
ಬೆಂಗಳೂರು(ಸೆ.14): ರಾಜ್ಯದ ಹಲವೆಡೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಧಾರಾಕಾರ ಮಳೆ ಮಂಗಳವಾರ ಕೊಂಚ ಬಿಡುವು ಕೊಟ್ಟಿತ್ತು. ಆದರೂ ಮಳೆ ಸಂಬಂಧಿ ಅನಾಹುತಗಳ ಸಾವಿನ ಸರಣಿ ಮುಂದುವರಿದಿದ್ದು, ಮಂಗಳವಾರ ನಾಲ್ವರು ಮೃತಪಟ್ಟಿದ್ದಾರೆ. ಇನ್ನು ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಮಲಪ್ರಭಾ, ಘಟಪ್ರಭಾ ನದಿಗಳ ವ್ಯಾಪ್ತಿಯಲ್ಲಿ ಪ್ರವಾಹದ ಆತಂಕ ತಗ್ಗಿದರೂ 17 ಸೇತುವೆಗಳು ಇನ್ನೂ ನೀರಿನಿಂದ ಮುಕ್ತವಾಗಿಲ್ಲ. ಉಡುಪಿ ಜಿಲ್ಲೆಯ ಕಾರ್ಕಳ, ಹೆಬ್ರಿ ತಾಲೂಕುಗಳಲ್ಲಿ ಮಳೆ, ಸುಂಟರಗಾಳಿಗೆ ಮರ, ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದು, ಕೆಲ ಮನೆಗಳಿಗೆ ಭಾಗಶಃ ಹಾನಿಯಾಗಿದೆ.
ನಾಲ್ವರು ಸಾವು:
ಬೆಳಗಾವಿಯಲ್ಲಿ ಮಳೆಗೆ ಬೃಹದಾಕಾರದ ಮರ ಬಿದ್ದು ದ್ವಿಚಕ್ರ ವಾಹನ ಸವಾರ ಸಿದ್ದನಹಳ್ಳಿ ಗ್ರಾಮದ ರಾಕೇಶ್ ಸುಲದಾಳ (26) ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಕೆಲಸಕ್ಕೆಂದು ಎಂದಿನಂತೆ ದ್ವಿಚಕ್ರ ವಾಹನದ ಮೇಲೆ ತೆರಳುತ್ತಿದ್ದಾಗ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ ಬಳಿ ಮರ ಬಿದ್ದಿದೆ. ಮತ್ತೊಂದೆಡೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಒಂಟಗೋಡಿಯಲ್ಲಿ ಘಟಪ್ರಭಾ ನದಿಯಲ್ಲಿ ವಿಜಯ ಪಾಟೀಲ (20) ಎಂಬ ಯುವಕ ಮುಳುಗಿ ಮೃತಪಟ್ಟಿದ್ದಾನೆ.
Karnataka Rains: ವರುಣನ ಆರ್ಭಟಕ್ಕೆ ನಲುಗಿದ ಅನ್ನದಾತರು
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಲ್ಲಿ ರಸ್ತೆ ದಾಟುವಾಗ ಮೋಟಾರ್ ಬೈಕ್ ಕೊಚ್ಚಿ ಹೋಗಿ ಇಬ್ಬರು ಮೃತಪಟ್ಟಿದ್ದಾರೆ. ವೇದಾವತಿ ನದಿ ನೀರಿನಿಂದ ಪರಶುರಾಮಪುರ - ಕೊರ್ಲಕುಂಟೆ ರಸ್ತೆ ನೀರಿನಲ್ಲಿ ಮುಳುಗಿದ್ದು, ಕೊರ್ಲಕುಂಟೆ ಗ್ರಾಮದ ಎಚ್.ರವಿಕುಮಾರ್(34), ಪಿ.ಓಬಳೇಶ್(35) ಮಂಜುನಾಥ(34) ಎಂಬುವವರ ಒಂದೇ ಬೈಕ್ನಲ್ಲಿ ಸೋಮವಾರ ತಡರಾತ್ರಿ ಹೊರಟಾಗ ಬೈಕ್ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಮಂಜುನಾಥ ಈಜಿ ದಡ ಸೇರಿದ್ದರೆ ಇನ್ನಿಬ್ಬರು ನೀರುಪಾಲಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ