ವಿದ್ಯುತ್‌ ಬಿಲ್‌ ಡಬಲ್‌: ಹಣ ಕಟ್ಟದಿರಲು ಜನರ ನಿರ್ಧಾರ

By Kannadaprabha NewsFirst Published Jun 11, 2023, 10:53 AM IST
Highlights

ಈ ಹಿಂದಿನ ತಿಂಗಳಿಗೆ ಹೋಲಿಸಿದೆ ಈ ಸಲ ದುಪ್ಪಟ್ಟು ಕರೆಂಟ್‌ ಬಿಲ್‌ ಬಂದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ತಾಲೂಕಿನ ಶಿಡೇನೂರು ಗ್ರಾಮಸ್ಥರು, ಈ ಬಾರಿ ಬಿಲ್‌ ಕಟ್ಟದಿರಲು ನಿರ್ಧರಿಸಿದ್ದಾರೆ. 
 

ಬ್ಯಾಡಗಿ (ಹಾವೇರಿ) (ಜೂ.11): ಈ ಹಿಂದಿನ ತಿಂಗಳಿಗೆ ಹೋಲಿಸಿದೆ ಈ ಸಲ ದುಪ್ಪಟ್ಟು ಕರೆಂಟ್‌ ಬಿಲ್‌ ಬಂದಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ತಾಲೂಕಿನ ಶಿಡೇನೂರು ಗ್ರಾಮಸ್ಥರು, ಈ ಬಾರಿ ಬಿಲ್‌ ಕಟ್ಟದಿರಲು ನಿರ್ಧರಿಸಿದ್ದಾರೆ. ಜತೆಗೆ, ವಿದ್ಯುತ್‌ ಮೀಟರ್‌ ರೀಡರ್‌ಗೆ ಗ್ರಾಮಕ್ಕೆ ಇನ್ನು ಮುಂದೆ ಪ್ರವೇಶ ನೀಡಲು ನಿರಾಕರಿಸಿದ್ದಾರೆ. ವಿದ್ಯುತ್‌ ಬಿಲ್‌ ರೀಡ್‌ ಮಾಡಿ ಇಲಾಖೆ ಸಿಬ್ಬಂದಿ ನೀಡಿದ ಬಿಲ್‌ ನೋಡಿ ಕಂಗಾಲಾದ ಗ್ರಾಮಸ್ಥರು ಶನಿವಾರ ಒಂದೆಡೆ ಸೇರಿ ದಿಢೀರ್‌ ಪ್ರತಿಭಟನೆ ನಡೆಸಿದರು. 

ಪ್ರತಿ ತಿಂಗಳು 200 ರಿಂದ 300 ಬರುತ್ತಿದ್ದ ಬಿಲ್‌ ಈ ಸಲ 600ರಿಂದ 1000 ತನಕವೂ ಬಂದಿದೆ ಎಂದು ಆಕ್ರೋಶ ಹೊರಹಾಕಿದರು. ಜತೆಗೆ, ಇನ್ನು ಮುಂದೆ ಶಿಡೇನೂರು ಗ್ರಾಮಕ್ಕೆ ಮೀಟರ್‌ ರೀಡರ್‌ಗೆ ಪ್ರವೇಶ ನೀಡದಿರಲು ನಿರ್ಧರಿಸಿದರು. ಇದೇ ವೇಳೆ ಕಾಂಗ್ರೆಸ್‌ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ ಗ್ರಾಮಸ್ಥರು, ಉಚಿತ ವಿದ್ಯುತ್‌ ಎಂದು ಹೇಳಿ ಇದೀಗ ಷರತ್ತು ವಿಧಿಸಲಾಗಿದೆ. ಉಚಿತ ವಿದ್ಯುತ್‌ಗೆ ಸರಾಸರಿ ಮಿತಿ ಹಾಕಿ ಇದೀಗ ಡಬಲ್‌ ಬಿಲ್‌ ನೀಡಿ ಹಣ ವಸೂಲಿಗೆ ಮುಂದಾಗಿದೆ ಎಂದು ಹರಿಹಾಯ್ದರು.

Latest Videos

ಮುಂಗಾರು ವಿಳಂಬಕ್ಕೆ ಆತಂಕ ಬೇಡವೆಂದ ತಜ್ಞರು: ಮುಂದಿನ ವಾರಗಳಲ್ಲಿ ಬಿತ್ತನೆ ಬಿರುಸು

ಮೀಟರ್‌ ರೀಡರ್‌ನ ಕೂಡಿ ಹಾಕಿದ ಜನ: ಈ ಬಾರಿ ವಿದ್ಯುತ್‌ ಬಿಲ್‌, ವಾಡಿಕೆಗಿಂತ ಭಾರೀ ಪ್ರಮಾಣದಲ್ಲಿ ಹೆಚ್ಚು ಬಂದಿದ್ದನ್ನು ವಿರೋಧಿಸಿ ಗದಗ ಜಿಲ್ಲೆ ನರಗುಂದ ಪಟ್ಟಣದ ಸಿದ್ಧನಭಾವಿ ಓಣಿಯ ವಿದ್ಯುತ್‌ ಗ್ರಾಹಕರು ಹೆಸ್ಕಾಂ ಮೀಟರ್‌ ರೀಡರ್‌ನನ್ನು ಮನೆಯೊಳಗೆ ಕೂಡಿ ಹಾಕಿ ಮೇಲಧಿಕಾರಿಗಳು ಬರುವ ತನಕ ಪ್ರತಿಭಟಿಸಿದ ಘಟನೆ ಶುಕ್ರವಾರ ನಡೆದಿದೆ. ವಿಷಯ ತಿಳಿದು ಹೆಸ್ಕಾಂ ಅಧಿಕಾರಿ ಎಎಓ ಸುನೀಲ ಅವರು ಇತರ ಸಿಬ್ಬಂದಿ ಜೊತೆ ಸ್ಥಳಕ್ಕೆ ಆಗಮಿಸಿ, ಇಲಾಖೆಯ ಆದೇಶದಂತೆ ಬಿಲ್‌ ನೀಡುತ್ತಿದ್ದೇವೆ ಎಂದು ಜನರ ಮನವೊಲಿಸುವ ಯತ್ನ ನಡೆಸಿದರು. ಆದರೆ, ಇದಕ್ಕೊಪ್ಪದ ಗ್ರಾಹಕರು, ನಾವ್ಯಾರೂ ಬಿಲ್‌ ತುಂಬುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಆದರೆ, ಮೀಟರ್‌ ರೀಡರ್‌ನನ್ನು ಬಿಡುಗಡೆ ಮಾಡಿ ಕಳಿಸಿದ್ದಾರೆ.

ಬಿಜೆಪಿಗೆ ಮೋದಿ ಇದ್ದಂತೆ ಕಾಂಗ್ರೆಸ್‌ ಪಕ್ಷಕ್ಕೆ ಸಿದ್ದರಾಮಯ್ಯ: ಎಂಟಿಬಿ ನಾಗರಾಜ್‌ ಹೊಗಳಿಕೆ!

ಪ್ರತಿ ತಿಂಗಳಿಗಿಂತ ಈ ಬಾರಿ ವಿದ್ಯುತ್‌ ಬಿಲ್‌ ಹೆಚ್ಚಿಗೆ ಬಂದಿದೆ. ಹಳೆ ಮೀಟರ್‌ ಬದಲಾಯಿಸಿದ ಬಳಿಕವೂ ರೀಡಿಂಗ್‌ನಲ್ಲಿ ಯುನಿಟ್‌ ಹೆಚ್ಚಳ ತೋರಿಸುತ್ತಿದೆ. ಯುನಿಟ್‌ ದರದಲ್ಲೂ ಯದ್ವಾತದ್ವಾ ಏರಿಕೆ ಮಾಡಲಾಗಿದೆ. ಇದು ಗ್ರಾಹಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ, ಶುಕ್ರವಾರ ಮನೆಗೆ ಬಂದ ಹೆಸ್ಕಾಂ ಮೀಟರ್‌ ರೀಡರ್‌ ಎ.ಎಸ್‌.ಗುಂಡ ಎಂಬುವರನ್ನು ಮನೆಯೊಂದರಲ್ಲಿ ಕೂಡಿ ಹಾಕಿ, ಪ್ರತಿಭಟನೆ ನಡೆಸಿದರು. ಹಿರಿಯ ಅಧಿಕಾರಿಗಳು ಬರುವವರೆಗೂ ಬಿಡುವುದಿಲ್ಲ ಎಂದು ಪಟ್ಟು ಹಿಡಿದರು.

click me!