
ಉಡುಪಿ (ಜೂ.04): ದೇಶವನ್ನು ಆಂತರಿಕವಾಗಿ ಅಸ್ಥಿತರಗೊಳಿಸಲು ವಿದೇಶದಿಂದ ಹಣ ಹರಿದು ಬರುತ್ತಿದೆ. ದೆಹಲಿಯಲ್ಲಿ ಕುಸ್ತಿಪಟುಗಳ ಪ್ರತಿಭಟನೆಗೂ ವಿದೇಶದಿಂದ ಹಣಕಾಸಿನ ನೆರವು ಬಂದಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯಸಚಿವೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಅವರು ಶನಿವಾರ ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದರು. ನಮ್ಮ ದೇಶದಲ್ಲಿ ಸರ್ಕಾರದ ವಿರುದ್ಧದ ಪ್ರತಿಭಟನೆಗೆ ಅಂತಾರಾಷ್ಟ್ರೀಯ ಬೆಂಬಲ ಸಿಗುತ್ತಿದೆ. ಜಾಜ್ರ್ ಸೊರೊಸ್ ಅಂತಹವರು ಭಾರತವನ್ನು ಅಸ್ಥಿರ ಮಾಡಲು, ಪ್ರಜಾತಂತ್ರ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಲು ಇಲ್ಲಿ ನಡೆಯುವ ಪ್ರತಿಭಟನೆಗಳಿಗೆ ಹಣಸಹಾಯ ಮಾಡುತ್ತಿದ್ದಾರೆ.
ಅವರ ಜೊತೆ ನಮ್ಮ ದೇಶದವರು ಯಾರ್ಯಾರು ಇದ್ದಾರೆಂದು ಗೊತ್ತಿದೆ. ಅವರು ಮೋದಿಯವರು ಬಂದಾಗ ಸರ್ಟಿಫಿಕೇಟ್ ಎಸೆಯೋದು, ಪದ್ಮಶ್ರೀ ಎಸೆಯೋದು ಮಾಡಿದ್ದಾರೆ ಎಂದು ಎಡಪಂಥೀಯ ವಿಚಾರವಾದಿಗಳನ್ನು ಕುಟುಕಿದರು. ಕುಸ್ತಿಪಟುಗಳ ಆರೋಪದ ಬಗ್ಗೆ ತನಿಖೆ ಆಗಲಿ, ಕೇಂದ್ರ ಸರ್ಕಾರ ಯಾರನ್ನೂ ರಕ್ಷಣೆ ಮಾಡುತ್ತಿಲ್ಲ, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು, ಕ್ರೀಡಾ ಸಚಿವ ಅನುರಾಗ್ ಠಾಕೂರ್ ಈ ಬಗ್ಗೆ ತನಿಖೆ ಮಾಡಿಸುತ್ತಿದ್ದಾರೆ ಎಂದವರು ಪ್ರಶ್ನೆಗೆ ಉತ್ತರಿಸಿದರು. ಆಂಧ್ರದ ಸ್ಥಿತಿ ಬಾರದಿರಲಿ: ಹಲವು ಉಚಿತ ಯೋಜನೆಗಳನ್ನು ನೀಡಿದ ಆಂಧ್ರಪ್ರದೇಶ ಸರ್ಕಾರ ಈಗ ಮುಳುಗುವ ಸ್ಥಿತಿಗೆ ಬಂದಿದೆ, ಸಂಬಳ ಕೊಡಲು ಅವರ ಬಳಿ ದುಡ್ಡಿಲ್ಲ.
ಹೃದಯ ರೋಗಿಗಳ ಸಂಖ್ಯೆ ಹೆಚ್ಚಳ ಆತಂಕಕಾರಿ ಬೆಳವಣಿಗೆ: ಡಾ.ಸಿ.ಎನ್.ಮಂಜುನಾಥ್
ಕರ್ನಾಟಕಕ್ಕೆ ಈ ಸ್ಥಿತಿ ಬರಬಾರದು. ಕರ್ನಾಟಕದ ಪ್ರಬುದ್ಧರು ಅಲ್ಲಿ ಹೋಗಿ ಅಧ್ಯಯನ ಮಾಡಬೇಕು, ಉಚಿತ ಯೋಜನೆಗಳಿಗೆ ಬೇಕಾದ ಹಣಕಾಸನ್ನು ಎಲ್ಲಿಂದ ಒದಗಿಸುತ್ತಾರೆ ವರದಿ ಕೊಡಬೇಕು. ರಾಜ್ಯದಲ್ಲಿ ಉಚಿತ ಯೋಜನೆ ಈಗಷ್ಟೇ ಆರಂಭವಾಗಿದೆ. ಆದ್ದರಿಂದ ಈ ಬಗ್ಗೆ ನಾನು ಹೆಚ್ಚು ಮಾತನಾಡುವುದಿಲ್ಲ ಎಂದು ಶೋಭಾ ಕರಂದ್ಲಾಜೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಪ್ರತಿಕ್ರಿಯಿಸಿದರು. ಮುಂದಿನ ಲೋಕಸಭಾ ಚುನಾವಣೆಗೆ ಮೇಲೆ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಪ್ರಭಾವ ಬೀರುವುದಿಲ್ಲ. ನಮ್ಮ ಜನ ವಿದ್ಯಾವಂತರು, ಬುದ್ಧಿವಂತರು ದೇಶಪ್ರೇಮಿಗಳು. ಭಾರತಕ್ಕೆ ವಿಶ್ವ ಮಾನ್ಯತೆ ಸಿಗಲು ಪ್ರಧಾನಿ ಮೋದಿ ಕಾರಣ, ಆದ್ದರಿಂದ ಮೋದಿಯನ್ನು ಮತ್ತೊಮ್ಮೆ ಬೆಂಬಲಿಸುತ್ತಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದರು.
ಸಂಸತ್ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್.ವಿಶ್ವನಾಥ್ ಆರೋಪ
ಒಡಿಶಾ ರೈಲು ಅಪಘಾತ ಬಗ್ಗೆ ತನಿಖೆಯಾಗಬೇಕು: ಒಡಿಶಾದಲ್ಲಿ ಮೂರು ರೈಲುಗಳ ಅಪಘಾತಕ್ಕೆ ಸ್ಪಷ್ಟಕಾರಣ ತಿಳಿಯಬೇಕಾಗಿದೆ. ರೈಲುಗಳ ಅವಶೇಷ ತೆರವಾದ ಮೇಲೆ ಸ್ಪಷ್ಟಚಿತ್ರಣ ಸಿಗಲಿದೆ. ಅಪಘಾತಕ್ಕೆ ಕಾರಣ ಏನು ಎಂಬುದು ಬಯಲಾಗಬೇಕು. ತಾಂತ್ರಿಕ ದೋಷ ಕಾರಣವೋ? ಬೇರೆ ಏನಾದರೂ ಕಾರಣ ಇದೆಯೋ ತನಿಖೆಯಾಗಬೇಕು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗಾಗಲೇ ತನಿಖೆಯನ್ನು ಪ್ರಾರಂಭ ಮಾಡಿದೆ ಎಂದು ಕೇಂದ್ರ ಸಚಿವೆ ಶೋಭಾ ಹೇಳಿದರು. ಮೂರು ರೈಲುಗಳು ಡಿಕ್ಕಿಯಾಗಿದ್ದೇ ಬಹಳ ಆಶ್ಚರ್ಯ. ಗೂಡ್ಸ್ ಮತ್ತು ಪ್ಯಾಸೆಂಜರ್ ರೈಲಿಗೆ ಇನ್ನೊಂದು ರೈಲು ಡಿಕ್ಕಿಯಾಗಿದ್ದು ಹೇಗೆ? ಅಪಘಾತದ ಮಾಹಿತಿ ಮೊದಲೇ ಯಾಕೆ ಸಿಕ್ಕಿಲ್ಲ? ಇಲಾಖೆ ವಿಫಲವಾಗಿದ್ದು ಎಲ್ಲಿ ಎಂದು ತನಿಖೆಯಾಗಬೇಕು ಎಂದವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ