
ಗಂ.ದಯಾನಂದ ಕುದೂರು
ಇನ್ನು ಮುಂದೆ ಹಸುಗಳಲ್ಲಿ ಹುಟ್ಟುವ ಎಲ್ಲಾ ಕರುಗಳು ಹೆಣ್ಣು ಕರುಗಳೇ ಆಗಿರುತ್ತವೆ. ಗಂಡು ಕರುಗಳ ಜನನ ಕ್ಷೀಣಿಸುತ್ತದೆ. ಹೌದು, ಇದು ಪ್ರಕೃತಿಗೆ ವಿರೋಧ ಎನಿಸಿದರೂ ಮಾನವ ಪ್ರಯೋಗಕ್ಕೆ ದಕ್ಕಿದ ಯಶಸ್ಸೇ ಸರಿ. ಹೈನುಗಾರಿಕೆ ಮಾಡುವ ರೈತರ ಬದುಕು ಹಸನಾಗಲು ವಿಜ್ಞಾನ ಲೋಕದಲ್ಲಿ ಬಹುದಿನಗಳಿಂದ ಪ್ರಯೋಗ ಮಾಡಿ, ಹಸುಗಳಿಗೆ ಹೆಣ್ಣು ಕರು ಹುಟ್ಟುವಂತಹ ವೀರ್ಯಾಣುಗಳನ್ನು ಹಾಕಿ ಗರ್ಭಧರಿಸುವಂತೆ ಮಾಡಿದ್ದಾರೆ. ಇದರಿಂದಾಗಿ ಈ ಪ್ರಯೋಗ ಬಹುತೇಕ ಯಶಸ್ಸನ್ನು ಪಡೆದು ರೈತರ ಮೊಗದಲ್ಲಿ ಆತಂಕ ಮರೆಯಾಗಿ ಭರವಸೆಯ ನಗು ಮೂಡಿದಂತಾಗಿದೆ.
ಉತ್ತಮ ತಳಿಯ ಹೋರಿಗಳಿಂದ ವೀರ್ಯಯವನ್ನು ಸಂಗ್ರಹಿಸಿ ಅದನ್ನು ಎಲೆಕ್ಟ್ರೋ ಮ್ಯಾಗ್ನೆಟಿಕ್ ಪ್ರೀಕ್ವೆಸ್ಸಿ ಮೂಲಕ ಎಕ್ಸ್, ವೈ ಬೇರ್ಪಡಿಸಿ ಹಸುಗಳಿಗೆ ನೀಡಲಾಗುತ್ತದೆ. ಈ ರೀತಿ ಮಾಡುವುದರಿಂದ ಜನಿಸುವ ಕರುಗಳೆಲ್ಲವೂ ಹೆಣ್ಣು ಕರುಗಳೇ ಆಗಿರುತ್ತವೆ. ಶೇ.90 ರಷ್ಟು ಪರಿಣಾಮಕಾರಿಯಾಗಿ ಫಲಿತಾಂಶ ನೀಡುತ್ತದೆ. ಹಸುಗಳಿಗೆ ಮೊದಲ (ಪಡ್ಡೆ ಕರುಗಳು) ಬಾರಿ ಈ ರೀತಿ ವೀರ್ಯ ಕೊಟ್ಟಾಗ ಅದರ ಫಲಿತಾಂಶ ನೂರಕ್ಕೆ ನೂರರಷ್ಟು ಇರುತ್ತದೆ. ಹಸುಗಳು ಮೂರು ಅಥವಾ ಅದಕಿಂದ ಹೆಚ್ಚಿನ ಬಾರಿ ಕರುಗಳನ್ನು ಹಾಕುವಾಗ ಹಸುಗಳಿಗೆ ನೀಡಲ್ಪಡುವ ವೀರ್ಯದ ಫಲಿತಾಂಶ ಹೆಚ್ಚು ಕಮ್ಮಿ ಆಗುವ ಸಾಧ್ಯತೆಗಳಿದ್ದು ಅಂತಹ ಹಸುಗಳಲ್ಲಿ ಗಂಡು ಕರುಗಳು ಹಾಕುವ ಸಾಧ್ಯತೆಗಳಿರುತ್ತವೆ.
ಹೆಣ್ಣು ಕರುಗಳ ಲಿಂಗನಿರ್ಧಾರಿತ ವೀರ್ಯಾಣುಗಳಿಗೂ ಕೊರತೆ ಇತ್ತು. ಈ ಹಿಂದೆ ಕೆಎಂಎಫ್ ಮೂಲಕ ಇಂತಹ ವೀರ್ಯಾಣುಗಳನ್ನು ರೈತರ ಹಸುಗಳಿಗೆ ನೀಡಲಾಗುತ್ತಿತ್ತು. ಆಗ ಇಂತಿಷ್ಟೇ ಎಂದು ಚುಚ್ಚುಮದ್ದು ಪೂರೈಕೆ ಕಡಿಮೆಯಿದ್ದ ಕಾರಣ ಕೊರತೆ ಕಂಡು ಬರುತ್ತಿತ್ತು. ಆದರೆ, ಡಿ.ಕೆ.ಸುರೇಶ್ ಅವರು ಬಮೂಲ್ ಅಧ್ಯಕ್ಷರಾದ ನಂತರ ಕೆಎಂಎಫ್ ಜೊತೆಗೆ ಬಮೂಲ್ ಮೂಲಕವೇ ವಿತರಿಸುವಂತಾಯಿತು.
ಹೆಣ್ಣು ಕರುಗಳ ಲಿಂಗ ನಿರ್ಧಾರಿತ ವೀರ್ಯಾಣುಗಳನ್ನು ಯಾವ ರೈತ ಕೇಳುತ್ತಾರೋ ಅವರಿಗೆ ಸಕಾಲದಲ್ಲಿ ಒದಗಿಸುವಂತಾಗಬೇಕು. ಕೊರತೆಯಿದ್ದರೆ ಅದನ್ನು ಹೊರದೇಶಗಳಿಂದ ತರಿಸಿ ಕೊಡಲು ತಾಕೀತು ಮಾಡಿದ ನಂತರ ಇಂದು ಲಿಂಗನಿರ್ಧಾರಿತ ವೀರ್ಯಾಣಗಳು ಕೊರತೆ ಇಲ್ಲದಂತಾಯಿತು.
ಹೆಣ್ಣು ಕರುಗಳ ಲಿಂಗನಿರ್ಧಾರಿತ ವೀರ್ಯಾಣುವನ್ನು ಒಂದು ಹಸುವಿಗೆ ಹಾಕಿಸಲು 1 ಸಾವಿರ ರು. ಖರ್ಚು ತಗಲುತ್ತಿತ್ತು. ಇದರಿಂದ ರೈತರಿಗೆ ಇದು ದುಬಾರಿಯಾಗಿ ಅದನ್ನು ತಮ್ಮ ಹಸುಗಳಿಗೆ ಹಾಕಿಸಲು ಹಿಂದೇಟು ಹಾಕಿದರು. ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕೆಎಂಎಫ್, ಬಮೂಲ್ ಒಟ್ಟಿಗೆ ಸೇರಿ 900 ರು.ಗಳ ಸಬ್ಸಿಡಿ ನೀಡುತ್ತಿದೆ. ಇದರಿಂದಾಗಿ ಇಂತಹ ಗರ್ಭಧಾರಣೆ ಚುಚ್ಚುಮದ್ದು ಕೇವಲ 100 ರು.ಗಳಾಗಿವೆ. ಇದು ಯಾವ ರೈತರಿಗೂ ಹೊರೆಯಾಗದ ಕಾರಣ ರೈತರು ಕೂಡಾ ಉತ್ಸಾಹ ತೋರಿಸುತ್ತಿದ್ದಾರೆ.
ಕಳೆದ 2 ವರ್ಷಗಳಿಂದ ಮಾಗಡಿ ತಾಲೂಕಿನಲ್ಲಿ 1500 ಹಸುಗಳಿಗೆ ಹೆಣ್ಣು ಕರುಗಳ ವೀರ್ಯವನ್ನು ನೀಡಲಾಗಿತ್ತು. ಈಗ ಕುದೂರು, ತಿಪ್ಪಸಂದ್ರ ಮತ್ತು ಸೋಲೂರು ಹೋಬಳಿಯಲ್ಲಿಯೇ 3000 ಹಸುಗಳಿಗೆ ಹೆಣ್ಣು ಕರುಗಳ ಗರ್ಭಧಾರಣೆ ಮಾಡಲಾಗಿದೆ.
ರೈತರಿಗೆ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಗಬೇಕು ಎಂದು ಉತ್ತಮ ತಳಿಗಳನ್ನು ಸಾಕಬೇಕು. ಆದರೆ ಇದನ್ನು ಕೊಳ್ಳಲು ರೈತರಿಗೆ ದುಬಾರಿಯಾದ ಕಾರಣ ಅದರ ತಳಿಗಳನ್ನು ಈ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ದೇಸಿ ತಳಿಗಳನ್ನು ಉಳಿಸುವ ಸಲುವಾಗಿ ಭಾರತೀಯ ಆಗ್ರೋ ಫೆಡರೇಷನ್ ಕಡೆಯಿಂದ ತಳಿಗಳನ್ನು ಉನ್ನತೀಕರಣಗೊಳಿಸಲಾಗುತ್ತಿದೆ.
ಮನುಷ್ಯರಲ್ಲಿ ಬಾಡಿಗೆ ತಾಯಿಯಾಗಿ ತಮ್ಮ ಕೆಲಸ ಮಾಡಿ ಮಕ್ಕಳನ್ನು ಹೆತ್ತು ಕೊಡುವ ಪದ್ಧತಿಯಿದೆ. ಅದರಂತೆ ರಾಸುಗಳಲ್ಲೂ ಈ ಪದ್ಧತಿ ಇದೆ. 10-15 ಲೀ.ಹಾಲು ಕೊಡುವ ಹಸುಗಳ ಗರ್ಭದಲ್ಲಿ ಉನ್ನತ ತಳಿಗಳ ಭ್ರೂಣಗಳನ್ನು ಬೆಳೆಸುವ ವ್ಯವಸ್ಥೆ ಇದೆ.
50 ಲೀ.ಹಾಲು ಕೊಡುವ ಹಸುವಿನ ದೇಹದಲ್ಲಿ ಹಾರ್ಮೋನ್ಗಾಗಿ ಚುಚ್ಚುಮದ್ದು ನೀಡಿ ಅದು ಅದರಲ್ಲಿ ಎಂಟು ಹತ್ತು ಅಂಡಾಣುಗಳು ವೃದ್ಧಿಯಾಗುವಂತೆ ಮಾಡಿ ಅದಕ್ಕೆ ಉತ್ಕೃಷ್ಟ ತಳಿಯ ವೀರ್ಯವನ್ನು ಹಾಕಿ ಭ್ರೂಣವನ್ನು ವೃದ್ಧಿ ಮಾಡಿ ಅದನ್ನು ಕಡಿಮೆ ಹಾಲು ಕೊಡುವ ಹಸುಗಳ ಗರ್ಭಕ್ಕೆ ಭ್ರೂಣವನ್ನು ಇಟ್ಟು 9 ತಿಂಗಳ ಮೇಲೆ 9 ದಿನಗಳ ಕಾಲ ಬೆಳೆಸಿ ಉತ್ಕೃಷ್ಟ ತಳಿಗಳ ಹೆಣ್ಣು ಕರುಗಳನ್ನು ಜನಿಸುವಂತೆ ಮಾಡುತ್ತಾರೆ. ಈ ಪ್ರಯೋಗವನ್ನು ಹೆಸರಘಟ್ಟ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಾಡಿ ಯಶಸ್ವಿಯಾಗಿದ್ದಾರೆ.
ರೈತರ ಬದುಕು ಹಸನಾಗಬೇಕು. ಹಾಲಿನ ಉತ್ಪಾದನೆ ಹೆಚ್ಚಾಗಬೇಕು. ಅದಕ್ಕಾಗಿ ಉತ್ತಮ ತಳಿಗಳನ್ನು ಬೆಳೆಸಬೇಕು ಎಂದು ತೀರ್ಮಾನಿಸಿ, ಹೆಣ್ಣು ಲಿಂಗನಿರ್ಧಾರಿತ ವೀರ್ಯ ಕೊರತೆಯಾಗದಂತೆ ಬೆಂಗಳೂರು ಹಾಲು ಒಕ್ಕೂಟದಿಂದ ವಿತರಣೆ ಮಾಡಲಾಗುತ್ತಿದೆ. ಈ ಬಗ್ಗೆ ರೈತರಿಗೆ ಮನವರಿಕೆ ಮಾಡಲು ಹಾಲು ಉತ್ಪಾದಕರ ಸಹಕಾರ ಸಂಘದ ವ್ಯಾಪ್ತಿಯಲ್ಲಿ ತಿಳುವಳಿಕೆ ನೀಡಲಾಗುತ್ತಿದೆ. ತಜ್ಞರಿಂದ ಕ್ಯಾಂಪ್ಗಳನ್ನು ಮಾಡಿ ಅಥವಾ ರೈತರ ಮನೆಗಳಿಗೆ ತೆರಳಿ ಗರ್ಭಧಾರಣೆಯ ಚುಚ್ಚುಮದ್ದನ್ನು ಹಸುಗಳಿಗೆ ನೀಡಲು ಸೂಚಿಸಿದ್ದೇನೆ ಎಂದು ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ಡಿಕೆ ಸುರೇಶ್ ಹೇಳುತ್ತಾರೆ.
ಇದನ್ನೂ ಓದಿ: ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ತಪ್ಪಿದ ಮಹಾದುರಂತ; ಆತಂಕದಿಂದ ಕಣ್ಣೀರಿಟ್ಟ ಪ್ರಯಾಣಿಕರು
ಕೇವಲ 100 ರುಪಾಯಿಗೆ ರಾಸುಗಳಿಗೆ ಹೆಣ್ಣು ಕರು ಹಾಕುವ ವೀರ್ಯವನ್ನು ತಲುಪಿಸಲಾಗುತ್ತಿದೆ. ಪ್ರತಿ ಹಳ್ಳಿಗಳಲ್ಲಿ ಇದರ ಕುರಿತಾಗಿ ರೈತರಿಗೆ ತಿಳುವಳಿಕೆ ನೀಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಸೋಲೂರು ಶೀಥಲ ಕೇಂದ್ರದ ಮುಖ್ಯಸ್ಥ ಡಾ.ನವೀನ್ ಹೇಳಿದ್ದಾರೆ.
ಇದನ್ನೂ ಓದಿ: Hubballi KMCRI : ರಾಜ್ಯದ ಮೊದಲ ಜೀವಾಮೃತ ಬ್ಯಾಂಕ್ಗೆ 7147 ಮಾತೆಯರ ಎದೆಹಾಲು ದಾನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ