ಹಂಪಿ ಉತ್ಸವದ ಸಮಾರೋಪದಲ್ಲಿ ಆನಂದ ಸಿಂಗ್‌ ಭಾಗಿ: ಭಾರೀ ಚರ್ಚೆಗೆ ಗ್ರಾಸ

By Kannadaprabha NewsFirst Published Feb 9, 2024, 12:56 PM IST
Highlights

ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಆನಂದ ಸಿಂಗ್‌ ಭಾಗಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಎಚ್‌.ಆರ್‌. ಗವಿಯಪ್ಪನವರು ವೇದಿಕೆ ಏರದೇ ತಮ್ಮ ಹೊಸಪೇಟೆ ನಿವಾಸಕ್ಕೆ ತೆರಳಿರುವುದು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನುಂಟು ಮಾಡಿದೆ. 
 

ಹೊಸಪೇಟೆ (ಫೆ.09): ಹಂಪಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಆನಂದ ಸಿಂಗ್‌ ಭಾಗಿಯಾದ ಹಿನ್ನೆಲೆಯಲ್ಲಿ ಸ್ಥಳೀಯ ಶಾಸಕ ಎಚ್‌.ಆರ್‌. ಗವಿಯಪ್ಪನವರು ವೇದಿಕೆ ಏರದೇ ತಮ್ಮ ಹೊಸಪೇಟೆ ನಿವಾಸಕ್ಕೆ ತೆರಳಿರುವುದು ಈಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಯನ್ನುಂಟು ಮಾಡಿದೆ. ಹಂಪಿ ಉತ್ಸವ ರಾಜಕೀಯ ವೇದಿಕೆಯಾಗಿ ಮಾರ್ಪಟ್ಟಿತ್ತೇ ಎಂಬ ಅನುಮಾನವೂ ದಟ್ಟೈಸಿದೆ. ಈ ಹಿಂದೆ ಮಾಜಿ ಉಪಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್‌ ಅವರು ಮಾಜಿ ಸಚಿವ ಎಂ.ವೈ. ಘೋರ್ಪಡೆಯವರನ್ನು ಖುದ್ದು ತೆರಳಿ ಆಹ್ವಾನ ನೀಡುತ್ತಿದ್ದರು.

ಹಂಪಿ ಉತ್ಸವ ರಾಜಕೀಯ ಕಾರ್ಯಕ್ರಮವಲ್ಲ, ಇದೊಂದು ಈ ನೆಲದ ಗತವೈಭವ ಸಾರುವ ಉತ್ಸವವಾಗಿದೆ. ಹಾಗಾಗಿ ಇದರಲ್ಲಿ ರಾಜಕೀಯ ಬೆರೆಸಬಾರದು ಎಂದು ಎಂ.ಪಿ. ಪ್ರಕಾಶ ಅವರು ಹೇಳುತ್ತಿದ್ದರು. ಹಂಪಿ ಉತ್ಸವದ ಪೂರ್ವಭಾವಿ ಸಭೆಯಲ್ಲೂ ಸ್ವತಃ ಶಾಸಕ ಎಚ್.ಆರ್‌. ಗವಿಯಪ್ಪನವರು ಮಾಜಿ ಸಚಿವ ಆನಂದ ಸಿಂಗ್ ಅವರನ್ನು ನಾನೇ ಖುದ್ದು ತೆರಳಿ ಆಹ್ವಾನ ನೀಡುವೆ. ಅವರನ್ನು ಕೂಡ ಉತ್ಸವಕ್ಕೆ ಆಹ್ವಾನಿಸುವೆ ಎಂದು ಹೇಳಿದ್ದರು.

ನಟ ವಿ. ರವಿಚಂದ್ರನ್‌ ಹಾಗೂ ಸ್ವತಃ ಜಮೀರ್‌ ಅಹಮದ್ ಖಾನ್‌ ಅವರೇ ಆನಂದ ಸಿಂಗ್‌ ಅವರು ಆಗಮಿಸಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಆದರೆ, ಗವಿಯಪ್ಪನವರು ವೇದಿಕೆಗೆ ಆಗಮಿಸದೇ ತಮ್ಮ ನಿವಾಸಕ್ಕೆ ತೆರಳಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಕನ್ನಡಪ್ರಭ ಶಾಸಕ ಎಚ್.ಆರ್‌. ಗವಿಯಪ್ಪ ಅವರನ್ನು ಸಂಪರ್ಕಿಸಿದಾಗ, ಈ ಬಗ್ಗೆ ನಾನೇನು ಮಾತನಾಡಲ್ಲ ಎಂದಷ್ಟೇ ಪ್ರತಿಕ್ರಿಯಿಸಿದರು.

ರಾಜ್ಯವನ್ನು ಲೂಟಿ ಮಾಡಲು ಹೊರಟ ಸಿದ್ದರಾಮಯ್ಯ: ಅನಂತಕುಮಾರ ಹೆಗಡೆ ಆರೋಪ

ವಿಷಾದ: ಹಂಪಿ ಉತ್ಸವದಲ್ಲಿ ರಾಜಕೀಯ ಬೆರೆಸಬಾರದು. ನಾನು ಕೂಡ ಈ ಹಿಂದೆ ಉತ್ಸವ ಮಾಡಿರುವೆ. ಹಂಪಿ ಉತ್ಸವದ ಬಗ್ಗೆ ಹಾಗೂ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯ ಬಗ್ಗೆ ನನಗೆ ವಿಶೇಷ ಪ್ರೀತಿ ಇದೆ. ಹಾಗಾಗಿ ನಾನು ಹಂಪಿ ಉತ್ಸವದ ಸಮಾರೋಪದಲ್ಲಿ ಭಾಗಿಯಾಗಿದ್ದೆ. ನಾನು ವೇದಿಕೆಗೆ ಬಂದ ಹಿನ್ನೆಲೆಯಲ್ಲಿ ಶಾಸಕ ಎಚ್.ಆರ್‌. ಗವಿಯಪ್ಪನವರು ವೇದಿಕೆಗೆ ಬರಲಿಲ್ಲ ಎಂಬುದು ನನಗೆ ಬೇರೆ ಮೂಲಗಳಿಂದ ಆ ಮೇಲೆ ತಿಳಿಯಿತು. ನಾನು ಹಂಪಿ ಉತ್ಸವದ ಸಮಾರೋಪದಲ್ಲಿ ಭಾಗಿಯಾಗಿದ್ದರಿಂದ ಶಾಸಕ ಗವಿಯಪ್ಪನವರ ಮನಸ್ಸಿಗೆ ನೋವಾಗಿದ್ದರೆ ಖಂಡಿತ ನಾನು ವಿಷಾದ ವ್ಯಕ್ತಪಡಿಸುವೆ ಎಂದು ಮಾಜಿ ಸಚಿವ ಆನಂದ ಸಿಂಗ್‌ ತಿಳಿಸಿದರು.

click me!