ಸಂಸಾರದಲ್ಲಿ ನೆಮ್ಮದಿಯಿರಲು ಸಂಸ್ಕಾರ ಬೇಕು: ಡಾ.ಡಿ.ವೀರೇಂದ್ರ ಹೆಗ್ಗಡೆ

By Kannadaprabha NewsFirst Published Jun 4, 2023, 2:20 AM IST
Highlights

ಪ್ರಕೃತಿಯ ಜತೆಗೆ, ಮಣ್ಣಿನ ಸತ್ವ, ಶಕ್ತಿಯಿಂದ ಗೃಹ ಸಂಗೀತ ಶಿಬಿರ ಹೆಚ್ಚು ಅಪ್ಯಾಯಮಾನ. ಮುಂದಿನ ಜನಾಂಗ ತಯಾರು ಮಾಡಲು, ವ್ಯಕ್ತಿತ್ವ ನಿರ್ಮಾಣಕ್ಕೆ, ಅಂತರಂಗದಲ್ಲಿ ಸಂಸ್ಕೃತಿ ಸಂಸ್ಕಾರ ಕೊಡುವ ಶಿಕ್ಷಣ ಅಗತ್ಯ. ಸಂಸಾರದಲ್ಲಿ ನೆಮ್ಮದಿಯಿರಲು ಸಂಸ್ಕಾರ ಬೇಕು. 

ಬೆಳ್ತಂಗಡಿ (ಜೂ.04): ಪ್ರಕೃತಿಯ ಜತೆಗೆ, ಮಣ್ಣಿನ ಸತ್ವ, ಶಕ್ತಿಯಿಂದ ಗೃಹ ಸಂಗೀತ ಶಿಬಿರ ಹೆಚ್ಚು ಅಪ್ಯಾಯಮಾನ. ಮುಂದಿನ ಜನಾಂಗ ತಯಾರು ಮಾಡಲು, ವ್ಯಕ್ತಿತ್ವ ನಿರ್ಮಾಣಕ್ಕೆ, ಅಂತರಂಗದಲ್ಲಿ ಸಂಸ್ಕೃತಿ ಸಂಸ್ಕಾರ ಕೊಡುವ ಶಿಕ್ಷಣ ಅಗತ್ಯ. ಸಂಸಾರದಲ್ಲಿ ನೆಮ್ಮದಿಯಿರಲು ಸಂಸ್ಕಾರ ಬೇಕು. ಭಾರತೀಯರನ್ನಾಗಿ ಮಾಡುವ ದೊಡ್ಡ ಕೆಲಸ ಇಂತಹ ಶಿಬಿರಗಳಿಂದ ಆಗುತ್ತಿದೆ. ಇದನ್ನು ಆನಂದಿಸುವ ವರ್ಗ ಕಡಿಮೆಯಾದರೂ ಎಲ್ಲ ಕಲಾವಿದರ ಸಮ್ಮಿಲನ, ಆಯೋಜಕರ ಪ್ರೀತಿಗೆ ಸರಿಸಮಾನ ಯಾವುದಿಲ್ಲ. ಉತ್ತಮ ವಾತಾವರಣದಲ್ಲಿ ಪ್ರತಿ ವರ್ಷ ಶಿಬಿರದ ಮೂಲಕ ಕಲಾವಿದರ ಸೃಷ್ಟಿಯಾಗಲಿ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ನುಡಿದರು.

ಅವರು ಧರ್ಮಸ್ಥಳ ಸಮೀಪದ ನಿಡ್ಲೆ ಕರುಂಬಿತ್ತಿಲು ಸಂಗೀತ ಶಿಬಿರದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಪ್ರತಿ ವರ್ಷ ವೀಣೆ ಶೇಷಣ್ಣ ಹೆಸರಿನಲ್ಲಿ ಸಂಗೀತ ಸಾಧಕರಿಗೆ ಪ್ರಶಸ್ತಿ ನೀಡುತ್ತಾ ಬರುತ್ತಿದೆ. ವಿದ್ವಾನ್‌ ವಿಠ್ಠಲ ರಾಮಮೂರ್ತಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿರುವುದು ಸಂತೋಷ ತಂದಿದೆ. ದೇಶ ವಿದೇಶಗಳಲ್ಲಿ ಅವರ ಸಾಧನೆ ಅನನ್ಯವಾದುದು. ಯುವ ಸಂಗೀತ ಆಸಕ್ತರಿಗೆ ಪ್ರತಿ ವರ್ಷ ಶಿಬಿರ ಆಯೋಜಿಸಿ ಸಂಗೀತಾಭ್ಯಾಸ ನಡೆಸುತ್ತಿರುವುದು ಶ್ಲಾಘನೀಯ ಎದು ಹೆಗ್ಗಡೆ ಅವರು ಅಭಿನಂದಿಸಿದರು.

ಸಂಸತ್‌ ಭವನ ಉದ್ಘಾಟನೆ ಮೋದಿ ಪಟ್ಟಾಭಿಷೇಕದಂತೆ ನಡೆದಿದೆ: ಎಚ್‌.ವಿಶ್ವನಾಥ್‌ ಆರೋಪ

ಬೆಳಗಾವಿಯ ನಿಡಸೋಸಿ ಸಿದ್ಧ ಸಂಸ್ಥಾನ ಮಠದ ಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ, ಮಕ್ಕಳಲ್ಲಿ ಬದಲಾವಣೆಯಾದರೆ ಮಾತ್ರ ಸ್ವಚ್ಛ ಭಾರತ ನಿರ್ಮಾಣವಾಗುವುದು. ಹಿರಿಯರ ಮಾರ್ಗದರ್ಶನ, ದೃಷ್ಟಿಕೋನ ಬದಲಾದರೆ ಭಾರತ ವಿಶ್ವಕ್ಕೆ ಮಾದರಿಯಾಗುವುದರಲ್ಲಿ ಸಂದೇಹವಿಲ್ಲ ಎಂದರು. ಸಂಗೀತ ವಿದ್ವಾನ್‌ ವಿ.ವಿ. ಸುಬ್ರಹಣ್ಯಮ್‌ ಮತ್ತು ವಿದ್ವಾನ್‌ ಉನ್ನಿಕೃಷ್ಣನ್‌ ಶುಭಾಶಂಸನೆ ಮಾಡಿದರು. ಡಾ. ಹೇಮಾವತಿ ಹೆಗ್ಗಡೆ, ವಿಠ್ಠಲ ರಾಮೂರ್ತಿಯವರ ಮಾತೃಶ್ರೀ ಕೃಷವೇಣಿಯಮ್ಮ ಉಪಸ್ಥಿತರಿದ್ದರು. ಶಿಬಿರದ ಸಂಯೋಜಕ ವಿಠ್ಠಲ ರಾಮಮೂರ್ತಿ ಸ್ವಾಗತಿಸಿ, ಅತಿಥಿಗಳನ್ನು ಗೌರವಿಸಿದರು. ವೀರೇಂದ್ರ ಹೆಗ್ಗಡೆ ದಂಪತಿಗೆ ಶಾಲು ಹೊದಿಸಿ, ತಂಬೂರಿಯನ್ನು ಸ್ಮರಣಿಕೆಯಾಗಿ ನೀಡಲಾಯಿತು. 

ಕೃಷಿ ಸಚಿವ ಚಲುವರಾಯಸ್ವಾಮಿ ಮುಂದಿದೆ ಹಲವು ಸವಾಲುಗಳು!

ಶಿವಮೊಗ್ಗದ ಸುಬ್ರಹ್ಮಣ್ಯ ಶಾಸ್ತ್ರೀ ಮತ್ತು ಮಂಜುಳಾ ಮೂರ್ತಿ ಅವರನ್ನು ಹೆಗ್ಗಡೆ ದಂಪತಿ ಸನ್ಮಾನಿಸಿ ಗೌರವಿಸಿದರು. ಐದು ದಿನಗಳ ಕಾಲ ಕರುಂಬಿತ್ತಿಲು ಮನೆಯಂಗಳದಲ್ಲಿ ನಡೆದ ಸಂಗೀತ ಶಿಬಿರದಲ್ಲಿ ದ.ಕ., ಉ.ಕ., ಶಿವಮೊಗ್ಗ, ಕೇರಳ, ಕಾಸರಗೋಡು, ತಮಿಳುನಾಡು, ಆಂಧ್ರಪ್ರದೇಶ ಹಾಗೂ ಅಮೆರಿಕದಿಂದ ಸುಮಾರು 300 ಶಿಬಿರಾರ್ಥಿಗಳು ಭಾಗವಹಿಸಿದ್ದರು. ಶಿಬಿರಾರ್ಥಿಗಳು ಸಮೂಹ ಗಾಯನದಲ್ಲಿ ಡಾ. ಹೇಮಾವತಿ ಹೆಗ್ಗಡೆಯವರು ರಚಿಸಿ, ರಾಗ ಸಂಯೋಜಿಸಿದ ಶ್ರೀ ಗಣನಾಥಮ್‌ ಭಜರೇ, ಕುಡುಮಪುರವಾಸಿನಿ ಕರುಣಾಳು ತಾಯೇ ಹಾಗೂ ಉಳ್ಳವರು ಶಿವಾಲಯ ಮಾಡುವರು ಮತ್ತು ಎರಡು ತಮಿಳು ಗೀತೆಗಳನ್ನು ಹಾಡಿದರು.

click me!