
ಬೆಂಗಳೂರು(ಆ.01): ಕೊಡಗು, ಕರಾವಳಿ, ಮಲೆನಾಡು ಸೇರಿ ರಾಜ್ಯದಲ್ಲಿ ಮುಂಗಾರು ಮಳೆಯ ಆರ್ಭಟ ತುಸು ಕಡಿಮೆಯಾಗಿದೆ. ಆದರೆ, ಕಳೆದೆರಡು ದಿನಗಳಿಂದ ಸುರಿದ ಭಾರೀ ಮಳೆಗೆ ನದಿಗಳಲ್ಲಿ ಪ್ರವಾಹ ಮುಂದುವರಿದಿದ್ದು, ಮುಂಜಾಗ್ರತಾ ಕ್ರಮವಾಗಿ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದ ನೀರು ನದಿಗಳಿಗೆ ಬಿಡಲಾಗುತ್ತಿದೆ. ಇದರಿಂದಾಗಿ ನದಿ ತೀರದ ಪ್ರದೇಶ ಜಲಾವೃತಗೊಂಡಿವೆ.
ಈ ಮಧ್ಯೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಉಂಟೂರು ಗ್ರಾಮದಲ್ಲಿ ಬುಧವಾರ ಕಾಲು ಜಾರಿ ಹಳ್ಳಕ್ಕೆ ಬಿದ್ದು ಕೃಷ್ಣಮೂರ್ತಿ ನಾಯ್ಕ (55) ಎಂಬುವರು ಮೃತಪಟ್ಟಿದ್ದಾರೆ. ಇದೇ ವೇಳೆ, ಮುಂಜಾ ಗ್ರತಾ ಕ್ರಮವಾಗಿ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಗುರುವಾರ ರಜೆ ಘೋಷಿಸಲಾಗಿದೆ.
ಬೆಂಗ್ಳೂರಲ್ಲಿ 1 ಗಂಟೆ ಧಾರಾಕಾರ ಮಳೆಗೆ ನಗರದ ರಸ್ತೆಗಳು ಜಲಾವೃತ..!
ನದಿಗಳಲ್ಲಿ ಪ್ರವಾಹ:
ಕೇರಳದ ವಯನಾಡಿನಲ್ಲಿ ಸುರಿದ ಭಾರೀ ಮಳೆಗೆ ಕಪಿಲಾ ನದಿ ಉಕ್ಕಿ ಹರಿಯುತ್ತಿದ್ದು, ಎಚ್.ಡಿ.ಕೋಟೆ, ನಂಜನಗೂಡು ಸುತ್ತಮುತ್ತ ಅಪಾಯದ ಪರಿಸ್ಥಿತಿ ತಲೆದೂರಿದೆ. ಮೈಸೂರು-ಊಟಿ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಬಸವೇಶ್ವರ, ಕಾಶಿ ವಿಶ್ವನಾಥ ಸ್ವಾಮಿ ಸೇರಿ ತೀರದ ಹಲವು ದೇವಾಲಯಗಳು ಜಲಾವೃತಗೊಂಡಿವೆ. ನಂಜನಗೂಡಿನ ಐತಿಹಾಸಿಕ 16 ಕಾಲು ಮಂಟಪ ಭಾಗಶಃ ಮುಳುಗಡೆಯಾಗಿದೆ. ತಲಕಾಡು ಮತ್ತು ಸುತ್ತಮುತ್ತಲ ಪ್ರದೇಶ ನೀರಿನಿಂದ ಆವೃತವಾಗಿದೆ.
ಕರ್ನಾಟಕದ 29 ತಾಲೂಕುಗಳಲ್ಲಿ ಭೂಕುಸಿತದ ಭೀತಿ..!
ಕೆಆರ್ಎಸ್ನಿಂದ 1.75 ಲಕ್ಷ ಕ್ಯುಸೆಕ್ ನೀರನ್ನು ಹೊರ ಬಿಡಲಾಗುತ್ತಿದ್ದು, ನದಿಪಾ ತ್ರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ. ಕೆಆರ್ಎಸ್ ಬೃಂದಾವನ, ಬಲಮುರಿ, ಎಡ ಮುರಿ, ರಂಗನತಿಟ್ಟು, ಸಂಗಮ ಸೇರಿ ನದಿ ತೀರದ ತಾಣಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿದೆ.
ತುಂಗಾ ಮತ್ತು ಭದ್ರಾ ಜಲಾಶಯಗಳಿಂದ ನೀರು ಬಿಟ್ಟ ಕಾರಣ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣ ಸೇರಿ ನದಿಪಾತ್ರ ದಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಟಿಬಿ ಡ್ಯಾಂ ನಿಂದ 1.41 ಲಕ್ಷ ಕ್ಯುಸೆಕ್ ನೀರು ಬಿಡಲಾ ಗುತ್ತಿ ದ್ದು, ಹಂಪಿಯ ಸ್ಮಾರಕ ಮತ್ತೆ ಮುಳುಗಡೆಯಾಗಿವೆ. ಮಲೆನಾಡಿನ ಅತಿ ದೊಡ್ಡ ಜಲಾಶಯ ಲಿಂಗನಮಕ್ಕಿ ಭರ್ತಿಗೆ ಐದೂವರೆ ಅಡಿಯಷ್ಟು ಮಾತ್ರ ಬಾಕಿ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ