ಫೆ.6 : ಸಾರ್ವಜನಿಕರೇ ರಸ್ತೆಗಿಳಿಯುವ ಮುನ್ನ ಎಚ್ಚರ

By Kannadaprabha NewsFirst Published Feb 5, 2021, 7:16 AM IST
Highlights

ಫೆ.6ರಂದು ಶನಿವಾರ ಮಧ್ಯಾಹ್ನ 12ರಿಂದ 3ರವರೆಗೆ ರಾಜ್ಯಾದ್ಯಂತ ರಸ್ತೆಗೆ ಇಳಿಯುವ ಮುನ್ನ ಸಾರ್ವಜನಿಕರೇ ಎಚ್ಚರ..! 

ಬೆಂಗಳೂರು (ಫೆ.05):  ಕೃಷಿ ಕಾಯ್ದೆಗಳು ವಿರುದ್ಧ ಪ್ರತಿಭಟಿಸುತ್ತಿರುವ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ವಿರುದ್ಧ ಫೆ.6ರಂದು ಶನಿವಾರ ಮಧ್ಯಾಹ್ನ 12ರಿಂದ 3ರವರೆಗೆ ರಾಜ್ಯಾದ್ಯಂತ ‘ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ರಸ್ತೆ ತಡೆ ಚಳವಳಿ’ ಹಮ್ಮಿಕೊಂಡಿದ್ದೇವೆ ಎಂದು ‘ಸಂಯುಕ್ತ ಹೋರಾಟ-ಕರ್ನಾಟಕ’ ಸಂಘಟನೆ ರೈತ ಮುಖಂಡರು ತಿಳಿಸಿದ್ದಾರೆ.

ಕೃಷಿ ಕಾಯ್ದೆಗಳ ರದ್ದು ಹಾಗೂ ಡಾ.ಸ್ವಾಮಿನಾಥನ್‌ ವರದಿಯಡಿ ಕನಿಷ್ಠ ಬೆಂಬಲ ಬೆಲೆ ನೀಡಲು ಆಗ್ರಹಿಸಿ ದೆಹಲಿಯಲ್ಲಿ ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಲಕ್ಷಾಂತರ ರೈತರ ಮೇಲೆ ಕೇಂದ್ರ ಸರ್ಕಾರ ದಬ್ಬಾಳಿಕೆ ನಡೆಸುತ್ತಿದೆ. ರೈತರ ಜತೆ ಕೆಲವು ಬಾರಿ ನಡೆಸಿದ ಮಾತುಕತೆ ವಿಫಲವಾಗಿದ್ದರಿಂದ ಕೇಂದ್ರ ಸರ್ಕಾರ ಹತಾಶಗೊಂಡಿದೆ. ಹೀಗಾಗಿ ದೆಹಲಿ ಪ್ರತಿಭಟನಾ ಸ್ಥಳದಲ್ಲಿ ವಿದ್ಯುತ್‌ ಸಂಪರ್ಕ, ಇಂಟರ್‌ನೆಟ್‌ ಸೇವೆ ಸ್ಥಗಿತಗೊಳಿಸಿದೆ. ರಸ್ತೆಗಳ ಮೇಲೆ ಮುಳ್ಳು ತಂತಿ, ಸಿಮೆಂಟ್‌ ತಡೆಗೋಡೆ ನಿರ್ಮಿಸಿ ಹೋರಾಟ ಹತ್ತಿಕ್ಕುತ್ತಿದ್ದು, ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ.

ಫೆ.6ಕ್ಕೆ ಭಾರತ್ ಬಂದ್? ಏನಿದು ರೈತರು ಘೋಷಿಸಿದ ಚಕ್ಕಾ ಜಾಮ್ ಪ್ರತಿಭಟನೆ? ...

ಅಲ್ಲದೇ 2021ರ ಕೇಂದ್ರ ಸರ್ಕಾರದ ಬಜೆಟ್‌ ಕಾರ್ಪೋರೆಟ್‌ ಕಂಪನಿಗಳ ಪರ ಇದ್ದು, ಅದರಲ್ಲಿ ಕೃಷಿ, ರೈತರನ್ನು ಬಲಪಡಿಸುವ ಅಂಶಗಳಿಲ್ಲ ಎಂದು ಆರೋಪಿಸಿದ್ದಾರೆ. ಕೇಂದ್ರದ ಈ ಎಲ್ಲ ನಡೆಗಳ ವಿರುದ್ಧ ಈ ರಸ್ತೆ ತಡೆ ಚಳವಳಿ ಹಮ್ಮಿಕೊಂಡಿದ್ದೇವೆ ಎಂದು ಸಂಘಟನೆ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

click me!