ಆನೆ ದಾಳಿಯಿಂದ ಹಾನಿ, ಪರಿಹಾರ ಮೊತ್ತ ಡಬಲ್‌: ಸಿಎಂ ಸಭೆ ತೀರ್ಮಾನ

By Govindaraj SFirst Published Dec 12, 2022, 11:24 AM IST
Highlights

ಆನೆ-ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ್ವಿಗುಣಗೊಳಿಸಲು ತೀರ್ಮಾನಿಸಲಾಗಿದೆ. 

ಬೆಂಗಳೂರು (ಡಿ.12): ಆನೆ-ಮಾನವ ಸಂಘರ್ಷದಿಂದ ಸಂಭವಿಸುವ ಹಾನಿಗೆ ಸಂಬಂಧಿಸಿದಂತೆ ನೀಡಲಾಗುವ ಪರಿಹಾರವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದ್ವಿಗುಣಗೊಳಿಸಲು ತೀರ್ಮಾನಿಸಲಾಗಿದೆ. 

ಅದರಂತೆ, ಮಾನವ ಜೀವ ಹಾನಿಗೆ ನೀಡುವ ಪರಿಹಾರ ಮೊತ್ತವನ್ನು 7.5 ಲಕ್ಷ ರು.ಗಳಿಂದ 15 ಲಕ್ಷ ರು.ಗೆ, ಶಾಶ್ವತ ಅಂಗವಿಕಲತೆಗೆ ನೀಡುವ ಪರಿಹಾರವನ್ನು 5 ಲಕ್ಷ ರು.ಗಳಿಂದ 10 ಲಕ್ಷ ರು.ಗೆ, ಭಾಗಶಃ ಅಂಗವಿಕಲತೆಗೆ ನೀಡುವ ಪರಿಹಾರವನ್ನು 2.5 ಲಕ್ಷ ರು. ಗಳಿಂದ 5 ಲಕ್ಷ ರು.ಗೆ, ಗಾಯಗೊಂಡವರಿಗೆ ನೀಡುವ ಪರಿಹಾರವನ್ನು 30 ಸಾವಿರ ರು. ಗಳಿಂದ 60 ಸಾವಿರ ರು.ಗೆ, ಆಸ್ತಿ ಹಾನಿಗೆ ಪರಿಹಾರ ಮೊತ್ತ 10 ಸಾವಿರ ರು.ಗಳಿಂದ 20 ಸಾವಿರ ರು.ಗೆ ಹೆಚ್ಚಿಸಲಾಗಿದೆ. ಮಾತ್ರವಲ್ಲದೇ, ಜೀವ ಹಾನಿ ಅಥವಾ ಶಾಶ್ವತ ಅಂಗವಿಕಲತೆಯ ಪ್ರಕರಣಗಳಿಗೆ ನೀಡುವ ಕುಟುಂಬ ಮಾಸಾಶನದ ಮೊತ್ತವನ್ನು ಮಾಸಿಕ 2,000 ದಿಂದ 4,000 ರು.ಗೆ ಏರಿಕೆ ಮಾಡಲಾಗಿದೆ. 

ಜೆಡಿಎಸ್‌ ಗ್ರಾಫ್‌ ಏರ್ತಿದೆ, 123 ಸೀಟು ಗೆಲ್ತೀವಿ: ಎಚ್‌.ಡಿ.ಕುಮಾರಸ್ವಾಮಿ

ಜತೆಗೆ ಬೆಳೆಹಾನಿಗೆ ನೀಡುತ್ತಿರುವ ಪರಿಹಾರವನ್ನೂ ದ್ವಿಗುಣಗೊಳಿಸಲಾಗಿದೆ. ಹಾಸನ, ಮಡಿಕೇರಿ, ಮೈಸೂರು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಆನೆ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಈಗಾಗಲೇ ಕಾರ್ಯಾರಂಭ ಮಾಡಿವೆ. ಈ ಕಾರ್ಯಪಡೆಗಳಿಗೆ ಅಗತ್ಯ ಮಾನವ ಸಂಪನ್ಮೂಲ, ಉಪಕರಣಗಳು, ನಿಯಂತ್ರಣ ಕೊಠಡಿ ಹಾಗೂ ವಾಹನ ಸೌಲಭ್ಯಗಳನ್ನು ಒದಗಿಸಲಾಗಿದ್ದು, ಜನರು ಸಹಾಯವಾಣಿ ಸಂಖ್ಯೆ 1926 ನ್ನು ಸಂಪರ್ಕಿಸಬಹುದಾಗಿದೆ. ಸಭೆಯಲ್ಲಿ ಅಬಕಾರಿ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಅರಣ್ಯ, ಪರಿಸರ ಹಾಗೂ ವನ್ಯಜೀವಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ ಪ್ರಸಾದ್‌ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ಆನೆದಾಳಿ ಸಂತ್ರಸ್ತರಿಗೆ 25 ಲಕ್ಷ ರು. ಪರಿಹಾರಕ್ಕೆ ಶಾಸಕರ ಧರಣಿ: ಹಾಸನದಲ್ಲಿ ಆನೆ ದಾಳಿಯಲ್ಲಿ ಮೃತರಾದವರ ಕುಟುಂಬಕ್ಕೆ .25ಲಕ್ಷ ಪರಿಹಾರ ಮತ್ತು ಬೆಳೆ ಹಾನಿ ಪರಿಹಾರ ನೀಡಲು ಒತ್ತಾಯಿಸಿ ಜೆಡಿಎಸ್‌ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯ ಶಾಸಕರಾದ ಎಚ್‌.ಕೆ. ಕುಮಾರಸ್ವಾಮಿ, ಕೆ.ಎಸ್‌ ಲಿಂಗೇಶ್‌ ವಿಧಾನಸೌಧದ ಬಳಿಯ ಗಾಂಧಿ ಪ್ರತಿಮೆ ಎದುರು ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕ ಎ.ಟಿ. ರಾಮಸ್ವಾಮಿ, ಜಿಲ್ಲೆಯಲ್ಲಿ ಕಾಡುಪ್ರಾಣಿಗಳ ಹಾವಳಿ ವಿಪರೀತವಾಗಿದೆ. ಕಳೆದ ವಿಧಾನಸಭೆ ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಆನೆ ದಾಳಿ, ಬೆಳೆ ಪರಿಹಾರ ದ್ವಿಗುಣ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ಅದಿನ್ನೂ ಈಡೇರಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದಿಂದ 10 ಕೋಟಿ ಬಂದಿದ್ದು ಮಠದ ಅಭಿವೃದ್ಧಿಗೆ: ವಚನಾನಂದ ಶ್ರೀ

ಈ ಬಗ್ಗೆ ತಕ್ಷಣ ಆದೇಶ ಹೊರಡಿಸಬೇಕು. ಪ್ರಸ್ತುತ ನೀಡಲಾಗುವ  7.50 ಲಕ್ಷ ಇದ್ದು, ದ್ವಿಗುಣವಾದರೆ .15 ಲಕ್ಷವಾಗಲಿದೆ. ಆದರೆ, ಸಂತ್ರಸ್ತರಿಗೆ .25ಲಕ್ಷ ಕೊಡಬೇಕು. ಆನೆ ಕಾರಿಡಾರ್‌ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದರು ಆಗ್ರಹಿಸಿದರು. ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ಆನೆ ದಾಳಿಗೆ ತಮ್ಮ ಕ್ಷೇತ್ರದಲ್ಲಿ ವ್ಯಕ್ತಿ ಮೃತಪಟ್ಟಕಾರಣ ಜನಗೆ ನಮಗೆ ಘೇರಾವ್‌ ಹಾಕುತ್ತಿದ್ದಾರೆ. ಮೃತರ ಅವಲಂಬಿತರಿಗೆ ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ ನೀಡಬೇಕು. ಈ ಸಮಸ್ಯೆ ನಿರ್ವಹಣೆ ಬಗ್ಗೆ ಕೇಂದ್ರ ಸರ್ಕಾರ ಜೊತೆ ಮಾತನಾಡಲು ನಿಯೋಗ ಕೊಂಡೊಯ್ಯಬೇಕು ಎಂದು ಒತ್ತಾಯಿಸಿದರು. ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಜಾವೇದ್‌ ಅಕ್ತರ್‌ ಆಗಮಿಸಿ ಧರಣಿ ನಿರತ ಶಾಸಕರೊಂದಿಗೆ ಮಾತುಕತೆ ನಡೆಸಿ ಮನವೊಲಿಸುವ ಯತ್ನ ನಡೆಸಿದೂ ಪ್ರಯೋಜನ ಆಗಲಿಲ್ಲ.

click me!