
ಬೆಂಗಳೂರು (ಫೆ.21): ರಾಜ್ಯದಲ್ಲಿ (Karnataka) ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ರಾಗಿ ಬೆಳೆದಿರುವುದರಿಂದ ಬೆಂಬಲ ಬೆಲೆಯಲ್ಲಿ ರಾಗಿ ಖರೀದಿಸುವ ಪ್ರಮಾಣ ಹೆಚ್ಚಿಸಬೇಕು, ಜೊತೆಗೆ ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ (Prime Minitser Narendra Modi) ಅವರಿಗೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಆಗ್ರಹಿಸಿದ್ದಾರೆ. ಭಾನುವಾರ ಬರೆದಿರುವ ಪತ್ರದಲ್ಲಿ, ದಕ್ಷಿಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರಮುಖ ಬೆಳೆಯಾಗಿ ರಾಗಿಯನ್ನು ಬೆಳೆಯುತ್ತಾರೆ. ಸರ್ಕಾರ ಈ ವರ್ಷ ಜನವರಿ 1ರಿಂದ ರಾಗಿಯನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿಸಲು ನೋಂದಣಿ ಪ್ರಕ್ರಿಯೆ ಪ್ರಾರಂಭಿಸಿದೆ.
ಕೃಷಿ ಇಲಾಖೆಯ ಅಂದಾಜಿನ ಪ್ರಕಾರ ಈ ವರ್ಷ ಸುಮಾರು 19.35 ಲಕ್ಷ ಎಕರೆ ಪ್ರದೇಶದಲ್ಲಿ ರಾಗಿ ಬೆಳೆಯಲಾಗಿದೆ. ಎಕರೆಗೆ ಕನಿಷ್ಠ 1 ಟನ್ ರಾಗಿ ಎಂದರೂ 19.35 ಲಕ್ಷ ಟನ್ ಇಳುವರಿ ಬರುತ್ತದೆ. ಆದರೆ, ಕೇವಲ 2.10 ಲಕ್ಷ ಟನ್ ರಾಗಿ ಖರೀದಿಗೆ ಮಾತ್ರ ಕೇಂದ್ರ ರಾಜ್ಯಕ್ಕೆ ಸೂಚಿಸಿದೆ. ಜತೆಗೆ ಸಣ್ಣ ರೈತರಿಂದ ಮಾತ್ರ ಅದೂ ಸಹ ಕೇವಲ 20 ಕ್ವಿಂಟಾಲ್ ರಾಗಿ ಖರೀದಿಸಬೇಕು ಎಂದು ಆದೇಶಿಸಿದೆ. ಇದು ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜತೆಗೆ ಬೆಂಬಲ ಬೆಲೆಯನ್ನು ಕಳೆದ ವರ್ಷಕ್ಕೆ ಹೋಲಿಸಿದರೆ 82 ರು. ಮಾತ್ರ ಹೆಚ್ಚಿಸಲಾಗಿದೆ. 3,295 ರು. ಇದ್ದದ್ದು 3,377 ರು. ಮಾಡಲಾಗಿದೆ. ಆದರೆ 2019-20ರಲ್ಲಿ ಗಂಟೆಗೆ 750 ರು. ಇದ್ದ ಟ್ರ್ಯಾಕ್ಟರ್ ಉಳುಮೆ ಖರ್ಚಿ 1,250 ರು. ಆಗಿದೆ. ಕಟಾವಿನಿಂದ ಹಿಡಿದು ಪ್ರತಿ ಖರ್ಚು ಹೆಚ್ಚಾಗಿದೆ. ಮುಕ್ತ ಮಾರುಕಟ್ಟೆಯಲ್ಲಿ ಟನ್ ರಾಗಿಗೆ ಕೇವಲ 1,800 ರು.ಗಳಿಂದ 2,180 ರು. ಮಾತ್ರ ಬೆಲೆ ಇದೆ. ಹೀಗಾಗಿ ಕೂಡಲೇ ಹೆಚ್ಚುವರಿ ರಾಗಿ ಖರೀದಿಗೆ ಸೂಚಿಸಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ವಿಧಾನ ಪರಿಷತ್ನ ವಿರೋಧ ಪಕ್ಷದ ನೂತನ ನಾಯಕ ಬಿಕೆ ಹರಿಪ್ರಸಾದ್ ಹಾಡಿ ಹೊಗಳಿದ ಸಿದ್ದು!
ಮೋದಿ ಸರ್ಕಾರದಿಂದ ಕೋಮುವಾದ ಸೃಷ್ಟಿ, ಗುಡುಗಿದ ಸಿದ್ದರಾಮಯ್ಯ: ಗಾಂಧಿ ಕೊಂದ ಗೋಡ್ಸೆ ಸಂತತಿಯ ಬಿಜೆಪಿಯವರು ಜನರ ದಾರಿ ತಪ್ಪಿಸಿ ಹಿಂದುತ್ವದ ಅಮಲು ತುಂಬುತ್ತಿದ್ದಾರೆ. ಕೋಮುವಾದ ಸೃಷ್ಟಿಸುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ಅಪಾಯಕಾರಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಗರದ ಪುಟ್ಟಣ್ಣ ಚೆಟ್ಟಿಪುರಭವನದಲ್ಲಿ ಗುರುವಾರ ಆಯೋಜಿಸಿದ್ದ ರಾಜ್ಯ ವಿಧಾನ ಪರಿಷತ್ನ ನೂತನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಅಭಿನಂದನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಎಬಿವಿಪಿ, ಆರೆಸ್ಸೆಸ್, ಸಂಘ ಪರಿವಾರ ಮೊದಲೂ ಇದ್ದವು. ಈಗಲೂ ಇವೆ. ಆದರೆ, ಮೂಲಭೂತವಾದಿಗಳಿಂದಾಗಿ ಇಂದಿನ ರಾಜಕಾರಣದಲ್ಲಿ ಮೌಲ್ಯ ಕುಸಿಯುತ್ತಿದೆ. ಅದರಲ್ಲೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಸಂಪೂರ್ಣ ಕೋಮುವಾದ ಸೃಷ್ಟಿಸುತ್ತಿದ್ದಾರೆ. ಹಿಂದುತ್ವದ ಹೆಸರಲ್ಲಿ ಜನರ ನೈಜ ಸಮಸ್ಯೆಗಳನ್ನು ಬದಿಗೊತ್ತಿ ಜನರಿಗೆ ಬರೀ ಸುಳ್ಳುಗಳನ್ನು ಹೇಳಿ, ದಾರಿ ತಪ್ಪಿಸಿ ಹಿಂದುತ್ವದ ಅಮಲು ತುಂಬುತ್ತಿದ್ದಾರೆ. ಇದು ಸಮಾಜಕ್ಕೆ ಬಹಳ ಅಪಾಯಕಾರಿ ಎಂದರು.
ಹಿಜಾಬ್ ವಿಚಾರವನ್ನೇ ನೋಡಿ. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬನ್ನು ಹೊಸದಾಗಿ ಧರಿಸುತ್ತಿದ್ದಾರಾ? ಇಲ್ಲ. ನಾವು ಕೇಸರಿ ಶಾಲು ಹಾಕಿಕೊಳ್ಳುತ್ತಿದ್ವಾ? ಇಲ್ಲ. ಶಾಲಾ ಮಕ್ಕಳಿಗೆ ಕೇಸರಿ ಶಾಲು ಪೇಟ ಕೊಟ್ಟು ಕೋಮುಭಾವನೆ ಸೃಷ್ಟಿಸುತ್ತಿದ್ದಾರೆ. ಇದೆಲ್ಲವನ್ನೂ ಮಾಡುತ್ತಿರುವುದರ ಉದ್ದೇಶ ಬೇರೇನೂ ಇಲ್ಲ. ಬಿಜೆಪಿಯವರು ಕೇಂದ್ರ, ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಬಳಿಕ ದೇಶ, ರಾಜ್ಯವನ್ನು ದಿವಾಳಿ ಮಾಡುತ್ತಿದ್ದಾರೆ. .52 ಲಕ್ಷ ಕೋಟಿ ಇದ್ದ ಭಾರತದ ಸಾಲ ಕಳೆದ ಎಂಟು ವರ್ಷದಲ್ಲಿ .152 ಲಕ್ಷ ಕೋಟಿಗೆ ಏರಿದೆ. ಶೇ.60ರಷ್ಟುಸಣ್ಣ ಕೈಗಾರಿಕೆಗಳು ಮುಚ್ಚಿ ಹೋಗಿವೆ. ಶೇ.50ರಷ್ಟುಉದ್ಯೋಗ ಕಡಿತವಾಗಿದೆ. ಇದೆಲ್ಲವನ್ನೂ ಮರೆಮಾಚಲು ಹಿಂದುತ್ವದ ಹೆಸರಲ್ಲಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
Hijab Row: ಸಿಂಧೂರ, ಹಿಜಾಬ್ ಹಾಕ್ಕೊಂಡ್ರೆ ಏನ್ ತೊಂದರೆ.? ಮುತಾಲಿಕ್ಗೆ ಸಿದ್ದರಾಮಯ್ಯ ಪ್ರಶ್ನೆ
ಈಶ್ವರಪ್ಪ ಒಬ್ಬ ಮತಾಂಧ: ಸಚಿವ ಕೆ.ಎಸ್.ಈಶ್ವರಪ್ಪ ಒಬ್ಬ ಮತಾಂಧ. ರಾಷ್ಟ್ರಧ್ವಜಕ್ಕೆ ಅಗೌರವ ತೋರಿ ದೇಶ್ರೋಹದ ಕೆಲಸ ಮಾಡಿದ್ದಾನೆ ಎಂದು ಇದೇ ವೇಳೆ ಸಿದ್ದರಾಮಯ್ಯ ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಗಾಂಧಿ ಕೊಂದ ಗೋಡ್ಸೆ ಸಂತತಿಯವರು ಬಿಜೆಪಿಯಲ್ಲಿ ತರಬೇತಿಗೊಂಡ ಈಶ್ವರಪ್ಪ ಒಬ್ಬ ಮತಾಂಧ, ಶಿವಮೊಗ್ಗದಲ್ಲಿ ಕೇಸರಿ ಧ್ವಜ ಹಾರಿಸಿದ್ದನ್ನು ಸಮರ್ಥಿಸಿಕೊಂಡಿದ್ದಲ್ಲದೆ ಮುಂದೆ ಎಂದಾದರೂ ದೆಹಲಿಯ ಕೆಂಪುಕೋಟೆಯ ಮೇಲೂ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾನೆ. ಇದಕ್ಕಿಂತ ದೇಶದ್ರೋದ ಕೆಲಸ ಮತ್ತೊಂದಿಲ್ಲ. ಬಿಜೆಪಿಯವರಿಗೆ ಸಂವಿಧಾನ, ರಾಷ್ಟ್ರಧ್ವಜದ ಮೇಲೆ ಗೌರವ ಇಲ್ಲ. ಇಂತಹವರು ಸಚಿವರಾಗಿರಲು, ಅಧಿಕಾರದಲ್ಲಿರಲು ಅರ್ಹರಲ್ಲ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ