
ಉಡುಪಿ, (ಫೆ.04): ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು ಸುಭದ್ರಾ ಎಂದು ಹೆಸರಿಸಲ್ಪಟ್ಟಿದ್ದ ಅಧ್ಯಾತ್ಮದ ಪಥದಲ್ಲಿ ಉನ್ನತ ಸಾಧನೆಗೈದಿದ್ದ ತಪೋವನಿ ಮಾತಾಜಿ ಯಾನೆ ಸುಭದ್ರಾ ಮಾತಾಜಿ ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ವಿಧಿವಶರಾದರು.
ಮೂಲತಃ ಉಡುಪಿಯ ಪಂದುಬೆಟ್ಟು ಗ್ರಾಮದವರಾಗಿದ್ದು, ಅವರಿಗೆ ಸುಮಾರು 89 ವರ್ಷ ವಯಸ್ಸಾಗಿತ್ತು . ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಂದ ಮಂತ್ರೋಪದೇಶ ಪಡೆದು, ಸುಭದ್ರಾ ಎಂದು ಹೆಸರಿನೊಂದಿಗೆ ಹಿಮಾಲಯದಲ್ಲಿ ಉನ್ನತ ಆಧ್ಯಾತ್ಮ ಸಾಧನೆಗೈದಿದ್ದ ತಪೋವನಿ ಮಾತಾಜಿ ಯಾನೆ ಸುಭದ್ರಾ ಮಾತಾಜಿ (ಮೂಲಹೆಸರು ವಾರಿಜಾಕ್ಷಿ) ಗುರುವಾರ ಹರಿದ್ವಾರದ ರಾಮಕೃಷ್ಣ ಆಶ್ರಮದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ .
ಬಾಲ್ಯದಲ್ಲೇ ಅಧ್ಯಾತ್ಮದ ಸೆಳೆತಕ್ಕೊಳಗಾಗಿ, ಸುಮಾರು 50 ವರ್ಷಗಳ ಹಿಂದೆ ಬಹಳ ಕಷ್ಟಪಟ್ಟು ಉತ್ತರದ ಹಿಮಾಲಯ ಸೇರಿ, ಗಂಗೋತ್ರಿಯಿಂದಲೂ ಎತ್ತರದ ತಪೋವನದಲ್ಲಿ, ಪ್ರತಿಕೂಲ ವಾತಾವರಣದಲ್ಲೂ ನಿರಂತರ 9 ಒಂಭತ್ತು ವರ್ಷಗಳ ಕಾಲ ತಪಸ್ಸಾಚರಿಸಿದ್ದರು.
ಇಂತಹ ಏಕೈಕ ಸಾಧನೆ ಮಾಡಿದ ಮಹಿಳೆ, ಅವರು ತಪೋವನೀ ಮಾ ಎಂದೇ ಪ್ರಸಿದ್ಧರಾಗಿದ್ದರು. ಆ ಬಳಿಕ ಹಿಮಾಲಯದ ಪ್ರದೇಶದಲ್ಲೇ ಆಶ್ರಮವೊಂದನ್ನು ತೆರೆದು ಸಾಧುಗಳಿಗೆ ಯಾತ್ರಿಗಳಿಗೆ ಊಟೋಪಚಾರ, ಆರೋಗ್ಯ ಸೇವೆಗಳನ್ನು ನಡೆಸುತ್ತಿದ್ದರು .
ತೀವ್ರ ಅನಾರೋಗ್ಯಕ್ಕೊಳಗಾಗಿ, ಹರಿದ್ವಾರದ ಆಚಾರ್ಯ ಬಾಲಕೃಷ್ಣರ ರಾಮಕೃಷ್ಣ ಆಶ್ರಮ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು . ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಅವರ ಆಧ್ಯಾತ್ಮ ಸಾಧನೆಯ ಬಗ್ಗೆ ಹಿಂದಿಯಲ್ಲಿ ಪುಸ್ತಕ ಪ್ರಕಟವಾಗಿದ್ದು, ಅದನ್ನು ಉಡುಪಿಯ ಪ್ರೊ.ಭಾಸ್ಕರ ಮಯ್ಯ ಅವರು ಕನ್ನಡಕ್ಕೆ ಭಾಷಾಂತರ ಮಾಡಿದ್ದು, ಇತ್ತೀಗಷ್ಟೇ ಆಸ್ಪತ್ರೆಯಲ್ಲಿಯೇ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತಾಜಿಜಿ ಸಮ್ಮುಖದಲ್ಲೇ ಬಿಡುಗಡೆ ಮಾಡಿದ್ದರು.
ಮಾತಾಜಿ ನಿಧನಕ್ಕೆ ಸಂತಾಪ
ತಫೋವನೀ ಮಾ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಕೇಂದ್ರದ ಮಾಜಿ ಮಂತ್ರಿ ಉಮಾಭಾರತಿ, ಪ್ರೊ ಭಾಸ್ಕರ ಮಯ್ಯ, ಪೇಜಾವರ ಮಠದ ದಿವಾನ ರಘುರಾಮಾಚಾರ್ಯ, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶಾಮಲಾ ಕುಂದರ್, ವಾಸುದೇವ ಭಟ್ ಪೆರಂಪಳ್ಳಿ ಶೋಕ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ