
ಬೆಂಗಳೂರು: ನಗರದಲ್ಲಿ ಹಾಲಿನ ಗುಣಮಟ್ಟದ ಕುರಿತು ಸಂಶಯಗಳು ವ್ಯಕ್ತವಾಗುತ್ತಿದ್ದ ಹಿನ್ನೆಲೆಯಲ್ಲಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯು ಎಫ್ಎಸ್ಎಸ್ಏಐ ಸಹಯೋಗದೊಂದಿಗೆ ನಗರದಲ್ಲಿ 27 ಸ್ಥಳಗಳಲ್ಲಿ ದಾಳಿ ಮಾಡಿ ಹಾಲಿನ ಮಾದರಿಗಳನ್ನು ಸಂಗ್ರಹಿಸಿದೆ. ಪ್ಯಾಕೆಟ್ ಹಾಲಿನ ಮೇಲೂ ಅನುಮಾನ ಮೂಡಿರುವ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.
ರಾಜ್ಯದಾದ್ಯಂತ 870 ಹಾಲಿನ ಕೇಂದ್ರಗಳಿಂದ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಈ ಪೈಕಿ ಸರ್ಕಾರಿ ಹಾಗೂ ಖಾಸಗಿ ಹಾಲು ಉತ್ಪಾದನಾ ಘಟಕಗಳೂ ಒಳಗೊಂಡಿವೆ. ಹಾಲಿನಲ್ಲಿ ಶುದ್ಧತೆ ಬಗ್ಗೆ ಸಂಶಯಗಳು ಮೂಡಿರುವ ಕಾರಣ, ಮಾದರಿಗಳನ್ನು ಪರಿಶೀಲನೆಗಾಗಿ ಪ್ರಯೋಗಾಲಯಗಳಿಗೆ ರವಾನಿಸಲಾಗಿದೆ.
ಆಹಾರ ಮತ್ತು ಔಷಧಿ ಸುರಕ್ಷತೆ ಸಂಬಂಧಿಸಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಾಹಿತಿಗಳನ್ನು ಹಂಚಿಕೊಂಡರು, ಆಹಾರ ಹಾಗೂ ಔಷಧಿ ಸುರಕ್ಷತೆಯನ್ನು ಒಂದೇ ಅಡಿಯಲ್ಲಿ ತರಲಾಗಿದೆ. ಆಯುಷ್ ಔಷಧಿಗಳನ್ನು ಆಯುಷ್ಯ ವಿಭಾಗದಲ್ಲಿ ಕೈಗಾರಿಕೆಯಿಂದ ಹೊರತುಪಡಿಸಲಾಗಿದೆ. ಔಷಧಿ ಆಡಳಿತ ವಿಭಾಗವು ಈವರೆಗೆ 1,433 ಔಷಧ ಮಾದರಿಗಳನ್ನು ಪರಿಶೀಲಿಸಿದ್ದು, 1,336 ಮಾದರಿಗಳು ಗುಣಮಟ್ಟದಾದ್ದಾಗಿ ದೃಢಪಟ್ಟಿವೆ. ಜುಲೈ ತಿಂಗಳಲ್ಲಿ 44 ಲಕ್ಷ ರೂಪಾಯಿ ಮೌಲ್ಯದ ಔಷಧಿಗಳನ್ನು ಜಪ್ತಿ ಮಾಡಲಾಗಿದೆ. ಮಾದಕ ವಸ್ತುಗಳ ದುರ್ಬಳಕೆ ಸಂಬಂಧ 279 ಪರಿವೀಕ್ಷಣೆಗಳಲ್ಲಿ, 231 ಅಂಗಡಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದರು.
ಜುಲೈ ತಿಂಗಳಲ್ಲಿ ಸಂಗ್ರಹಿಸಿದ 17 ಆಹಾರ ಮಾದರಿಗಳಲ್ಲಿ ಉತ್ತಮ ಗುಣಮಟ್ಟ ದೃಢಪಟ್ಟಿದೆ. ರಸ್ತೆ ಬದಿ ವ್ಯಾಪಾರಿಗಳಲ್ಲಿ 406 ಘಟಕಗಳಿಗೆ ದಂಡ ವಿಧಿಸಲಾಗಿದೆ. 1240 ವ್ಯಾಪಾರಿಗಳಿಗೆ ಸ್ವಚ್ಛತೆ ಮತ್ತು ನೈರ್ಮಲ್ಯದ ಕುರಿತು ತರಬೇತಿ ನೀಡಲಾಗಿದೆ. 186 ಬಸ್ ನಿಲ್ದಾಣಗಳಲ್ಲಿ ಅಂಗಡಿಗಳ ಸ್ವಚ್ಛತೆಯ ಪರಿಶೀಲನೆ ನಡೆದಿದೆ. 606 ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ಆಹಾರದ ಗುಣಮಟ್ಟ ಪರಿಶೀಲಿಸಲಾಗಿದೆ. ಎಣ್ಣೆ, ಹಾಲು, ಮೊಟ್ಟೆ ಮಾರಾಟಗಾರರೊಂದಿಗೆ ಸಂವಹನ ನಡೆಸಿ, 1685 ಘಟಕಗಳಲ್ಲಿ 465 ವ್ಯಾಪಾರಿಗಳಿಗೆ ನೋಟಿಸ್ ನೀಡಲಾಗಿದೆ. KMFನ 480 ಆಹಾರ ತಯಾರಕರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಂಪೈರ್ ಹೋಟೆಲ್ ಮತ್ತು ಬಣ್ಣ ಬಳಕೆ ವಿವಾದಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಎಂಪೈರ್ ಹೋಟೆಲ್ನಲ್ಲಿ 6 ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕೆಂಪು ಬಣ್ಣ (ಸಂವೇದನಾಶೀಲ ‘ಸೆನ್ಸಿಸ್ ಎಲೋ’) ಬಳಸುವಂತಿಲ್ಲ ಎಂದು ಎಚ್ಚರಿಕೆ ನೀಡಲಾಗಿದೆ. ಗ್ರಾಹಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗಿದೆ. ಕೇವಲ ಬಣ್ಣದ ಆಕರ್ಷಣೆಗೆ ಬಲಿಯಾಗಬಾರದು. ಎಂಪೈರ್ ವಿರುದ್ಧ 6 ಕಡೆ ಪ್ರಕರಣ ದಾಖಲಾಗಿದ್ದು, 30 ದಿನಗಳ ಅವಧಿಯಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ ಎಂದರು.
ಹಾಲಿನ ಮಾದರಿಗಳ ವಿಶ್ಲೇಷಣಾ ವರದಿ ಬಗ್ಗೆ ಮಾತನಾಡಿದ ಅವರು, ಈವರೆಗೆ 175 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಸಲ್ಲಿಸಲಾಗಿದೆ. ಇದರ ಪೈಕಿ 73 ಮಾದರಿಗಳ ವಿಶ್ಲೇಷಣೆ ಪೂರ್ಣಗೊಂಡಿದ್ದು, 69 ಮಾದರಿಗಳು ಸುರಕ್ಷಿತ, 4 ಮಾದರಿಗಳು ಗುಣಮಟ್ಟಕ್ಕೆ ತಕ್ಕಂತೆ ಇಲ್ಲ ಎಂದು ವರದಿಯಾಗಿದೆ. ಉಳಿದ ಮಾದರಿಗಳ ವಿಶ್ಲೇಷಣಾ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು. ಆಗಸ್ಟ್ 2025ರ ಮಾಹೆಯಲ್ಲಿ ಹೆಚ್ಚಿನ ಹಾಲಿನ ಮಾದರಿಗಳ ಸಂಗ್ರಹಣೆ ಮತ್ತು ವಿಶ್ಲೇಷಣೆಗಾಗಿ ರಾಜ್ಯಮಟ್ಟದ ವಿಶೇಷ ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದೆ. ಆಹಾರದ ಸುರಕ್ಷತೆ ಮತ್ತು ಸಾರ್ವಜನಿಕ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ