
ಬೆಂಗಳೂರು (ಆ.5) : ಸುಳ್ಳು ಸುದ್ದಿಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪ್ರತಿ ಠಾಣಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ ಸ್ಥಾಪಿಸುವಂತೆ ಅಧಿಕಾರಿಗಳಿಗೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸುತ್ತೋಲೆ ಕಳುಹಿಸಿದ್ದಾರೆ.
ಈ ಮೊದಲು ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕಗಳ ಸ್ಥಾಪನೆಗೆ ಸೂಚಿಸಿದ್ದ ಡಿಜಿಪಿ ಅವರು, ಇತ್ತೀಚೆಗೆ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಠಾಣಾ ಮಟ್ಟದಲ್ಲೇ ಸುಳ್ಳು ಸುದ್ದಿಗಳು ಹರಡದಂತೆ ನಿಯಂತ್ರಣಕ್ಕೆ ಕ್ರಮ ಜರುಗಿಸುವಂತೆ ಹೇಳಿದ್ದಾರೆ. ಅಲ್ಲದೆ ಈ ಬಗ್ಗೆ ಎಲ್ಲ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಐಜಿಪಿ ಹಾಗೂ ಆಯುಕ್ತರುಗಳಿಗೆ ಸುತ್ತೋಲೆ ಕೂಡ ಡಿಜಿಪಿ ಕಚೇರಿ ಕಳುಹಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.
ಬಿಟ್ಕಾಯಿನ್ ದಂಧೆ ತನಿಖೆ ಶುರು: ಎಸ್ಐಟಿ ರಚನೆ ಬೆನ್ನಲ್ಲೇ ಡಿಜಿಪಿ ಅಲೋಕ್ ಉನ್ನತ ಮಟ್ಟದ ಸಭೆ
ಈ ಸುತ್ತೋಲೆ ಹಿನ್ನಲೆಯಲ್ಲಿ ಠಾಣಾ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳ ಘಟಕ ಸ್ಥಾಪನೆಗೆ ಅಧಿಕಾರಿಗಳು ಮುಂದಾಗಿದ್ದು, ಈ ಸಂಬಂಧ ಸಿಬ್ಬಂದಿಗೆ ಸೈಬರ್ ತಜ್ಞರ ಮೂಲಕ ತರಬೇತಿ ಸಹ ನೀಡುತ್ತಿದ್ದಾರೆ. ಈ ತರಬೇತಿ ಮುಗಿದ ಬಳಿಕ ಅಧಿಕೃತವಾಗಿ ಠಾಣೆಗಳಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ವಿಚಕ್ಷಣೆ ಶುರುವಾಗಲಿದೆ ಎಂದು ತಿಳಿದು ಬಂದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಅಧಿಕಾರಕ್ಕೇರಿದ ಬಳಿಕ ಡಿಜಿಪಿ ಅಲೋಕ್ ಕುಮಾರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಕುರಿತು ಸುಳ್ಳು ಸುದ್ದಿ ಹಬ್ಬಿಸುವ ಹಾಗೂ ಕೋಮ ದ್ವೇಷದ ವದಂತಿಗಳು ಸೃಷ್ಟಿಸಿ ಶಾಂತಿ ಭಂಗ ಉಂಟು ಮಾಡುವವರ ಮೇಲೆ ಕಣ್ಣೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದ್ದರು. ಮುಖ್ಯಮಂತ್ರಿಗಳ ನಿರ್ದೇಶನದ ಮೇರೆಗೆ ಡಿಜಿಪಿ ಅವರು ಎಲ್ಲ ಎಸ್ಪಿಗಳು, ಐಜಿಪಿಗಳು ಹಾಗೂ ಆಯುಕ್ತರ ಜತೆ ಸಭೆ ನಡೆಸಿ ಸುಳ್ಳು ಸುದ್ದಿ ಸೃಷ್ಟಿಕರ್ತರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಆದೇಶಿಸಿದ್ದರು.
ಉಡುಪಿ ಪ್ರಕರಣ ಮಾಸುವ ಮುನ್ನವೇ ಹುಬ್ಬಳೀಲಿ ವಿದ್ಯಾರ್ಥಿನಿ ಅಶ್ಲೀಲ ಫೋಟೊ ಅಪ್ಲೋಡ್!
ಅಂತೆಯೇ ರಾಜ್ಯ ಮಟ್ಟದ ಸಾಮಾಜಿಕ ಜಾಲತಾಣ ನಿಗಾ ಘಟಕವನ್ನು ರಾಜ್ಯ ಅಪರಾಧ ತನಿಖಾ ದಳ (ಸಿಐಡಿ)ದ ಕೇಂದ್ರ ಕಾರ್ಯಾಲಯದಲ್ಲಿ ತೆರೆಯಲಾಯಿತು. ಬಳಿಕ ಜಿಲ್ಲಾ ಮಟ್ಟದಲ್ಲಿ ಎಸ್ಪಿ ಕಚೇರಿಗಳಲ್ಲಿ ಕೂಡ ಸುಳ್ಳು ಸುದ್ದಿ ನಿಯಂತ್ರಣಕ್ಕೆ ಪ್ರತ್ಯೇಕ ಘಟಕ ಸ್ಥಾಪಿಸಲಾಯಿತು. ಈಗ ಅದನ್ನು ಠಾಣಾ ಮಟ್ಟಕ್ಕೂ ವಿಸ್ತರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ