಸ್ ಅಧಿಕಾರಿಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದರು. ಧರ್ಮಸ್ಥಳ ಪ್ರಕರಣ ಸಂಬಂಧ ಸುಳ್ಳು ಸುದ್ದಿ ಹರಡಿದರೆ ಕಠಿಣ ಶಿಕ್ಷೆ ಗುರಿಪಡಿಸಲು ಸರ್ಕಾರ ಮುಂದಾಗಿದೆ. ಫೇಕ್ ನ್ಯೂಸ್ಗಳ ಮೇಲೆ ನಿಗಾಹಿಸಲು ಸರ್ಕಾರ ಮುಂದಾಗಿದೆ.
ರಾಜ್ಯ ಸರ್ಕಾರ ಈಗಾಗಲೇ ಫೇಕ್ ನ್ಯೂಸ್ ತಡೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಇದರ ನಡುವೆ ಧರ್ಮಸ್ಥಳ ಪ್ರಕರಣದಲ್ಲಿ ಹಲವು ಅಂತೆ ಕಂತೆಗಳು, ಆರೋಗಳು ಗಂಭೀರವಾಗಿ ಕೇಳಿಬರುತ್ತಿದೆ. ಎಸ್ಐಟಿ ತನಿಖೆ, ಹೂತಿಟ್ಟ ಶವ ಅಗೆಯುವ ಕಾರ್ಯಾಚರಣೆ, ದೂರುದಾರ ಸೇರಿದಂತೆ ಹಲವು ಪ್ರಕರಣಗಳು, ಘಟನೆಗಳ ಕುರಿತು ಗಂಭೀರ ಆರೋಪಗಳು ಕೇಳಿಬರುತ್ತಿದೆ. ಸುಳ್ಳು ಸುದ್ದಿ ಹರಡುತ್ತಿರುವ ಸೋಶಿಯಲ್ ಮೀಡಿಯಾ ಪ್ಲಾಟ್ಫಾರ್ಮ್ ಹಾಗೂ ಇತರ ವೇದಿಕೆಗಳ ವಿರುದ್ಧ ಹದ್ದಿನ ಕಣ್ಣಿಡಲು ಮಹತ್ವದ ಸಭೆಯಲ್ಲಿ ನಿರ್ಧರಿಸಲಾಗಿದೆ.
ಗೃಹ ಸಚಿವ ಜಿ. ಪರಮೇಶ್ವರ್ ನೇತೃತ್ವದಲ್ಲಿ ಸಭೆ ನಡೆದಿದೆ. ವಿಧಾನಸೌಧಲ್ಲಿ ನಡೆದ ಈ ಸಭೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ, ಡಿಜಿಪಿ ಪ್ರಣಬ್ ಮೊಹಂತಿ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಮುರುಗನ್, ಶರತ್ ಚಂದ್ರ ಭಾಗಿಯಾಗಿದ್ದಾರೆ.
ಈ ಸಭೆಯಲ್ಲಿ ಫೇಕ್ ನ್ಯೂಸ್ ಮಾತ್ರವಲ್ಲ ಕೈಮೀರುತ್ತಿರುವ ಆನ್ಲೈನ್ ಗೇಮ್ಗಳಿಗೆ ಕಡಿವಾಣ ಹಾಕಲು ನಿರ್ಧರಿಸಲಾಗಿದೆ. ಈ ಕುರಿತು ಪೊಲೀಸ್ ಮಹಾನಿರ್ದೇಶಕರು ಹಾಗೂ ಹಿರಿಯ ಅಧಿಕಾರಿಗಳ ಜೊತೆ ಸುದೀರ್ಘ ಚರ್ಚೆ ನಡೆದಿದೆ.
ಸೋಶಿಯಲ್ ಮೀಡಿಯಾದಲ್ಲಿ ಹಾಕುವ ಪೋಸ್ಟ್ ಅದಕ್ಕೆ ಹಾಕುತ್ತಿರುವ ಕಮೆಂಟ್ ಕುರಿತು ಗಂಭೀರ ಆರೋಪಗಳು ಕೇಳಿಬರುತ್ತಿದೆ. ಇತ್ತೀಚಿನ ನಟಿ ರಮ್ಯಾ ನೀಡಿದ್ದ ದೂರು ಸೇರಿದಂತೆ ಹಲವು ಪ್ರಕರಣಗಳು ನಡೆದಿದೆ. ಹೀಗಾಗಿ ಇಂತಹ ಘಟನೆಗಳಿಗೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಜಟಾಪಟಿ ವೈಯುಕ್ತಿಕ ಮಟ್ಟಕ್ಕೆ, ಘನತೆಗೆ ಧಕ್ಕೆ ತರವು ಕೆಲಸಗಳು ನಡೆಯುತ್ತಿದೆ. ಇದಕ್ಕೂ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಡಲಾಗಿದೆ ಎಂದು ದೂರುದಾರ ನೀಡಿದ ಆಧಾರದ ಹಾಗೂ ಆರೋಪದ ಮೇಲೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ದೂರುದಾರ ಗುರುತಿಸಿದ 13 ಸ್ಥಳಗಳ ಪೈಕಿ 6 ಸ್ಥಗಳಲ್ಲಿ ಅಗೆದು ಉತ್ಖನನ ನಡೆಸಲಾಗಿದೆ. ಈ ಪೈಕಿ 5 ಸ್ಥಳಗಳಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. 6ನೇ ಪಾಯಿಂಟ್ನಲ್ಲಿ ಕಳೇಬರ ಪತ್ತೆಯಾಗಿದೆ. ಈ ಕಳೇಬರ ವಶಕ್ಕೆ ಪಡೆದು ಪರೀಕ್ಷೆಗೆ ಕಳುಹಿಸಲಾಗಿದೆ. ಇಂದಿನಿಂದ 7ನೇ ಹಾಗೂ ಇನ್ನುಳಿದ ಪಾಯಿಂಟ್ನಲ್ಲಿ ಉತ್ಖನನ ಕಾರ್ಯ ಮುಂದುವರಿದಿದೆ.
ಧರ್ಮಸ್ಥಳದ ಮಾಜಿ ನೌಕರ ಎಂದು ಹೇಳಿಕೊಂಡಿರುವ ಮುಸುಕುದಾರಿ ದೂರುದಾರ, ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿದ್ದಾರೆ. ಇದು ಸಹಜ ಸಾವಲ್ಲ. ಪ್ರಭಾವಿಗಳ ಎಚ್ಚರಿಕೆ, ಬೆದರಿಕೆ ಕಾರಣದಿಂದ ಇದುವರೆಗೂ ಮಾಹಿತಿ ಬಹಿರಂಗಪಡಿಸಿರಲಿಲ್ಲ. ಆದರೆ ಪಾಪಪ್ರಜ್ಞೆ ಕಾಡುತ್ತಿರುವ ಕಾರಣ ಇದೀಗ ಮಾಹಿತಿ ಬಹಿರಂಗಪಡಿಸುತ್ತಿರುವುದಾಗಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ