
ಬೆಂಗಳೂರು(ಡಿ.26): ನಿಶ್ಚಿತಾರ್ಥಕ್ಕೆ ತೆರಳಲು ಬುಕ್ ಮಾಡಿಕೊಂಡಿದ್ದ ಮಿನಿ ಬಸ್ ಕಳುಹಿಸದೇ ಕೊನೆ ಕ್ಷಣದಲ್ಲಿ ಗ್ರಾಹಕನಿಗೆ ಕೈಕೊಟ್ಟ ಖಾಸಗಿ ಟ್ರಾವೆಲ್ಸ್ ಏಜೆನ್ಸಿಗೆ ಬಡ್ಡಿ ಸಮೇತ ಮುಂಗಡದ ಹಣ ಮರಳಿಸುವ ಜೊತೆಗೆ ಮಾನಸಿಕ ಹಿಂಸೆಗೆ ಪರಿಹಾರ ನೀಡುವಂತೆ ಬೆಂಗಳೂರು ನಗರ ಗ್ರಾಹಕರ ವೇದಿಕೆ ಆದೇಶ ನೀಡಿದೆ.
ನಗರದ ವಿಕ್ರಮ್ ಎಂಬುವರು, 2023ರ ಏಪ್ರಿಲ್.30ರಂದು ರಾಣೆಬೆನ್ನೂರಿನಲ್ಲಿ ನಿಗದಿಯಾಗಿದ್ದ ತಮ್ಮ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ತೆರಳಲು ‘ಸಿಲಿಕಾನ್ ಸಿಟಿ ಟ್ರಾವೆಲ್ಸ್’ ಏಜೆನ್ಸಿಯಲ್ಲಿ ಮಿನಿ ಬುಸ್ ಬುಕ್ ಮಾಡಿ 5 ಸಾವಿರ ರು. ಮುಂಗಡ ಪಾವತಿಸಿದ್ದರು. ಬೆಳಗ್ಗೆ 11.30ಕ್ಕೆ ಕಾರ್ಯಕ್ರಮ ನಿಗದಿಯಾಗಿದ್ದರಿಂದ ನಸುಕಿನ 5 ಗಂಟೆಗೆ ಪಿಕಪ್ ಸ್ಥಳಕ್ಕೆ ಬಸ್ ಕಳುಹಿಸುವುದಾಗಿ ಏಜೆನ್ಸಿಯ ಪ್ರೊಪ್ರೈಟರ್ ಕಿರಣ್ ಭರವಸೆ ನೀಡಿದ್ದರು.
ಕ್ಯಾರಿ ಬ್ಯಾಗಿಗೆ 20ರೂ. ಶುಲ್ಕ ವಿಧಿಸಿದ ESBEDA ಮಳಿಗೆಗೆ 35 ಸಾವಿರ ರೂ. ದಂಡ ವಿಧಿಸಿದ ಗ್ರಾಹಕರ ಆಯೋಗ!
ಏ.30ರಂದು ಬೆಳಗ್ಗೆ ಕೊನೆ ಕ್ಷಣದಲ್ಲಿ, ‘ಬಸ್ ಬರುವುದಿಲ್ಲ, ನೀವೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಿ’ ಎಂದು ಕಿರಣ್ ತಿಳಿಸಿದ್ದಾರೆ. ಅನಿವಾರ್ಯವಾಗಿ ವಿಕ್ರಮ್ ಅವರು 44 ಸಾವಿರ ರು. ಖರ್ಚು ಮಾಡಿ ಪರ್ಯಾಯ ವಾಹನ ವ್ಯವಸ್ಥೆ ಮಾಡಿಕೊಂಡು ಕಾರ್ಯಕ್ರಮಕ್ಕೆ ತೆರಳಿದ್ದರು. ನಂತರ ಮುಂಗಡವಾಗಿ ಪಡೆದ ಹಣವನ್ನು ಕೇಳಿದರೂ ಏಜೆನ್ಸಿಯವರು ಮರಳಿಸಿರಲಿಲ್ಲ. ಹೀಗಾಗಿ, ಟ್ರಾವೆಲ್ಸ್ ಏಜೆನ್ಸಿಯಿಂದ ಎರಡೂವರೆ ಲಕ್ಷ ರು. ಪರಿಹಾರ ಕೋರಿ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ವೇದಿಕೆ, ಸೇವೆಯಲ್ಲಿನ ಲೋಪಕ್ಕಾಗಿ ಗ್ರಾಹಕರ ಹಕ್ಕುಗಳ ಕಾಯ್ದೆ 2019ರ ಅನ್ವಯ ಟ್ರಾವೆಲ್ಸ್ ಏಜೆನ್ಸಿಯು ಮುಂಗಡವಾಗಿ 5,000 ರು. ಕಟ್ಟಿಸಿಕೊಂಡಿದ್ದ ದಿನದಿಂದ ಪ್ರಕರಣ ವಿಲೇವಾರಿಯಾದ ದಿನದವರೆಗೆ ವಾರ್ಷಿಕ ಶೇ.6ರ ಬಡ್ಡಿದರದಲ್ಲಿ ಹಣ ಮರಳಿಸಬೇಕು. ಗ್ರಾಹಕರಿಗೆ ಮಾನಸಿಕ ಕಿರುಕುಳ ನೀಡಿರುವುದು ಮತ್ತು ವ್ಯಾಜ್ಯದ ಶುಲ್ಕವಾಗಿ 4 ಸಾವಿರ ದಂಡವನ್ನು ಪಾವತಿಸುವಂತೆ ಆದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ